೧ |
ದ್ರಾಕ್ಷಾರಸದಿಂದ ನಗೆಯಾಟ, ಮಧ್ಯದಿಂದ ಕೂಗಾಟ; ಇವುಗಳಿಂದ ತೂರಾಟಕ್ಕೆ ತುತ್ತಾಗುವವನು ಜ್ಞಾನಿಯಲ್ಲ. |
೨ |
ರಾಜನು ಗರ್ಜಿಸುವ ಸಿಂಹದಂತೆ ಭಯಂಕರನು; ಅವನನ್ನು ಕೆಣಕುವವನು ಪ್ರಾಣಕ್ಕೆ ಅಪಾಯ ತಂದುಕೊಳ್ವನು. |
೩ |
ಕಲಹಕ್ಕೆ ದೂರವಿರುವವನು ಮಾನಕ್ಕೆ ಯೋಗ್ಯನು; ಕಲಹಕ್ಕೆ ಕೈಹಾಕುವ ಪ್ರತಿಯೊಬ್ಬನು ಮೂರ್ಖನು. |
೪ |
ಮೈಗಳ್ಳನು ಮಳೆಗಾಲದಲ್ಲೂ ಹೊಲ ಉಳಲಾರನು; ಸುಗ್ಗಿಕಾಲದಲ್ಲಿ ಅಂಗಲಾಚಿದರೂ ಅವನಿಗೆ ಬೆಳೆಸಿಗಲಾರದು. |
೫ |
ಮಾನವನ ಅಂತರಾಲೋಚನೆಗಳು ಆಳವಾದ ಜಲನಿಧಿ; ವಿವೇಕಿಯಾದ ವ್ಯಕ್ತಿ ಅದನ್ನು ಹೊರ ತೆಗೆಯಬಲ್ಲ ಸೇದಿ. |
೬ |
ಸ್ನೇಹಿತರೆಂದು ಹೇಳಿಕೊಳ್ಳುವವರು ಬಹುಮಂದಿ; ಆದರೆ ನಂಬಿಗಸ್ತ ಸ್ನೇಹಿತನು ಸಿಗುವುದೆಲ್ಲಿ? |
೭ |
ನಿರ್ದೋಷಿಗಳಾಗಿ ನಡೆಯುತ್ತಾರೆ ನೀತಿವಂತರು; ಅವರು ಗತಿಸಿದ ಮೇಲೂ ಅವರ ಸಂತತಿಯವರು ಭಾಗ್ಯವಂತರು. |
೮ |
ರಾಜನು ನ್ಯಾಯಾಸನದ ಮೇಲೆ ವಿರಾಜಿಸುವಾಗ ಕೆಟ್ಟತನವನ್ನು ತೂರಿಬಿಡುವನು ದೃಷ್ಟಿಯಿಂದ. |
೯ |
“ಹೃದಯವನ್ನು ಪರಿಶುದ್ಧವಾಗಿ ಇಟ್ಟುಕೊಂಡಿದ್ದೇನೆ; ಪಾಪವಿಮುಕ್ತನಾಗಿ ಪವಿತ್ರನಾಗಿದ್ದೇನೆ” ಎಂದು ಹೇಳಬಲ್ಲವನಾರು? |
೧೦ |
ಕಳ್ಳ ಕಲ್ಲುತೂಕಗಳನ್ನೂ ಕಳ್ಳ ಅಳತೆಪಾತ್ರೆಗಳನ್ನೂ ಬಳಸುವವರನ್ನು ಕಂಡರೆ ಸರ್ವೇಶ್ವರನಿಗೆ ಅಸಹ್ಯ. |
೧೧ |
ಹುಡುಗನಾದರೂ ನಡತೆಯಲ್ಲೇ ತೋರ್ಪಡಿಸಿಕೊಳ್ಳುವನು ತನ್ನ ಗುಣ ಶುದ್ಧವೋ, ಸತ್ಯವೋ ಎಂಬುದನ್ನು. |
೧೨ |
ಕೇಳುವ ಕಿವಿ, ನೋಡುವ ಕಣ್ಣು ಇವೆರಡನ್ನು ಉಂಟುಮಾಡಿದವ ಸರ್ವೇಶ್ವರ. |
೧೩ |
ನಿದ್ದೆಯಲ್ಲೆ ನಿರತನಾಗಿರಬೇಡ, ಬಡವನಾಗಿ ಬಿಡುವೆ. ಕಣ್ಣು ತೆರೆದು ದುಡಿ, ಹೊಟ್ಟೆತುಂಬ ಊಟ ಪಡೆವೆ. |
೧೪ |
ಕೊಳ್ಳುವಾಗ ‘ಅದು ಚೆನ್ನಾಗಿಲ್ಲ, ಇದು ಚೆನ್ನಾಗಿಲ್ಲ’ ಅನ್ನುತ್ತಾನೆ; ಕೊಂಡಾದ ಮೇಲೆ ಮಾಡಿದ ಚೌಕಾಶಿಗಾಗಿ ಹೆಚ್ಚಳ ಪಡುತ್ತಾನೆ. |
೧೫ |
ಹೊನ್ನು ಉಂಟು, ಹವಳದ ರಾಶಿ ಉಂಟು; ಆದರೆ ತಿಳುವಳಿಕೆಯುಳ್ಳ ತುಟಿಗಳು ಬೆಲೆಮೀರಿದ ಆಭರಣಗಳು. |
