೧ |
ಜೋರ್ಡನ್ ನದಿಯ ಆಚೆ, ಪಾರಾನಿಗೂ, ತೋಫೆಲ್, ಲಾಬಾನ್, ಹಚೇರೋತ್, ದೀಜಾಹಾಬ್ ಎಂಬ ಊರುಗಳಿಗೂ ನಡುವೆ, ಮರುಭೂಮಿಯಲ್ಲಿ ಅರಾಬಾ ಎಂಬ ತಗ್ಗಾದ ಪ್ರದೇಶದಲ್ಲಿ ಸೂಫಿಗೆ ಎದುರಾಗಿ ಮೋಶೆ ಇಸ್ರಯೇಲರಿಗೆ ಮಾಡಿದ ಉಪನ್ಯಾಸಗಳು ಇವು. |
೨ |
(ಹೋರೇಬಿನಿಂದ ಸೇಯಿರ್ ಬೆಟ್ಟಗಳ ಮಾರ್ಗವಾಗಿ ಕಾದೇಶ್ ಬರ್ನೇಯದವರೆಗೆ ಹನ್ನೊಂದು ದಿನದ ಪ್ರಯಾಣ.) |
೩ |
ಮೋಶೆ ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸ ಸೀಹೋನನನ್ನು ಮತ್ತು ಅಷ್ಟಾರೋತ್, ಎದ್ರೈ ಎಂಬ ಪಟ್ಟಣಗಳಲ್ಲಿದ್ದ ಬಾಷಾನಿನ ಅರಸ ಓಗನನ್ನು ಜಯಿಸಿದನು. ತರುವಾಯ, |
೪ |
ಅಂದರೆ ಇಸ್ರಯೇಲರು ಈಜಿಪ್ಟ್ ದೇಶವನ್ನು ಬಿಟ್ಟ ನಲವತ್ತನೆಯ ವರ್ಷದ ಹನ್ನೊಂದನೆಯ ತಿಂಗಳಿನ ಮೊದಲನೆಯ ದಿನ ಸರ್ವೇಶ್ವರ ಸ್ವಾಮಿ ತನಗೆ ಆಜ್ಞಾಪಿಸಿದ್ದನ್ನೆಲ್ಲ ಇಸ್ರಯೇಲರಿಗೆ ತಿಳಿಸಿದನು. |
೫ |
ಜೋರ್ಡನ್ ನದಿಯ ಆಚೆ ಮೋವಾಬ್ಯರ ದೇಶದಲ್ಲಿ ಮೋಶೆ ಈ ಮುಂದಣ ಧರ್ಮಶಾಸ್ತ್ರವನ್ನು ವಿವರಿಸುವುದಕ್ಕೆ ಪ್ರಾರಂಭಿಸಿದನು: |
೬ |
“ಹೋರೇಬಿನಲ್ಲಿ ನಮ್ಮ ದೇವರಾದ ಸರ್ವೇಶ್ವರ ನಮಗೆ, ‘ನೀವು ಈ ಬೆಟ್ಟದ ಬಳಿ ವಾಸಿಸಿದ್ದು ಸಾಕು; |
೭ |
ಈಗ ಹಿಂದಿರುಗಿ ಅಮೋರಿಯರು ಇರುವ ಮಲೆನಾಡಿಗೂ ಅದರ ಸುತ್ತಮುತ್ತಲಿನ ಪ್ರದೇಶಕ್ಕೂ ಪ್ರಯಾಣಮಾಡಿರಿ. ಅಲ್ಲಿನ ಕಣಿವೆ, ತಪ್ಪಲು, ಇಳಕಲು ಪ್ರದೇಶಗಳಿಗೂ ದಕ್ಷಿಣಸೀಮೆ, ಸಮುದ್ರತೀರ ಎಂಬ ನಾಡುಗಳಿಗೂ ಕಾನಾನ್ಯರ ನಾಡು, ಲೆಬನೋನ್ ಪರ್ವತ ಮತ್ತು ಯೂಫ್ರೆಟಿಸ್ ಮಹಾನದಿಯವರೆಗೆ ವಿಸ್ತರಿಸಿಕೊಂಡಿರುವ ಪ್ರದೇಶಗಳಿಗೂ ತೆರಳಿರಿ. |
೮ |
