೧ |
ಆಲೋಚನೆ ಮಾಡುವುದು ಮನುಷ್ಯನ ಇಚ್ಛೆ; ಅದನ್ನು ಸಫಲವಾಗಿಸುವುದು ಸರ್ವೇಶ್ವರನ ಇಚ್ಛೆ. |
೨ |
ಮನುಷ್ಯನ ನಡತೆಯೆಲ್ಲಾ ಸ್ವಂತ ದೃಷ್ಟಿಗೆ ಶುದ್ಧ; ಆದರೆ ಅವನ ಅಂತರಂಗವನ್ನು ವೀಕ್ಷಿಸುವಂಥವನು ಸರ್ವೇಶ್ವರ. |
೩ |
ನಿನ್ನ ಕಾರ್ಯಭಾರವನ್ನು ಸರ್ವೇಶ್ವರನಿಗೆ ವಹಿಸು; ಆಗ ಸಫಲವಾಗುವುದು ನಿನ್ನ ಯೋಜನೆಯು. |
೪ |
ಸರ್ವೇಶ್ವರ ಒಂದೊಂದನ್ನೂ ಸೃಷ್ಟಿಸಿರುವುದು ಒಂದು ಗುರಿಯಿಟ್ಟೇ ಹೌದು; ಕೆಡುಕರನ್ನು ಉಂಟುಮಾಡಿರುವುದು ಕೇಡಿನ ದಿನಕ್ಕಾಗಿಯೇ. |
೫ |
ಗರ್ವಿಷ್ಠನು ಯಾರೇ ಆಗಿರಲಿ, ಅವನು ಸರ್ವೇಶ್ವರನಿಗೆ ಅಸಹ್ಯ; ಅವನಿಗೆ ದಂಡನೆ ತಪ್ಪದು, ಇದು ಖಂಡಿತ. |
೬ |
ಪ್ರೀತಿ ಸತ್ಯತೆಗಳಿಂದ ಪಾಪನಿವಾರಣೆ; ಸರ್ವೇಶ್ವರನ ಭಯಭಕ್ತಿಯಿಂದ ಹಾನಿ ನಿವಾರಣೆ. |
೭ |
ಒಬ್ಬನ ನಡತೆಯನ್ನುಸರ್ವೇಶ್ವರ ಮೆಚ್ಚಿದರೆ, ಅವನ ಶತ್ರುಗಳನ್ನು ಆತ ಮಿತ್ರರನ್ನಾಗಿಸುತ್ತಾನೆ. |
೮ |
ಅನ್ಯಾಯದಿಂದ ಗಳಿಸಿದ ಅಪಾರ ನಿಧಿಗಿಂತಲು ನ್ಯಾಯದಿಂದ ಕೂಡಿಸಿದ ಅಲ್ಪ ಧನ ಲೇಸು. |
೯ |
ಮನುಷ್ಯ ಮನಬಂದಂತೆ ಮಾರ್ಗವನ್ನಾರಿಸಿಕೊಂಡರೂ ಸರ್ವೇಶ್ವರನೇ ಅವನ ನಡತೆಯನ್ನು ಪರಾಂಬರಿಸುವವನು. |
೧೦ |
ದೈವೋಕ್ತಿ ಹೊರಡುವುದು ಅರಸನ ಬಾಯಿಂದ; ತಪ್ಪುಮಾಡದು ಅವನ ಬಾಯಿ ತೀರ್ಪು ನೀಡುವಾಗ. |
೧೧ |
ನ್ಯಾಯದ ತ್ರಾಸುತಕ್ಕಡಿಗಳೆಲ್ಲ ಸರ್ವೇಶ್ವರನ ಏರ್ಪಾಡು; ಚೀಲದ ಕಲ್ಲುತೂಕಗಳೆಲ್ಲ ಆತನ ಕೈಕೆಲಸ. |
೧೨ |
ರಾಜರಲ್ಲಿ ದುಷ್ಟಕಾರ್ಯ ಖಂಡನೀಯ; ಸದಾಚಾರ ಸಿಂಹಾಸನಕ್ಕೆ ನಿಜ ಆಧಾರ. |
೧೩ |
ನೀತಿಯುತ ಮಾತನ್ನು ಅರಸನು ಮೆಚ್ಚುವನು; ಸತ್ಯವಾದಿಯನ್ನು ಆತನು ಪ್ರೀತಿಸುವನು. |
೧೪ |
ಭೂಪನ ಕೋಪ ಮೃತ್ಯುವಿನ ದೂತ; ಅದನ್ನು ಶಮನಪಡಿಸಲು ಜಾಣನು ಶಕ್ತ. |
೧೫ |
ಪ್ರಭುವಿನ ಮುಖಪ್ರಸನ್ನತೆ ಜೀವದ ಒರತೆ; ಆತನ ಕರುಣೆ ಮುಂಗಾರು ಮಳೆ. |
೧೬ |
ಬಂಗಾರಕ್ಕಿಂತ ಜ್ಞಾನಾರ್ಜನೆ ಎಷ್ಟೋ ಮೇಲು; ಬೆಳ್ಳಿಗಿಂತ ವಿವೇಕಾರ್ಜನೆ ಎಷ್ಟೋ ಲೇಸು. |
೧೭ |
ಸಜ್ಜನರ ರಾಜಮಾರ್ಗ ಹಾನಿಗೆ ದೂರ; ಸನ್ನಡತೆಯುಳ್ಳವ ಪ್ರಾಣಸಂರಕ್ಷಕ. |
