೧ |
ಸರ್ವೇಶ್ವರಸ್ವಾಮಿ ಹೋರೇಬಿನಲ್ಲಿ ಇಸ್ರಯೇಲರೊಡನೆ ಮಾಡಿದ ಒಡಂಬಡಿಕೆ ಅಲ್ಲದೆ ಅವರು ಮೋವಾಬ್ ನಾಡಿನಲ್ಲಿ ಅವರೊಡನೆ ಮಾಡಬೇಕೆಂದು ಮೋಶೆಗೆ ಆಜ್ಞಾಪಿಸಿದ ಒಡಂಬಡಿಕೆಯ ವಚನಗಳು ಇವು: |
೨ |
ಮೋಶೆ ಇಸ್ರಯೇಲರೆಲ್ಲರನ್ನು ಕರೆದು ಹೀಗೆಂದನು, “ಸರ್ವೇಶ್ವರ ಈಜಿಪ್ಟ್ ದೇಶದಲ್ಲಿ ನಿಮ್ಮ ಕಣ್ಣಮುಂದೆ ಫರೋಹನಿಗೂ ಅವನ ಪರಿವಾರದವರಿಗೂ |
೩ |
ಅವನ ಇಡೀ ನಾಡಿಗೂ ಮಾಡಿದವುಗಳನ್ನೆಲ್ಲಾ ನೀವು ನೋಡಿದ್ದೀರಿ. ಮಹಾಪರಿಶೋಧನೆ, ಪವಾಡ, ಮಹತ್ಕಾರ್ಯ ಇವುಗಳನ್ನು ಕಣ್ಣಾರೆ ನೋಡಿದ್ದೀರಿ. |
೪ |
ಆದರೂ ಗ್ರಹಿಸುವ ಬುದ್ಧಿ, ನೋಡುವ ಕಣ್ಣು, ಕೇಳುವ ಕಿವಿ ಇವುಗಳನ್ನು ಸರ್ವೇಶ್ವರ ಇಂದಿನವರೆಗೂ ಅಯ್ಯೋ ನಿಮಗೆ ಅನುಗ್ರಹಿಸಲಿಲ್ಲ! |
೫ |
ನಲವತ್ತು ವರ್ಷ ನಾನು ನಿಮ್ಮನ್ನು ಮರುಭೂಮಿಯಲ್ಲಿ ನಡೆಸಿಕೊಂಡು ಬಂದಿದ್ದೇನೆ. ನಿಮ್ಮ ಮೈಮೇಲಿದ್ದ ಉಡುಪಾಗಲಿ, ಕಾಲಲ್ಲಿದ್ದ ಕೆರವಾಗಲಿ ಸವೆದುಹೋಗಲಿಲ್ಲ. |
೬ |
ನೀವು ರೊಟ್ಟಿ ತಿನ್ನಲಿಲ್ಲ; ದ್ರಾಕ್ಷಾರಸವನ್ನಾಗಲಿ ಯಾವ ಮದ್ಯವನ್ನಾಗಲಿ ಕುಡಿಯಲೇ ಇಲ್ಲ. ಸರ್ವೇಶ್ವರನೇ ನಿಮ್ಮ ದೇವರು ಎಂಬುದು ನಿಮಗೆ ತಿಳಿಯಬೇಕೆಂಬ ಉದ್ದೇಶದಿಂದ ಹೀಗಾಯಿತು. |
೭ |
ನೀವು ಈ ಸ್ಥಳಕ್ಕೆ ಬಂದಾಗ ಹೆಷ್ಬೋನಿನ ಅರಸ ಸೀಹೋನನೂ ಬಾಷಾನಿನ ಅರಸ ಓಗನೂ ನಮ್ಮೊಡನೆ ಯುದ್ಧಮಾಡುವುದಕ್ಕೆ ಬಂದರು. |
೮ |
ನಾವು ಅವರನ್ನು ಸೋಲಿಸಿ ಅವರ ರಾಜ್ಯಗಳನ್ನು ಸ್ವಾಧೀನಮಾಡಿಕೊಂಡು ರೂಬೇನ್ಯರಿಗೂ ಗಾದ್ಯರಿಗೂ ಮನಸ್ಸೆಕುಲದವರಲ್ಲಿ ಅರ್ಧಜನರಿಗೂ ಸೊತ್ತಾಗಿ ಕೊಟ್ಟೆವಷ್ಟೆ. |
೯ |