ಆ ನಾಡನ್ನು ನಿಮಗೆ ಕೊಟ್ಟಿದ್ದೇನೆ. ಸರ್ವೇಶ್ವರನೆಂಬ ನಾನು ನಿಮ್ಮ ಪಿತೃಗಳಾದ ಅಬ್ರಹಾಮ, ಇಸಾಕ, ಯಕೋಬರಿಗೂ ಅವರ ಸಂತತಿಯವರಿಗೂ ಆ ನಾಡನ್ನು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ್ದೆನು. ಅದನ್ನು ಸೇರಿ ಸ್ವಾಧೀನಮಾಡಿಕೊಳ್ಳಿ,’ ಎಂದು ಆಜ್ಞಾಪಿಸಿದರು. |
೯ |
“ಆ ಕಾಲದಲ್ಲಿ ನಾನು ನಿಮ್ಮನ್ನು ಸಂಬೋಧಿಸಿ, ‘ನಿಮ್ಮ ಭಾರವನ್ನು ನಾನೊಬ್ಬನೇ ಹೊರುವುದು ಅಸಾಧ್ಯ; |
೧೦ |
ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಸಂಖ್ಯೆಯಲ್ಲಿ ಹೆಚ್ಚಿಸಿದ್ದಾರೆ; ನೀವು ಆಕಾಶದ ನಕ್ಷತ್ರಗಳಷ್ಟಾಗಿದ್ದೀರಿ; |
೧೧ |
ನೀವು ಈಗ ಇರುವುದಕ್ಕಿಂತ ಇನ್ನೂ ಸಾವಿರದಷ್ಟಾಗುವಂತೆ ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ನಿಮ್ಮನ್ನು ಹೆಚ್ಚಿಸಲಿ; ಅವರೇ ವಾಗ್ದಾನಮಾಡಿದ ಪ್ರಕಾರ ನಿಮ್ಮನ್ನು ಆಶೀರ್ವದಿಸಲಿ; |
೧೨ |
ಆದರೆ ನಿಮ್ಮ ಸಮಸ್ಯೆಗಳನ್ನೂ ಹೊಣೆಯನ್ನೂ ವ್ಯಾಜ್ಯಗಳನ್ನೂ ನಾನೊಬ್ಬನೇ ಸಹಿಸುವುದು ಹೇಗೆ? |
೧೩ |
ಆದುದರಿಂದ ನೀವು ಪ್ರತಿಯೊಂದು ಕುಲದಿಂದ ಜ್ಞಾನಿಗಳೂ, ವಿವೇಕಿಗಳೂ, ಪ್ರಖ್ಯಾತರೂ ಆದ ವ್ಯಕ್ತಿಗಳನ್ನು ಆರಿಸಿಕೊಳ್ಳಿ; ನಾನು ಅವರನ್ನು ನಿಮಗೆ ಅಧಿಪತಿಗಳನ್ನಾಗಿ ನೇಮಿಸುತ್ತೇನೆ,’ ಎಂದು ಹೇಳಿದೆ. |
೧೪ |
ಅದಕ್ಕೆ ನೀವು, ‘ನಿಮ್ಮ ಆಲೋಚನೆಯಂತೆ ನಡೆಯುವುದು ವಿಹಿತವಾದದ್ದೇ’ ಎಂದು ಉತ್ತರಕೊಟ್ಟಿರಿ. |
೧೫ |
ಆಗ ನಾನು ನಿಮ್ಮಲ್ಲಿ ಪ್ರಸಿದ್ಧರಾದ ಬುದ್ಧಿವಂತರನ್ನು ಕರೆಯಿಸಿ ಒಂದೊಂದು ಕುಲದಲ್ಲಿ ಸಾವಿರ ಮಂದಿಯ ಮೇಲೆ, ನೂರು ಮಂದಿಯ ಮೇಲೆ, ಐವತ್ತು ಮಂದಿಯ ಮೇಲೆ ಹಾಗು ಹತ್ತು ಮಂದಿಯ ಮೇಲೆ ಅಧಿಕಾರಿಗಳನ್ನಾಗಿ ಹಾಗು ಉಪಾಧಿಕಾರಿಗಳನ್ನಾಗಿ ನೇಮಿಸಿದೆ. |
೧೬ |
