೧ |
ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆಂದು ತಿಳಿಸಿದರು: |
೨ |
“ಆರೋನನು ಮತ್ತು ಅವನ ಮಕ್ಕಳು ತಾವು ಅಶುದ್ಧರಾಗಿರುವಾಗ ಇಸ್ರಯೇಲರಿಂದ ನನಗೆ ಸಮರ್ಪಿತವಾದ ಪರಿಶುದ್ಧ ಪದಾರ್ಥಗಳನ್ನು ಮುಟ್ಟಬಾರದೆಂದು ಆಜ್ಞಾಪಿಸು. ಅವರು ನನ್ನ ಪವಿತ್ರನಾಮದ ಘನತೆಗೆ ಕುಂದುತರಬಾರದು. ನಾನು ಸರ್ವೇಶ್ವರ. |
೩ |
ಅವರಿಗೆ ಹೀಗೆಂದು ವಿಧಿಸು: ನಿಮ್ಮಲ್ಲಿಯಾಗಲಿ, ನಿಮ್ಮ ಸಂತತಿಯವರಲ್ಲಿಯಾಗಲಿ ಯಾವನಾದರು ಅಶುದ್ಧನಾಗಿರುವಾಗ ಇಸ್ರಯೇಲರು ಸರ್ವೇಶ್ವರ ಸ್ವಾಮಿಗೆ ಮೀಸಲೆಂದು ಸಮರ್ಪಿಸುವ ಕಾಣಿಕೆಗಳ ಬಳಿಗೆ ಬಂದರೆ ಅವನನ್ನು ನನ್ನ ಸಾನ್ನಿಧ್ಯ ಸೇವೆಯಿಂದ ತೆಗೆದುಹಾಕಬೇಕು. ನಾನು ಸರ್ವೇಶ್ವರ. |
೪ |
“ಆರೋನನ ಸಂತತಿಯವರಲ್ಲಿ ಯಾವನಿಗಾದರು ಕುಷ್ಟರೋಗವಾಗಲಿ, ಮೇಹವಾಗಲಿ ಇದ್ದರೆ ಅವನು ಶುದ್ಧನಾಗುವ ತನಕ ದೇವರಿಗೆ ನೈವೇದ್ಯವಾದ ಪದಾರ್ಥಗಳನ್ನು ತಿನ್ನಕೂಡದು. ಹೆಣದ ಸಂಪರ್ಕದಿಂದ ಅಶುದ್ಧವಾದುದನ್ನು ಮುಟ್ಟಿದವನು, ವೀರ್ಯಸ್ಖಲನ ಮಾಡಿಕೊಂಡವನು. |
೫ |
ಅಶುದ್ಧವಾದ ಕ್ರಿಮಿಕೀಟಮೂಷಕಾದಿಗಳನ್ನು ಅಥವಾ ಅಶುದ್ಧನಾದ ಮನುಷ್ಯನನ್ನು ಮುಟ್ಟಿದವನು ಆ ದಿನದ ಸಂಜೆಯವರೆಗೆ ಅಶುದ್ಧನಾಗಿರುವನು. |
೬ |
ಆದುದರಿಂದ ಸ್ನಾನಮಾಡುವ ತನಕ ನೈವೇದ್ಯ ಪದಾರ್ಥಗಳನ್ನು ತಿನ್ನಕೂಡದು. |
೭ |
ಹೊತ್ತು ಮುಳುಗಿದ ನಂತರ ಅವನು ಶುದ್ಧನಾಗಿ ನೈವೇದ್ಯ ಪದಾರ್ಥಗಳನ್ನು ಊಟಮಾಡಬಹುದು. ಏಕೆಂದರೆ ಅದು ಅವನ ಜೀವನಾಂಶ. |
೮ |
