೧ |
ಮೋಶೆ ಇಸ್ರಯೇಲರ ಸಮಾಜವನ್ನೆಲ್ಲ ಸೇರಿಸಿ ಅವರಿಗೆ, “ನೀವು ಅನುಸರಿಸಬೇಕೆಂದು ಸರ್ವೇಶ್ವರ ಹೀಗೆ ಆಜ್ಞಾಪಿಸಿದ್ದಾರೆ: |
೨ |
ಆರು ದಿನಗಳು ದುಡಿಯಬೇಕು. ಏಳನೆಯ ದಿನ ಪರಿಶುದ್ಧವಾದ ದಿನ. ಅದು ಸರ್ವೇಶ್ವರನಿಗೆ ಮೀಸಲಾದ ಸಬ್ಬತ್ ದಿನ. ಆದ್ದರಿಂದ ನೀವು ಸಂಪೂರ್ಣವಾಗಿ ದುಡಿಮೆ ನಿಲ್ಲಿಸಬೇಕು. ಆ ದಿನ ದುಡಿಯುವವನಿಗೆ ಮರಣದಂಡನೆಯಾಗಬೇಕು. |
೩ |
ನೀವು ವಾಸಿಸುವ ಯಾವ ಮನೆಯಲ್ಲೇ ಆಗಲಿ, ಸಬ್ಬತ್ ದಿನದಂದು ಬೆಂಕಿಯನ್ನು ಹೊತ್ತಿಸಬಾರದು,” ಎಂದು ಹೇಳಿದನು. |
೪ |
ಮೋಶೆ ಇಸ್ರಯೇಲರ ಇಡೀ ಸಮಾಜವನ್ನು ಉದ್ದೇಶಿಸಿ: “ಸರ್ವೇಶ್ವರನ ಆಜ್ಞೆ ಇದು: ನೀವು ನಿಮ್ಮ ನಿಮ್ಮ ಆಸ್ತಿಪಾಸ್ತಿಯಿಂದ ಸರ್ವೇಶ್ವರನಿಗೆ ಕಾಣಿಕೆಯನ್ನು ಕೊಡಬೇಕು. ಮನಃಪೂರ್ವಕವಾಗಿ ಕೊಡಬೇಕು. ಸರ್ವೇಶ್ವರನಿಗೆ ತರಬೇಕಾದಂಥ ಕಾಣಿಕೆಗಳು ಇವು: ಚಿನ್ನ, ಬೆಳ್ಳಿ, ತಾಮ್ರ, |
೫ |
ನೀಲಿ, ಊದ, ಕಡುಗೆಂಪುವರ್ಣಗಳುಳ್ಳ ದಾರಗಳು, |
೬ |
ನಯವಾದ ನಾರುಬಟ್ಟೆಗಳು, ಆಡುಕೂದಲಿನ ಬಟ್ಟೆಗಳು, |
೭ |
ಹದಮಾಡಿದ ಕೆಂಪುಬಣ್ಣದ ಕುರಿದೊಗಲುಗಳು, ಕಡಲು ಹಂದಿಯ ತೊಗಲುಗಳು, ಜಾಲೀಮರ, |
೮ |
ದೀಪಕ್ಕೆ ಬೇಕಾದ ಎಣ್ಣೆ, ಅಭಿಷೇಕತೈಲಕ್ಕೆ ಹಾಗು ಪರಿಮಳಧೂಪಕ್ಕೆ ಬೇಕಾದ ಸುಗಂಧ ದ್ರವ್ಯಗಳು |
೯ |
ಮಹಾಯಾಜಕನ ಕವಚಕ್ಕೆ ಬೇಕಾದ ರತ್ನಗಳು ಮತ್ತು ವಕ್ಷಪದಕದಲ್ಲಿ ಖಚಿಸಬೇಕಾದ ನಾನಾ ರತ್ನಗಳು. |
೧೦ |
“ನಿಮ್ಮಲ್ಲಿರುವ ಶಿಲ್ಪಕಾರರೆಲ್ಲರು ಬಂದು ಸರ್ವೇಶ್ವರನು ಆಜ್ಞಾಪಿಸಿದವುಗಳನ್ನೆಲ್ಲ ಮಾಡಬೇಕು. |
