೧ |
ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆಂದು ತಿಳಿಸಿದರು: |
೨ |
“ದೇವಸ್ಥಾನದಲ್ಲಿರುವ ದೀಪಗಳನ್ನು ಪ್ರತಿನಿತ್ಯವೂ ಉರಿಸಬೇಕು. ಇದಕ್ಕಾಗಿ ಇಸ್ರಯೇಲರು ಎಣ್ಣೇಮರದ ಕಾಯಿಗಳನ್ನು ಕುಟ್ಟಿ ತೆಗೆದ ನಿರ್ಮಲವಾದ ಅಪ್ಪಟ ಎಣ್ಣೆಯನ್ನು ನಿನಗೆ ತಂದುಕೊಡಬೇಕೆಂದು ಅವರಿಗೆ ಆಜ್ಞಾಪಿಸು. |
೩ |
ದೇವದರ್ಶನದ ಗುಡಾರದಲ್ಲಿ ಆಜ್ಞಾಶಾಸನಗಳ ಮಂಜೂಷದ ಮುಂದಿರುವ ತೆರೆಯ ಹೊರಗೆ ಆ ದೀಪಗಳು ಉರಿಯುತ್ತಿರಬೇಕು. ಅವು ಸರ್ವೇಶ್ವರನ ಸನ್ನಿಧಿಯಲ್ಲಿ ಸಾಯಂಕಾಲದಿಂದ ಉದಯದವರೆಗೆ ಉರಿಯುತ್ತಿರುವಂತೆ ಆರೋನನು ಅವುಗಳನ್ನು ಸರಿಪಡಿಸಬೇಕು. ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತನಿಯಮ. |
೪ |
ಆರೋನನು ಪ್ರತಿನಿತ್ಯವೂ ಸರ್ವೇಶ್ವರನ ಸನ್ನಿಧಿಯಲ್ಲಿ ಹಣತೆಗಳನ್ನು ಆ ಚೊಕ್ಕ ಬಂಗಾರದ ದೀಪವೃಕ್ಷದ ಮೇಲೆ ಸರಿಯಾಗಿ ಇಡಬೇಕು. |
೫ |
“ನೀನು ಗೋದಿಯ ಹಿಟ್ಟಿನಿಂದ ಹನ್ನೆರಡು ರೊಟ್ಟಿಗಳನ್ನು ಮಾಡಬೇಕು. ಪ್ರತಿಯೊಂದು ರೊಟ್ಟಿ ಎರಡೆರಡು ಕಿಲೋಗ್ರಾಂನದಾಗಿರಬೇಕು. |
೬ |
ಅವುಗಳನ್ನು ಆರಾರರ ಮೇರೆಗೆ ಎರಡು ರಾಶಿಗಳಾಗಿ ಚೊಕ್ಕ ಬಂಗಾರದ ಮೇಜಿನ ಮೇಲೆ ಸರ್ವೇಶ್ವರನ ಸಮ್ಮುಖದಲ್ಲಿ ಇಡಬೇಕು. |
೭ |
ಒಂದೊಂದು ರಾಶಿಯ ಮೇಲೆ ಸ್ವಚ್ಛವಾದ ಸಾಂಬ್ರಾಣಿಯನ್ನು ಇಡಬೇಕು. ಆ ರೊಟ್ಟಿಗಳ ನೈವೇದ್ಯವನ್ನು ಸೂಚಿಸಲು ಆ ಸಾಂಬ್ರಾಣಿಯನ್ನು ಸರ್ವೇಶ್ವರನಿಗೆ ಹೋಮಮಾಡಬೇಕು. |
೮ |
