೧ |
ಸತ್ತ ನೊಣಗಳಿಂದ ಗಂದಿಗನ ತೈಲ ಕೂಡ ನಾರುತ್ತದೆ. ಅಂತೆಯೇ ಹುಚ್ಚುತನ ಕೊಂಚವಾದರೂ ಜ್ಞಾನಮಾನಗಳನ್ನು ಕೆಡಿಸಿಬಿಡುತ್ತದೆ. |
೨ |
ಜ್ಞಾನಿಯ ಬುದ್ಧಿ ಬಲಗೈಯಾದರೆ ಅಜ್ಞಾನಿಯ ಬುದ್ಧಿ ಎಡಗೈ. |
೩ |
ಬುದ್ಧಿತಪ್ಪಿ ತಿರುಗಾಡುವ ಹುಚ್ಚನು ದಾರಿಯಲ್ಲೆಲ್ಲಾ ತನ್ನ ಹುಚ್ಚುತನವನ್ನು ಪ್ರಕಟಮಾಡುತ್ತಾನೆ. |
೪ |
ರಾಜನು ಸಿಟ್ಟುಗೊಂಡನೆಂದು ಉದ್ಯೋಗಕ್ಕೇ ರಾಜೀನಾಮೆ ಕೊಟ್ಟುಬಿಡಬೇಡ; ತಾಳ್ಮೆಯಿಂದ ಘನದೋಷಗಳನ್ನೂ ಅಳಿಸಬಹುದು. |
೫ |
ಲೋಕದಲ್ಲಿ ನಾನು ಮತ್ತೊಂದು ಅನ್ಯಾಯವನ್ನು ಕಂಡೆ. ಅದು ಅಧಿಪತಿಗಳ ತಪ್ಪಿನಿಂದಾದುದು. |
೬ |
ಅದು ಯಾವುದೆಂದರೆ, ಮೂಢರನ್ನು ಮಹಾಪದವಿಗೆ ಏರಿಸುತ್ತಾರೆ; ಘನವಂತರನ್ನು ಹೀನಸ್ಥಿತಿಯಲ್ಲಿ ಇರಿಸುತ್ತಾರೆ. |
೭ |
ಗುಲಾಮನು ಕುದುರೆಸವಾರಿ ಮಾಡುವುದನ್ನೂ ಯಜಮಾನನು ಮನೆಯಾಳಂತೆ ನೆಲದ ಮೇಲೆ ನಡೆಯುವುದನ್ನೂ ನೋಡಿದ್ದೇನೆ. |
೮ |
ತಾನು ತೋಡಿದ ಗುಂಡಿಯಲ್ಲಿ ತಾನೇ ಬೀಳುವನು; ಗೋಡೆ ಒಡೆಯುವವನನ್ನು ಹಾವು ಕಡಿಯುವುದು. |
೯ |
ಬಂಡೆ ಸೀಳುವವನು ಬಂಡೆಯಿಂದಲೇ ಗಾಯಗೊಳ್ಳುವನು; ಮರಕಡಿಯುವವನು ಅದರಿಂದಲೇ ಅಪಾಯಕ್ಕೆ ಗುರಿಯಾಗುವನು. |
೧೦ |
ಮೊಂಡುಕೊಡಲಿಯ ಬಾಯನ್ನು ಮೊನೆಮಾಡದಿದ್ದರೆ ಹೆಚ್ಚು ಬಲಪ್ರಯೋಗ ಮಾಡಬೇಕಾಗುವುದು. ಕಾರ್ಯಸಿಧ್ಧಿಗೆ ಜ್ಞಾನವೇ ಸಾಧನ. |
೧೧ |
ಹಾವಾಡಿಗ ಹಾವಾಡಿಸುವುದಕ್ಕೆ ಮುಂಚೆಯೇ ಹಾವಿನಿಂದ ಕಡಿಸಿಕೊಂಡರೆ ಏನು ಪ್ರಯೋಜನ? |
೧೨ |
ಜ್ಞಾನಿಯ ಮಾತು ಹಿತಕರ; ಅಜ್ಞಾನಿಯ ಮಾತು ಅವನಿಗೆ ವಿನಾಶಕರ. ಅದು ಬುದ್ಧಿಹೀನತೆಯಿಂದ ಆರಂಭವಾಗುತ್ತದೆ. ಮೋಸ, ಮರುಳುತನದಲ್ಲಿ ಮುಕ್ತಾಯಗೊಳ್ಳುತ್ತದೆ. |
೧೩ |
*** |
೧೪ |
ಅಜ್ಞಾನಿ ಮಾತಿನ ಮಲ್ಲ. ಭವಿಷ್ಯತ್ತನ್ನು ಮಾನವ ತಿಳಿಯನು; ತಾನು ಕಾಲವಾದ ಮೇಲೆ ಏನಾಗುವುದೆಂದು ಅವನು ಯಾರಿಂದ ತಿಳಿಯಬಲ್ಲನು? |
೧೫ |
ಪಟ್ಟಣಕ್ಕೆ ದಾರಿತಿಳಿಯದವನಿಗೆ ಮೂಢರು ತಿಳಿಸಲು ಪಡುವ ಪ್ರಯಾಸ ಕೇವಲ ಆಯಾಸ. |
೧೬ |
ಓ ನಾಡೇ, ನಿನ್ನ ಒಡೆಯ ಬಾಲಕನಾಗಿದ್ದು ನಿನ್ನ ನಾಯಕರೆಲ್ಲರು ಹೊತ್ತಾರೆಯೇ ಔತಣಕ್ಕೆ ಕುಳಿತುಕೊಳ್ಳುವಂಥವರಾಗಿದ್ದಾರೆ, ಅದು ನಿನ್ನ ದೌರ್ಭಾಗ್ಯವೇ ಸರಿ. |
೧೭ |
ನಾಡೇ, ನಿನ್ನ ಒಡೆಯ ಕುಲೀನನಾಗಿದ್ದು, ನಿನ್ನ ನಾಯಕರೆಲ್ಲ ಸಕಾಲದಲ್ಲಿ ಊಟಮಾಡಿ, ಕುಡುಕರಾಗುವುದರ ಬದಲು ಶಕ್ತಿಯುತರಾದರೆ, ಅದು ನಿನ್ನ ಸೌಭಾಗ್ಯವೇ ಸರಿ. |
೧೮ |
ಮೈಗಳ್ಳನ ಮನೆ ಅಂಕುಡೊಂಕಾಗಿರುತ್ತದೆ; ಸೋಮಾರಿಯ ಸೂರು ಸೋರುತ್ತಿರುತ್ತದೆ. |
೧೯ |
ವಿನೋದಕ್ಕಾಗಿ ಔತಣ, ಆನಂದಕ್ಕಾಗಿ ಮದ್ಯಪಾನ; ಎಲ್ಲವನ್ನು ಒದಗಿಸಿಕೊಡುವುದಕ್ಕಾಗಿ ಹಣ. |
೨೦ |
ಅರಸನನ್ನು ಮನಸ್ಸಿನಲ್ಲಿಯೂ ನಿಂದಿಸಬೇಡ; ಧನಿಕನನ್ನು ಮಲಗುವ ಕೋಣೆಯಲ್ಲೂ ದೂಷಿಸಬೇಡ; ಆಕಾಶದ ಹಕ್ಕಿ ಆ ಸುದ್ದಿಯನ್ನು ಮುಟ್ಟಿಸೀತು; ಹಾರುವ ಪಕ್ಷಿ ಆ ಸಮಾಚಾರವನ್ನು ತಿಳಿಸೀತು!
|
Kannada Bible (KNCL) 2016 |
No Data |