ತಾನಾಗಿ ಸತ್ತುಬಿದ್ದದ್ದನ್ನು ಅಥವಾ ಕಾಡುಮೃಗ ಕೊಂದದ್ದನ್ನು ಅವನು ತಿಂದು ಅಪವಿತ್ರ ಮಾಡಿಕೊಳ್ಳಬಾರದು. ನಾನು ಸರ್ವೇಶ್ವರ. |
೯ |
“ಈ ನನ್ನ ಆಜ್ಞೆಗಳನ್ನು ಅವರು ಅನುಸರಿಸಿ ನಡೆಯಬೇಕು. ಇವುಗಳನ್ನು ಮೀರಿ ನನ್ನ ನೈವೇದ್ಯವನ್ನು ಅಪವಿತ್ರಪಡಿಸಿದರೆ ಆ ದೋಷದ ಫಲವನ್ನು ಅನುಭವಿಸಿ ಸಾಯುವರು. ಅವರನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಸರ್ವೇಶ್ವರ ನಾನು. |
೧೦ |
“ಯಾಜಕನಲ್ಲದವನು ನೈವೇದ್ಯಪದಾರ್ಥಗಳನ್ನು ಊಟಮಾಡಕೂಡದು. ಅಂತೆಯೇ ಯಾಜಕನ ಅತಿಥಿಯಾಗಲಿ, ಕೂಲಿಯಾಳಾಗಲಿ ಅದನ್ನು ಊಟಮಾಡಬಾರದು. |
೧೧ |
ಆದರೆ ಯಾಜಕನು ಕೊಂಡುಕೊಂಡ ಗುಲಾಮರು, ಅವನ ಮನೆಯಲ್ಲಿ ಹುಟ್ಟಿದ ಗುಲಾಮರು ಅದನ್ನು ಊಟಮಾಡಬಹುದು. |
೧೨ |
ಯಾಜಕನ ಮಗಳು ಯಾಜಕನಲ್ಲದವನಿಗೆ ಮದುವೆಯಾಗಿದ್ದರೆ ಅವಳು ಆ ನೈವೇದ್ಯಪದಾರ್ಥಗಳನ್ನು ತಿನ್ನಕೂಡದು. |
೧೩ |
ಯಾಜಕನ ಮಗಳು ವಿಧವೆಯಾಗಿದ್ದರೆ, ಗಂಡಬಿಟ್ಟವಳಾಗಿದ್ದರೆ, ಮಕ್ಕಳಿಲ್ಲದೆ ಇದ್ದರೆ, ಬಾಲ್ಯದಲ್ಲಿ ತಂದೆಯ ಬಳಿ ಇದ್ದಂತೆಯೇ ಮತ್ತೆ ತಂದೆಯ ಮನೆ ಸೇರಿದ್ದರೆ ಆಕೆ ತಂದೆಯ ಆಹಾರದಲ್ಲಿ ಭಾಗಿಯಾಗಬಹುದು. ಯಾಜಕರಲ್ಲದ ಇತರರು ಅದನ್ನು ಊಟಮಾಡಲೇಬಾರದು. |
೧೪ |
“ಯಾಜಕನಲ್ಲದವನು ತಿಳಿಯದೆ ನೈವೇದ್ಯವಾದುದನ್ನು ಊಟಮಾಡಿದರೆ ಅಷ್ಟನ್ನೂ ಹಾಗು ಅದರ ಐದನೆಯ ಒಂದು ಭಾಗವನ್ನೂ ಯಾಜಕನಿಗೆ ತೆರಬೇಕು. |
೧೫ |
ಇಸ್ರಯೇಲರ ಸರ್ವೇಶ್ವರನಿಗೆ ಮೀಸಲೆಂದು ಇಟ್ಟ ನೈವೇದ್ಯಪದಾರ್ಥಗಳನ್ನು ಸಾಧಾರಣವೆಂದು ಅಸಡ್ಡೆಮಾಡಬಾರದು. |
೧೬ |
