೧ |
ಎಂಟನೆಯ ದಿನ ಮೋಶೆ ಆರೋನನನ್ನೂ ಅವನ ಮಕ್ಕಳನ್ನೂ ಹಾಗು ಇಸ್ರಯೇಲರ ಹಿರಿಯರನ್ನೂ ಕರೆಸಿದನು. |
೨ |
ಆರೋನನಿಗೆ, “ನೀನು ಪರಿಹಾರಕ ಬಲಿದಾನಕ್ಕಾಗಿ ಕಳಂಕರಹಿತವಾದ ಹೋರಿಕರುವನ್ನು ಮತ್ತು ದಹನಬಲಿಗಾಗಿ ಕಳಂಕರಹಿತವಾದ ಟಗರನ್ನು ತೆಗೆದುಕೊಂಡು ಸರ್ವೇಶ್ವರನ ಸನ್ನಿಧಿಯಲ್ಲಿ ನಿನಗೋಸ್ಕರ ಸಮರ್ಪಿಸು. |
೩ |
ಮತ್ತು ನೀನು ಇಸ್ರಯೇಲರ ಸಂಗಡ ಮಾತಾಡಿ ಅವರಿಗೆ, ‘ಈ ದಿನ ಸರ್ವೇಶ್ವರ ಸ್ವಾಮಿ ಪ್ರತ್ಯಕ್ಷರಾಗುತ್ತಾರೆ. ಆದುದರಿಂದ ನೀವು ಅವರ ಸನ್ನಿಧಿಯಲ್ಲಿ ಸಮರ್ಪಿಸಲು ದೋಷಪರಿಹಾರಕ್ಕಾಗಿ ಒಂದು ಹೋತವನ್ನು, ದಹನಬಲಿಗಾಗಿ ಒಂದು ವರ್ಷದ ಕಳಂಕರಹಿತವಾದ ಒಂದು ಕರು ಹಾಗು ಒಂದು ಕುರಿಯನ್ನು, |
೪ |
ಶಾಂತಿಸಮಾಧಾನ ಬಲಿಗಾಗಿ ಒಂದು ಹೋರಿ ಹಾಗು ಒಂದು ಟಗರನ್ನು ಮತ್ತು ನೈವೇದ್ಯಕ್ಕಾಗಿ ಎಣ್ಣೆ ಮಿಶ್ರವಾದ ಪದಾರ್ಥವನ್ನು ತೆಗೆದುಕೊಂಡು ಬರಬೇಕೆಂದು ಆಜ್ಞಾಪಿಸು,” ಎಂದನು. |
೫ |
ಮೋಶೆಯ ಆಜ್ಞಾನುಸಾರ ಅವರು ಕಾಣಿಕೆಗಳನ್ನೆಲ್ಲ ದೇವದರ್ಶನದ ಗುಡಾರದ ಬಳಿಗೆ ತಂದರು. ಇಸ್ರಯೇಲ್ ಸಮಾಜದವರೆಲ್ಲರು ಹತ್ತಿರಕ್ಕೆ ಬಂದು ಸರ್ವೇಶ್ವರನ ಸನ್ನಿಧಿಯಲ್ಲಿ ನಿಂತರು. |
೬ |
ಮೋಶೆ ಅವರಿಗೆ, “ನೀವು ಇವುಗಳನ್ನೆಲ್ಲ ಮಾಡಬೇಕೆಂದು ಸರ್ವೇಶ್ವರ ಸ್ವಾಮಿಯೇ ಆಜ್ಞಾಪಿಸಿದ್ದಾರೆ; ಅದರಂತೆ ನೀವು ನಡೆದುಕೊಂಡರೆ ಸರ್ವೇಶ್ವರನ ಮಹಿಮೆ ನಿಮಗೆ ಪ್ರತ್ಯಕ್ಷವಾಗುವುದು,” ಎಂದು ಹೇಳಿದನು. |
೭ |
ಅನಂತರ ಮೋಶೆ ಆರೋನನಿಗೆ, “ಬಲಿಪೀಠದ ಹತ್ತಿರಕ್ಕೆ ಬಂದು ನೀನು ಮಾಡಬೇಕಾದ ದೋಷಪರಿಹಾರಕ ಬಲಿಯನ್ನು ಮತ್ತು ದಹನಬಲಿಯನ್ನು ಸಮರ್ಪಿಸಿ ನಿನ್ನ ಹಾಗು ಜನರ ದೋಷವನ್ನು ಪರಿಹರಿಸು. ಜನರು ತಂದದ್ದನ್ನು ಸಮರ್ಪಿಸಿ ಸರ್ವೇಶ್ವರನ ಆಜ್ಞೆಯಂತೆ ಅವರ ದೋಷವನ್ನು ಪರಿಹರಿಸು,” ಎಂದು ಹೇಳಿದನು. |