೧೧ |
ಅವರು ಮಾಡಬೇಕಾದುವುಗಳು ಇವು: ದೇವದರ್ಶನದ ಗುಡಾರ, |
೧೨ |
ಅದರ ಮೇಲ್ಹೊದಿಕೆಗಳು, ಕೊಂಡಿಗಳು, ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೆ ಕಲ್ಲುಗಳು, ಕೃಪಾಸನ, ಅದನ್ನು ಮರೆಮಾಡುವ ತೆರೆ, |
೧೩ |
ಮೇಜು, ಅದರ ಗದ್ದಿಗೆಗಳು, ಅದರ ಉಪಕರಣಗಳು, ಅದರ ಮೇಲೆ ಇಡತಕ್ಕ ಕಾಣಿಕೆಯ ರೊಟ್ಟಿಗಳು, |
೧೪ |
ದೀಪವೃಕ್ಷ ಅದರ ಉಪಕರಣಗಳು, ಹಣತೆಗಳು, ದೀಪಕ್ಕೆ ಬೇಕಾದ ಎಣ್ಣೆ, ಧೂಪವೇದಿಕೆ, ಅದರ ಗದ್ದಿಗೆಗಳು, |
೧೫ |
ಅಭಿಷೇಕ ತೈಲ, ಪರಿಮಳ ದ್ರವ್ಯ, ಗುಡಾರದ ಬಾಗಿಲಿನ ಪರದೆ, |
೧೬ |
ಬಲಿಪೀಠ, ಅದರ ತಾಮ್ರದ ಜಾಳಿಗೆ, ಗದ್ದಿಗೆಗಳು, ಉಪಕರಣಗಳು, ನೀರಿನ ತೊಟ್ಟಿ, ಅದರ ಪೀಠ, ಅಂಗಳದ ತೆರೆಗಳು, ಕಂಬಗಳು, |
೧೭ |
ಗದ್ದಿಗೆ ಕಲ್ಲುಗಳು, |
೧೮ |
ಅಂಗಳದ ಬಾಗಿಲಿನ ಪರದೆ, ಗುಡಾರದ ಗೂಟಗಳು, ಅಂಗಳದ ಗೂಟಗಳು, ಅವುಗಳ ಹಗ್ಗಗಳು, |
೧೯ |
ಪವಿತ್ರಸ್ಥಾನದ ಸೇವೆಗೆ ಸುಂದರವಾದ ದೀಕ್ಷಾವಸ್ತ್ರಗಳು, ಅಂದರೆ ಮಹಾಯಾಜಕ ಆರೋನನಿಗೆ ಹಾಗು ಅವನ ಮಕ್ಕಳಿಗೆ ಬೇಕಾದ ವಸ್ತ್ರಗಳು.” |
೨೦ |
ಇದಾದ ಮೇಲೆ ಇಸ್ರಯೇಲರ ಸಮಾಜದವರೆಲ್ಲರು ಮೋಶೆಯ ಹತ್ತಿರದಿಂದ ಹೊರಟುಹೋದರು. |
೨೧ |
ಅವರಲ್ಲಿ ಉದಾರ ಹೃದಯಿಗಳು ಸ್ವಂತ ಇಷ್ಟದಿಂದ ಮುಂದೆ ಬಂದು ದೇವದರ್ಶನದ ಗುಡಾರದ ಕೆಲಸಕ್ಕೂ, ಅದರ ಸಮಸ್ತ ಸೇವೆಗೂ ಹಾಗೂ ದೀಕ್ಷಾವಸ್ತ್ರಗಳಿಗೂ ಬೇಕಾದುವುಗಳನ್ನು ಸರ್ವೇಶ್ವರನಿಗೆ ಕಾಣಿಕೆಯಾಗಿ ತಂದರು. |
೨೨ |
