೧ |
ಕೆಟ್ಟವರನ್ನು ನೋಡಿ ಹೊಟ್ಟೆಕಿಚ್ಚುಪಡಬೇಡ. ಅವರ ಒಡನಾಟವನ್ನು ಬಯಸಬೇಡ. |
೨ |
ಅವರ ಮನಸ್ಸು ಯೋಚಿಸುವುದು ಹಿಂಸೆಯನ್ನು, ಅವರ ತುಟಿ ಪ್ರಸ್ತಾಪಿಸುವುದು ಹಾನಿಯನ್ನು. |
೩ |
ಮನೆಕಟ್ಟುವುದಕ್ಕೆ ಜ್ಞಾನವೇ ಸಾಧನ, ಅದನ್ನು ಸ್ಥಿರಗೊಳಿಸುವುದಕ್ಕೆ ವಿವೇಕವೇ ಆಧಾರ. |
೪ |
ಮೌಲ್ಯವೂ ಸುಂದರವೂ ಆದವುಗಳಿಂದ ಅದರ ಕೋಣೆಗಳನ್ನು ತುಂಬಿಸಲು ತಿಳುವಳಿಕೆಯೇ ಉಪಕರಣ. |
೫ |
ಬಲವಂತನಿಗಿಂತ ಬುದ್ಧಿವಂತ ಶಕ್ತಿಶಾಲಿ; ಶೂರನಿಗಿಂತ ಜ್ಞಾನಿಯೇ ಬಲಶಾಲಿ. |
೬ |
ಬುದ್ಧಿವಂತನು ನಾಯಕನನ್ನಿಟ್ಟು ಯುದ್ಧ ನಡೆಸುವನು; ಸುಮಂತ್ರಿಗಳು ಹಲವರಿದ್ದರೆ ಸಂರಕ್ಷಣೆಯಿರುವುದು. |
೭ |
ಜ್ಞಾನವು ಮೂರ್ಖನಿಗೆ ಎಟುಕದಷ್ಟು ಎತ್ತರ; ನ್ಯಾಯಸ್ಥಾನದಲ್ಲಿ ಅವನು ಬಾಯಿಬಿಡಲಾರ. |
೮ |
ಕೇಡನ್ನು ಯೋಚಿಸುವವನು ತುಂಟನು ಎನಿಸಿಕೊಳ್ಳುವನು. |
೯ |
ಮೂರ್ಖನ ಯೋಜನೆ ಪಾಪಮಯ; ಕುಚೋದ್ಯನು ಜನರಿಂದ ತಿರಸ್ಕೃತನು. |
೧೦ |
ಆಪತ್ತುಕಾಲದಲ್ಲಿ ನೀನು ಎದೆಗುಂದಿದವನಾದರೆ ನಿನ್ನ ಬಲವು ಅಸಮರ್ಪಕವಾದುದೆ. |
೧೧ |
ಮರಣಕ್ಕೆ ಒಯ್ಯಲ್ಪಟ್ಟವನನ್ನು ಬಿಡಿಸಲು ಯತ್ನಿಸು; ಕೊಲೆಗೆ ಗುರಿಯಾದವನನ್ನು ತಪ್ಪಿಸಲು ಯತ್ನಿಸು. |
೧೨ |
ಈ ಸಂಗತಿ ಗೊತ್ತಿರಲಿಲ್ಲವೆಂದು ನೆವ ಹೇಳಬೇಡ; ಅಂತರಂಗ ಪರಿಶೋಧಕನಿಗೆ ನಿನ್ನ ಯೋಜನೆ ತಿಳಿದಿಲ್ಲವೆ? ನಿನ್ನ ಮನಸ್ಸನ್ನು ಸಮೀಕ್ಷಿಸುವ ಆತನಿಗೆ ಇದು ಮರೆಯೇ? ಮಾನವನ ಕಾರ್ಯಗಳಿಗೆ ತಕ್ಕಂತೆ ಪ್ರತಿಫಲವನ್ನಾತ ನೀಡುವನಲ್ಲವೆ? |
೧೩ |
ಮಗನೇ, ಜೇನು ತಿನ್ನು, ಅದು ಚೆನ್ನಾಗಿದೆ; ತೊಟ್ಟಿಕ್ಕುವ ಜೇನುತುಪ್ಪ ನಿನ್ನ ಬಾಯಿಗೆ ಸಿಹಿ ಅಲ್ಲವೇ? |
೧೪ |
ಅಂತೆಯೇ ಜ್ಞಾನ ನಿನ್ನ ಆತ್ಮಕ್ಕೆ ಸಿಹಿಯೆಂದು ತಿಳಿ; ಅದನ್ನು ಪಡೆದೆಯಾದರೆ ನಿನ್ನ ಭವಿಷ್ಯ ಶುಭಕರ, ನಿನ್ನ ನಿರೀಕ್ಷೆ ಆಗದು ನಿರರ್ಥಕ. |
೧೫ |
ದುಷ್ಟನೇ, ನೀತಿವಂತನ ಮನೆಗೆ ಕನ್ನಹಾಕಬೇಡ; ಅವನು ಕೂಡಿಸಿದ್ದನ್ನು ಕೊಳ್ಳೆಹೊಡೆಯಬೇಡ. |
೧೬ |
ನೀತಿವಂತನು ಏಳುಸಾರಿ ಬಿದ್ದರೂ ಮತ್ತೆ ಏಳುವನು; ದುಷ್ಟನು ಕೇಡುಬಂದಾಗಲೆ ಕುಸಿದು ಬೀಳುವನು. |
೧೭ |
ನಿನ್ನ ಶತ್ರು ಬಿದ್ದರೆ ಹಿಗ್ಗಬೇಡ; ಎಡವಿದರೆ ಮನೋಲ್ಲಾಸ ಪಡಬೇಡ. |
೧೮ |