ಆ ನ್ಯಾಯಾಧಿಪತಿಗಳಿಗೆ ನಾನು ಆಗ ಕೊಟ್ಟ ಸೂಚನೆ ಇದು: ‘ನೀವು ಸರ್ವಕುಲದವರ ವ್ಯಾಜ್ಯಗಳನ್ನು ವಿಚಾರಿಸಬೇಕು. ಅದು ಇಸ್ರಯೇಲರ ವ್ಯಾಜ್ಯವಾಗಿರಬಹುದು. ಅನ್ಯರೊಡನೆ ವ್ಯಾಜ್ಯವಾಗಿರಬಹುದು. ಎಲ್ಲವನ್ನು ನೀವು ನ್ಯಾಯದ ಪ್ರಕಾರವೇ ತೀರ್ಮಾನಿಸಬೇಕು. |
೧೭ |
ನ್ಯಾಯ ವಿಚಾರಿಸುವಾಗ ಮುಖದಾಕ್ಷಿಣ್ಯ ಮಾಡಬಾರದು; ಅಧಿಕಾರಿಗೂ ಅಲ್ಪರಿಗೂ ಸಮನಾಗಿ ಕಿವಿಗೊಡಿ; ನೀವು ದೇವರ ಹೆಸರಿನಲ್ಲಿ ನ್ಯಾಯ ತೀರಿಸುವುದರಿಂದ ಯಾವ ಮನುಷ್ಯನಿಗೂ ಹೆದರಬೇಡಿ. ನೀವು ತೀರಿಸಲಿಕ್ಕಾಗದ ವ್ಯಾಜ್ಯಗಳನ್ನು ನನ್ನ ಬಳಿಗೆ ತನ್ನಿ; ನಾನೇ ಅವುಗಳನ್ನು ತೀರಿಸುತ್ತೇನೆ,’ ಎಂದು ಹೇಳಿದೆ. |
೧೮ |
ಹೀಗೆ, ನೀವು ಮಾಡಬೇಕಾದ ಎಲ್ಲ ಕಾರ್ಯಗಳ ವಿಷಯದಲ್ಲೂ ಆಗಲೇ ನಿಮಗೆ ಆಜ್ಞೆಕೊಟ್ಟೆ. |
೧೯ |
“ನಾವು ಹೋರೇಬಿನಿಂದ ಹೊರಟು ನಮ್ಮ ದೇವರಾದ ಸರ್ವೇಶ್ವರ ಆಜ್ಞಾಪಿಸಿದಂತೆ ಅಮೋರಿಯರ ಮಲೆನಾಡಿನ ಮಾರ್ಗವನ್ನು ಹಿಡಿದು, ನೀವು ನೋಡಿದ ಆ ಘೋರ ಮಹಾ ಅರಣ್ಯದಲ್ಲಿ ನಡೆದು, ಕಾದೇಶ್ ಬರ್ನೇಯಕ್ಕೆ ಸೇರಿದೆವು. |
೨೦ |
ಆಗ ನಾನು, ‘ನಮ್ಮ ದೇವರಾದ ಸರ್ವೇಶ್ವರ ನಮಗೆ ಕೊಡುವ ಅಮೋರಿಯರ ಮಲೆನಾಡಿನ ಹತ್ತಿರಕ್ಕೆ ಬಂದಿದ್ದೀರಿ; |
೨೧ |
ನಿಮ್ಮ ದೇವರಾದ ಸರ್ವೇಶ್ವರ ಆ ನಾಡನ್ನು ನಿಮಗೇ ಕೊಟ್ಟಿದ್ದಾರೆ; ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ಹೇಳಿದಂತೆ ಅದನ್ನು ಏರಿ ಸ್ವಾಧೀನಮಾಡಿಕೊಳ್ಳಿ; ನೀವು ದಿಗಿಲುಪಡದೆ ಧೈರ್ಯವಾಗಿಯೇ ಇರಬೇಕು,’ ಎಂದು ಹೇಳಿದೆ. |
೨೨ |
“ಆಗ ನೀವೆಲ್ಲರೂ ನನ್ನ ಬಳಿಗೆ ಬಂದು, ‘ನಮಗಿಂತ ಮುಂದಾಗಿ ಜನರನ್ನು ಕಳುಹಿಸುತ್ತೇವೆ; ಅವರು ನಮ್ಮ ಪರವಾಗಿ ಆ ನಾಡನ್ನು ಪರೀಕ್ಷಿಸಿನೋಡಿ, ನಾವು ಹತ್ತಿ ಹೋಗಬೇಕಾದ ದಾರಿಯ ಬಗ್ಗೆ ಹಾಗು ಸೇರಬೇಕಾದ ಊರುಗಳ ಬಗ್ಗೆ ನಮಗೆ ಸಮಾಚಾರ ತರಲಿ’, ಎಂದು ಹೇಳಿದಿರಿ. |
