೧ |
ಜುದೇಯ ಮತ್ತು ಜೆರುಸಲೇಮಿನ ವಿಷಯವಾಗಿ ಆಮೋಚನ ಮಗನಾದ ಯೆಶಾಯನು ಕಂಡ ದರ್ಶನದಲ್ಲಿ ಕೇಳಿಬಂದ ದೈವೋಕ್ತಿ: |
೨ |
ಸರ್ವೇಶ್ವರನ ಶ್ರೀನಿವಾಸದ ಪರ್ವತವು ಅಂತಿಮ ಕಾಲದಂದು ಪ್ರತಿಷ್ಠೆಗೊಳ್ಳುವುದು, ಗುಡ್ಡಬೆಟ್ಟಗಳಿಗಿಂತ ಎತ್ತರವಾಗಿ ಬೆಳೆದು ಬರುವುವು ಅದರತ್ತ ಸಕಲ ರಾಷ್ಟ್ರಗಳು ಜಲಧಾರೆಯಂತೆ ಹರಿದು ಬರುವುವು. |
೩ |
ದೇಶವಿದೇಶಗಳವರು ಬಂದು ಹೇಳುವರು ಹೀಗೆ: “ಬನ್ನಿ, ಹೋಗೋಣ ಸರ್ವೇಶ್ವರಸ್ವಾಮಿಯ ಪರ್ವತಕ್ಕೆ ಇಸ್ರಯೇಲರ ದೇವರ ಮಂದಿರಕ್ಕೆ. ಬೋಧಿಸುವನಾತ ನಮಗೆ ತನ್ನ ಮಾರ್ಗಗಳನು ನಾವು ಹಿಡಿದು ನಡೆವಂತೆ ಆತನ ಪಥವನು ಹೊರಡುವುದು ಧರ್ಮಶಾಸ್ತ್ರ ಸಿಯೋನಿನಿಂದ ಸ್ವಾಮಿಯ ದಿವ್ಯವಾಣಿ ಜೆರುಸಲೇಮಿನಿಂದ. |
೪ |
ಬಗೆಹರಿಸುವನು ದೇಶದೇಶಗಳ ವ್ಯಾಜ್ಯವನು ತೀರಿಸುವನು ರಾಷ್ಟ್ರರಾಷ್ಟ್ರಗಳ ನ್ಯಾಯವನು ಹಾಕುವರವರು ಕುಲುಮೆಗೆ ತಮ್ಮಾಯುಧಗಳನು. ಮಾರ್ಪಡಿಸುವರು ಕತ್ತಿಗಳನು ನೇಗಿಲ ಗುಳಗಳನ್ನಾಗಿ ಭರ್ಜಿಗಳನು ಕುಡುಗೋಲುಗಳನ್ನಾಗಿ. ಕತ್ತಿಯ ನೆತ್ತರು ಜನಾಂಗ ಜನಾಂಗದೆದುರಿಗೆ ಯುದ್ಧವಿದ್ಯೆಯ ಕಲಿಕೆ ಅಗತ್ಯವಿರದು ಅವರಿಗೆ. |
೫ |
ಯಕೋಬ ಮನೆತನದವರೇ, ಬನ್ನಿ, ಸ್ವಾಮಿಯ ಬೆಳಕಿನಲ್ಲಿ ನಡೆಯೋಣ. |
೬ |
ಹೇ ಸರ್ವೇಶ್ವರಾ ಯಕೋಬ ಮನೆತನದವರನ್ನು ನೀವು ಕೈ ಬಿಟ್ಟಿದ್ದೀರಿ. ಏಕೆಂದರೆ ಅವರು ಪೌರಸ್ತ್ಯರಂತೆ ಮಾಟಮಂತ್ರ ಮಾಡುವವರು. ಫಿಲಿಷ್ಟಿಯರಂತೆ ಕಣಿಹೇಳುವವರು, ಅನ್ಯದೇಶಿಯರಂತೆ ಆಚಾರವಿಚಾರಗಳನ್ನು ಅನುಕರಿಸುವವರು ಆಗಿಬಿಟ್ಟಿದ್ದಾರೆ. |
೭ |
ನಾಡು ಬೆಳ್ಳಿಬಂಗಾರದಿಂದ ತುಂಬಿಹೋಗಿದೆ. ಜನರ ನಿಧಿನಿಕ್ಷೇಪಗಳಿಗೆ ಮಿತಿಯಿಲ್ಲದಂತಿದೆ. ಎಲ್ಲಾ ಕಡೆ ಅಶ್ವಬಲ ಯಥೇಚ್ಛವಾಗಿದೆ. ರಥಗಳು ಅಪಾರವಾಗಿವೆ. |
೮ |
ದೇಶದಲ್ಲಿ ವಿಗ್ರಹಗಳು ತುಂಬಿ ತುಳುಕುತ್ತಿವೆ. ಜನರು ತಮ್ಮ ಕೈಯಿಂದ ಮಾಡಿದ ವಿಗ್ರಹಗಳನ್ನೇ ಪೂಜಿಸುತ್ತಿದ್ದಾರೆ. |
೯ |
ಮಾನವನು ತಗ್ಗಿಹೋಗಿದ್ದಾನೆ, ಅಧೋಗತಿಗೆ ಇಳಿದಿದ್ದಾನೆ. ಸ್ವಾಮೀ, ಅವನಿಗೆ ಕ್ಷಮೆ ನೀಡಬೇಡಿ. |
೧೦ |
