೧ |
ಕೆಲವು ದಿನಗಳಾದ ಮೇಲೆ ಗೋದಿಯ ಸುಗ್ಗಿಯಲ್ಲಿ ಸಂಸೋನನು ಒಂದು ಹೋತಮರಿಯನ್ನು ತೆಗೆದುಕೊಂಡು ತನ್ನ ಹೆಂಡತಿಯನ್ನು ನೋಡುವುದಕ್ಕೆ ಹೋದನು. ಆಕೆಯ ತಂದೆ ಬಳಿಗೆ ಬಂದನು; “ನನ್ನ ಹೆಂಡತಿಯ ಒಳಗಿನ ಕೋಣೆಗೆ ಹೋಗಬಿಡು,” ಎಂದನು. ಅವನು, “ಹೋಗಕೂಡದು. |
೨ |
ನೀನು ನಿಜವಾಗಿ ಆಕೆಯನ್ನು ದ್ವೇಷಮಾಡುತ್ತೀಯೆಂದು ನಿನ್ನ ಆಪ್ತರೊಬ್ಬನಿಗೆ ಮದುವೆಮಾಡಿಕೊಟ್ಟೆ. ಆಕೆಯ ತಂಗಿ ಆಕೆಗಿಂತ ಸುಂದರಿಯಾಗಿದ್ದಾಳೆ; ಈಕೆ ನಿನಗೆ ಇರಲಿ,” ಎಂದನು. |
೩ |
ಆಗ ಸಂಸೋನನು, “ಈ ಸಾರಿ ಫಿಲಿಷ್ಟಿಯರಿಗೆ ನಷ್ಟ ಉಂಟುಮಾಡಿದರೆ ತಪ್ಪು ನನ್ನದಲ್ಲ,” ಎಂದುಕೊಂಡು ಹೋಗಿ |
೪ |
ಮುನ್ನೂರು ನರಿಗಳನ್ನು ಹಿಡಿದನು. ಒಂದರ ಬಾಲಕ್ಕೆ ಇನ್ನೊಂದು ಬಾಲವನ್ನು ಸೇರಿಸಿ ಕಟ್ಟಿದನು. ಹೀಗೆ ಎರಡೆರಡು ಬಾಲಗಳ ನಡುವೆ ಒಂದೊಂದು ಪಂಜನ್ನು ಸಿಕ್ಕಿಸಿ ಪಂಜುಗಳಿಗೆ ಬೆಂಕಿಹೊತ್ತಿಸಿ |
೫ |
ಆ ನರಿಗಳನ್ನು ‘ಫಿಲಿಷ್ಟಿಯರ ಬೆಳೆ ತುಂಬಿದ ಹೊಲಗಳಿಗೆ ಬಿಟ್ಟು ಅವರ ತೆನೆಗೂಡುಗಳನ್ನೂ ಇನ್ನೂ ಕೊಯ್ಯದೆ ಇದ್ದ ಪೈರುಗಳನ್ನೂ ಸುಟ್ಟುಬಿಟ್ಟನು. ಎಣ್ಣೆಯ ಮರಗಳ ತೋಟಗಳು ಸಹ ಸುಟ್ಟುಹೋದವು. |
೬ |
ಫಿಲಿಷ್ಟಿಯರು ಇದನ್ನು ಮಾಡಿದವರಾರೆಂದು ವಿಚಾರಿಸುವಲ್ಲಿ ತಿಮ್ನಾ ಊರಿನವನ ಅಳಿಯನಾದ ಸಂಸೋನನೆಂದು ಗೊತ್ತಾಯಿತು. ಅವನ ಮಾವ ಅವನ ಹೆಂಡತಿಯನ್ನು ಬೇರೊಬ್ಬನಿಗೆ ಕೊಟ್ಟುಬಿಟ್ಟದ್ದೇ ಇದಕ್ಕೆ ಕಾರಣವೆಂದು ಅವರು ತಿಳಿದು, ಅಲ್ಲಿಗೆ ಬಂದು ಆಕೆಯನ್ನೂ ಆಕೆಯ ತಂದೆಯನ್ನೂ ಸುಟ್ಟುಬಿಟ್ಟರು. |
೭ |