೧೮ |
ವಿನಾಶಕ್ಕೆ ಮುಂಚೆ ವಿಪರೀತ ಬುದ್ಧಿ; ನೆಲಕ್ಕುರುಳುವುದಕ್ಕೆ ಮುಂಚೆ ನೆತ್ತಿಗೇರಿತು ಸೊಕ್ಕು. |
೧೯ |
ಸೊಕ್ಕಿನವರ ಸಂಗಡ ಸೂರೆಹಂಚಿಕೊಳ್ಳುವುದಕ್ಕಿಂತಲು ದೀನದಲಿತರ ಸಂಗಡ ದೈನ್ಯದಿಂದಿರುವುದು ಮೇಲು. |
೨೦ |
ದೇವರ ವಾಕ್ಯ ಸ್ಮರಿಸುವವನು ಸುಕ್ಷೇಮದಿಂದ ಬಾಳುವನು; ಸರ್ವೇಶ್ವರನಲ್ಲಿ ಭರವಸೆ ಇಡುವವನು ಭಾಗ್ಯವಂತನು. |
೨೧ |
ಜ್ಞಾನ ಹೃದಯರಿಗೆ ಜಾಣರೆಂಬ ಬಿರುದು; ಮಧುರ ಮಾತಿನಿಂದ ಬೋಧನಾಶಕ್ತಿ ಹಿರಿದು. |
೨೨ |
ವಿವೇಕಿಗೆ ವಿವೇಕವೇ ಜೀವದ ಬುಗ್ಗೆ; ಮೂರ್ಖನಿಗೆ ಮೂರ್ಖತನವೇ ತಕ್ಕ ದಂಡನೆ. |
೨೩ |
ಜ್ಞಾನಿಯ ಹೃದಯದಿಂದ ಬಾಯಿಗೆ ಜಾಣತನ; ಅವನ ತುಟಿಗಳಿಗೆ ಕಲಿಕೆಯ ಚೂಟಿತನ. |
೨೪ |
ಸವಿನುಡಿಯು ಜೇನಿನ ಕೊಡವು; ಅದು ಆತ್ಮಕ್ಕೆ ಇಂಪು, ದೇಹಕ್ಕೆ ತಂಪು. |
೨೫ |
ಒಂದು ಮಾರ್ಗ ಒಬ್ಬನಿಗೆ ನೇರವೆಂದು ತೋರಬಹುದು; ಕೊನೆಗೆ ಅದು ಮರಣಕ್ಕೆ ಒಯ್ಯುವ ಹಾದಿಯಾಗಬಹುದು. |
೨೬ |
ದುಡಿಯುವವನು ಹೊಟ್ಟೆಪಾಡಿಗಾಗಿ ದುಡಿಯುತ್ತಾನೆ; ಹೊಟ್ಟೆಕಾಟವೆ ಸಾಕು ಅವನನ್ನು ದುಡಿಸಲಿಕ್ಕೆ. |
೨೭ |
ನೀಚನು ಕೇಡೆಂಬ ಗುಳಿಯನ್ನು ತೋಡುತ್ತಾನೆ; ಸುಡುವ ಬೆಂಕಿಯ ಜ್ಞಾಲೆ ಅವನ ನಾಲಿಗೆ. |
೨೮ |
ತುಂಟನು ಜಗಳವನ್ನು ಹುಟ್ಟಿಸುತ್ತಾನೆ; ಚಾಡಿಕೋರನು ಮಿತ್ರರನ್ನು ಬೇರ್ಪಡಿಸುತ್ತಾನೆ. |
೨೯ |
ಹಿಂಸಾತ್ಮಕನು ನೆರೆಯವನನ್ನು ಮರುಳುಗೊಳಿಸುತ್ತಾನೆ; ಅವನನ್ನು ದುರ್ಮಾರ್ಗಕ್ಕೆ ಎಳೆಯುತ್ತಾನೆ. |
೩೦ |
ಕಣ್ಣುಮಿಟುಕಿಸುವವನು ಕುಯುಕ್ತಿಯನ್ನು ಕಲ್ಪಿಸುತ್ತಾನೆ; ತುಟಿಕಚ್ಚುವವನು ಕೇಡನ್ನು ಸಾಧಿಸುತ್ತಾನೆ. |
೩೧ |
ನರೆಗೂದಲು ಸುಂದರ ಕಿರೀಟ, ಸನ್ನಡತೆಗೆ ಸಿಗುವ ಪ್ರತಿಫಲ. |
೩೨ |
ದೀರ್ಘಶಾಂತನು ಪರಾಕ್ರಮಶಾಲಿಗಿಂತ ಶ್ರೇಷ್ಠ; ತನ್ನನ್ನು ತಾನೆ ಗೆದ್ದವನು ಪಟ್ಟಣ ಗೆದ್ದವನಿಗಿಂತ ಬಲಿಷ್ಠ. |
೩೩ |
ಅದೃಷ್ಟದ ಚೀಟನ್ನು ಕುಲುಕಿ ಮಡಲಿಗೆ ಹಾಕಬಹುದು; ಆದರೆ ತೀರ್ಪು ಸರ್ವೇಶ್ವರನ ಕೈಯಲ್ಲಿರುವುದು.
|
Kannada Bible (KNCL) 2016 |
No Data |