೧ |
ಬೇರೆಯವರೊಡನೆ ಸೇರದವನು ಸ್ವೇಚ್ಛಾನುಸಾರ ನಡೆಯುವನು; ಇತರರು ಸುಜ್ಞಾನವೆನ್ನುವುದನ್ನೇ ವಿರೋಧಿಸುವನು. |
೨ |
ಮತಿಗೆಟ್ಟವನಿಗೆ ವಿವೇಕವು ಅನಿಷ್ಟ; ಸ್ವಾರ್ಥವನ್ನು ಪ್ರಕಟಿಸುವುದೆಂದರೆ ಅವನಿಗೆ ಬಲು ಇಷ್ಟ. |
೩ |
ದುರಾಚಾರವಿದ್ದಲ್ಲಿ ತಾತ್ಸಾರ; ಮಾನ ಕಳೆದುಕೊಂಡಲ್ಲಿ ಧಿಕ್ಕಾರ. |
೪ |
ಸತ್ಪುರುಷನ ನುಡಿ ಜಲನಿಧಿ; ಜ್ಞಾನದ ಬುಗ್ಗೆ ಹರಿಯುವ ತೊರೆ. |
೫ |
ದುಷ್ಟನಿಗೆ ಪಕ್ಷಪಾತ ತೋರುವುದು ಸಲ್ಲ; ಸಜ್ಜನನಿಗೆ ನ್ಯಾಯ ತಪ್ಪಿಸುವುದು ಸರಿಯಲ್ಲ. |
೬ |
ಕಲಹವೆಬ್ಬಿಸುವುದು ಬುದ್ಧಿಹೀನನ ತುಟಿ; ಪೆಟ್ಟಿಗಾಗಿ ಕೂಗಿಕೊಳ್ಳುವುದು ಅವನ ಬಾಯಿ. |
೭ |
ಬುದ್ಧಿಹೀನನಿಗೆ ಬಾಯೇ ನಾಶ, ತುಟಿಗಳೇ ಅವನಿಗೆ ಪಾಶ. |
೮ |
ಚಾಡಿಕೋರನ ಮಾತುಗಳು ರುಚಿಕರವಾದ ತುತ್ತುಗಳು; ಅವು ಅಡಿಹೊಟ್ಟೆಗೆ ಇಳಿಯುವ ಕವಳಗಳು. |
೯ |
ಸೋಮಾರಿಯಾದ ಕೆಲಸಗಳ್ಳನು, ಕೆಡುಕನಿಗೆ ರಕ್ತಸಂಬಂಧಿಕನು. |
೧೦ |
ಸರ್ವೇಶ್ವರನ ನಾಮ ಬಲವಾದ ಗೋಪುರ; ಅದರೊಳಗೆ ಓಡಿ ಆಶ್ರಯ ಪಡೆದರೆ ಸುಭದ್ರ. |
೧೧ |
ಐಶ್ವರ್ಯವಂತನಿಗೆ ಹಣವೆ ಬಲವಾದ ಕೋಟೆ; ಅದುವೇ ಎತ್ತರವಾದ ಪೌಳಿಗೋಡೆ. |
೧೨ |
ಭಂಗಕ್ಕೆ ಮುಂಚೆ ಗರ್ವದ ಗುಂಡಿಗೆ; ಗೌರವಕ್ಕೆ ಮೊದಲು ನಮ್ರತೆ. |
೧೩ |
ಕೇಳಿಸಿಕೊಳ್ಳದೆ ಉತ್ತರಕೊಡುವವನು ಹುಚ್ಚ; ನಿಂದೆ ಅವಮಾನಕ್ಕೆ ಅವನು ಯೋಗ್ಯ. |
೧೪ |
ಆತ್ಮವು ವ್ಯಾಧಿಯನ್ನು ಸಹಿಸಬಲ್ಲದು; ಆತ್ಮವೇ ನೊಂದರೆ ಸಹಿಸುವವರಾರು? |
೧೫ |
ಬುದ್ಧಿವಂತನ ಮನಸ್ಸು ತಿಳುವಳಿಕೆಯನ್ನು ಗಳಿಸುತ್ತದೆ; ಜ್ಞಾನಿಯ ಕಿವಿಯು ತಿಳುವಳಿಕೆಯನ್ನು ಹುಡುಕುತ್ತದೆ. |
೧೬ |
ಕಾಣಿಕೆ ತರುವವನಿಗೆ ಬಾಗಿಲು ತೆರೆಯುತ್ತದೆ; ಶ್ರೀಮಂತನ ಸಾನ್ನಿಧ್ಯಕ್ಕೂ ಅದು ನಡೆಸುತ್ತದೆ. |
೧೭ |
ಮೊದಲು ವಾದಿಸುವವನು ನ್ಯಾಯವಾದಿಯೆಂದೇ ತೋರುವನು; ಅವನ ಬಂಡವಾಳ ಗೊತ್ತಾಗುವುದು ಪ್ರತಿವಾದಿ ಎದ್ದ ಮೇಲೆ. |
೧೮ |
ಚೀಟುಹಾಕುವುದರಿಂದ ವ್ಯಾಜ್ಯಗಳ ಶಮನ; ಜಟ್ಟಿಗಳ ನಡುವೆ ಕಾಳಗದ ವಿರಾಮ. |
೧೯ |
ಸಹಾಯ ಹೊಂದಿದ ಸೋದರ ದುರ್ಗಕ್ಕಿಂತಲು ದುಸ್ತರ; ಅವನೊಡನೆ ಜಗಳ ಕೋಟೆ ಮನೆಗೆ ಹಾಕಿದ ಅಗುಳಿ. |
೨೦ |
ಬಾಯಿ ಬಿತ್ತಿದ ಬೆಳೆಯಿಂದ ಮನುಷ್ಯ ಹೊಟ್ಟೆ ತುಂಬುವನು; ತುಟಿಗಳು ಕೊಟ್ಟ ಫಲದಿಂದ ತಿಂದು ತೇಗುವನು. |
೨೧ |
ಜನನ ಮರಣಗಳ ಶಕ್ತಿ ನಾಲಿಗೆಗಿದೆ; ವಚನ ಪ್ರಿಯರು ಅದರ ಫಲವನ್ನು ರುಚಿಸುವರು. |
೨೨ |
ಮಡದಿಯನ್ನು ಪಡೆಯುವುದು ಪುಣ್ಯಪಡೆದ ಹಾಗೆ, ಅದು ಸರ್ವೇಶ್ವರನ ಅನುಗ್ರಹಪಡೆದ ಹಾಗೆ. |
೨೩ |
ಬಡವರು ಮಾಡುವ ಬಿನ್ನಹ ನಮ್ರ; ಬಲ್ಲಿದರು ಕೊಡುವ ಬದಲು ಉಗ್ರ. |
೨೪ |
ಗೆಳೆಯರಂತೆ ನಟಿಸಿ ನಾಶಗೊಳಿಸುವವರು ಅನೇಕರುಂಟು; ಸಹೋದರನಿಗಿಂತ ಪ್ರಿಯನಾದ ಸ್ನೇಹಿತನೂ ಉಂಟು.
|
Kannada Bible (KNCL) 2016 |
No Data |