೧ |
ಸರ್ವೇಶ್ವರ ಸ್ವಾಮಿ ಮೋಶೆಗೆ: |
೨ |
“ನಾನು ಇಸ್ರಯೇಲರಿಗೆ ಕೊಡಲಿರುವ ಕಾನಾನ್ ನಾಡನ್ನು ಸಂಚರಿಸಿ ನೋಡಿಬರಲು ಒಂದೊಂದು ಕುಲದಿಂದ ಒಬ್ಬೊಬ್ಬ ಮುಖ್ಯಸ್ಥನನ್ನು ಕಳಿಸು,” ಎಂದು ಆಜ್ಞಾಪಿಸಿದರು. |
೩ |
ಸರ್ವೇಶ್ವರನ ಅಪ್ಪಣೆಯ ಮೇರೆಗೆ ಮೋಶೆ ಪಾರಾನ್ ಮರುಭೂಮಿಯಿಂದ ಇಸ್ರಯೇಲರ ಮುಖ್ಯಸ್ಥರನ್ನು ಕಳಿಸಿದನು. |
೪ |
ಆ ಮುಖ್ಯಸ್ಥರ ಹೆಸರುಗಳು ಇವು - ರೂಬೇನ್ ಕುಲದ ಜಕ್ಕೂರನ ಮಗ ಶಮ್ಮೂವ |
೫ |
ಸಿಮೆಯೋನ್ ಕುಲದ ಹೋರಿಯ ಮಗನದ ಶಾಫಾಟ್ |
೬ |
ಯೆಹೂದ ಕುಲದ ಯೆಫುನ್ನೆಯ ಮಗನಾದ ಕಾಲೇಬ |
೭ |
ಇಸ್ಸಾಕಾರ್ ಕುಲದ ಜೋಸೆಫನ ಮಗ ಇಗಾಲ್ |
೮ |
ಎಫ್ರಾಯೀಮ್ ಕುಲದ ನೂನನ ಮಗ ಹೋಶೇಯ |
೯ |
ಬೆನ್ಯಾಮೀನ್ ಕುಲದ ರಾಫೂವನ ಮಗ ಪಲ್ಟೀ |
೧೦ |
ಜೆಬುಲೂನ್ ಕುಲದ ಸೋದಿಯ ಮಗ ಗದ್ದೀಯೇಲ್ |
೧೧ |
ಜೋಸೆಫ್ ಅಂದರೆ ಮನಸ್ಸೆ ಕುಲದ ಸೂಸೀಯ ಮಗ ಗದ್ದೀ |
೧೨ |
ದಾನ್ ಕುಲದ ಗೆಮಲ್ಲೀಯನ ಮಗ ಅಮ್ಮೀಯೇಲ್ |
೧೩ |
ಅಶೇರ್ ಕುಲದ ಮಿಕಾಯೇಲನ ಮಗ ಸೆತೂರ್ |
೧೪ |
ನಫ್ತಾಲಿ ಕುಲದ ವಾಪೆಸೀಯನ ಮಗ ನಹಬೀ |
೧೫ |
ಗಾದ್ ಕುಲದ ಮಾಕಿಯನ ಮಗ ಗೆಯೂವೇಲ್ |
೧೬ |
ನಾಡನ್ನು ಸಂಚರಿಸಿ ನೋಡಿಬರುವುದಕ್ಕೆ ಮೋಶೆ ಕಳಿಸಿದ್ದ ವ್ಯಕ್ತಿಗಳ ಹೆಸರುಗಳು ಇವೇ. ಮೋಶೆ ನೂನನ ಮಗ ಹೋಶೇಯನಿಗೆ ‘ಯೆಹೋಶುವ’ ಎಂದು ಹೆಸರಿಟ್ಟನು. |
೧೭ |
ಕಾನಾನ್ ನಾಡನ್ನು ಸಂಚರಿಸಿ ನೋಡಿ ಬರುವುದಕ್ಕೆ ಅವರನ್ನು ಕಳಿಸುವಾಗ ಮೋಶೆ ಹೀಗೆಂದು ಸಂಬೋಧಿಸಿದನು: “ನೀವು ನೆಗೆಬಾ ಮಾರ್ಗವಾಗಿ ಮಲೆನಾಡಿಗೆ ಹತ್ತಿಹೋಗಿರಿ. |
೧೮ |
ಆ ನಾಡು ಹೇಗಿದೆ, ಅಲ್ಲಿನ ನಿವಾಸಿಗಳು ಬಲಿಷ್ಠರೋ ಬಲಹೀನರೋ, ಅವರ ಸಂಖ್ಯೆ ದೊಡ್ಡದೋ ಚಿಕ್ಕದೋ |
೧೯ |