೧೬ |
ಅಪರಿಚಿತನಿಗೆ ಹೊಣೆಯಾದವನ ಬಟ್ಟೆ ಕಿತ್ತುಕೊ; ಅಪರಿಚಿತಳಿಗೆ ಹೊಣೆ ನಿಲ್ಲುವವನನ್ನೆ ಒತ್ತೆ ಇಟ್ಟುಕೊ. |
೧೭ |
ವಂಚಿಸಿ ಪಡೆದ ಊಟ ಬಲು ರುಚಿ; ಆಮೇಲೆ ಬಾಯಿ ತುಂಬ ಕಲ್ಲುಜಲ್ಲಿ. |
೧೮ |
ಉದ್ದೇಶಗಳು ಕೈಗೂಡುವುವು ಹಿತಾಲೋಚನೆಯಿಂದ; ಬುದ್ಧಿವಂತರ ಆಲೋಚನೆ ಕೇಳದೆ ಹೂಡಬೇಡ ಯುದ್ಧ. |
೧೯ |
ಗುಟ್ಟನ್ನು ರಟ್ಟು ಮಾಡದಿರನು ಚಾಡಿಕೋರ; ತುಟಿ ಬಿಗಿಹಿಡಿಯದವನ ಗೊಡವೆ ನಿನಗೆ ಬೇಡ. |
೨೦ |
ಹೆತ್ತವರನ್ನು ಶಪಿಸುವವನ ದೀಪ ಕಾರಿರುಳಲ್ಲೆ ಆರಿಹೋಗುವುದು ಖಚಿತ. |
೨೧ |
ಬೇಗಬೇಗನೆ ಬಾಚಿಕೊಂಡ ಮೊದಲ ಸೊತ್ತು, ಕೊನೆಯಲ್ಲಿ ಕಳೆದುಹೋಗುವುದು ನಿಶ್ಚಿತ. |
೨೨ |
“ಕೇಡಿಗೆ ಕೇಡು” ಎಂದು ಮುಯ್ಯಿತೀರಿಸುವುದು ಬೇಡ; ಸರ್ವೇಶ್ವರನಲ್ಲಿ ಭರವಸೆಯಿಡು, ಆತ ನಿನ್ನ ಕೈಬಿಡ. |
೨೩ |
ತಾರತಮ್ಯದ ತೂಕದ ಕಲ್ಲು ಸರ್ವೇಶ್ವರನಿಗೆ ಅಸಹ್ಯ; ಮೋಸದ ತಕ್ಕಡಿಯನ್ನು ಬಳಸುವುದು ಸರಿಯಲ್ಲ. |
೨೪ |
ಮಾನವನ ಸ್ಥಿತಿಗತಿ ಸರ್ವೇಶ್ವರನ ಏರ್ಪಾಡು; ಮನುಷ್ಯ ತನ್ನ ಮಾರ್ಗವನ್ನು ತಾನೇ ಹೇಗೆ ತಿಳಿದಾನು? |
೨೫ |
ದುಡುಕಿ ದೇವರಿಗೆ ಮುಡಿಪುಕಟ್ಟುವುದು, ಹರಕೆ ಹೊತ್ತ ಮೇಲೆ ವಿಚಾರಮಾಡುವುದು, ಉರುಳಿಗೆ ಸಿಕ್ಕಿಕೊಂಡಂತೆ ಆಗುವುದು. |
೨೬ |
ಜ್ಞಾನಿಯಾದ ಅರಸ ಚದರಿಸಿಬಿಡುವನು ದುಷ್ಟರನ್ನು; ಅವರ ಮೇಲೆ ಉರುಳಿಸುವನು ಕಣದ ಗುಂಡನ್ನು. |
೨೭ |
ಮನುಷ್ಯನ ಆತ್ಮ ಸರ್ವೇಶ್ವರನು ಕೊಟ್ಟ ದೀಪ; ಅಂತರಂಗವನ್ನೆಲ್ಲ ಶೋಧಿಸಬಲ್ಲದು ಅದರ ಪ್ರಕಾಶ. |
೨೮ |
ಪ್ರೀತಿಸತ್ಯತೆಗಳು ರಾಜನನ್ನು ಕಾಪಾಡುವ ಕವಚ; ಕರುಣೆಯೇ ಅವನ ಸಿಂಹಾಸನಕ್ಕೆ ಸ್ಥಿರಾಧಾರ. |
೨೯ |
ಯುವಕರಿಗೆ ಬಲವೆ ಭೂಷಣ; ಮುದುಕರಿಗೆ ನರೆಯೆ ಕಿರೀಟ. |
೩೦ |
ಗಾಯಗೊಳಿಸುವ ಏಟು ಕೆಟ್ಟದ್ದನ್ನು ತೊಳೆಯಬಲ್ಲ ಮದ್ದು; ಅಂತರಂಗವನ್ನೂ ಮುಟ್ಟಬಲ್ಲದು ಆ ಪೆಟ್ಟು.
|
Kannada Bible (KNCL) 2016 |
No Data |