೧ |
ಇವು ಕೂಡ ಸೊಲೊಮೋನನ ಜ್ಞಾನೋಕ್ತಿಗಳು. ಜುದೇಯದ ಅರಸ ಹಿಜ್ಕೀಯನ ಲೇಖಕರು ಸಂಗ್ರಹಿಸಿದ ನುಡಿಗಳು: |
೨ |
ವಿಷಯಗಳನ್ನು ರಹಸ್ಯವಾಗಿಡುವ ದೇವರಿಗೆ ಮಹಿಮೆ; ವಿಷಯಗಳನ್ನು ವಿಮರ್ಶಿಸುವ ರಾಜರಿಗೆ ಹಿರಿಮೆ. |
೩ |
ಆಕಾಶವು ಉನ್ನತ, ಭೂಮಿಯು ಅಗಾಧ, ಅಂತೆಯೇ ರಾಜರ ಮನಸ್ಸು ಅಗೋಚರ. |
೪ |
ಬೆಳ್ಳಿಯಿಂದ ಕಲ್ಮಷವನ್ನು ತೆಗೆದುಹಾಕಿದರೆ ಅಕ್ಕಸಾಲಿಗನಿಗೆ ದಕ್ಕುವುದು ಚೊಕ್ಕ ಒಡವೆ. |
೫ |
ಅಂತೆಯೆ ರಾಜನ ಸನ್ನಿಧಾನದಿಂದ ದುಷ್ಟರನ್ನು ತೆಗೆದುಹಾಕಿದರೆ ಅವನ ರಾಜ್ಯಭಾರ ನೀತಿಯಾಧಾರದಿಂದ ಸುಸ್ಥಿರ. |
೬ |
ರಾಜನ ಸನ್ನಿಧಾನದಲ್ಲಿ ನಿನ್ನನ್ನೇ ಹೆಚ್ಚಿಸಿಕೊಳ್ಳಬೇಡ; ದೊಡ್ಡವರಿಗೆ ಏರ್ಪಡಿಸಿದ ಸ್ಥಾನದಲ್ಲಿ ನಿಂತುಕೊಳ್ಳಬೇಡ. |
೭ |
ಘನವಂತರ ಮುಂದೆ ಕೆಳಗಣ ಸ್ಥಾನಕ್ಕೆ ನೂಕಿಸಿಕೊಳ್ಳುವುದಕ್ಕಿಂತ “ಇನ್ನೂ ಮೇಲಕ್ಕೆ ಬಾ” ಎಂದು ಕರೆಸಿಕೊಳ್ಳುವುದು ಲೇಸು. |
೮ |
ದುಡುಕಿ ನೆರೆಯವನ ಮೇಲೆ ವ್ಯಾಜ್ಯಕ್ಕೆ ಓಡಬೇಡ; ಕಡೆಗೆ ಅವನು ನಿನ್ನ ಮಾನಕಳೆದಾಗ ಏನು ಮಾಡುವೆ, ಯೋಚಿಸು. |
೯ |
ವ್ಯಾಜ್ಯವನ್ನು ನೆರೆಯವನ ಸಂಗಡವೆ ಚರ್ಚಿಸಿ ತೀರ್ಮಾನಿಸಿಕೊ; ನೆರೆಹೊರೆಯವರ ಗುಟ್ಟನ್ನು ಬಯಲು ಮಾಡಬೇಡ. |
೧೦ |
ಬಯಲು ಮಾಡಿದರೆ ಕೇಳುವವನು ನಿನ್ನನ್ನೆ ಅವಮಾನಗೊಳಿಸಾನು, ನಿನಗೆ ಬರುವ ಅಪಕೀರ್ತಿ ಅಳಿಯದೆ ಉಳಿದೀತು. |
೧೧ |
ಸಮಯೋಚಿತ ಮಾತು ಬೆಳ್ಳಿ ತಟ್ಟೆಯಲ್ಲಿ ಖಚಿತವಾದ ಬಂಗಾರದ ಹಣ್ಣು. |
೧೨ |
ಕೇಳುವ ಕಿವಿಗೆ ಕೊಡುವ ಬುದ್ಧಿವಾದವು ಹೊನ್ನಿನ ಮುರುವು, ಅಪರಂಜಿಯ ಆಭರಣವು. |
೧೩ |
ಸುಗ್ಗಿಯ ಕಾಲದಲ್ಲಿ ಹಿಮದ ತಂಪು ಹೇಗೋ ಹಾಗೆ ಕಳುಹಿಸುವ ಒಡೆಯನಿಗೆ ಪ್ರಾಮಾಣಿಕ ದೂತನೂ ಹಾಗೆ. |
೧೪ |
ಗಾಳಿಯಿದೆ, ಮೋಡವಿದೆ, ಆದರೆ ಮಳೆಯಿಲ್ಲ; ಕೊಡದೆಯೆ ತಾನೊಬ್ಬ ದಾನಿಯೆಂದು ಕೊಚ್ಚಿಕೊಳ್ಳುವವನೂ ಹಾಗೆಯೆ. |
