೧ |
ಆಗ ಮೋಶೆ ಉತ್ತರ ನೀಡಿ,” ಆಲಿಸಬೇಕು; ಆ ಜನರು ನನ್ನನ್ನು ನಂಬದೆ ನನ್ನ ಮಾತಿಗೆ ಕಿವಿಗೊಡದೆ ಹೋಗಬಹುದು: ‘ಸರ್ವೇಶ್ವರ ಸ್ವಾಮಿ ನಿನಗೆ ಕಾಣಿಸಿಕೊಂಡಿದ್ದೇ ಇಲ್ಲ’ ಎಂದು ಹೇಳಬಹುದು” ಎಂದನು. |
೨ |
ಅದಕ್ಕೆ ಸರ್ವೇಶ್ವರ ಅವನನ್ನು, “ನಿನ್ನ ಕೈಯಲ್ಲಿರುವುದೇನು?” ಎಂದು ಕೇಳಿದರು, ಅವನು, “ಇದು ಕೋಲು” ಎಂದನು. |
೩ |
ಸರ್ವೇಶ್ವರ ಅವನಿಗೆ, “ಅದನ್ನು ನೆಲದಲ್ಲಿ ಬಿಸಾಡು,” ಎಂದರು. ನೆಲದಲ್ಲಿ ಬಿಸಾಡುತ್ತಲೇ ಅದು ಹಾವಾಯಿತು! ಅದನ್ನು ಕಂಡ ಮೋಶೆ ಭಯಪಟ್ಟು ಓಡಿಹೋದನು. |
೪ |
ಸರ್ವೇಶ್ವರ ಅವನಿಗೆ, “ಕೈಚಾಚಿ ಅದರ ಬಾಲವನ್ನು ಹಿಡಿ,” ಎಂದರು. ಅಂತೆಯೇ ಹಿಡಿದಾಗ ಅದು ಕೋಲು ಆಯಿತು. ಆಗ ಸರ್ವೇಶ್ವರ ಅವನಿಗೆ, |
೫ |
“ಇದರಿಂದ ಆ ಜನರು ಪೂರ್ವಜರಾದ ಅಬ್ರಹಾಮ, ಇಸಾಕ ಹಾಗು ಯಕೋಬರ ದೇವರಾಗಿರುವ ಸರ್ವೇಶ್ವರ ನಿನಗೆ ಕಾಣಸಿದ್ದು ನಿಜ ಎಂಬುದನ್ನು ನಂಬುವರು,” ಎಂದು ಹೇಳಿದರು. |
೬ |
ಮತ್ತೆ ಸರ್ವೇಶ್ವರ ಅವನಿಗೆ, “ನಿನ್ನ ಕೈಯನ್ನು ನಿನ್ನ ಉಡಿಗೆಯಲ್ಲಿ ಇಟ್ಟುಕೊ,” ಎಂದರು. ಅಂತೆಯೇ ಉಡಿಗೆಯಲ್ಲಿ ಇಟ್ಟು ಹೊರಗೆ ತೆಗೆದಾಗ ಅವನ ಕೈ ತೊನ್ನುಹತ್ತಿ ಹಿಮದಂತೆ ಬೆಳ್ಳಗಾಗಿ ಇತ್ತು. |
೭ |
ಸರ್ವೇಶ್ವರ ಅವನಿಗೆ, “ನಿನ್ನ ಕೈಯನ್ನು ತಿರುಗಿ ಉಡಿಗೆಯಲ್ಲಿ ಸೇರಿಸು,” ಎಂದು ಹೇಳಿದರು. ಹಾಗೆಯೆ ಅವನು ಅದನ್ನು ಉಡಿಗೆಯಲ್ಲಿ ಸೇರಿಸಿದನು. ಬಳಿಕ ತೆಗೆದು ನೋಡಿದಾಗ ಅದು ಉಳಿದ ಮೈಯಂತೆಯೇ ಆಗಿತ್ತು. |
೮ |
ಆಗ ಸರ್ವೇಶ್ವರ ಅವನಿಗೆ, “ಆ ಜನರು ನಿನ್ನನ್ನು ನಂಬದೆ ಮೊದಲನೆಯ ಸೂಚಕಕಾರ್ಯವನ್ನು ಅರ್ಥಮಾಡಿಕೊಳ್ಳದೆ ಹೋದರೂ ಎರಡನೆಯದನ್ನು ಅರ್ಥಮಾಡಿಕೊಂಡು ನಂಬುವರು. |
೯ |
