೧ |
ಜಗಳ ತುಂಬಿದ ಮನೆಯಲ್ಲಿ ಹಬ್ಬದೂಟ ಮಾಡುವುದಕ್ಕಿಂತಲು ಶಾಂತಿ ಸಮಾಧಾನದಿಂದ ಕೂಡಿದ ಒಣ ತುತ್ತೇ ಲೇಸು. |
೨ |
ಜಾಣನಾದ ಆಳು ಮಾನಕಳೆದ ಮನೆಮಗನ ಮೇಲೆ ಅಧಿಕಾರ ನಡೆಸುವನು, ಮನೆಮಕ್ಕಳ ಬಾಧ್ಯತೆಯಲ್ಲೂ ಪಾಲುಗಾರನಾಗುವನು. |
೩ |
ಪುಟಕುಲುಮೆಗಳು ಬೆಳ್ಳಿಬಂಗಾರಗಳನ್ನು ಶೋಧಿಸುತ್ತವೆ; ಸರ್ವೇಶ್ವರನು ಹೃದಯಗಳನ್ನು ಶೋಧಿಸುತ್ತಾನೆ. |
೪ |
ಕೆಡುಕನು ಕೆಟ್ಟತುಟಿ ಆಡುವುದನ್ನು ಗಮನಿಸುತ್ತಾನೆ; ಸುಳ್ಳುಗಾರ ನಷ್ಟಮಾಡುವ ನಾಲಿಗೆಗೆ ಕಿವಿಗೊಡುತ್ತಾನೆ. |
೫ |
ಬಡವರನ್ನು ಗೇಲಿಮಾಡುವವನು ತನ್ನ ಸೃಷ್ಟಿಕರ್ತನನ್ನೇ ಹೀನೈಸುತ್ತಾನೆ; ಪರರ ಕಷ್ಟದುಃಖಗಳನ್ನು ನೋಡಿ ಹಿಗ್ಗುವವನು ದಂಡನೆಗೆ ಗುರಿಯಾಗುತ್ತಾನೆ. |
೬ |
ಮಕ್ಕಳ ಮಕ್ಕಳು ಮುದುಕರ ಮುಕುಟ; ಮಕ್ಕಳಿಗೆ ಹೆತ್ತವರೇ ಭೂಷಣ. |
೭ |
ಉತ್ತಮವಾದ ಮಾತು ಮೂರ್ಖನಿಗೆ ಹಿಡಿಸದು; ಸುಳ್ಳುಮಾತು ಉತ್ತಮನಿಗೆ ಮತ್ತೂ ಹಿಡಿಸದು. |
೮ |
ಕೊಡುವವನ ಕಣ್ಣಿಗೆ ಲಂಚವು ಚಿಂತಾಮಣಿಯಂತೆ; ಎತ್ತ ತಿರುಗಿದರತ್ತ ಅದರಿಂದ ಜಯವಂತೆ! |
೯ |
ತಪ್ಪನ್ನು ಮನ್ನಿಸುವವನು ಪ್ರೀತಿಯನ್ನು ಅರಸುತ್ತಾನೆ; ತಪ್ಪನ್ನು ಎತ್ತಿ ಆಡುವವನು ಆಪ್ತನನ್ನೂ ಕಳೆದುಕೊಳ್ಳುತ್ತಾನೆ. |
೧೦ |
ಮಂದಮತಿಗೆ ನೂರು ಗುದ್ದು; ಬುದ್ಧಿವಂತನಿಗೆ ಒಂದು ಮಾತು. |
೧೧ |
ದುರಾತ್ಮನ ಕಣ್ಣೆಲ್ಲಾ ದಂಗೆ ಏಳುವುದರ ಮೇಲೆ; ಕ್ರೂರದೂತನು ಎರಗಿ ಬರುವನು ಅವನ ಮೇಲೆ. |
೧೨ |
ಮೂರ್ಖತನದಲ್ಲಿ ಮುಳುಗಿರುವ ಮೂಢನಿಗೆ ಎದುರಾಗುವುದಕ್ಕಿಂತಲು ಮರಿಗಳನ್ನು ಕಳೆದುಕೊಂಡ ಕರಡಿಗೆ ಎದುರಾಗುವುದು ಲೇಸು. |
೧೩ |
ಯಾರು ಉಪಕಾರಕ್ಕೆ ಅಪಕಾರ ಮಾಡುತ್ತಾರೊ ಅಂಥವರ ಮನೆಯಿಂದ ಕೇಡು ತೊಲಗದು. |
೧೪ |
