೧ |
ಸರ್ವೇಶ್ವರ ಸ್ವಾಮಿ ಮೋಶೆಗೆ: |
೨ |
“ಮಿದ್ಯಾನರು ಇಸ್ರಯೇಲರಿಗೆ ಮಾಡಿದ ಹಿಂಸೆಗಾಗಿ ನೀನು ಮುಯ್ಯಿತೀರಿಸಬೇಕು. ಅನಂತರ ನಿನ್ನ ಪೂರ್ವಜರ ಬಳಿಗೆ ನೀನು ಸೇರಬೇಕು,” ಎಂದರು. |
೩ |
ಆಗ ಮೋಶೆ ಇಸ್ರಯೇಲರಿಗೆ, “ನೀವು ಒಂದೊಂದು ಕುಲದಿಂದ ಸಾವಿರ ಜನರ ಮೇರೆಗೆ ಕಾಲಾಳುಗಳನ್ನು ಯುದ್ಧಕ್ಕೆ ಸಿದ್ಧಮಾಡಿಕೊಳ್ಳಿ. |
೪ |
ಅವರು ಮಿದ್ಯಾನರಿಗೆ ಸರ್ವೇಶ್ವರ ಆಜ್ಞಾಪಿಸಿದ ದಂಡನೆಯನ್ನು ಮಾಡಬೇಕು,” ಎಂದು ಅಪ್ಪಣೆ ಕೊಟ್ಟನು. |
೫ |
ಅಂತೆಯೇ ಇಸ್ರಯೇಲರು ಕುಲ ಒಂದಕ್ಕೆ ಸಾವಿರ ಮಂದಿಯ ಮೇರೆಗೆ ಯುದ್ಧಕ್ಕೆ ಸನ್ನದ್ಧರಾದ ಹನ್ನೆರಡು ಸಾವಿರ ಮಂದಿಯನ್ನು ಲೆಕ್ಕಿಸಿಕೊಟ್ಟರು. |
೬ |
ಮೋಶೆ ಇವರನ್ನು ಮಹಾಯಾಜಕನಾದ ಎಲ್ಲಾಜಾರನ ಮಗ ಫೀನೆಹಾಸನ ಮುಂದಾಳತ್ವದಲ್ಲಿ ಪವಿತ್ರ ಉಪಕರಣಗಳೊಂದಿಗೂ ಯುದ್ಧಕಹಳೆಗಳೊಂದಿಗೂ ಯುದ್ಧಕ್ಕೆ ಕಳುಹಿಸಿದನು. |
೭ |
ಸರ್ವೇಶ್ವರನ ಆಜ್ಞೆಯಂತೆ ಅವರು ಮಿದ್ಯಾನರೊಡನೆ ಯುದ್ಧಮಾಡಿ ಗಂಡಸರೆಲ್ಲರನ್ನು ಸಂಹಾರ ಮಾಡಿದರು. |
೮ |
ಹತರಾದವರಲ್ಲಿ ಎವೀ, ರೆಕೆಮ್, ಚೂರ್, ಹೂರ್ ಹಾಗು ರೆಬಾ ಎಂಬ ಮಿದ್ಯಾನರ ಐದು ಮಂದಿ ರಾಜರು ಇದ್ದರು. ಅದೂ ಅಲ್ಲದೆ ಬೆಯೋರನ ಮಗ ಬಿಳಾಮನನ್ನು ಕತ್ತಿಯಿಂದ ಕೊಂದುಹಾಕಿದರು. |
೯ |
ಇಸ್ರಯೇಲರು ಮಿದ್ಯಾನರ ಎಲ್ಲಾ ಮಡದಿ ಮಕ್ಕಳನ್ನೂ ಸೆರೆಹಿಡಿದರು; ಎಲ್ಲಾ ದನಕುರಿಗಳನ್ನೂ ಆಸ್ತಿಪಾಸ್ತಿಯನ್ನೂ ಸೂರೆಮಾಡಿದರು. |
೧೦ |
ಅವರಿದ್ದ ಊರುಕೇರಿಗಳನ್ನು ಸುಟ್ಟುಹಾಕಿದರು. |
೧೧ |
ನರಮಾನವರೆನ್ನದೆ, ಪಶುಪ್ರಾಣಿಗಳೆನ್ನದೆ ಏನನ್ನೂ ಬಿಡದೆ ಎಲ್ಲವನ್ನು ಕೊಳ್ಳೆಹೊಡೆದರು. |