ಈ ಸಂಗತಿಗಳನ್ನೆಲ್ಲಾ ನೀವು ಜ್ಞಾಪಕಮಾಡಿಕೊಂಡು ಈ ಒಡಂಬಡಿಕೆಯ ವಾಕ್ಯಗಳನ್ನು ಅನುಸರಿಸಿ ನಡೆಯಬೇಕು; ಆಗ ನೀವು ನಡೆಸುವ ಕೆಲಸಕಾರ್ಯಗಳಲ್ಲಿ ಜಾಣರಾಗಿ ಅಭಿವೃದ್ಧಿ ಹೊಂದುವಿರಿ. |
೧೦ |
“ಇಸ್ರಯೇಲ ಜನರೇ, ನಿಮ್ಮ ಮುಖ್ಯಸ್ಥರು, |
೧೧ |
ಗೋತ್ರದವರು, ಹಿರಿಯರು, ಅಧಿಕಾರಿಗಳು, ಹೆಂಗಸರು, ಮಕ್ಕಳು ನಿಮ್ಮ ಪಾಳೆಯದಲ್ಲಿ ಇರುವ ಅನ್ಯರಾದ ಕಟ್ಟಿಗೆಯವರು, ನೀರಿನವರು ಮುಂತಾದ ಆಳುಗಳು, |
೧೨ |
ನೀವೆಲ್ಲರೂ ಈ ದಿನ ನಿಮ್ಮ ದೇವರಾದ ಸರ್ವೆಶ್ವರನ ಸನ್ನಿಧಿಯಲ್ಲಿ ನಿಂತಿರುವುದಕ್ಕೆ ಕಾರಣವೇನೆಂದರೆ - ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಹೇಳಿದಂತೆ ಹಾಗು ನಿಮ್ಮ ಪಿತೃಗಳಾದ ಅಬ್ರಹಾಮ್, ಇಸಾಕ್, ಯಕೋಬರಿಗೆ ವಾಗ್ದಾನಮಾಡಿದಂತೆ ನಿಮ್ಮನ್ನು ತಮಗೆ ಸ್ವಕೀಯ ಜನರನ್ನಾಗಿಯೂ ತಮ್ಮನ್ನು ನಿಮಗೆ ದೇವರನ್ನಾಗಿಯೂ ಸ್ಥಾಪಿಸಿಕೊಳ್ಳುವುದಕ್ಕಾಗಿ ಈಗ ನಿಮ್ಮೊಡನೆ ಪ್ರಮಾಣಪೂರ್ವಕವಾದ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳಬೇಕೆಂದಿದ್ದಾರೆ; ನೀವು ಅದಕ್ಕೆ ಸೇರಲು ಕೂಡಿಬಂದಿದ್ದೀರಿ. |
೧೩ |
*** |
೧೪ |
“ನಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ ಸಿದ್ಧರಾಗಿ ನಿಂತಿರುವ ನಮ್ಮೊಡನೆ ಮಾತ್ರವಲ್ಲದೆ, ಮುಂದೆ ಹುಟ್ಟುವ ನಮ್ಮ ಸಂತತಿಯವರೊಡನೆಯೂ ಪ್ರಮಾಣಪೂರ್ವಕವಾದ ಈ ಒಡಂಬಡಿಕೆಯನ್ನು ಮಾಡಿಕೊಳ್ಳಬೇಕೆಂದಿದ್ದಾರೆ. |
೧೫ |
*** |
೧೬ |
ನಾವು ಈಜಿಪ್ಟ್ ದೇಶದಲ್ಲಿ ವಾಸಮಾಡಿದ್ದು, ಅನೇಕ ಜನಾಂಗಗಳ ಪ್ರದೇಶಗಳನ್ನು ದಾಟಿಬಂದದ್ದು ನಿಮಗೆ ತಿಳಿದೇ ಇದೆ. |
೧೭ |