೨೩ |
ಅದು ಒಳ್ಳೇ ಆಲೋಚನೆಯೆಂದು ನಾನು ತಿಳಿದು, ನಿಮ್ಮಲ್ಲಿ ಕುಲಕ್ಕೆ ಒಬ್ಬೊಬ್ಬನ ಮೇರೆಗೆ, ಹನ್ನೆರಡು ಮಂದಿಯನ್ನು ಆರಿಸಿಕೊಂಡೆ. |
೨೪ |
ಅವರು ಹೋಗಿ ಆ ಮಲೆನಾಡನ್ನು ಹತ್ತಿ ಎಷ್ಕೋಲೆಂಬ ಕಣಿವೆಯ ಬಳಿಗೆ ಬಂದು, ಆ ಪ್ರದೇಶವನ್ನು ಸಂಚರಿಸಿ ನೋಡಿ, |
೨೫ |
ಅಲ್ಲಿನ ಹಣ್ಣುಹಂಪಲುಗಳಲ್ಲಿ ಕೆಲವನ್ನು ತಂದು ತೋರಿಸಿದರು; ನಮ್ಮ ದೇವರಾದ ಸರ್ವೇಶ್ವರ ನಮಗೆ ಕೊಡುವ ಆ ನಾಡು ಒಳ್ಳೆಯ ನಾಡೆಂದು ನಮಗೆ ತಿಳಿಸಿದರು. |
೨೬ |
ಆದರೂ ನೀವು ಅಲ್ಲಿಗೆ ಹತ್ತಿಹೋಗದೆ ನಿಮ್ಮ ದೇವರಾದ ಸರ್ವೇಶ್ವರನ ಆಜ್ಞೆಯನ್ನು ಉಲ್ಲಂಘಿಸಿದಿರಿ; |
೨೭ |
ನಿಮ್ಮ ನಿಮ್ಮ ಡೇರೆಗಳಲ್ಲಿ ಗೊಣಗುಟ್ಟಿದಿರಿ; ‘ಸರ್ವೇಶ್ವರ ನಮ್ಮನ್ನು ಈಜಿಪ್ಟ್ ದೇಶದಿಂದ ಬರಮಾಡಿದ್ದು ಹಗೆತನದಿಂದಲೇ; ಅಮೋರಿಯರ ಕೈಗೆ ಒಪ್ಪಿಸಿ ಸಂಹರಿಸಬೇಕೆಂದೇ. |
೨೮ |
ನಾವು ಹೋಗಬೇಕಾದ ಆ ಸೀಮೆ ಎಂಥದೆಂದು ಆಲೋಚಿಸಿ ನೋಡಬೇಕು; ಅಲ್ಲಿಗೆ ಹೋಗಿದ್ದ ನಮ್ಮ ಸಹೋದರರು ಬಂದು ಆ ನಾಡಿನ ಜನರು ನಮಗಿಂತ ಬಲಿಷ್ಠರೂ ಎತ್ತರವಾಗಿಯೂ ಇದ್ದಾರೆ. ಅವರಿರುವ ಪಟ್ಟಣಗಳು ದೊಡ್ಡವು, ಆಕಾಶವನ್ನು ಮುಟ್ಟುವಂಥ ಕೋಟೆಕೊತ್ತಲುಳ್ಳವು; ಅಲ್ಲಿ ‘ಅನಾಕಿಮ್’ ವಂಶಸ್ಥರನ್ನು ಕಂಡೆವೆಂದು ಹೇಳಿ ನಮ್ಮ ಧೈರ್ಯವನ್ನು ಕೆಡಿಸಿದ್ದಾರೆ,’ ಎಂದುಕೊಳ್ಳುತ್ತಿದ್ದಿರಿ. |
೨೯ |
“ಅದಕ್ಕೆ ನಾನು, ‘ಕಳವಳಪಡಬೇಡಿ, ಅವರಿಗೆ ಭಯಪಡಬೇಡಿ. |
೩೦ |
ನಿಮ್ಮ ಮುಂದುಗಡೆಯಲ್ಲೇ ಹೋಗುವ ನಿಮ್ಮ ದೇವರಾದ ಸರ್ವೇಶ್ವರ ಈಜಿಪ್ಟ್ ದೇಶದಲ್ಲೂ ನೀವು ನೋಡಿದ ಮರುಭೂಮಿಯಲ್ಲೂ ಪ್ರತ್ಯಕ್ಷರಾಗಿ ನಿಮ್ಮ ಪರವಾಗಿ ಯುದ್ಧಮಾಡಿದಂತೆಯೇ, ಈಗಲೂ ನಿಮ್ಮ ಕಡೆಯವರಾಗಿದ್ದು ಯುದ್ಧಮಾಡುವರು. |