೧೨ |
ಹೀಗೆ ಸೆರೆಯಾಳುಗಳನ್ನೂ ಪಶುಪ್ರಾಣಿಗಳನ್ನೂ ಆಸ್ತಿಪಾಸ್ತಿಯನ್ನೂ ತೆಗೆದುಕೊಂಡು ಜೆರಿಕೋ ಪಟ್ಟಣದ ಎದುರಿಗಿರುವ ಜೋರ್ಡನ್ ನದಿಯ ತೀರಕ್ಕೆ ಬಂದರು. ಅಲ್ಲಿ ಮೋವಾಬ್ಯರ ಮೈದಾನದ ಪಾಳೆಯದಲ್ಲಿದ್ದ ಮೋಶೆ, ಮಹಾಯಾಜಕ ಎಲ್ಲಾಜಾರ್ ಹಾಗು ಇಸ್ರಯೇಲರ ಸರ್ವಸಮಾಜದವರ ಬಳಿಗೆ ಬಂದರು. |
೧೩ |
ಮೋಶೆ, ಮಹಾಯಾಜಕ ಎಲ್ಲಾಜಾರನು ಮತ್ತು ಸಮಾಜದ ಮುಖಂಡರು ಪಾಳೆಯದ ಹೊರಗೆ ಬಂದು ಯುದ್ಧವೀರರನ್ನು ಎದುರುಗೊಂಡರು. |
೧೪ |
ಯುದ್ಧಭೂಮಿಯಿಂದ ಬಂದಿದ್ದ ಆ ಸೈನ್ಯದ ಸಹಸ್ರಾಧಿಪತಿಗಳನ್ನು ಹಾಗು ಶತಾಧಿಪತಿಗಳನ್ನು ಕಂಡು ಮೋಶೆ ಕೋಪಗೊಂಡನು. |
೧೫ |
“ನೀವು ಮಹಿಳೆಯರನ್ನೆಲ್ಲ ಉಳಿಸಿದ್ದೇಕೆ? |
೧೬ |
ಪೆಗೋರದ ಬಾಳನ ವಿಷಯದಲ್ಲಿ ಬಿಳಾಮನ ದುರಾಲೋಚನೆಯನ್ನು ಅನುಸರಿಸಿ, ಇಸ್ರಯೇಲರನ್ನು ಸರ್ವೇಶ್ವರನಿಗೆ ದ್ರೋಹಿಗಳನ್ನಾಗಿಸಿ, ಸಮಾಜದವರಲ್ಲಿ ಘೋರ ವ್ಯಾಧಿಯುಂಟಾಗುವಂತೆ ಮಾಡಿದವರು ಅವರೇ ಅಲ್ಲವೆ? |
೧೭ |
ಆದಕಾರಣ ಈ ಗುಂಪಿನಲ್ಲಿರುವ ಎಲ್ಲ ಗಂಡುಮಕ್ಕಳನ್ನು ಮತ್ತು ಪುರುಷ ಸಂಗಮಮಾಡಿದ ಎಲ್ಲ ಹೆಂಗಸರನ್ನು ಕೊಲ್ಲಬೇಕು. |
೧೮ |
ಪುರುಷ ಸಂಗಮ ಮಾಡದಿರುವ ಕನ್ಯೆಯರನ್ನು ನಿಮಗೋಸ್ಕರ ಉಳಿಸಿಕೊಳ್ಳಬೇಕು. |
೧೯ |
ನಿಮ್ಮಲ್ಲಿ ಮನುಷ್ಯಪ್ರಾಣ ತೆಗೆದವರು ಹಾಗು ಶವ ಸೋಂಕಿದವರು ಏಳು ದಿನದವರೆಗೆ ಪಾಳೆಯದ ಹೊರಗಡೆ ಇರಬೇಕು. ಮೂರನೆಯ ಮತ್ತು ಏಳನೆಯ ದಿನ ನಿಮ್ಮನ್ನೂ ಸೆರೆಯಾಳುಗಳನ್ನೂ ಶುದ್ಧೀಕರಿಸಿಕೊಳ್ಳಬೇಕು. |
೨೦ |
ಎಲ್ಲ ಬಟ್ಟೆಬರೆಗಳನ್ನೂ ತೊಗಲಿನ ಸಾಮಾನುಗಳನ್ನೂ ಮೇಕೆ ಕೂದಲಿನ ವಸ್ತ್ರಗಳನ್ನೂ ಹಾಗು ಮರದ ಸಾಮಾನುಗಳನ್ನೂ ಶುದ್ಧಮಾಡಿಕೊಳ್ಳಬೇಕು,” ಎಂದು ಹೇಳಿದನು. |