ಈ ಎರಡು ಸೂಚಕಕಾರ್ಯಗಳನ್ನೂ ಅವರು ಮನಸ್ಸಿಗೆ ತಂದುಕೊಳ್ಳದೆ ಹಾಗು ನಿನ್ನ ಮಾತನ್ನು ನಂಬದೆ ಹೋದರೆ ನೀನು ನೈಲ್ ನದಿಯಿಂದ ನೀರನ್ನು ತೆಗೆದುಕೊಂಡು ಒಣನೆಲದ ಮೇಲೆ ಸುರಿ. ಆಗ ನೆಲದಲ್ಲಿ ಸುರಿದ ನೀರು ರಕ್ತವಾಗುವುದು,” ಎಂದು ಹೇಳಿದರು. |
೧೦ |
ಆದರೆ ಮೋಶೆ ಸರ್ವೇಶ್ವರನಿಗೆ, “ಸ್ವಾಮಿ, ನಾನು ವಾಕ್ಚಾತುರ್ಯ ಇಲ್ಲದವನು; ಮೊದಲಿನಿಂದಲೂ ಹಾಗು ತಾವು ನಿಮ್ಮ ದಾಸನ ಸಂಗಡ ಮಾತಾಡಿದ ಮೇಲೆಯೂ ಹಾಗೆಯೇ ಇದ್ದೇನೆ. ನನ್ನ ಮಾತು ತೊದಲು, ನನ್ನ ನಾಲಿಗೆ ಮಂದ,” ಎಂದನು. |
೧೧ |
ಅದಕ್ಕೆ ಸರ್ವೇಶ್ವರ, “ಮನುಷ್ಯರಿಗೆ ಬಾಯಿಕೊಟ್ಟವರು ಯಾರು? ಒಬ್ಬನನ್ನು ಮೂಕನಾಗಿ, ಮತ್ತೊಬ್ಬನನ್ನು ಕಿವುಡನಾಗಿ, ಇನ್ನೊಬ್ಬನನ್ನು ಕಣ್ಣುಳ್ಳವನಾಗಿ, ಮಗದೊಬ್ಬನನ್ನು ಕಣ್ಣಿಲ್ಲದವನಾಗಿ ಇಡುವವರು ಯಾರು? ಸರ್ವೇಶ್ವರನಾಗಿರುವ ನಾನೇ ಅಲ್ಲವೆ? |
೧೨ |
ಆದುದರಿಂದ ಈಗಲೇ ಹೊರಡು; ನಿನ್ನ ಬಾಯಲ್ಲಿ ನಾನೇ ಇರುವೆನು; ನೀನು ಮಾತಾಡಬೇಕಾದುದನ್ನು ನಿನಗೆ ಕಲಿಸಿಕೊಡುವೆನು,” ಎಂದು ಹೇಳಿದರು. |
೧೩ |
ಅದಕ್ಕೆ ಮೋಶೆ, “ಸ್ವಾಮೀ, ಈ ಕಾರ್ಯಕ್ಕೆ ತಾವು ಬೇರೊಬ್ಬನನ್ನು ನೇಮಿಸಬೇಕು,” ಎನ್ನಲು, ಸರ್ವೇಶ್ವರ ಅವನ ಮೇಲೆ ಸಿಟ್ಟುಗೊಂಡರು. |
೧೪ |
ಅವನಿಗೆ, “ಲೇವಿಯನಾದ ಆರೋನನು ನಿನಗೆ ಅಣ್ಣನಲ್ಲವೆ? ಅವನು ಚೆನ್ನಾಗಿ ಮಾತಾಡಬಲ್ಲನೆಂದು ನನಗೆ ಗೊತ್ತಿದೆ. ಇಗೋ, ಅವನೇ ನಿನ್ನನ್ನು ಭೇಟಿಯಾಗಲು ಬರುತ್ತಿದ್ದಾನೆ. ನಿನ್ನನ್ನು ಕಂಡು ಆನಂದಿಸಲಿದ್ದಾನೆ. |
೧೫ |
ನೀನು ಅವನ ಸಂಗಡ ಮಾತಾಡಿ ಹೇಳಬೇಕಾದ ವಿಷಯಗಳನ್ನು ತಿಳಿಸು. ನಾನು ನಿನಗೂ ಅವನಿಗೂ ಹೇಗೆ ಮಾತಾಡಬೇಕೆಂದು ತಿಳಿಸಿ ನೀವು ಮಾಡಬೇಕಾದುದನ್ನು ಕಲಿಸುವೆನು. |