೩೧ |
ನೀವು ಈ ಸ್ಥಳಕ್ಕೆ ಸೇರುವ ಪರ್ಯಂತರ ನಿಮ್ಮ ಪ್ರಯಾಣದಲ್ಲೆಲ್ಲಾ ಒಬ್ಬ ತಂದೆ ತನ್ನ ಮಗನನ್ನು ಹೇಗೋ ಹಾಗೆಯೇ, ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಹೊತ್ತುತಂದರಲ್ಲವೇ?” ಎಂದು ನಿಮಗೆ ಹೇಳಿದೆ. |
೩೨ |
“ಆದರೂ ನೀವು ನಿಮ್ಮ ದೇವರಾದ ಸರ್ವೇಶ್ವರನನ್ನು ನಂಬಲೇ ಇಲ್ಲ. |
೩೩ |
ನೀವು ಹೋಗಬೇಕಾದ ದಾರಿಯನ್ನು ತೋರಿಸುವುದಕ್ಕೂ ಕಂಡು ಇಳಿಯಬೇಕಾದ ಸ್ಥಳಗಳನ್ನು ಗೊತ್ತುಮಾಡುವುದಕ್ಕೂ ಇರುಳಲ್ಲಿ ಬೆಂಕಿಯಲ್ಲೂ ಹಗಲಲ್ಲಿ ಮೇಘದಲ್ಲೂ ನಿಮ್ಮ ಮುಂದುಗಡೆ ಹೋದ ದೇವರನ್ನು ನೀವು ನಂಬಲಿಲ್ಲ. |
೩೪ |
“ಸರ್ವೇಶ್ವರ ನಿಮ್ಮ ಮಾತುಗಳನ್ನು ಕೇಳಿ ಕೋಪಗೊಂಡರು. ಅವರು ನಿಮ್ಮ ಪಿತೃಗಳಿಗೆ ವಾಗ್ದಾನ ಮಾಡಿದ ಒಳ್ಳೇ ನಾಡನ್ನು ಈ ದುಷ್ಟಜನರಲ್ಲಿ ಯಾರೂ ನೋಡುವುದಿಲ್ಲವೆಂದು ಪ್ರಮಾಣಮಾಡಿದರು. |
೩೫ |
*** |
೩೬ |
‘ಯೆಫುನ್ನೆಯ ಮಗ ಕಾಲೇಬನೊಬ್ಬನೇ ಸರ್ವೇಶ್ವರನಾದ ನನ್ನನ್ನು ಮನಃಪೂರ್ವಕವಾಗಿ ಅನುಸರಿಸಿದ್ದರಿಂದ ಅವನೇ ಅದನ್ನು ನೋಡುವನು; ಅವನು ಸಂಚರಿಸಿದ ಪ್ರದೇಶವನ್ನು ಅವನಿಗೆ ಹಾಗು ಅವನ ಸಂತತಿ ಅವರಿಗೆ ಕೊಡುವೆನು,’ ಎಂದು ಹೇಳಿದರು. |
೩೭ |
ಅದು ಮಾತ್ರವಲ್ಲದೆ, ಸರ್ವೇಶ್ವರ ನಿಮ್ಮ ದೆಸೆಯಿಂದ ನನ್ನ ಮೇಲೆಯೂ ಕೋಪಮಾಡಿದರು. ‘ನೀನೂ ಆ ನಾಡಿಗೆ ಸೇರುವುದಿಲ್ಲ; |
೩೮ |
ಆದರೆ ನಿನ್ನ ಮುಂದೆ ನಿಂತಿರುವ ನೂನನ ಮಗ ಯೆಹೋಶುವನು ಅಲ್ಲಿಗೆ ಸೇರುವನು. ಅವನೇ ಇಸ್ರಯೇಲರಿಗೆ ಆ ನಾಡನ್ನು ಸ್ವಾಧೀನಪಡಿಸುವನು; ಆದುದರಿಂದ ಅವನನ್ನು ಧೈರ್ಯಗೊಳಿಸು. |
೩೯ |