ಸ್ವಾಮಿಯ ಭಯಂಕರ ಕೋಪಕ್ಕೆ ಅಂಜಿ, ಆ ಮಹೋನ್ನತನ ವೈಭವಕ್ಕೆ ಹೆದರಿ ಬಂಡೆಯ ಗುಹೆಗಳೊಳಗೆ ನುಗ್ಗಿರಿ, ನೆಲದ ಬಿಲಗಳಲ್ಲಿ ಅವಿತುಕೊಳ್ಳಿರಿ. |
೧೧ |
ಜನಸಾಮಾನ್ಯರ ಅಟ್ಟಹಾಸವನ್ನು ಅಡಗಿಸಲಾಗುವುದು, ಪ್ರಮುಖರ ಗರ್ವ ಕಮರಿಹೋಗುವುದು, ಸ್ವಾಮಿ ಮಾತ್ರ ಅಂದು ಉನ್ನತೋನ್ನತವಾಗಿರುವರು. |
೧೨ |
ಸೇನಾಧೀಶ್ವರ ಸರ್ವೇಶ್ವರ ದಿನವೊಂದನ್ನು ಗೊತ್ತುಮಾಡಿದ್ದಾರೆ. ಅಹಂಕಾರದಿಂದ ಉಬ್ಬಿಹೋದವರಿಗೆ, ಉದ್ಧಟತನದಿಂದ ಕೊಬ್ಬಿಹೋದವರಿಗೆ, |
೧೩ |
ಎತ್ತರವಾಗಿ ಬೆಳೆದಿರುವ ಲೆಬನೋನಿನ ಎಲ್ಲ ದೇವದಾರು ವೃಕ್ಷಗಳಿಗೆ, ಬಾಷಾನಿನ ಎಲ್ಲಾ ಅಲ್ಲೋನ್ ಮರಗಳಿಗೆ, |
೧೪ |
ಉನ್ನತವಾಗಿರುವ ಮೇರುಪರ್ವತಗಳಿಗೆ, ಎಲ್ಲಾ ಗುಡ್ಡಬೆಟ್ಟಗಳಿಗೆ, |
೧೫ |
ಸಮಸ್ತ ಗುಮ್ಮಟ ಗೋಪುರಗಳಿಗೆ, ಸಮಸ್ತ ಕೋಟೆಕೊತ್ತಲಗಳಿಗೆ, |
೧೬ |
ಎಲ್ಲಾ ದೊಡ್ಡ ದೊಡ್ಡ ಹಡಗುಗಳಿಗೆ, ಎಲ್ಲಾ ಸುಂದರವಾದ ನೌಕೆಗಳಿಗೆ, ಆ ದಿನವು ತಪ್ಪದೆ ಬರುವುದು. |
೧೭ |
ಜನಸಾಮಾನ್ಯರ ಅಟ್ಟಹಾಸ ಕುಗ್ಗಿಹೋಗುವುದು, ಜನಪ್ರಮುಖರ ಅಹಂಕಾರ ತಗ್ಗಿಹೋಗುವುದು; ಸರ್ವೇಶ್ವರ ಮಾತ್ರ ಆ ದಿನದಂದು ಉನ್ನತೋನ್ನತವಾಗಿರುವರು. |
೧೮ |
ವಿಗ್ರಹಗಳು ಸಂಪೂರ್ಣವಾಗಿ ಮಾಯವಾಗುವುವು. |
೧೯ |
ಭೂಮಂಡಲವನ್ನು ಕಂಪನಗೊಳಿಸಲು ಸ್ವಾಮಿ ಎದ್ದಾಗ ಅವರ ಭಯಂಕರ ಕೋಪಕ್ಕೆ ಅಂಜಿ, ಅವರ ಮಹೋನ್ನತ ಮಹಿಮೆಗೆ ಹೆದರಿ, ಅವಿತುಕೊಳ್ಳುವರು ಜನರು ಕಲ್ಲುಬಂಡೆಗಳ ಗುಹೆಗಳಲ್ಲಿ, ನೆಲದ ಹಳ್ಳಕೊಳ್ಳಗಳಲ್ಲಿ. |
೨೦ |
ಆ ದಿನ ಬಂದಾಗ ಮಾನವರು ತಮ್ಮ ಪೂಜೆಗೋಸ್ಕರ ಮಾಡಿಸಿಕೊಂಡ ಬೆಳ್ಳಿಯ ಬೊಂಬೆಗಳನ್ನೂ ಬಂಗಾರದ ವಿಗ್ರಹಗಳನ್ನೂ ಇಲಿ ಹೆಗ್ಗಣಗಳ ಬಿಲಗಳಲ್ಲಿ ಬಿಸಾಡುವರು. |
೨೧ |
ಭೂಮಂಡಲವನ್ನು ಕಂಪನಗೊಳಿಸಲು ಸ್ವಾಮಿ ಎದ್ದಾಗ ಅವರ ಭಯಂಕರ ಕೋಪಕ್ಕೆ ಅಂಜಿ, ಅವರ ಮಹೋನ್ನತ ಮಹಿಮೆಗೆ ಹೆದರಿ, ನುಗ್ಗುವರು ಜನರು ಕಲ್ಲುಬಂಡೆಗಳ ಸಂದುಗೊಂದುಗಳಲ್ಲಿ, ಶಿಲೆಗಳ ಸೀಳುಪಾಳುಗಳಲ್ಲಿ. |
೨೨ |
ನರಮಾನವರಲ್ಲಿ ಇಡದಿರು ಭರವಸೆಯನ್ನು; ಯಾವ ಗಣನೆಗೆ ಬಂದಾನು ಅವನು? ಮೂಗಿನಲ್ಲಿ ಉಸಿರಾಡುವ ಅಲ್ಪಪ್ರಾಣಿ ಅವನು!
|
Kannada Bible (KNCL) 2016 |
No Data |