ಅವರ ವಾಸಸ್ಥಳ ಒಳ್ಳೆಯದೋ ಕೆಟ್ಟದೋ, ಅವು ಪಾಳೆಯಗಳೋ ಕೋಟೆಗಳೋ |
೨೦ |
ಭೂಮಿ ಸಾರವತ್ತಾದುದೋ ನಿಸ್ಸಾರವಾದುದೋ ಮರಗಿಡಗಳಿಂದ ಕೂಡಿದೆಯೋ ಬೈಲುಪ್ರದೇಶವಾಗಿದೆಯೋ ನೋಡಿ ತಿಳಿದುಕೊಳ್ಳಿ. ಅದಲ್ಲದೆ, ಆ ನಾಡಿನ ಉತ್ಪನ್ನಗಳಲ್ಲಿ ಕೆಲವನ್ನು ಪ್ರಯಾಸಪಟ್ಟು ತರಬೇಕು.” ಅದು ದ್ರಾಕ್ಷೆಯ ಪ್ರಥಮ ಫಲಕಾಲವಾಗಿತ್ತು. |
೨೧ |
ಅವರು ಬೆಟ್ಟವನ್ನು ಹತ್ತಿ ಚಿನ್ ಮರುಭೂಮಿಯಿಂದ ಹಮಾತಿನ ದಾರಿಯಲ್ಲಿರುವ ರೆಹೋಬಿನವರೆಗೆ ಆ ನಾಡನ್ನು ಸಂಚರಿಸಿ ನೋಡಿದರು. |
೨೨ |
ಅವರು ಬೆಟ್ಟವನ್ನು ಹತ್ತಿ ನೆಗೆಬನ್ನು ದಾಟಿ, ಹೆಬ್ರೋನಿಗೆ ಬಂದರು. ಅಲ್ಲಿ ‘ಅನಕಿಮ್’ ವಂಶಸ್ಥರಾದ ಅಹೀಮನ್, ಶೇಷೈ, ತಲ್ಮೈ ಎಂಬವರು ಇದ್ದರು. (ಹೆಬ್ರೋನ್ ಪಟ್ಟಣ ಈಜಿಪ್ಟ್ ದೇಶದಲ್ಲಿರುವ ಚೋಮ್ ಪಟ್ಟಣಕ್ಕಿಂತ ಏಳು ವರ್ಷ ಮೊದಲೆ ಕಟ್ಟಲ್ಪಟ್ಟಿತ್ತು) |
೨೩ |
ಎಷ್ಕೋಲ್ ಎಂಬ ತಗ್ಗಿಗೆ ಬಂದು ಅಲ್ಲಿ ದ್ರಾಕ್ಷಿ ಹಣ್ಣಿನ ಗೊಂಚಲಿದ್ದ ಒಂದು ಕೊಂಬೆಯನ್ನು ಕೊಯ್ದರು. ಅದನ್ನು ಅಡ್ಡದಂಡಿಗೆಯಲ್ಲಿ ಇಬ್ಬರು ಹೊತ್ತು ತಂದರು. ಕೆಲವು ದಾಳಿಂಬೆ ಹಣ್ಣುಗಳನ್ನೂ ಅಂಜೂರದ ಹಣ್ಣುಗಳನ್ನು ತಂದರು. |
೨೪ |
ಇಸ್ರಯೇಲರು ಅಲ್ಲಿಯೇ ದ್ರಾಕ್ಷಿಯ ಗೊಂಚಲನ್ನು ಕೊಯ್ದದ್ದರಿಂದ ಆ ಸ್ಥಳಕ್ಕೆ ‘ಎಷ್ಕೋಲ್’ ಎಂದು ಹೆಸರಾಯಿತು. |
೨೫ |
ನಾಲ್ವತ್ತು ದಿವಸ ಆ ನಾಡನ್ನು ಸಂಚರಿಸಿ ನೋಡಿ ಆದಮೇಲೆ ಅವರು ಹಿಂದಿರುಗಿ ಬಂದರು. |
೨೬ |
ಪಾರಾನ್ ಮರುಭೂಮಿಯ ಕಾದೇಶಿನಲ್ಲಿದ್ದ ಮೋಶೆ, ಆರೋನ್ ಹಾಗೂ ಇಸ್ರಯೇಲ್ ಜನಸಮೂಹದ ಬಳಿಗೆ ಬಂದು ಅವರಿಗೆ ಸಮಾಚಾರವನ್ನು ತಿಳಿಸಿ ಆ ನಾಡಿನ ಹಣ್ಣುಗಳನ್ನು ತೋರಿಸಿದರು. |
೨೭ |