೨೧ |
ಮಹಾಯಾಜಕ ಎಲ್ಲಾಜಾರನು ಯುದ್ಧಕ್ಕೆ ಹೋಗಿ ಬಂದಿದ್ದ ಸೈನಿಕರಿಗೆ ಹೀಗೆಂದನು: “ಸರ್ವೇಶ್ವರಸ್ವಾಮಿ ಮೋಶೆಗೆ ಅಪ್ಪಣೆಮಾಡಿದ ವಿಧಿನಿಯಮ ಹೀಗಿದೆ - |
೨೨ |
ಬೆಂಕಿಯನ್ನು ತಡೆಯುವ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ತವರ, ಸೀಸ ಮೊದಲಾದುವುಗಳನ್ನು ಬೆಂಕಿದಾಟಿಸಿ ಶುದ್ಧಿಮಾಡಬೇಕು. |
೨೩ |
ಅವುಗಳನ್ನು, ಹೊಲೆ ಹೋಗಲಾಡಿಸುವ ನೀರಿನಿಂದಲೂ ಶುದ್ಧಮಾಡಬೇಕು. ಬೆಂಕಿಯನ್ನು ತಡೆಯಲಾರದ ವಸ್ತುಗಳನ್ನು ನೀರಿನಿಂದ ತೊಳೆದು ಶುದ್ಧಮಾಡಬೇಕು. |
೨೪ |
ಏಳನೆಯ ದಿನದಲ್ಲಿ ನಿಮ್ಮ ಬಟ್ಟೆಗಳನ್ನು ಒಗೆದುಕೊಂಡ ನಂತರ ಶುದ್ಧರಾಗುವಿರಿ. ಆ ಬಳಿಕ ನೀವು ಪಾಳೆಯದೊಳಗೆ ಬರಬಹುದು.” |
೨೫ |
ಸರ್ವೇಶ್ವರ ಮೋಶೆಗೆ: |
೨೬ |
“ನೀನು, ಮಹಾಯಾಜಕ ಎಲ್ಲಾಜಾರನು ಮತ್ತು ಕುಲನಾಯಕರು ಸೈನಿಕರ ಕೈಗೆ ಸಿಕ್ಕಿರುವ ಸೆರೆಯಾಳುಗಳನ್ನೂ ಪಶುಪ್ರಾಣಿಗಳನ್ನೂ ಲೆಕ್ಕಮಾಡಿ ಒಟ್ಟು ಎಷ್ಟೆಂದು ತಿಳಿದುಕೊಳ್ಳಿ. |
೨೭ |
ಅದನ್ನು ಎರಡು ಭಾಗಮಾಡಿ ಯುದ್ಧಕ್ಕೆ ಹೋಗಿದ್ದ ಸೈನಿಕರಿಗೆ ಅರ್ಧವನ್ನೂ ಮಿಕ್ಕ ಸಮಾಜದವರಿಗೆ ಅರ್ಧವನ್ನೂ ಹಂಚಿಕೊಡಿ. |
೨೮ |
ಯುದ್ಧಕ್ಕೆ ಹೋಗಿದ್ದ ಸೈನಿಕರಿಗೆ ಬರುವ ಭಾಗದಿಂದ ಸೆರೆಯಾಳು, ದನ, ಕತ್ತೆ, ಆಡು, ಕುರಿ |
೨೯ |
ಇವುಗಳಲ್ಲಿ ಐನೂರರಲ್ಲಿ ಒಂದರ ಮೇರೆಗೆ ಸರ್ವೇಶ್ವರನಿಗೋಸ್ಕರ ಕಪ್ಪವನ್ನು ತೆಗೆದುಕೊಳ್ಳಿ. ಇದನ್ನು ಪ್ರತ್ಯೇಕಿಸಿ ಮಹಾಯಾಜಕ ಎಲ್ಲಾಜಾರನಿಗೆ ಒಪ್ಪಿಸಿರಿ. |
೩೦ |