೮ |
ಅಂತೆಯೇ ಆರೋನನು ಬಲಿಪೀಠದ ಹತ್ತಿರಕ್ಕೆ ಹೋಗಿ ತನಗಾಗಿ ಹೋರಿಯನ್ನು ದೋಷಪರಿಹಾರಕ ಬಲಿಯಾಗಿ ವಧಿಸಿದನು. |
೯ |
ಆರೋನನ ಮಕ್ಕಳು ಆ ಬಲಿಪ್ರಾಣಿಯ ರಕ್ತವನ್ನು ಅವನಿಗೆ ಒಪ್ಪಿಸಿದಾಗ ಅವನು ಅದರಲ್ಲಿ ತನ್ನ ಬೆರಳನ್ನು ಅದ್ದಿ, ಬಲಿಪೀಠದ ಕೊಂಬುಗಳಗೆ ಹಚ್ಚಿ, ಮಿಕ್ಕ ರಕ್ತವನ್ನು ಬಲಿಪೀಠದ ಬುಡದಲ್ಲಿ ಹೊಯ್ದನು. |
೧೦ |
ದೋಷಪರಿಹಾರಕ ಬಲಿಪ್ರಾಣಿಯ ಕೊಬ್ಬನ್ನು, ಮೂತ್ರಪಿಂಡಗಳನ್ನು, ಕಾಳಿಜದ ಹತ್ತಿರವಿರುವ ಕೊಬ್ಬನ್ನು, ಸರ್ವೇಶ್ವರ ಮೋಶೆಯ ಮುಖಾಂತರ ಆಜ್ಞಾಪಿಸಿದಂತೆ, ಬಲಿಪೀಠದ ಮೇಲೆ ಹೋಮಮಾಡಿದನು. |
೧೧ |
ಅದರ ಮಾಂಸವನ್ನೂ ಚರ್ಮವನ್ನೂಪಾಳೆಯದ ಹೊರಗೆ ಬೆಂಕಿಯಲ್ಲಿ ಸುಡಿಸಿಬಿಟ್ಟನು. |
೧೨ |
ತರುವಾಯ ದಹನಬಲಿಯ ಪ್ರಾಣಿಯನ್ನು ವಧಿಸಿಬಿಟ್ಟನು. ಆರೋನನ ಮಕ್ಕಳು ಅದರ ರಕ್ತವನ್ನು ತಂದು ಅವನಿಗೆ ಒಪ್ಪಿಸಿದರು. ಅವನು ಅದನ್ನು ಬಲಿಪೀಠದ ಸುತ್ತಲು ಚಿಮುಕಿಸಿದನು. |
೧೩ |
ಅವರು ಆ ಪ್ರಾಣಿಯ ಮಾಂಸಖಂಡಗಳನ್ನೂ ತಲೆಯನ್ನೂ ಒಂದೊಂದಾಗಿ ಒಪ್ಪಿಸಿದಾಗ ಅವನು ಅವುಗಳನ್ನು ಬಲಿಪೀಠದ ಮೇಲೆ ಹೋಮಮಾಡಿದನು. |
೧೪ |
ಅದರ ಕರುಳುಗಳನ್ನೂ, ಕಾಲುಗಳನ್ನೂ ತೊಳೆಯಿಸಿ, ಬಲಿಪೀಠದಲ್ಲಿ ದಹನ ಬಲಿದ್ರವ್ಯದ ಮೇಲಿಟ್ಟು ಹೋಮಮಾಡಿದನು. |
೧೫ |
ಅದಾದ ಮೇಲೆ ಜನರು ಸಮರ್ಪಿಸಿದ ಪ್ರಾಣಿಗಳನ್ನು ಆರೋನನು ತರಿಸಿ ಅವುಗಳಲ್ಲಿ ದೋಷಪರಿಹಾರಕವಾದ ಹೋತವನ್ನು ಮೊದಲನೆಯ ಬಲಿಪ್ರಾಣಿಯಾಗಿ ವಧಿಸಿ ಜನರ ದೋಷಪರಿಹಾರಾರ್ಥವಾಗಿ ಸಮರ್ಪಿಸಿದನು. |
೧೬ |
ಅಂತೆಯೆ ದಹನಬಲಿಪ್ರಾಣಿಯನ್ನೂ ವಿಧಿಬದ್ಧವಾಗಿ ಸಮರ್ಪಿಸಿದನು. |
೧೭ |
