೧ |
“ಬೀಜಹೊಡಿಸಿಕೊಂಡಾಗಲಿ, ಜನನ ಇಂದ್ರಿಯ ಕತ್ತರಿಸಿಕೊಂಡಾಗಲಿ ನಪುಂಸಕರಾದವರು ಸರ್ವೇಶ್ವರನ ಸಭೆಯಲ್ಲಿ ಸೇರಬಾರದು. |
೨ |
ಅಗಮ್ಯಾಗಮನದಿಂದುಂಟಾದ ಸಂತತಿಯವರು ಹತ್ತನೆಯ ತಲೆಯವರಾದರೂ ಸರ್ವೇಶ್ವರನ ಸಭೆಗೆ ಸೇರಬಾರದು. |
೩ |
“ಅಮ್ಮೋನಿಯರಾಗಲಿ ಮೋವಾಬ್ಯರಾಗಲಿ ಸರ್ವೇಶ್ವರನ ಸಭೆಗೆ ಎಂದೆಂದಿಗೂ ಸೇರಬಾರದು. ಅವರ ಸಂತತಿಯವರು ಹತ್ತನೆಯ ತಲೆಯವರಾದರೂ ಸರ್ವೇಶ್ವರನ ಸಭೆಗೆ ಸೇರಬಾರದು. |
೪ |
ಏಕೆಂದರೆ ನೀವು ಈಜಿಪ್ಟ್ ದೇಶದಿಂದ ಬಂದಾಗ ಅವರು ಅನ್ನಪಾನಗಳನ್ನು ತಂದು ನಿಮ್ಮನ್ನು ಎದುರುಗೊಳ್ಳಲಿಲ್ಲ; ನಿಮ್ಮನ್ನು ಶಪಿಸುವುದಕ್ಕಾಗಿ ಬೆಯೋರನ ಮಗ ಬಿಳಾಮನಿಗೆ ಹಣಕೊಟ್ಟು ಎರಡು ನದಿಗಳ ಮಧ್ಯದಲ್ಲಿರುವ ಅರಾಮಿನ ಪೆತೋರೂರಿನಿಂದ ಅವನನ್ನು ಕರೆಸಿದರು. |
೫ |
ಆದರೂ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಪ್ರೀತಿಸಿದ್ದರಿಂದ ಬಿಳಾಮನ ಮಾತಿಗೆ ಸಮ್ಮತಿಸದೆ, ಅವನಿಂದ ಶಾಪವನ್ನು ನುಡಿಸದೆ, ಆಶೀರ್ವಾದವನ್ನೇ ಹೇಳಿಸಿದರು. |
೬ |
ನಿಮ್ಮ ಜೀವಮಾನಕಾಲವನ್ನೆಲ್ಲಾ ಅವರ ಯೋಗಕ್ಷೇಮವನ್ನು ಬಯಸಲೇಬಾರದು. |
೭ |
“ಎದೋಮ್ಯರನ್ನು ಸಂಪೂರ್ಣವಾಗಿ ನಿಷೇಧಿಸಬಾರದು; ಅವರು ನಿಮ್ಮ ಬಂಧುಜನಗಳು. ಈಜಿಪ್ಟರನ್ನೂ ಸಂಪೂರ್ಣವಾಗಿ ನಿಷೇಧಿಸಬಾರದು; ಅವರ ದೇಶದಲ್ಲಿ ನೀವು ಪ್ರವಾಸಿಗಳಾಗಿದ್ದಿರಲ್ಲವೆ? |
೮ |
ಅವರ ಸಂತತಿಯವರಲ್ಲಿ ಮೂರನೆಯ ತಲೆಯವರು ಸರ್ವೇಶ್ವರನ ಸಭೆಗೆ ಸೇರಬಹುದು. |
೯ |