೧೬ |
ನಿನ್ನ ಪರವಾಗಿ ಅವನೇ ಆ ಜನರ ಸಂಗಡ ಮಾತಾಡುವನು. ಅವನು ನಿನಗೆ ಬಾಯಂತಿರುವನು. ನೀನು ಅವನಿಗೆ ದೇವರಂತೆ ಇರುವೆ. |
೧೭ |
ಈ ಕೋಲನ್ನು ಕೈಯಲ್ಲಿ ತೆಗೆದುಕೊಂಡು ಹೋಗು. ಇದರಿಂದಲೇ ಆ ಸೂಚಕಕಾರ್ಯಗಳನ್ನು ಮಾಡುವೆ,” ಎಂದರು. |
೧೮ |
ಇದಾದ ಮೇಲೆ ಮೋಶೆ ತನ್ನ ಮಾವನಾದ ಇತ್ರೋನನ ಬಳಿಗೆ ಹಿಂದಿರುಗಿ ಬಂದು, “ನಾನು ಈಜಿಪ್ಟ್ ದೇಶದಲ್ಲಿರುವ ಸ್ವಜನರ ಬಳಿಗೆ ಮರಳಿ ಹೋಗಿ ಅವರು ಜೀವದಿಂದ ಇದ್ದಾರೋ ಇಲ್ಲವೋ ನೋಡುವುದಕ್ಕೆ ಅಪ್ಪಣೆಯಾಗಬೇಕು,” ಎಂದು ವಿನಂತಿಸಿದನು. ಇತ್ರೋನನು, “ಸುಖವಾಗಿ ಹೋಗಿ ಬಾ,” ಎಂದನು. |
೧೯ |
ಮಿದ್ಯಾನ್ ನಾಡಿನಲ್ಲಿ ಸರ್ವೇಶ್ವರ ಮೋಶೆಗೆ, “ನೀನು ಈಜಿಪ್ಟ್ ದೇಶಕ್ಕೆ ಮರಳಿ ಹೋಗು. ನಿನ್ನನ್ನು ಕೊಲ್ಲಬೇಕೆಂದಿದ್ದವರೆಲ್ಲರು ಸತ್ತುಹೋದರು,” ಎಂದು ತಿಳಿಸಿದರು. |
೨೦ |
ಆದ್ದರಿಂದ ಮೋಶೆ ತನ್ನ ಮಡದಿ ಮಕ್ಕಳನ್ನು ಹೇಸರ ಕತ್ತೆಯ ಮೇಲೆ ಏರಿಸಿಕೊಂಡು ಈಜಿಪ್ಟಿಗೆ ಹೊರಟುಹೋದನು. ದೇವದಂಡ ಅವನ ಕೈಯಲ್ಲಿತ್ತು. |
೨೧ |
ಸರ್ವೇಶ್ವರ ಮೋಶೆಗೆ ಮತ್ತೆ ಇಂತೆಂದರು: “ನೀನು ಈಜಿಪ್ಟಿಗೆ ಮರಳಿದಾಗ ನಾನು ನಿನಗೆ ತೋರಿಸಿಕೊಟ್ಟ ಸೂಚಕಕಾರ್ಯಗಳನ್ನೆಲ್ಲಾ ಫರೋಹ ರಾಜನ ಮುಂದೆ ಮಾಡಿ ತೋರಿಸು. ಆದರೆ ನಾನು ಅವನ ಹೃದಯವನ್ನು ಕಲ್ಲಾಗಿಸುವೆನು. ಅವನು ಇಸ್ರಯೇಲರನ್ನು ಹೋಗಗೊಡಿಸುವುದಿಲ್ಲ. |
೨೨ |
ಆಗ ನೀನು ಅವನಿಗೆ ತಿಳಿಸಬೇಕಾದುದು, 'ಸರ್ವೇಶ್ವರನು ಹೇಳುವುದನ್ನು ಕೇಳು: ಇಸ್ರಯೇಲ್ ಜನತೆ ನನಗೆ ಮಗನಂತೆ, ಜ್ಯೇಷ್ಠಪುತ್ರನಂತಿದೆ. |
೨೩ |
ನನ್ನನ್ನು ಆರಾಧಿಸಲು ನಿನ್ನ ದೇಶದಿಂದ ಹೊರಡುವುದಕ್ಕೆ ಅವನಿಗೆ ಅಪ್ಪಣೆಕೊಡು.' ಇದಕ್ಕೆ ನೀನು ಒಪ್ಪದೆ ಹೋದರೆ ನಾನು ನಿನ್ನ ಜ್ಯೇಷ್ಠ ಪುತ್ರನನ್ನು ಕೊಲ್ಲುವೆನು,” |