ಆ ಜನಾಂಗಗಳಲ್ಲಿ ನಡೆಯುವ ಹೇಯಾಚಾರಗಳನ್ನೂ ಅವರು ಮರ, ಕಲ್ಲು, ಬೆಳ್ಳಿ, ಬಂಗಾರಗಳಿಂದ ಮಾಡಿಕೊಂಡು ಪೂಜಿಸುವ ಬೊಂಬೆಗಳನ್ನೂ ನೀವು ಖಂಡಿತವಾಗಿ ನೋಡಿದ್ದೀರಿ. |
೧೮ |
“ಎಚ್ಚರಿಕೆಯಿಂದಿರಿ! ನಮ್ಮ ದೇವರಾದ ಸರ್ವೇಶ್ವರನನ್ನು ಬಿಟ್ಟು, ಆ ಜನಾಂಗಗಳ ದೇವರುಗಳನ್ನು ಅವಲಂಬಿಸುವ ಯಾವ ಕುಲವಾಗಲಿ, ಕುಟುಂಬವಾಗಲಿ, ಸ್ತ್ರೀಪುರುಷರಾಗಲಿ ನಿಮ್ಮಲ್ಲಿ ಇರಲೇಬಾರದು; ನಿಮ್ಮಲ್ಲಿ ಯಾವ ವಿಷಲತೆಯ ಬೇರೂ ಇರಬಾರದು. |
೧೯ |
ಶಾಪದಿಂದ ಕೂಡಿರುವ ಈ ಪ್ರತಿಜ್ಞೆಯನ್ನು ಕೇಳಿದ ಯಾವನಾದರು ತನ್ನೊಳಗೆ, ‘ನಾನು ಹಟಹಿಡಿದು ಅವಿಧೇಯನಾದರೂ ನನಗೆ ಕ್ಷೇಮವಾಗಿಯೇ ಇರುವುದು’ ಎಂದುಕೊಂಡು ಹಿಗ್ಗಬಾರದು. ಹಾಗೆ ಮಾಡುವವನು ದೋಷಿಗಳಿಗೂ ನಿರ್ದೋಷಿಗಳಿಗೂ ನಾಶವನ್ನುಂಟು ಮಾಡುವನು. |
೨೦ |
ಸರ್ವೇಶ್ವರ ಅಂಥವನನ್ನು ಎಂದಿಗೂ ಕ್ಷಮಿಸರು; ಬದಲಿಗೆ ಅವನ ಮೇಲೆ ಸಿಟ್ಟುಗೊಂಡು, ತಮ್ಮ ಗೌರವವನ್ನು ಕಾಪಾಡಿಕೊಳ್ಳುವವರಾಗಿ, ಈ ಗ್ರಂಥದಲ್ಲಿ ಬರೆದಿರುವ ಎಲ್ಲಾ ಶಾಪೋಕ್ತಿಗಳಿಗೂ ಅವನನ್ನು ಗುರಿಪಡಿಸುವರು. ಅವನ ಹೆಸರನ್ನು ಭೂಮಿಯ ಮೇಲೆ ಇಲ್ಲದಂತೆ ಮಾಡುವರು. |
೨೧ |
ಈ ಧರ್ಮಶಾಸ್ತ್ರದಲ್ಲಿ ಬರೆದಿರುವ ನಿಬಂಧನೆಯನ್ನು ಮೀರುವವರಿಗೆ ಉಂಟಾಗುವ ಶಾಪಗಳು ಅವನಲ್ಲಿ ನೆರವೇರಲೆಂದು ಸರ್ವೇಶ್ವರ ಅವನನ್ನು ಇಸ್ರಯೇಲರ ಎಲ್ಲ ಕುಲಗಳಿಂದ ಪ್ರತ್ಯೇಕಿಸಿ, ದಂಡಿಸುವರು. |
೨೨ |
“ಮುಂದೆ ಹುಟ್ಟುವ ನಿಮ್ಮ ಸಂತತಿಯವರೂ ದೇಶಾಂತರಗಳಿಂದ ಬರುವ ಅನ್ಯರೂ ನಿಮ್ಮ ನಾಡಿಗೆ ಸರ್ವೇಶ್ವರ ಉಂಟುಮಾಡಿದ ರೋಗೋಪದ್ರವಗಳನ್ನು ಕಂಡು ಆಶ್ಚರ್ಯಪಡುವರು. |
೨೩ |