ಮೋಶೆಗೆ, “ನೀವು ನಮ್ಮನ್ನು ಕಳಿಸಿದ ನಾಡಿಗೆ ಹೋಗಿದ್ದೆವು. ಅದು ಹಾಲು-ಜೇನು ಹರಿಯುವಂಥ ನಾಡು. ಅಲ್ಲಿನ ಹಣ್ಣುಹಂಪಲುಗಳು ಇಂಥವು. |
೨೮ |
ಅಂತೆಯೇ ಆ ನಾಡಿನ ನಿವಾಸಿಗಳು ಬಲಿಷ್ಠರು. ಅವರಿರುವ ಪಟ್ಟಣಗಳು ದೊಡ್ಡವು; ಅವು ಕೋಟೆ ಕೊತ್ತಲುಗಳಿಂದ ಕೂಡಿವೆ. ಅದೂ ಅಲ್ಲದೆ ಅಲ್ಲಿ ‘ಅನಕಿಮ್’ ವಂಶಸ್ಥರನ್ನು ಕಂಡೆವು. |
೨೯ |
ದಕ್ಷಿಣ ಪ್ರಾಂತದಲ್ಲಿ ಅಮಾಲೇಕ್ಯರು, ಮಲೆನಾಡಿನಲ್ಲಿ ಹಿತ್ತಿಯರು ಯೆಬೂಸಿಯರು ಹಾಗು ಅಮೋರಿಯರು ಮತ್ತು ಸಮುದ್ರ ತೀರದಲ್ಲಿ ಹಾಗೂ ಜೋರ್ಡನ್ ನದಿಯ ಪರಿಸರದಲ್ಲಿ ಕಾನಾನ್ಯರು ವಾಸವಾಗಿದ್ದಾರೆ,” ಎಂದು ವರದಿ ಮಾಡಿದರು. |
೩೦ |
ಮೋಶೆಗೆ ವಿರುದ್ಧ ಗುಣಗುಟ್ಟುತ್ತಿದ್ದವರನ್ನು ಕಾಲೇಬನು ಸಮಾಧಾನಗೊಳಿಸುತ್ತಾ, “ನಾವು ಧೈರ್ಯದಿಂದ ಆ ಮಲೆನಾಡಿಗೆ ಹೋಗಿ ಅದನ್ನು ಸ್ವಾಧೀನ ಪಡಿಸಿಕೊಳ್ಳೋಣ. ಅದನ್ನು ಜಯಿಸಲು ನಮ್ಮಿಂದ ಸಾಧ್ಯ,” ಎಂದನು. |
೩೧ |
ಆದರೆ ಅವನ ಜೊತೆಯಲ್ಲಿ ಹೋಗಿದ್ದವರು, “ಆ ಜನರು ನಮಗಿಂತ ಬಲಿಷ್ಠರು! ಅವರ ಮೇಲೆ ಜಯ ಸಾಧಿಸಲು ನಮಗೆ ಶಕ್ತಿ ಸಾಲದು,” ಎಂದರು. |
೩೨ |
ಅದಲ್ಲದೆ ತಾವು ಸಂಚರಿಸಿ ನೋಡಿ ಬಂದ ನಾಡಿನ ವಿಷಯವಾಗಿ ಇಸ್ರಯೇಲರಿಗೆ ಅಶುಭ ಸಮಾಚಾರವನ್ನೇ ಹೇಳುವವರಾದರು. “ನಾವು ಸಂಚಾರಮಾಡಿ ನೋಡಿ ಬಂದ ನಾಡು ತನ್ನಲ್ಲಿ ವಾಸಿಸುವವರನ್ನೇ ಕಬಳಿಸುವಂತಿದೆ. ನಾವು ಅಲ್ಲಿ ನೋಡಿದ ಜನರೆಲ್ಲರು ಬಹು ಎತ್ತರವಾದ ವ್ಯಕ್ತಿಗಳು. |
೩೩ |
ಅಲ್ಲಿ ‘ನೆಫೀಲಿಯರನ್ನು’ ಅಂದರೆ ನೆಫೀಲಿಯನ ವಂಶದವರಾದ ‘ಅನಕಿಮ್’ರನ್ನು ನೋಡಿದೆವು. ಅವರ ಮುಂದೆ ನಾವು ಮಿಡತೆಗಳಂತೆ ಇದ್ದೆವು. ಅವರಿಗೂ ನಾವು ಹಾಗೆಯೆ ಕಾಣಿಸಿಕೊಂಡೆವು,” ಎಂದರು.
|
Kannada Bible (KNCL) 2016 |
No Data |