೧೫ |
ಸಹನಶೀಲತೆಯಿಂದ ಅರಸನನ್ನೂ ಒಲಿಸಿಕೊಳ್ಳಬಹುದು; ಮೃದುವಾದ ನಾಲಿಗೆ ಎಲುಬನ್ನೂ ಮುರಿಯಬಲ್ಲದು. |
೧೬ |
ಜೇನು ಸಿಕ್ಕಿದರೆ ಅಳತೆಯಿಂದ ತಿನ್ನು, ಮಿತಿಮೀರಿದರೆ ವಾಂತಿಯಾದೀತು. |
೧೭ |
ಪದೇ ಪದೇ ನೆರೆಯವನ ಮನೆಗೆ ಹೋಗಬೇಡ, ಬೇಸರಗೊಂಡು ನಿನ್ನನ್ನು ಹಗೆಮಾಡಾನು. |
೧೮ |
ನೆರೆಯವನ ವಿರುದ್ಧ ಸುಳ್ಳುಸಾಕ್ಷಿ ಹೇಳುವವನು ಕೊಡತಿಗೆ, ಕತ್ತಿಗೆ, ಹರಿತವಾದ ಬಾಣಕ್ಕೆ ಸಮಾನನು. |
೧೯ |
ಕಷ್ಟಕಾಲದಲ್ಲಿ ಕಪಟಿಯನ್ನು ನಂಬುವುದು, ಮುರುಕು ಹಲ್ಲನ್ನು ಕುಂಟಕಾಲನ್ನು ನಂಬಿದಂತಾಗುವುದು. |
೨೦ |
ಮನಗುಂದಿದವನಿಗೆ ಸಂಗೀತ ಹಾಡುವುದೆಂದರೆ ಚಳಿಯಲ್ಲಿ ಬಟ್ಟೆ ಬಿಚ್ಚಿದ ಹಾಗೆ, ಉರಿಗಾಯಕ್ಕೆ ಉಪ್ಪು ಹಚ್ಚಿದಂತೆ. |
೨೧ |
ಹಗೆಯವನು ಹಸಿದಿದ್ದರೆ ಅನ್ನ ನೀಡು, ಬಾಯಾರಿದ್ದರೆ ಕುಡಿಯಲು ಕೊಡು. |
೨೨ |
ಹೀಗೆ ಅವನ ತಲೆಯ ಮೇಲೆ ಉರಿಕೆಂಡ ಸುರಿವೆ; ಸರ್ವೇಶ್ವರನಿಂದಲೂ ಪ್ರತಿಫಲ ಪಡೆಯುವೆ. |
೨೩ |
ಮಳೆ ಬರುವುದು ಪಡುವಣ ಗಾಳಿಯಿಂದ; ಮುಖಕ್ಕೆ ಸಿಟ್ಟು ಬರುವುದು ಚಾಡಿ ನಾಲಿಗೆಯಿಂದ. |
೨೪ |
ಜಗಳಗಂಟಿಯೊಡನೆ ಮಹಡಿ ಮನೆಯಲ್ಲಿರುವುದಕ್ಕಿಂತ ಗುಡಿಸಿಲಿನ ಮೂಲೆಯಲ್ಲಿ ಒಂಟಿಯಾಗಿ ವಾಸಿಸುವುದು ಲೇಸು. |
೨೫ |
ದೂರನಾಡಿನಿಂದ ಬಂದ ಶುಭವರದಿ, ದಣಿದ ಪ್ರಾಣಕ್ಕೆ ತಣ್ಣೀರ ತೃಪ್ತಿ. |
೨೬ |
ದುಷ್ಟರಿಗೆ ಬಿಟ್ಟುಕೊಡುವ ನೀತಿವಂತ ಕೆಸರಿನ ಬುಗ್ಗೆಗೆ, ಕೊಳಕು ಚಿಲುಮೆಗೆ ಸಮಾನ. |
೨೭ |
ಜೇನನ್ನು ಹೆಚ್ಚಾಗಿ ತಿನ್ನುವುದು ಹಿತವಲ್ಲ, ಗೌರವದ ಮೇಲೆ ಗೌರವ ಬಯಸುವುದು ಸರಿಯಲ್ಲ. |
೨೮ |
ಆತ್ಮಸ್ವಾಧೀನವಲ್ಲದ ಮನುಷ್ಯ ಗೋಡೆಬಿದ್ದು ಕಾವಲಿಲ್ಲದ ಹಾಳೂರು.
|
Kannada Bible (KNCL) 2016 |
No Data |