೨೪ |
ಈಜಿಪ್ಟಿಗೆ ಹೋಗುವ ದಾರಿಯಲ್ಲಿದ್ದ ಛತ್ರವೊಂದರಲ್ಲಿ ಸರ್ವೇಶ್ವರ ಅವನೆದುರಿಗೆ ಬಂದು ಅವನ ಪ್ರಾಣ ತೆಗೆಯಬೇಕೆಂದಿದ್ದರು. |
೨೫ |
ಆಗ ಚಿಪ್ಪೋರಳು ಕಲ್ಲಿನ ಚೂರಿಯಿಂದ ತನ್ನ ಮಗನಿಗೆ ಸುನ್ನತಿ ಮಾಡಿ ಮೋಶೆಗೆ, “ನೀನು ನನಗೆ ರಕ್ತಧಾರೆಯಿಂದಾದ ಮದಲಿಂಗ,” ಎಂದು ಹೇಳಿ |
೨೬ |
ಕತ್ತರಿಸಿದ ಮುಂದೊಗಲನ್ನು ಅವನ ಪಾದಗಳಿಗೆ ಮುಟ್ಟಿಸಿದಳು. ಆಗ ಸರ್ವೇಶ್ವರ ಅವನನ್ನು ಉಳಿಸಿದರು. ಆಕೆ ಸುನ್ನತಿಯ ನಿಮಿತ್ತವೇ “ನೀನು ನನಗೆ ರಕ್ತಧಾರೆಯಿಂದಾದ ಮದಲಿಂಗ,” ಎಂದು ಹೇಳಿದ್ದು. |
೨೭ |
ಇದಲ್ಲದೆ ಸರ್ವೇಶ್ವರ ಆರೋನನಿಗೆ, “ನೀನು ಮೋಶೆಯನ್ನು ಎದುರುಗೊಳ್ಳಲು ಮರುಭೂಮಿಗೆ ತೆರಳು,” ಎಂದರು. ಅಂತೆಯೇ ಆರೋನನು ಹೋಗಿ ದೇವರ ಬೆಟ್ಟದಲ್ಲಿ ಮೋಶೆಯನ್ನು ಎದುರುಗೊಂಡು ಮುದ್ದಿಟ್ಟನು. |
೨೮ |
ಆಗ ಮೋಶೆ, ಸರ್ವೇಶ್ವರ ಸ್ವಾಮಿ ತನ್ನನ್ನು ಕಳಿಸುವಾಗ ಯಾವ ಮಾತುಗಳನ್ನು ಹೇಳಿದರೋ ಏನೇನು ಸೂಚಕಕಾರ್ಯಗಳು ಮಾಡಬೇಕೆಂದು ಆಜ್ಞಾಪಿಸಿದರೋ ಅವುಗಳನ್ನೆಲ್ಲ ಆರೋನನಿಗೆ ತಿಳಿಸಿದನು. |
೨೯ |
ತರುವಾಯ ಅವರಿಬ್ಬರು ಹೋಗಿ ಇಸ್ರಯೇಲರ ಹಿರಿಯರನ್ನೆಲ್ಲ ಕೂಡಿಸಿದರು. |
೩೦ |
ಮೋಶೆಗೆ ಸರ್ವೇಶ್ವರ ಹೇಳಿದ ಮಾತುಗಳನ್ನೆಲ್ಲ ಆರೋನನು ಆ ಜನರಿಗೆ ತಿಳಿಸಿದನು. ಮೋಶೆ ಅವರ ಮುಂದೆ ಆ ಸೂಚಕಕಾರ್ಯಗಳನ್ನು ಮಾಡಿದನು. ಜನರು ನಂಬಿದರು. |
೩೧ |
ಸರ್ವೇಶ್ವರ ಸ್ವಾಮಿ ತಮ್ಮನ್ನು ಭೇಟಿಮಾಡಿ ತಮ್ಮ ದುರವಸ್ಥೆಯನ್ನು ಮನಸ್ಸಿಗೆ ತಂದುಕೊಂಡಿದ್ದಾರೆಂದು ತಿಳಿದ ಆ ಇಸ್ರಯೇಲರು ತಲೆಬಾಗಿ ಆರಾಧಿಸಿದರು.
|
Kannada Bible (KNCL) 2016 |
No Data |