ಹಾಗೆ ಮಾಡಿದರೆ ತಾವು ಆ ನೈವೇದ್ಯಗಳನ್ನು ಊಟ ಮಾಡುವುದರಿಂದ ಪಾಪಕ್ಕೆ ಒಳಗಾಗಿ ಶಿಕ್ಷೆಗೆ ಗುರಿಯಾಗುವರು, ನನ್ನ ಸೇವೆಗೆ ಯಾಜಕರನ್ನು ಪ್ರತಿಷ್ಠಿಸಿಕೊಂಡ ಸರ್ವೇಶ್ವರ ನಾನು. |
೧೭ |
ಆರೋನನಿಗೆ, ಅವನ ಮಕ್ಕಳಿಗೆ ಹಾಗು ಇಸ್ರಯೇಲರೆಲ್ಲರಿಗೆ ಈ ಕೆಳಕಂಡಂತೆ ಆಜ್ಞಾಪಿಸಬೇಕೆಂದು ಸರ್ವೇಶ್ವರ ಮೋಶೆಗೆ ಹೇಳಿದರು: |
೧೮ |
“ಇಸ್ರಯೇಲರೇ ಆಗಲಿ, ಅವರ ನಡುವೆ ವಾಸಿಸುವವರೇ ಆಗಲಿ ಹರಕೆಯಾಗಿ ಅಥವಾ ಕಾಣಿಕೆಯಾಗಿ ಸರ್ವೇಶ್ವರನಾದ ನನಗೆ ದಹನ ಬಲಿದಾನ ಮಾಡುವಾಗ |
೧೯ |
ಅದು ಸ್ವೀಕೃತವಾಗಬೇಕಾದರೆ ಆ ಪ್ರಾಣಿ ಕಳಂಕರಹಿತವಾದ ಗಂಡಾಗಿರಬೇಕು; ಹೋರಿ, ಟಗರು ಅಥವಾ ಹೋತವೇ ಆಗಿರಬೇಕು. |
೨೦ |
ಕುಂದುಕೊರತೆ ಇರುವಂಥದನ್ನು ಒಪ್ಪಿಸಬಾರದು; ಅದು ಸ್ವೀಕೃತವಾಗುವುದಿಲ್ಲ. |
೨೧ |
ಹರಕೆಯಾಗಿ ಅಥವಾ ಕಾಣಿಕೆಯಾಗಿ ಯಾರಾದರು ಶಾಂತಿಸಮಾಧಾನದ ಬಲಿಯನ್ನರ್ಪಿಸಲು ಆಶಿಸಿದರೆ ಅವರು ತರುವ ದನಕರುಗಳು, ಆಡು ಕುರಿಗಳು ಕಳಂಕರಹಿತವಾಗಿರಬೇಕು. ಯಾವುದಾದರೂ ಕುಂದುಕೊರತೆ ಇದ್ದರೆ ಆ ಬಲಿದಾನ ಸ್ವೀಕೃತವಾಗುವುದಿಲ್ಲ. |
೨೨ |
ಕುರುಡಾದುದು, ಹುಣ್ಣು, ಕಜ್ಜಿ, ತುರಿ ಉಳ್ಳದ್ದು ಇಂಥ ಪ್ರಾಣಿಗಳನ್ನು ಸರ್ವೇಶ್ವರನಿಗೆ ಸಮರ್ಪಿಸಬಾರದು; ಬಲಿಪೀಠದ ಮೇಲೆ ಹೋಮಮಾಡಕೂಡದು. |
೨೩ |
ಹೋರಿಯ ಇಲ್ಲವೆ ಕುರಿಯ ಅವಯವಗಳಲ್ಲಿ ಏನಾದರೂ ಹೆಚ್ಚುಕಡಿಮೆ ಇದ್ದರೆ ಅದನ್ನು ಕಾಣಿಕೆಯಾಗಿ ಸಮರ್ಪಿಸಬಹುದೇ ಹೊರತು ಹರಕೆಯಾಗಿ ಒಪ್ಪಿಸಿದರೆ ಅದು ಸ್ವೀಕೃತವಾಗುವುದಿಲ್ಲ. |
೨೪ |
ಬೀಜಹೊಡೆದ, ಕುಟ್ಟಿದ, ಒಡೆದ, ಕೊಯ್ದ ಪ್ರಾಣಿಯನ್ನು ಸರ್ವೇಶ್ವರನಿಗೆ ಸಮರ್ಪಿಸಕೂಡದು. ನಿಮ್ಮ ನಾಡಿನಲ್ಲಿ ಪ್ರಾಣಿಗಳಿಗೆ ಹೀಗೆ ಮಾಡಲೇಬಾರದು. |