ಹೆಂಗಸರು ಹಾಗು ಗಂಡಸರು ಧಾರಾಳ ಮನಸ್ಸಿನಿಂದ ಸರ್ವೇಶ್ವರನಿಗೆ ಚಿನ್ನದ ಕಾಣಿಕೆಗಳನ್ನು, ಅಂದರೆ ಕಡಗ, ಮೂಗುತಿ, ಮುದ್ರೆಯುಂಗುರ, ಕಂಠಮಾಲೆ ಮೊದಲಾದ ಚಿನ್ನದ ಒಡವೆಗಳನ್ನು ಸಮರ್ಪಿಸಿದರು. |
೨೩ |
ಯಾರಲ್ಲಿ ನೀಲಿ, ಧೂಮ, ಹಾಗು ರಕ್ತವರ್ಣಗಳುಳ್ಳ ದಾರಗಳು, ನಯವಾದ ನಾರುಬಟ್ಟೆ, ಆಡುಕೂದಲಿನ ಬಟ್ಟೆ, ಹದಮಾಡಿದ ಕೆಂಪುಬಣ್ಣದ ಕುರಿದೊಗಲು ಹಾಗು ಕಡಲುಹಂದಿಯ ತೊಗಲು ಇದ್ದವೋ ಅವರು ಅವುಗಳನ್ನು ತಂದುಕೊಟ್ಟರು. |
೨೪ |
ಯಾರಲ್ಲಿ ಬೆಳ್ಳಿ ಇಲ್ಲವೆ ತಾಮ್ರ ಇತ್ತೋ ಅವರು ಅವುಗಳನ್ನೇ ತಂದು ಸರ್ವೇಶ್ವರನಿಗೆ ಸಮರ್ಪಿಸಿದರು. ಯಾರ ಬಳಿಯಲ್ಲಿ ಗುಡಾರದ ಕೆಲಸಕ್ಕೆ ಬೇಕಾದ ಜಾಲೀಮರವಿತ್ತೋ ಅವರು ಅದನ್ನು ತಂದುಕೊಟ್ಟರು. |
೨೫ |
ನಿಪುಣೆಯರಾದ ಮಹಿಳೆಯರು ತಮ್ಮ ಕೈಗಳಿಂದ ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ನೂಲನ್ನು ಹಾಗು ನಯವಾದ ನಾರಿನ ನೂಲನ್ನು ನೇಯ್ದು ಆ ನೂಲುಗಳನ್ನು ತಂದುಕೊಟ್ಟರು. |
೨೬ |
ನಿಪುಣೆಯರಾದ ಬೇರೆ ಮಹಿಳೆಯರು ಆಡಿನ ತುಪ್ಪಟವನ್ನು ನೇಯ್ದು ತಂದುಕೊಟ್ಟರು. |
೨೭ |
ಜನನಾಯಕರು ಮಹಾಯಾಜಕನ ಕವಚಕ್ಕೆ ಬೇಕಾದ ಗೋಮೇಧಕ ರತ್ನಗಳನ್ನು, ವಕ್ಷ ಕವಚದಲ್ಲಿ ಖಚಿಸಬೇಕಾದ ರತ್ನಗಳನ್ನು, |
೨೮ |
ದೀಪಕ್ಕೆ ಬೇಕಾದ ಎಣ್ಣೆಯನ್ನು, ಅಭಿಷೇಕ ತೈಲಕ್ಕೆ ಮತ್ತು ಪರಿಮಳ ಧೂಪಕ್ಕೆ ಬೇಕಾದ ಸುಗಂಧ ದ್ರವ್ಯಗಳನ್ನು ತಂದುಕೊಟ್ಟರು. |
೨೯ |
ಮೋಶೆಯ ಮುಖಾಂತರ ಸರ್ವೇಶ್ವರ ಆಜ್ಞಾಪಿಸಿದ ಎಲ್ಲ ಕೆಲಸಕಾರ್ಯಗಳಿಗೆ ಬೇಕಾದವುಗಳನ್ನು ಇಸ್ರಯೇಲಿನ ಸ್ತ್ರೀಪುರುಷರೆಲ್ಲರು ಹೃದಯಪೂರ್ವಕವಾಗಿಯೇ ತಂದೊಪ್ಪಿಸಿದರು. |