ಜನರು ತಂದ ನೈವೇದ್ಯ ದ್ರವ್ಯಗಳಲ್ಲಿ ಒಂದು ಹಿಡಿಯನ್ನು ತೆಗೆದುಕೊಂಡು ಬೆಳಿಗ್ಗೆಯ ದಹನಬಲಿಯ ಜೊತೆಗೆ ಅದನ್ನು ಪೀಠದ ಮೇಲೆ ಹೋಮಮಾಡಿದನು. |
೧೮ |
ಅನಂತರ ಜನರ ಪರವಾಗಿ ಶಾಂತಿಸಮಾಧಾನದ ಬಲಿದಾನಕ್ಕಾಗಿ ನೇಮಕವಾದ ಹೋರಿಯನ್ನೂ ಟಗರನ್ನೂ ವಧಿಸಿದನು. ಆರೋನನ ಮಕ್ಕಳು ಅವುಗಳ ರಕ್ತವನ್ನು ಒಪ್ಪಿಸಿದಾಗ, ಅವನು ಅದನ್ನು ಬಲಿಪೀಠದ ಸುತ್ತಲೂ ಚಿಮುಕಿಸಿದನು. |
೧೯ |
ಅವರು ಆ ಹೋರಿಯ ಕೊಬ್ಬನ್ನು, ಟಗರಿನ ಬಾಲದ ಕೊಬ್ಬನ್ನು, ಕರುಳ ಸುತ್ತಲಿನ ಕೊಬ್ಬನ್ನು, ಮೂತ್ರಪಿಂಡಗಳನ್ನು ಹಾಗು ಕಾಳಿಜದ ಹತ್ತಿರವಿರುವ ಕೊಬ್ಬನ್ನು |
೨೦ |
ಎದೆಯ ಭಾಗಗಳ ಮೇಲೆ ಇಟ್ಟು ಒಪ್ಪಿಸಿದನು. ಆರೋನನು ಆ ಕೊಬ್ಬನ್ನು ಬಲಿಪೀಠದ ಮೇಲೆ ಹೋಮಮಾಡಿದನು. |
೨೧ |
ಮೋಶೆಯ ಆಜ್ಞಾನುಸಾರ ಅವನು ಅವುಗಳ ಎದೆಯ ಭಾಗಗಳನ್ನೂ ಬಲತೊಡೆಗಳನ್ನೂ ನೈವೇದ್ಯವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಆರತಿಯೆತ್ತಿದನು. |
೨೨ |
ಆರೋನನು ಆ ದೋಷಪರಿಹಾರಕ ಬಲಿಯನ್ನೂ ದಹನಬಲಿಯನ್ನೂ ಶಾಂತಿಸಮಾಧಾನದ ಬಲಿಗಳನ್ನೂ ಸಮರ್ಪಿಸಿದ ನಂತರ ತನ್ನ ಕೈಗಳನ್ನು ಜನರ ಕಡೆಗೆ ಎತ್ತಿ ಅವರನ್ನು ಆಶೀರ್ವದಿಸಿದನು. ಆಮೇಲೆ ಬಲಿಪೀಠದಿಂದ ಇಳಿದು ಬಂದನು. |
೨೩ |
ತರುವಾಯ ಮೋಶೆ ಮತ್ತು ಆರೋನನು ದೇವದರ್ಶನದ ಗುಡಾರದೊಳಗೆ ಹೋದರು. ಅಲ್ಲಿಂದ ಹೊರಗೆ ಬಂದು ಜನರನ್ನು ಆಶೀರ್ವದಿಸಿದರು. ಆಗ ಸರ್ವೇಶ್ವರನ ಮಹಿಮೆ ಜನರಿಗೆ ಪ್ರತ್ಯಕ್ಷವಾಯಿತು. |
೨೪ |
ಸರ್ವೇಶ್ವರನ ಸನ್ನಿಧಿಯಿಂದ ಅಗ್ನಿ ಹೊರಟು ಬಲಿಪೀಠದ ಮೇಲಿದ್ದ ದಹನಬಲಿದ್ರವ್ಯವನ್ನೂ, ಕೊಬ್ಬನ್ನೂ ದಹಿಸಿಬಿಟ್ಟಿತು. ಜನರೆಲ್ಲರು ಅದನ್ನು ಕಂಡು ಜಯ ಜಯಕಾರ ಮಾಡಿದರು; ಅಡ್ಡಬಿದ್ದು ನಮಸ್ಕರಿಸಿದರು.
|
Kannada Bible (KNCL) 2016 |
No Data |