೨೫ |
ಅನ್ಯದೇಶದವನಿಂದ ತೆಗೆದುಕೊಂಡ ಅಂಥ ಪ್ರಾಣಿಯನ್ನು ನಿಮ್ಮ ದೇವರಿಗೆ ಆಹಾರವಾಗಿ ಒಪ್ಪಿಸಬಾರದು. ಅದು ಕುಂದುಳ್ಳದ್ದು, ಕಳಂಕಿತವಾದದ್ದು. ಆದಕಾರಣ ಸ್ವೀಕೃತವಾಗದು.” |
೨೬ |
ಮೋಶೆಗೆ ಸರ್ವೇಶ್ವರ ಹೀಗೆಂದರು. |
೨೭ |
“ಕರುವಾಗಲಿ, ಕುರಿಮರಿಯಾಗಲಿ, ಆಡುಮರಿಯಾಗಲಿ ಹುಟ್ಟಿ ಏಳು ದಿವಸ ಆದ ಬಳಿಕ ಅದನ್ನು ಸರ್ವೇಶ್ವರನಿಗೆ ಹೋಮವಾಗಿ ಸಮರ್ಪಿಸಿದರೆ ಅಂಗೀಕೃತವಾಗುವುದು. |
೨೮ |
ಈದ ಹಸುವನ್ನೂ ಅದರ ಎಳೇಕರುವನ್ನೂ ಅಂತೆಯೆ ಈದ ಆಡುಕುರಿಗಳನ್ನೂ ಅವುಗಳ ಎಳೇಮರಿಗಳನ್ನೂ ಒಂದೇ ದಿನದಲ್ಲಿ ವಧಿಸಬಾರದು. |
೨೯ |
“ನೀವು ಧನ್ಯವಾದ ಸಲ್ಲಿಸಲು ಸರ್ವೇಶ್ವರನಿಗೆ ಮಾಡುವ ಬಲಿದಾನವನ್ನು ಮೆಚ್ಚುಗೆಯಾದ ರೀತಿಯಲ್ಲಿ ಸಮರ್ಪಿಸಬೇಕು. |
೩೦ |
ಅದೇ ದಿವಸದಲ್ಲಿ ಅದನ್ನು ಊಟಮಾಡಬೇಕು. ಮರುದಿನದವರೆಗೆ ಕಿಂಚಿತ್ತನ್ನೂ ಮಿಗಿಸಬಾರದು. ನಾನು ಸರ್ವೇಶ್ವರ. |
೩೧ |
“ಈ ನನ್ನ ಆಜ್ಞೆಗಳನ್ನು ನೀವು ಅನುಸರಿಸಿ ನಡೆಯಬೇಕು. ನಾನು ಸರ್ವೇಶ್ವರ. |
೩೨ |
ನನ್ನ ಪವಿತ್ರ ನಾಮದ ಘನತೆಗೆ ಕುಂದು ತರಬಾರದು. ಇಸ್ರಯೇಲರೆಲ್ಲರು ನನ್ನನ್ನು ಪರಿಶುದ್ಧನೆಂದು ಪರಿಗಣಿಸಬೇಕು. ನಿಮ್ಮನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಸರ್ವೇಶ್ವರನು ನಾನು. |
೩೩ |
ನಿಮಗೆ ದೇವರಾಗಿರಬೇಕೆಂದು ನಿಮ್ಮನ್ನು ಈಜಿಪ್ಟಿನಿಂದ ಬರಮಾಡಿದೆ. ನಾನು ಸರ್ವೇಶ್ವರ.
|
Kannada Bible (KNCL) 2016 |
No Data |