೩೦ |
ಮೋಶೆ ಇಸ್ರಯೇಲರಿಗೆ ಹೀಗೆಂದನು: “ಸರ್ವೇಶ್ವರ ಸ್ವಾಮಿ ಯೆಹೂದ ಕುಲದವನಾದ ಹೂರನ ಮೊಮ್ಮಗನೂ ಊರಿಯ ಮಗನೂ ಆದ ಬೆಚಲೇಲನೆಂಬುವನನ್ನು ಹೆಸರಿಸಿ ಆಯ್ಕೆ ಮಾಡಿದ್ದಾರೆ. ನಯನವಿರಾದ ಕೆಲಸಗಳನ್ನು ನಿಯೋಜಿಸುವುದಕ್ಕೂ, |
೩೧ |
ಚಿನ್ನ, ಬೆಳ್ಳಿ, ತಾಮ್ರಗಳಿಂದ ಕೆಲಸ ನಡೆಸುವುದಕ್ಕೂ, ರತ್ನಗಳನ್ನು ಕೆತ್ತುವುದಕ್ಕೂ, ಮರದಲ್ಲಿ ವಿಚಿತ್ರ ಕೆತ್ತನೆ ಕೆಲಸ ಮಾಡುವುದಕ್ಕೂ |
೩೨ |
ಬೇರೆ ವಿವಿಧ ಶೃಂಗಾರದ ಕೆಲಸ ಮಾಡುವುದಕ್ಕೂ ಅವನನ್ನು ಆರಿಸಿಕೊಂಡಿದ್ದಾರೆ. |
೩೩ |
ಅವನಿಗೆ ದೈವಾತ್ಮಶಕ್ತಿಯನ್ನು ಕೊಟ್ಟು ಬೇಕಾದ ಜ್ಞಾನ, ವಿದ್ಯೆ, ವಿವೇಕ ಇವುಗಳನ್ನೂ ಸಕಲ ಶಿಲ್ಪಶಾಸ್ತ್ರಜ್ಞಾನವನ್ನೂ ಅನುಗ್ರಹಿಸಿದ್ದಾರೆ. |
೩೪ |
ಅದೂ ಅಲ್ಲದೆ, ಮತ್ತೊಬ್ಬರಿಗೆ ಕಲಿಸಿಕೊಡುವುದಕ್ಕೆ ಸಹ ಅವನಿಗೆ ಮತ್ತು ದಾನ್ಕುಲದ ಅಹೀಸಾಮಾಕನ ಮಗ ಒಹೋಲೀಯಾಬನಿಗೆ ವಿಶೇಷ ವರವನ್ನು ಕೊಟ್ಟಿದ್ದಾರೆ. |
೩೫ |
ಶಿಲ್ಪಿಗಳು, ಚಮತ್ಕಾರವಾದ ಕೆಲಸ ನಿಯೋಜಿಸುವವರು ಹಾಗು ನೀಲಿ, ಊದ ಹಾಗು ಕಡುಗೆಂಪು ವರ್ಣದ ದಾರದಿಂದಲೂ ನಯವಾದ ನಾರುಬಟ್ಟೆಯಿಂದಲೂ ಕಸೂತಿ ಕೆಲಸ ಮಾಡುವವರು, ನೇಯುವವರು, ಅಂತೂ ಎಲ್ಲ ಕಸುಬುದಾರರು ನಡೆಸುವ ಕೆಲಸಗಳನ್ನು ನಿಯೋಜಿಸುವುದಕ್ಕೂ ಹಾಗು ಕಾರ್ಯಗತ ಮಾಡುವುದಕ್ಕೂ ಸರ್ವೇಶ್ವರ ಅವರಿಗೆ ಜ್ಞಾನವನ್ನು ಪೂರ್ತಿಯಾಗಿ ಅನುಗ್ರಹಿಸಿದ್ದಾರೆ.
|
Kannada Bible (KNCL) 2016 |
No Data |