ಸರ್ವೇಶ್ವರ ನಿನ್ನ ಹರ್ಷವನ್ನು ಕಂಡು ಬೇಸರಗೊಂಡಾನು; ತನ್ನ ಕೋಪವನ್ನು ಅವನ ಕಡೆಯಿಂದ ತಿರುಗಿಸಿಬಿಟ್ಟಾನು. |
೧೯ |
ಕೆಡುಕರನ್ನು ಕಂಡು ಉರಿಗೊಳ್ಳಬೇಡ; ದುಷ್ಟರನ್ನು ನೋಡಿ ಹೊಟ್ಟೆಕಿಚ್ಚುಪಡಬೇಡ. |
೨೦ |
ಕೆಟ್ಟವನಿಗೆ ಶುಭಕಾಲ ಬಾರದು, ದುಷ್ಟರ ದೀಪ ಆರಿಹೋಗುವುದು. |
೨೧ |
ಮಗನೇ, ಸರ್ವೇಶ್ವರನಿಗೂ ರಾಜನಿಗೂ ಭಯಪಡು; ಅವರನ್ನು ವಿರೋಧಿಸುವವರ ಗೊಡವೆಗೆ ಹೋಗಬೇಡ. |
೨೨ |
ಅವರಿಬ್ಬರು ವಿಧಿಸುವ ವಿಪತ್ತು ಫಕ್ಕನೆ ಸಂಭವಿಸೀತು, ಅವರಿಂದಾಗುವ ನಾಶವು ಯಾರಿಗೆ ತಿಳಿದೀತು? |
೨೩ |
ಜ್ಞಾನಿಗಳ ಬೇರೆ ಕೆಲವು ಹೇಳಿಕೆಗಳು ಇವು: ನ್ಯಾಯವಿಚಾರಣೆಯಲ್ಲಿ ಪಕ್ಷಪಾತ ಸರಿಯಲ್ಲ. |
೨೪ |
ಅಪರಾಧಿಗೆ “ನೀನು ನಿರಪರಾಧಿ” ಎಂದು ತೀರ್ಪು ಕೊಡುವವನನ್ನು ಜನರು ಶಪಿಸುವರು, ಪ್ರಜೆಗಳು ದೂಷಿಸುವರು. |
೨೫ |
ತಪ್ಪುಮಾಡಿದವರನ್ನು ದಂಡಿಸುವವರಿಗೆ ಶುಭವಾಗುವುದು, ಸುಖಕರವಾದ ಆಶೀರ್ವಾದವು ಅವರಿಗೆ ಲಭಿಸುವುದು. |
೨೬ |
ಸತ್ಯವಾದ ಉತ್ತರ ತುಟಿಗೊಂದು ಚುಂಬನ. |
೨೭ |
ಕೆಲಸದ ಸಾಮಾನುಗಳನ್ನು ಆಣೆಮಾಡು, ಹೊಲಗದ್ದೆಗಳ ಕೆಲಸವನ್ನು ಮುಗಿಸು, ಆ ಬಳಿಕ ಮನೆ ಕಟ್ಟಲು ತೊಡಗು. |
೨೮ |
ನೆರೆಯವನಿಗೆ ವಿರುದ್ಧ ಆಧಾರವಿಲ್ಲದ ಸಾಕ್ಷಿಹೇಳಬೇಡ; ಮಾತಿನಲ್ಲಿ ಅವನಿಗೆ ಮೋಸಮಾಡಬೇಡ. |
೨೯ |
“ಅವನು ನನಗೆ ಮಾಡಿದಂತೆ ನಾನೂ ಅವನಿಗೆ ಮಾಡುವೆ, ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿತೀರಿಸುವೆ” ಎನ್ನಬೇಡ. |
೩೦ |
ಸೋಮಾರಿಯ ಹೊಲದ ಮೇಲೆ ನಡೆದುಹೋದೆ; ಮತಿಗೆಟ್ಟವನ ತೋಟದ ಮೇಲೆ ಹಾದುಹೋದೆ. |
೩೧ |
ಅವುಗಳಲ್ಲಿ ಮುಳ್ಳುಗಿಡಗಳು ಹರಡಿಕೊಂಡಿದ್ದವು, ಕಳೆಗಳು ಮುಚ್ಚಿಕೊಂಡಿದ್ದವು, ಕಲ್ಲಿನಗೋಡೆ ಹಾಳಾಗಿತ್ತು. |
೩೨ |
ಅದನ್ನು ನೋಡಿ ಚಿಂತಿಸತೊಡಗಿದೆ; ಆ ದೃಶ್ಯದಿಂದ ಈ ಪಾಠ ಕಲಿತೆ: |
೩೩ |
“ಇನ್ನೂ ಸ್ವಲ್ಪ ನಿದ್ರೆ, ಇನ್ನೂ ತುಸು ತೂಕಡಿಕೆ, ಕೈ ಮುದುಡಿಕೊಂಡು ಇನ್ನೂ ಕೊಂಚ ಮಲಗಿಕೊಳ್ಳುವೆ” ಎನ್ನುವೆಯಾ? |
೩೪ |
ಆಗ ಬಡತನ ಎರಗುವುದು ದಾರಿಗಳ್ಳನಂತೆ; ಕೊರತೆಯು ನಿನ್ನ ಮೇಲೆ ಬೀಳುವುದು ಪಂಜುಗಳ್ಳನಂತೆ.
|
Kannada Bible (KNCL) 2016 |
No Data |