ಸಂಸೋನನು ಅವರಿಗೆ, “ನೀವು ಹೀಗೆ ಮಾಡಿದ್ದರಿಂದ ನಾನು ನಿಮಗೆ ಮುಯ್ಯಿ ತೀರಿಸದೆ ಬಿಡುವುದಿಲ್ಲ,” ಎಂದು ಹೇಳಿ |
೮ |
ಅವರ ತೊಡೆ ಸೊಂಟಗಳನ್ನು ಮುರಿದು, ಅವರನ್ನು ಸಂಹರಿಸಿಬಿಟ್ಟನು. ಅನಂತರ ಹೋಗಿ ಏಟಾಮ್ ಗಿರಿಯ ಗುಹೆಯಲ್ಲಿ ವಾಸಮಾಡಿದನು. |
೯ |
ಆಗ ಫಿಲಿಷ್ಟಿಯರು ಹೊರಟು ಯೆಹೂದಾ ಪ್ರಾಂತ್ಯದ ಲೆಹೀ ಎಂಬಲ್ಲಿಗೆ ಹೋಗಿ ಪಾಳೆಯ ಮಾಡಿಕೊಂಡು ಯುದ್ಧಕ್ಕೆ ನಿಂತರು. |
೧೦ |
“ನೀವು ನಮಗೆ ವಿರೋಧವಾಗಿ ಯುದ್ಧಕ್ಕೆ ಬಂದದ್ದೇಕೆ?” ಎಂದು ಯೆಹೂದ್ಯರು ಅವರನ್ನು ಕೇಳಿದರು. ಅವರು, “ಸಂಸೋನನನ್ನು ಹಿಡಿದು, ಬಂಧಿಸಿ, ಅವನು ನಮಗೆ ಮಾಡಿದಂತೆಯೇ ಅವನಿಗೂ ಮಾಡಬೇಕೆಂದು ಬಂದೆವು,” ಎಂದು ಉತ್ತರಕೊಟ್ಟರು. |
೧೧ |
ಮೂರು ಸಾವಿರ ಮಂದಿ ಯೆಹೂದ್ಯರು ಏಟಾಮ್ ಗಿರಿಗೆ ಹೋಗಿ ಸಂಸೋನನಿಗೆ, “ಫಿಲಿಷ್ಟಿಯರು ನಮ್ಮ ಮೇಲೆ ದೊರೆತನ ಮಾಡುತ್ತಿದ್ದಾರೆಂಬುದು ನಿನಗೆ ಗೊತ್ತಿಲ್ಲವೇ? ಹೀಗೆ ಏಕೆ ಮಾಡಿದೆ,” ಎಂದು ಕೇಳಲು ಅವನು, “ಅವರು ನನಗೆ ಮಾಡಿದಂತೆಯೇ ನಾನು ಅವರಿಗೆ ಮಾಡಿದ್ದೇನೆ,” ಎಂದನು. |
೧೨ |
ಅವರು, “ನಾವು ನಿನ್ನನ್ನು ಕಟ್ಟಿ ಫಿಲಿಷ್ಟಿಯರ ಕೈಗೆ ಒಪ್ಪಿಸಬೇಕೆಂದು ಬಂದಿದ್ದೇವೆ,” ಎನ್ನಲು ಸಂಸೋನನು, “ಹಾಗಾದರೆ ನೀವು ನನ್ನನ್ನು ಕೊಲ್ಲುವುದಿಲ್ಲವೆಂದು ಆಣೆಮಾಡಿ” ಎಂದನು. |
೧೩ |
ಅದಕ್ಕೆ ಅವರು, “ನಾವು ಸತ್ಯವಾಗಿ ನಿನ್ನನ್ನು ಕೊಲ್ಲುವುದಿಲ್ಲ; ನಿನ್ನನ್ನು ಕಟ್ಟಿ ಫಿಲಿಷ್ಟಿಯರ ಕೈಗೆ ಒಪ್ಪಿಸುತ್ತೇವೆ,” ಎಂದು ಹೇಳಿ ಅವನನ್ನು ಎರಡು ಹೊಸ ಹಗ್ಗಗಳಿಂದ ಕಟ್ಟಿ ಗಿರಿಯಿಂದ ತಂದರು. |
೧೪ |