ಶಾಶ್ವತವಾದ ನಿಬಂಧನೆಯ ಮೇರೆಗೆ ಯಾಜಕನು ಯಾವಾಗಲೂ ಪ್ರತಿ ಸಬ್ಬತ್ ದಿನದಲ್ಲಿ ರೊಟ್ಟಿಗಳನ್ನು ತಂದು ಸರ್ವೇಶ್ವರನ ಸನ್ನಿಧಿಯಲ್ಲಿ ಕ್ರಮಪಡಿಸಿ ಅವುಗಳನ್ನು ಇಸ್ರಯೇಲರ ಪರವಾಗಿ ಸರ್ವೇಶ್ವರನಿಗೆ ಸಮರ್ಪಿಸಬೇಕು. |
೯ |
ಅವು ಆರೋನನಿಗೂ ಅವನ ಸಂತತಿಯವರಿಗೂ ಸಲ್ಲಬೇಕು. ಮಹಾಪರಿಶುದ್ಧವಾದ ಆ ರೊಟ್ಟಿಗಳನ್ನು ದೇವಸ್ಥಾನದ ಪ್ರಾಕಾರದಲ್ಲೇ ತಿನ್ನಬೇಕು. ಅವು ಸರ್ವೇಶ್ವರನಿಗೆ ಸಮರ್ಪಿತವಾದ ದಹನದ್ರವ್ಯಗಳಿಗೆ ಸೇರಿದವುಗಳಾಗಿರುವುದರಿಂದ ಶಾಶ್ವತ ನಿಯಮದ ಪ್ರಕಾರ ಯಾಜಕರಿಗೇ ಸಲ್ಲಬೇಕು. |
೧೦ |
ಇಸ್ರಯೇಲ್ ಮಹಿಳೆಯೊಬ್ಬಳಿಗೆ ಈಜಿಪ್ಟಿನ ಪುರುಷನಿಂದ ಹುಟ್ಟಿದ ಒಬ್ಬ ವ್ಯಕ್ತಿ ಇದ್ದನು. ಇವನು ಇಸ್ರಯೇಲರ ಪಾಳೆಯಕ್ಕೆ ಬಂದು ಇಸ್ರಯೇಲನೊಬ್ಬನ ಸಂಗಡ ಜಗಳವಾಡಿ, ಬೈದುದು ಮಾತ್ರವಲ್ಲದೆ ಸರ್ವೇಶ್ವರ ಸ್ವಾಮಿಯನ್ನು ದೂಷಿಸಿ ಶಾಪ ಹಾಕಿದನು. |
೧೧ |
ಅವನನ್ನು ಮೋಶೆಯ ಬಳಿಗೆ ಹಿಡಿದು ತಂದರು. ಆ ವ್ಯಕ್ತಿಯ ತಾಯಿ ದಾನ್ ಕುಲದ ದಿಬ್ರೀಯ ಮಗಳು ‘ಶೆಲೋಮೀತ್’ ಎಂದು ಅವಳ ಹೆಸರು. |
೧೨ |
ಅವನ ವಿಷಯವಾಗಿ ಸರ್ವೇಶ್ವರನ ತೀರ್ಪನ್ನು ತಿಳಿದುಕೊಳ್ಳುವಷ್ಟು ಕಾಲ ಅವನನ್ನು ಕಾವಲಲ್ಲಿ ಇರಿಸಲಾಯಿತು. |
೧೩ |
ಆಗ ಮೋಶೆಗೆ ಸರ್ವೇಶ್ವರ ಹೀಗೆಂದು ತಿಳಿಸಿದರು: |
೧೪ |
ಆ ದೇವದೂಷಕನನ್ನು ಪಾಳೆಯದ ಹೊರಗೆ ಒಯ್ಯಬೇಕು. ಅವನಾಡಿದ ದೂಷಣೆಯ ಮಾತುಗಳನ್ನು ಕೇಳಿದವರೆಲ್ಲರು ಅವನ ತಲೆಯ ಮೇಲೆ ಕೈಚಾಚಬೇಕು. ಅನಂತರ ಸಮಾಜದವರೆಲ್ಲರು ಅವನನ್ನು ಕಲ್ಲೆಸೆದು ಕೊಲ್ಲಬೇಕು. |
೧೫ |
ಮತ್ತು ಇಸ್ರಯೇಲರಿಗೆ ನೀನು ಹೀಗೆ ಹೇಳಬೇಕು: ತನ್ನ ದೇವರನ್ನು ದೂಷಿಸಿದವನು ಆ ದೋಷದ ಫಲವನ್ನು ಅನುಭವಿಸಬೇಕು. |
೧೬ |