“ನೀವು ಶತ್ರುಗಳ ವಿರುದ್ಧ ಯುದ್ಧಕ್ಕೆ ಹೊರಟು ಪಾಳೆಯದಲ್ಲಿರುವಾಗ ಯಾವ ಅಶುಚಿಯೂ ಆಗದಂತೆ ಎಚ್ಚರಿಕೆಯಿಂದಿರಬೇಕು. |
೧೦ |
ರಾತ್ರಿಕಾಲದಲ್ಲಿ ವೀರ್ಯಸ್ಖಲನದಿಂದ ಯಾವನಾದರು ಅಶುದ್ಧನಾದರೆ ಅವನು ಪಾಳೆಯದೊಳಗೆ ಇರದೆ ಹೊರಗೆ ಇರಬೇಕು. |
೧೧ |
ಅವನು ಸಂಜೆವೇಳೆಯಲ್ಲಿ ಸ್ನಾನಮಾಡಿ ಸೂರ್ಯನು ಮುಳುಗಿದ ಮೇಲೆ ಪಾಳೆಯದೊಳಗೆ ಬರಬಹುದು. |
೧೨ |
“ಪಾಳೆಯದ ಹೊರಗೆ ಪಾಯಖಾನೆಗಾಗಿ ಒಂದು ಸ್ಥಳವನ್ನು ಗೊತ್ತುಮಾಡಬೇಕು. |
೧೩ |
ಯುದ್ಧದ ಸಾಮಾನುಗಳಲ್ಲದೆ ಸಲಕೆ ನಿಮ್ಮ ಬಳಿಯಲ್ಲೇ ಇರಬೇಕು; ನೀವು ಬಹಿರ್ದೆಶೆಗೆ ಹೋದಾಗ ಆ ಸಲಕೆಯಿಂದ ಅಗೆದು ಕಲ್ಮಷವನ್ನು ಮುಚ್ಚಿಬಿಡಬೇಕು. |
೧೪ |
ನಿಮ್ಮ ದೇವರಾದ ಸರ್ವೇಶ್ವರಾ ನಿಮ್ಮನ್ನು ಕಾಪಾಡಲು, ಶತ್ರುಗಳನ್ನು ನಿಮ್ಮ ಕೈವಶಮಾಡಲು ನಿಮ್ಮ ಪಾಳೆಯದೊಳಗೆ ಸಂಚಾರಮಾಡುತ್ತಾರೆ; ನಿಮ್ಮಲ್ಲಿ ಅಶುಚಿಯೇನಾದರೂ ಕಂಡುಬಂದರೆ ಅವರು ನಿಮ್ಮನ್ನು ಬಿಟ್ಟುಹೋಗದಂತೆ ಪಾಳೆಯವು ನಿರ್ಮಲವಾಗಿರಬೇಕು. |
೧೫ |
“ತಪ್ಪಿಸಿಕೊಂಡ ಒಬ್ಬ ಗುಲಾಮನು ನಿಮ್ಮಲ್ಲಿ ಇರುವುದಕ್ಕೆ ಬಂದರೆ ಅವನನ್ನು ಅವನ ದಣಿಗೆ ಮತ್ತೆ ವಶಪಡಿಸಬಾರದು. |
೧೬ |
ನಿಮ್ಮ ಊರುಗಳಲ್ಲಿ ಯಾವ ಸ್ಥಳವು ಅವನಿಗೆ ಇಷ್ಟವಾಗಿದೆಯೋ ಅಲ್ಲೇ ಅವನು ವಾಸವಾಗಿರಬಹುದು; ಅವನನ್ನು ನೀವು ಶೋಷಣೆಗೆ ಗುರಿಪಡಿಸಬಾರದು. |
೧೭ |
“ಇಸ್ರಯೇಲರಲ್ಲಿ ಯಾವ ಸ್ತ್ರೀಯೂ ಗುಡಿವೇಶ್ಯೆಯಾಗಬಾರದು; ಅಂತೆಯೇ ಯಾವ ಪುರುಷನೂ ಅಂಥ ವೇಶ್ಯೆತನಕ್ಕೆ ಇಳಿಯಬಾರದು. |
೧೮ |