ಸಂಸೋನನು ಲೆಹೀಯ ಸಮೀಪಕ್ಕೆ ಬರಲು ಫಿಲಿಷ್ಟಿಯರು ಅವನನ್ನು ಕಂಡು ಆರ್ಭಟಿಸಿದರು. ಸರ್ವೇಶ್ವರನ ಆತ್ಮ ಅವನ ಮೇಲೆ ಬಂದುದರಿಂದ ಅವನ ರಟ್ಟೆಗಳಿಗೆ ಸುತ್ತಲೂ ಕಟ್ಟಿದ್ದ ಹಗ್ಗಗಳು ಸುಟ್ಟ ಸೆಣಬಿನ ಹಾಗಾದವು; ಕೈಗೆ ಹಾಕಿದ ಬೇಡಿಗಳು ಕಳಚಿ ಬಿದ್ದವು. |
೧೫ |
ಅಲ್ಲೇ ಒಂದು ಕತ್ತೆಯ ದವಡೆ ಎಲುಬು ಬಿದ್ದಿತ್ತು. ಅದು ಇನ್ನೂ ಹಸಿ ಇತ್ತು. ಅವನು ಅದನ್ನು ತೆಗೆದುಕೊಂಡು ಅದರಿಂದ ಸಾವಿರ ಜನರನ್ನು ಹತಿಸಿಬಿಟ್ಟು, |
೧೬ |
“ಕತ್ತೆಯ ದವಡೆ ಎಲುಬಿನಿಂದ ಸಾವಿರ ಜನರನ್ನು ವಧಿಸಿದೆ; ಕತ್ತೆಯ ದವಡೆ ಎಲುಬಿನಿಂದ ಹೆಣಗಳನ್ನು ರಾಶಿರಾಶಿಯಾಗಿ ಬೀಳಿಸಿದೆ” ಎಂದು ಹೇಳಿ |
೧೭ |
ತನ್ನ ಕೈಯಲ್ಲಿದ್ದ ಎಲುಬನ್ನು ಬಿಸಾಡಿದನು. ಆ ಸ್ಥಳಕ್ಕೆ ‘ರಾಮತ್ ಲೆಹೀ\ ಎಂದು ಹೆಸರಾಯಿತು. |
೧೮ |
ಇದರಿಂದಾಗಿ ಸಂಸೋನನಿಗೆ ಬಹಳ ದಾಹವಾಯಿತು. ಅವನು ಸರ್ವೇಶ್ವರನಿಗೆ, “ನೀವು ನಿಮ್ಮ ದಾಸನ ಮುಖಾಂತರ ಇಂಥ ಮಹಾ ಜಯವನ್ನು ದಯಪಾಲಿಸಿದಿರಿ. ಆದರೆ ಈಗ ನಾನು ದಾಹದಿಂದ ಸತ್ತು ಸುನ್ನತಿಯಿಲ್ಲದವರ ಕೈಯಲ್ಲಿ ಬೀಳಬೇಕೇ?’ ಎಂದು ಮೊರೆಯಿಟ್ಟನು. |
೧೯ |
ದೇವರು ಲೆಹೀಯಲ್ಲಿ ಒರಳಬಂಡೆಯನ್ನು ಸೀಳಿ ಅದರೊಳಗಿಂದ ನೀರು ಬರುವಂತೆ ಮಾಡಿದರು. ಅವನು ಕುಡಿದು ಪುನಃ ಚೇತನಗೊಂಡನು. ಆದುದರಿಂದ ಅದಕ್ಕೆ ‘ಏನ್ ಹಕ್ಕೋರೇ’ ಎಂದು ಹೆಸರಾಯಿತು; ಅದು ಇಂದಿನವರೆಗೂ ಲೆಹೀಯಲ್ಲಿದೆ. |
೨೦ |
ಫಿಲಿಷ್ಟಿಯರ ಕಾಲದಲ್ಲಿ ಸಂಸೋನನು ಇಸ್ರಯೇಲರನ್ನು ಇಪ್ಪತ್ತು ವರ್ಷಗಳವರೆಗೆ ಪಾಲಿಸಿದನು.
|
Kannada Bible (KNCL) 2016 |
No Data |