ಆದರೆ ಪರರ ಪಾಲಾಗುವರೆಂದು ನೀವು ಹೇಳಿದ ನಿಮ್ಮ ಮನೆಯವರು ಹಾಗು ಒಳ್ಳೆಯದು, ಕೆಟ್ಟದು ಎಂಬುದನ್ನು ಅರಿಯದ ನಿಮ್ಮ ಹಸುಳೆಗಳು ಅಲ್ಲಿಗೆ ಸೇರುವರು; ಅವರಿಗೇ ಆ ನಾಡನ್ನು ಕೊಡುವೆನು; ಅವರು ಅದನ್ನು ಸ್ವಾಧೀನಮಾಡಿಕೊಳ್ಳುವರು. |
೪೦ |
ನೀವಾದರೋ ಹಿಂದಿರುಗಿ ಕೆಂಪು ಸಮುದ್ರದ ಮಾರ್ಗವನ್ನು ಹಿಡಿದು ಮರುಭೂಮಿಗೆ ಹೊರಟುಹೋಗಿ’ ಎಂದು ಆಜ್ಞಾಪಿಸಿದರು. |
೪೧ |
“ಅದಕ್ಕೆ ನೀವು, ‘ನಾವು ಸರ್ವೇಶ್ವರನಿಗೆ ದ್ರೋಹಿಗಳಾದೆವು; ಆದರೂ ನಮ್ಮ ದೇವರಾದ ಸರ್ವೇಶ್ವರ ಆಜ್ಞಾಪಿಸಿದಂತೆ ನಾವೇ ಈಗ ಆ ಮಲೆನಾಡನ್ನು ಹತ್ತಿ ಯುದ್ಧಮಾಡುತ್ತೇವೆ,’ ಎಂದು ಉತ್ತರಕೊಟ್ಟಿರಿ; ನೀವೆಲ್ಲರು ನಿಮ್ಮ ನಿಮ್ಮ ಆಯುಧಗಳನ್ನು ತೆಗೆದುಕೊಂಡು ಆ ಮಲೆನಾಡನ್ನು ಹತ್ತಿ ಜಯಿಸುವುದು ಅಲ್ಪಕಾರ್ಯವೆಂದು ಭಾವಿಸಿ ಹೊರಡುವುದಕ್ಕಿದ್ದಿರಿ. |
೪೨ |
ಆದರೆ ಸರ್ವೇಶ್ವರ ನನಗೆ, ‘ನಾನು ಇವರ ಮಧ್ಯೆ ಇಲ್ಲವಾದುದರಿಂದ ಇವರು ಸೋತುಹೋಗುವರು; ಯುದ್ಧಮಾಡಲೂಬಾರದು, ಆ ಮಲೆನಾಡಿಗೆ ಹೋಗಲೂಬಾರದು ಎಂದು ಇವರಿಗೆ ಆಜ್ಞಾಪಿಸು,’ ಎಂದರು. |
೪೩ |
“ನಾನು ಆ ಮಾತನ್ನು ನಿಮಗೆ ತಿಳಿಸಿದರೂ ನೀವು ಕಿವಿಗೊಡದೆ ಸರ್ವೇಶ್ವರನ ಆಜ್ಞೆಯನ್ನು ತಾತ್ಸಾರಮಾಡಿ ಸೊಕ್ಕಿನಿಂದ ಆ ಬೆಟ್ಟವನ್ನು ಹತ್ತಿದಿರಿ. |
೪೪ |
ಆಗ ಬೆಟ್ಟದಲ್ಲಿದ್ದ ಅಮೋರಿಯರು ನಿಮಗೆ ವಿರುದ್ಧ ಹೊರಟು ಜೇನುನೊಣಗಳಂತೆ ನಿಮ್ಮನ್ನು ಮುತ್ತಿ ಸೇಯೀರಿನಲ್ಲಿ ಹೊರ್ಮದವರೆಗೂ ಬೆನ್ನಟ್ಟಿ ಸಂಹರಿಸಿದರು. |
೪೫ |
ನೀವು ಹಿಂದಿರುಗಿ ಬಂದು ಸರ್ವೇಶ್ವರನ ಮುಂದೆ ಗೋಳಾಡಿದಿರಿ. ಆಗ ಅವರು ನಿಮ್ಮ ಮೊರೆಯನ್ನು ಕೇಳಲೂ ಇಲ್ಲ, ನಿಮ್ಮನ್ನು ರಕ್ಷಿಸಲೂ ಇಲ್ಲ. |
೪೬ |
“ಆಮೇಲೆ ನೀವು ಕಾದೇಶಿನಲ್ಲಿ ಬಹುಕಾಲ ವಾಸವಾಗಿದ್ದಿರಿ.
|
Kannada Bible (KNCL) 2016 |
No Data |