ಮಿಕ್ಕ ಇಸ್ರಯೇಲರಿಗೆ ಬರುವ ಭಾಗದಿಂದ ಸೆರೆಯಾಳು, ದನ, ಕತ್ತೆ, ಆಡು, ಕುರಿ ಇವುಗಳಲ್ಲಿ ಐವತ್ತರಲ್ಲಿ ಒಂದರ ಮೇರೆಗೆ ತೆಗೆದುಕೊಂಡು ಸರ್ವೇಶ್ವರನ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಡಿ,” ಎಂದು ಆಜ್ಞಾಪಿಸಿದರು. |
೩೧ |
ಸರ್ವೇಶ್ವರನ ಅಪ್ಪಣೆಯಂತೆಯೇ ಮೋಶೆ ಮತ್ತು ಮಹಾಯಾಜಕ ಎಲ್ಲಾಜಾರನು ಮಾಡಿದರು. |
೩೨ |
ಸೈನಿಕರು ತಂದ ಸುಲಿಗೆಯಲ್ಲಿ ಹಂಚಿಕೊಳ್ಳಲು ಉಳಿದುದರ ವಿವರ ಇದು: ಆಡುಕುರಿಗಳೂ 675,000; |
೩೩ |
ದನಕರುಗಳು 72,000; |
೩೪ |
ಕತ್ತೆಗಳು 61,000; |
೩೫ |
ಕನ್ಯೆಯರು 32,000; |
೩೬ |
ಯುದ್ಧಕ್ಕೆ ಹೋಗಿದ್ದ ಸೈನಿಕರಿಗೆ ದೊರಕಿದ ಅರ್ಧಭಾಗ ಆಗಿರುವ 337,500 ಆಡುಕುರಿಗಳಲ್ಲಿ |
೩೭ |
675 ಆಡುಕುರಿಗಳು ಸರ್ವೇಶ್ವರನಿಗೆ ಬಂದ ಕಪ್ಪ. |
೩೮ |
ಹಾಗೆಯೇ ಅವರಿಗೆ ದೊರಕಿದ 36,000 ದನಕರುಗಳಲ್ಲಿ 72 ದನಕರುಗಳು, |
೩೯ |
30,500 ಕತ್ತೆಗಳಲ್ಲಿ 61 ಕತ್ತೆಗಳು, |
೪೦ |
16,000 ಕನ್ಯೆಯರಲ್ಲಿ 32 ಮಂದಿ ಸರ್ವೇಶ್ವರನಿಗೆ ಬಂದ ಕಪ್ಪ. |
೪೧ |
ಸರ್ವೇಶ್ವರನ ಅಪ್ಪಣೆಯ ಮೇರೆಗೆ ಮೋಶೆ ಈ ಕಪ್ಪವನ್ನು ಸರ್ವೇಶ್ವರನಿಗೆ ಪ್ರತ್ಯೇಕಿಸಿ ಮಹಾಯಾಜಕ ಎಲ್ಲಾಜಾರನಿಗೆ ಒಪ್ಪಿಸಿದನು. |
೪೨ |
ಸೈನಿಕರು ತಂದ ಸುಲಿಗೆಯಲ್ಲಿ ಮೋಶೆ ಪ್ರತ್ಯೇಕಿಸಿದ ಮಿಕ್ಕ ಅರ್ಧಭಾಗದ ವಿವರ ಇದು: |
೪೩ |
337,500 ಆಡುಕುರಿಗಳು; |
೪೪ |
36,000 ದನಕರುಗಳು; |
೪೫ |
30,500 ಕತ್ತೆಗಳು; 16,000 ಕನ್ಯೆಯರು. |
೪೬ |
ಇಷ್ಟು ಇಸ್ರಯೇಲ ಸಮಾಜದವರ ಪಾಲಿಗೆ ಬಂದವುಗಳು. |
೪೭ |