ಸೂಳೆತನದಿಂದಾಗಲಿ ಜಾರತ್ವದಿಂದಾಗಲಿ ಸಂಪಾದಿಸಿದ ಹಣವನ್ನು ಹರಕೆಯಾಗಿ ನಿಮ್ಮ ದೇವರಾದ ಸರ್ವೇಶ್ವರನ ಮಂದಿರದೊಳಗೆ ತರಲೇಬಾರದು; ಈ ಎರಡೂ ಅವರಿಗೆ ಅಸಹ್ಯವಾದುವು. |
೧೯ |
“ಹಣವನ್ನಾಗಲಿ, ಆಹಾರಪದಾರ್ಥಗಳನ್ನಾಗಲಿ, ಬೇರೆ ಯಾವುದನ್ನೇ ಆಗಲಿ |
೨೦ |
ಪರದೇಶದವನಿಗೆ ಬಡ್ಡಿಗೆ ಕೊಡಬಹುದೇ ಹೊರತು ಸ್ವದೇಶದವನಿಗೆ ಕೊಡಬಾರದು. ಹೀಗೆ ನಡೆದರೆ ನೀವು ಸ್ವದೇಶವಾಗಿ ಪಡೆಯಲಿರುವ ನಾಡಿನಲ್ಲಿ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಎಲ್ಲ ಪ್ರಯತ್ನಗಳನ್ನು ಕೈಗೂಡಿಸಿ ಅಭಿವೃದ್ಧಿಪಡಿಸುವರು. |
೨೧ |
“ನಿಮ್ಮ ದೇವರಾದ ಸರ್ವೇಶ್ವರನಿಗೆ ಹರಕೆಮಾಡಿದ ಮೇಲೆ ಅದನ್ನು ತಡಮಾಡದೆ ತೀರಿಸಬೇಕು; ಅವರು ತಪ್ಪದೆ ಅದನ್ನು ವಿಚಾರಿಸುವರು; ತೀರಿಸದೆ ಹೋಗುವುದು ಪಾಪ. |
೨೨ |
ನೀವು ಹರಕೆಮಾಡದಿದ್ದರೆ ದೋಷವೇನೂ ಇಲ್ಲ. |
೨೩ |
ಆದರೆ ಬಾಯಿಂದ ನುಡಿದದ್ದನ್ನು ನೆರವೇರಿಸಲೇಬೇಕು. ನಿಮ್ಮ ದೇವರಾದ ಸರ್ವೇಶ್ವರನಿಗೆ ಬಾಯಿಂದ ಹರಕೆಮಾಡಿಕೊಂಡಂತೆಯೇ ಅದನ್ನು ಒಪ್ಪಿಸಿಬಿಡಬೇಕು. |
೨೪ |
“ಮತ್ತೊಬ್ಬನ ದ್ರಾಕ್ಷಿತೋಟದಲ್ಲಿ ನೀವು ಹಾದುಹೋಗುವಾಗ ಇಷ್ಟಾನುಸಾರ ಹಣ್ಣುಗಳನ್ನು ತಿನ್ನಬಹುದು. ಆದರೆ ಬುಟ್ಟಿಯಲ್ಲಿ ಹಾಕಿಕೊಂಡು ಹೋಗಬಾರದು. |
೨೫ |
ಮತ್ತೊಬ್ಬನ ಬೆಳೆಯ ನಡುವೆ ಹಾದುಹೋಗುವಾಗ ತೆನೆಗಳನ್ನು ಕೈಯಿಂದ ಮುರಿದುಕೊಳ್ಳಬಹುದು; ಆದರೆ ಆ ಬೆಳೆಗೆ ಕುಡುಗೋಲು ಹಾಕಬಾರದು.
|
Kannada Bible (KNCL) 2016 |
No Data |