ವಾಗ್ವಾದವು ಏರಿಗೆ ಬಿರುಕು ಬಿದ್ದಂತೆ; ಸಿಟ್ಟೇರುವುದಕ್ಕೆ ಮುಂಚೆ ಜಗಳವನ್ನು ತೊರೆದುಬಿಡು. |
೧೫ |
ದುರ್ಜನರನ್ನು ಸಜ್ಜನರೆಂದೂ, ಸಜ್ಜನರನ್ನು ದುರ್ಜನರೆಂದೂ ನಿರ್ಣಯಿಸುವ ಇಬ್ಬರೂ ಸರ್ವೇಶ್ವರನಿಗೆ ಅಸಹ್ಯರು. |
೧೬ |
ಜ್ಞಾನವನ್ನು ಕೊಳ್ಳಲು ಮೂಢನ ಕೈಯಲ್ಲಿ ಹಣವೇಕೆ? ಇದನ್ನು ಕೊಳ್ಳಲು ಬೇಕಾದ ಬುದ್ಧಿಯೇ ಅವನಿಗಿಲ್ಲವಲ್ಲಾ! |
೧೭ |
ಮಿತ್ರನ ಪ್ರೀತಿ ನಿರಂತರ; ಕಷ್ಟಕ್ಕಾದವನೆ ಹುಟ್ಟುನಂಟ. |
೧೮ |
ಬೇರೆಯವನ ಸಾಲಕ್ಕಾಗಿ ಕೈ ಮೇಲೆ ಕೈಹಾಕಿ ಹೊಣೆಯಾಗಿ ನಿಂತವನು ಬುದ್ಧಿಹೀನನೆ ಸರಿ. |
೧೯ |
ಕಲಹಪ್ರಿಯನು ಪಾಪಪ್ರಿಯನು; ಕದವನ್ನು ಎತ್ತರಿಸಿದವನು ಕೇಡನ್ನು ಬರಮಾಡಿಕೊಳ್ಳುವನು. |
೨೦ |
ವಕ್ರಮನಸ್ಸುಳ್ಳವನು ಒಳಿತನ್ನು ಕಾಣನು; ಕೆಟ್ಟ ನಾಲಿಗೆಯವನು ಸಂಕಟಕ್ಕೆ ಸಿಕ್ಕಿಕೊಳ್ಳುವನು. |
೨೧ |
ಹೆಡ್ಡನನ್ನು ಹೆತ್ತವನಿಗೆ ವ್ಯಥೆ; ಮೂರ್ಖನ ತಂದೆಗೆ ಕಡುಚಿಂತೆ. |
೨೨ |
ಹರ್ಷ ಹೃದಯ ಒಳ್ಳೆಯ ಔಷಧ; ಕುಗ್ಗಿದ ಮನದಿಂದ ಅಸ್ಥಿಪಂಜರ. |
೨೩ |
ಲಂಚವನ್ನು ಗುಟ್ಟಾಗಿ ಪಡೆದ ದುಷ್ಟನು ಡೊಂಕಾಗಿಸುತ್ತಾನೆ ನ್ಯಾಯ ನಿರ್ಣಯವನ್ನು. |
೨೪ |
ವಿವೇಕಿಗೆ ಜ್ಞಾನವೇ ಗುರಿ ಧ್ಯೇಯ; ಮೂಢನ ದೃಷ್ಟಿ ದಿಗಂತದಷ್ಟು ವಿಶಾಲ. |
೨೫ |
ಬುದ್ಧಿಹೀನನಾದ ಮಗನು ತಂದೆಗೆ ಕಿರಿಕಿರಿ; ಹೆತ್ತತಾಯಿಗೆ ಅವನು ಕರಕರೆ. |
೨೬ |
ನೀತಿವಂತನಿಗೆ ದಂಡ ಸರಿಯಲ್ಲ; ಸಜ್ಜನನಿಗೆ ಶಿಕ್ಷೆ ನ್ಯಾಯವಲ್ಲ. |
೨೭ |
ಹಿಡಿದು ಮಾತಾಡುವವನು ಜ್ಞಾನಿ; ಶಾಂತ ಗುಣವುಳ್ಳವನು ವಿವೇಕಿ. |
೨೮ |
ಮೂಢನು ಕೂಡ ಮೌನತಾಳಿದರೆ ಜ್ಞಾನಿಯೆನಿಸಿಕೊಳ್ಳುವನು; ತುಟಿಗಳನ್ನು ಬಿಗಿಹಿಡಿದರೆ ವಿವೇಕಿ ಎನಿಸಿಕೊಳ್ಳುವನು.
|
Kannada Bible (KNCL) 2016 |
No Data |