ಇವುಗಳಲ್ಲಿ ಮೋಶೆ ಸರ್ವೇಶ್ವರನ ಅಪ್ಪಣೆಯ ಪ್ರಕಾರ ಐವತ್ತರಲ್ಲಿ ಒಂದರ ಮೇರೆಗೆ ತೆಗೆದುಕೊಂಡು ಸರ್ವೇಶ್ವರನ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಟ್ಟನು. |
೪೮ |
ಸೈನ್ಯದ ಸಹಸ್ರಾಧಿಪತಿಗಳು ಹಾಗು ಶತಾಧಿಪತಿಗಳು ಮೋಶೆ ಬಳಿಗೆ ಬಂದು, |
೪೯ |
“ನಿಮ್ಮ ದಾಸರಾದ ನಾವು ನಮ್ಮ ಅಧಿಕಾರಕ್ಕೆ ಒಳಪಟ್ಟ ಸೈನಿಕರನ್ನು ಲೆಕ್ಕಿಸಿದಾಗ ಒಬ್ಬನಾದರೂ ಕಡಿಮೆ ಆಗಿಲ್ಲವೆಂದು ಗೊತ್ತಾಯಿತು. |
೫೦ |
ಸರ್ವೇಶ್ವರ ಸ್ವಾಮಿ ನಮ್ಮ ಪ್ರಾಣಗಳನ್ನು ಕಾಪಾಡಿದ್ದಾರೆ. ಅದಕ್ಕೆ ಈಡಾಗಿ ಅವರಿಗೆ ಕಾಣಿಕೆಯಾಗಿ ನಮ್ಮಲ್ಲಿ ಒಬ್ಬೊಬ್ಬನು ತನಗೆ ಸಿಕ್ಕಿದ ಚಿನ್ನದ ಒಡವೆಗಳನ್ನು, ಅಂದರೆ ತೋಳ್ಬಳೆ, ಕಡಗ, ಮುದ್ರೆಯುಂಗುರ, ಮುರುವು, ಕಂಠಮಾಲೆ, ಮುಂತಾದುವುಗಳನ್ನು ತಂದಿದ್ದೇವೆ,” ಎಂದರು. |
೫೧ |
ಅವರು ಕೊಟ್ಟ ಆ ಚಿನ್ನದ ಒಡವೆಗಳನ್ನೂ ವಿಚಿತ್ರ ಆಭರಣಗಳನ್ನೂ ಮೋಶೆ ಮತ್ತು ಮಹಾಯಾಜಕ ಎಲ್ಲಾಜಾರನು ತೆಗೆದುಕೊಂಡರು. |
೫೨ |
ಸಹಸ್ರಾಧಿಪತಿಗಳು ಹಾಗು ಶತಾಧಿಪತಿಗಳು ಸರ್ವೇಶ್ವರನಿಗೆ ಹೀಗೆ ಪ್ರತ್ಯೇಕಿಸಿ ಸಮರ್ಪಿಸಿದ ಕಾಣಿಕೆಯ ಒಟ್ಟು ತೂಕ 16,750 ಶೆಕೆಲ್ ಗಳು. |
೫೩ |
ಪ್ರತಿಯೊಬ್ಬ ಸೈನಿಕನೂ ಸ್ವಂತಕ್ಕಾಗಿ ಲೂಟಿಯನ್ನು ಇಟ್ಟುಕೊಂಡಿದ್ದನು. |
೫೪ |
ಆದರೆ ಸಹಸ್ರಾಧಿಪತಿಗಳು ಮತ್ತು ಶತಾಧಿಪತಿಗಳು ಕೊಟ್ಟ ಚಿನ್ನವನ್ನು ಮೋಶೆ ಮತ್ತು ಮಹಾಯಾಜಕ ಎಲ್ಲಾಜಾರನು ಸ್ವೀಕರಿಸಿ ಅದನ್ನು ಇಸ್ರಯೇಲರಿಗೋಸ್ಕರ ಸ್ಮರಣಾರ್ಥವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ದೇವದರ್ಶನದ ಗುಡಾರದೊಳಗಿಟ್ಟರು.
|
Kannada Bible (KNCL) 2016 |
No Data |