ಸರ್ವೇಶ್ವರನ ಹೆಸರನ್ನು ನಿಂದಿಸಿದವನಿಗೆ ಮರಣಶಿಕ್ಷೆಯಾಗಬೇಕು; ಸಮಾಜದವರೆಲ್ಲರು ಅವನನ್ನು ಕಲ್ಲೆಸೆದು ಕೊಲ್ಲಬೇಕು. ಅನ್ಯದೇಶೀಯನಾಗಿರಲಿ, ಸ್ವದೇಶೀಯನಾಗಿರಲಿ ಸರ್ವೇಶ್ವರನ ಹೆಸರನ್ನು ನಿಂದಿಸಿದರೆ ಅವನಿಗೆ ಮರಣಶಿಕ್ಷೆಯಾಗಬೇಕು. |
೧೭ |
ಕೊಲೆ ಮಾಡಿದವನಿಗೆ ಮರಣದಂಡನೆಯಾಗಬೇಕು. |
೧೮ |
ಪಶುಪ್ರಾಣಿಯನ್ನು ಹೊಡೆದು ಕೊಂದವನಿಂದ ಅದಕ್ಕೆ ಪ್ರತಿಯಾಗಿ ಈಡನ್ನು ಕೊಡಿಸಬೇಕು; ಪ್ರಾಣಿಗೆ ಪ್ರತಿಯಾಗಿ ಪ್ರಾಣಿಯನ್ನು ಕೊಡಿಸಬೇಕು. |
೧೯ |
ಯಾವನಾದರು ಮತ್ತೊಬ್ಬನನ್ನು ಅಂಗಹೀನನನ್ನಾಗಿ ಮಾಡಿದರೆ ಅವನು ಮಾಡಿದಂತೆಯೆ ಅವನಿಗೆ ಮಾಡಿಸಬೇಕು. |
೨೦ |
ಅವಯವವನ್ನು ಮುರಿಯುವುದೇ ಶಿಕ್ಷೆ. ಕಣ್ಣಿಗೆ ಪ್ರತಿಯಾಗಿ ಕಣ್ಣು, ಹಲ್ಲಿಗೆ ಪ್ರತಿಯಾಗಿ ಹಲ್ಲು ಕೀಳಿಸಬೇಕು. ಮತ್ತೊಬ್ಬನನ್ನು ಅಂಗವಿಕಲನನ್ನಾಗಿ ಮಾಡಿದವನಿಗೆ ಅದೇ ರೀತಿ ಪ್ರತೀಕಾರ ಮಾಡಿಸಬೇಕು. |
೨೧ |
ಪಶುಪ್ರಾಣಿಯನ್ನು ಕೊಂದವನಿಗೆ ಅದಕ್ಕೆ ಬದಲಾಗಿ ಈಡುಕೊಡಬೇಕು; ಮನುಷ್ಯನನ್ನು ಕೊಂದವನಿಗೆ ಮರಣಶಿಕ್ಷೆಯಾಗಬೇಕು. |
೨೨ |
ಅನ್ಯರಿಗಾಗಲಿ ಸ್ವಜನರಿಗಾಗಲಿ ಪಕ್ಷಪಾತವಿಲ್ಲದೆ ಒಂದೇ ನಿಯಮವಿರಬೇಕು. ನಾನು ನಿಮ್ಮ ದೇವರಾದ ಸರ್ವೇಶ್ವರ.” |
೨೩ |
ಮೋಶೆ ಈ ಮಾತುಗಳನ್ನು ಇಸ್ರಯೇಲರಿಗೆ ತಿಳಿಸಿದನು. ಅವರು ಆ ದೂಷಕನನ್ನು ಪಾಳೆಯದ ಹೊರಕ್ಕೆ ತೆಗೆದುಕೊಂಡು ಹೋಗಿ ಕಲ್ಲೆಸೆದು ಕೊಂದರು. ಸರ್ವೇಶ್ವರ ಸ್ವಾಮಿ ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಯೇಲರು ಮಾಡಿದರು.
|
Kannada Bible (KNCL) 2016 |
No Data |