ಎಲ್ಲ ಜನಾಂಗಗಳವರೂ ನಿಮ್ಮ ಆ ನಾಡು ಯಾವ ವ್ಯವಸಾಯವೂ ಇಲ್ಲದೆ, ಹುಲ್ಲಾದರೂ ಬೆಳೆಯದೆ, ಹಾಳುಬಿದ್ದಿರುವುದನ್ನು ನೋಡುವರು. ಸರ್ವೇಶ್ವರ ಮಹಾಕೋಪದಿಂದ ಕೆಡವಿದ ಸೊದೋಮ್, ಗೊಮೋರ, ಅದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳ ಪ್ರದೇಶದಂತೆ ಸುಟ್ಟುಹೋಗಿರುವುದನ್ನೂ ಎಲ್ಲ ಕಡೆಗಳಲ್ಲೂ ಗಂಧಕ ಉಪ್ಪುಗಳಿಂದ ತುಂಬಿರುವುದನ್ನೂ ನೋಡುವರು. |
೨೪ |
‘ಸರ್ವೇಶ್ವರ ಈ ನಾಡಿಗೆ ಹೀಗೆ ಮಾಡಿದ್ದೇಕೆ? ಇಂಥ ಕೋಪಾಗ್ನಿಗೆ ಕಾರಣ ಏನಿರಬಹುದು?’ ಎಂದು ವಿಚಾರಿಸುವರು. |
೨೫ |
ಅದಕ್ಕೆ ಜನರು, ‘ಈ ನಾಡಿನವರ ಪಿತೃಗಳ ದೇವರಾದ ಸರ್ವೇಶ್ವರ ಅವರನ್ನು ಈಜಿಪ್ಟ್ ದೇಶದಿಂದ ಬಿಡಿಸಿ ಅವರೊಡನೆ ಮಾಡಿದ ಒಡಂಬಡಿಕೆಯನ್ನು ಅವರು ಉಲ್ಲಂಘಿಸಿದರು. |
೨೬ |
ತಮಗೆ ನೇಮಕವಾಗದಿದ್ದ ಹಾಗು ಗೊತ್ತಿಲ್ಲದಿದ್ದ ಇತರ ದೇವರುಗಳನ್ನು ಅವಲಂಬಿಸಿ ಪೂಜಿಸಿದರು. |
೨೭ |
ಆದುದರಿಂದ ಸರ್ವೇಶ್ವರ ಅವರ ನಾಡಿನ ಮೇಲೆ ಕೋಪಗೊಂಡು ಈ ಗ್ರಂಥದಲ್ಲಿ ಬರೆದಿರುವ ಶಾಪಗಳನ್ನು ಅವರ ಮೇಲೆ ಬರಮಾಡಿದ್ದಾರೆ; |
೨೮ |
ಮಹಾಕೋಪೋದ್ರೇಕದಿಂದ ಆ ಜನರನ್ನು ನಾಡಿನಿಂದ ಕಿತ್ತುಹಾಕಿ ಈಗ ಅನುಭವಕ್ಕೆ ಬಂದಿರುವಂತೆ ದೇಶಾಂತರ ಅಟ್ಟಿಬಿಟ್ಟಿ ಇದ್ದಾರೆ’ ಎಂದು ಉತ್ತರಕೊಡುವರು. |
೨೯ |
“ರಹಸ್ಯವಾದವುಗಳು ನಮ್ಮ ದೇವರಾದ ಸರ್ವೇಶ್ವರನಿಗೆ ಸೇರಿದವು. ಆದರೆ ಅವರಿಂದ ಪ್ರಕಟವಾದವುಗಳು ಸದಾ ನಮ್ಮ ಮತ್ತು ನಮ್ಮ ಸಂತತಿಯವರ ಪಾಲಾಗಿರುವುವು; ಆದುದರಿಂದ ನಾವು ಈ ಧರ್ಮಶಾಸ್ತ್ರನಿಯಮಗಳನ್ನು ಅನುಸರಿಸಿ ನಡೆಯಬೇಕಾದ ಹಂಗಿನಲ್ಲಿದ್ದೇವೆ.
|
Kannada Bible (KNCL) 2016 |
No Data |