೧ |
“ಸುಗಂಧದ್ರವ್ಯಗಳಿಂದ ಧೂಪ ಹಾಕುವುದಕ್ಕಾಗಿ ಜಾಲೀಮರದ ಒಂದು ವೇದಿಕೆಯನ್ನು ಮಾಡಿಸು. |
೨ |
ಅದು ಒಂದು ಮೊಳ ಉದ್ದ ಹಾಗು ಒಂದು ಮೊಳ ಅಗಲವಾಗಿದ್ದು ಚಚ್ಚೌಕವಾಗಿರಲಿ. ಅದರ ಎತ್ತರ ಎರಡು ಮೊಳವಿರಲಿ. ಅದರ ಕೊಂಬುಗಳು ಅದರ ಅಂಗಾಂಗವಾಗಿರಲಿ. |
೩ |
ಅದರ ಮೇಲ್ಭಾಗಕ್ಕೂ, ನಾಲ್ಕು ಪಕ್ಕಗಳಿಗೂ ಹಾಗು ಕೊಂಬುಗಳಿಗೂ ಚೊಕ್ಕಬಂಗಾರದ ತಗಡುಗಳನ್ನು ಹೊದಿಸಬೇಕು. ಸುತ್ತಲು ಚಿನ್ನದ ತೋರಣ ಕಟ್ಟಿಸಬೇಕು. |
೪ |
ಅದರ ಕೆಳಗೆ ವೇದಿಕೆಯ ಎರಡು ಪಕ್ಕಗಳಲ್ಲಿ ಎರಡೆರಡು ಚಿನ್ನದ ಬಳೆಗಳನ್ನು ಮೂಲೆಗಳಲ್ಲಿಯೇ ಹಾಕಿಸಬೇಕು. ವೇದಿಕೆಯನ್ನು ಹೊರುವುದಕ್ಕೆ ಗುದಿಗೆಗಳನ್ನು ಅವುಗಳಲ್ಲಿ ಸೇರಿಸಬೇಕು. |
೫ |
ಆ ಗುದಿಗೆಗಳನ್ನು ಜಾಲೀಮರದಿಂದ ಮಾಡಿಸಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಬೇಕು. |
೬ |
ಆಜ್ಞಾಶಾಸನಗಳಿರುವ ಮಂಜೂಷದ ಮುಂದೆ ಇರುವ ತೆರೆಗೆ ಎದುರಾಗಿ ಅಂದರೆ ಆಜ್ಞಾಶಾಸನಗಳ ಮೇಲಿರುವಂಥ ಹಾಗು ನಾನು ನಿನಗೆ ದರ್ಶನ ಕೊಡುವಂಥ ಕೃಪಾಸನದ ಮುಂದೆ ಅದನ್ನು ಇರಿಸಬೇಕು. |
೭ |
ಆರೋನನು ಪ್ರತಿನಿತ್ಯವು ಬೆಳಿಗ್ಗೆ ದೀಪಗಳನ್ನು ಸರಿಪಡಿಸುವಾಗ ಹಾಗು ಸಂಜೆದೀಪಗಳನ್ನು ಹೊತ್ತಿಸುವಾಗ ಆ ವೇದಿಕೆಯ ಮೇಲೆ ಸುಗಂಧದ್ರವ್ಯಗಳಿಂದ ಧೂಪವನ್ನು ಹಾಕಬೇಕು. |
೮ |
ಹೀಗೆ ನಿಮ್ಮಿಂದ ಮತ್ತು ನಿಮ್ಮ ಸಂತತಿಯವರಿಂದ ಸರ್ವೇಶ್ವರನಾದ ನನ್ನ ಸನ್ನಿಧಿಯಲ್ಲಿ ಎಡೆಬಿಡದೆ ಧೂಪಾರ್ಪಣೆ ಇರಬೇಕು. |
೯ |
ಆ ವೇದಿಕೆಯ ಮೇಲೆ ಬೇರೆ ಯಾವ ಅಪವಿತ್ರ ಧೂಪವನ್ನೂ ಹಾಕಕೂಡದು. ಅದರ ಮೇಲೆ ದಹನಬಲಿಯನ್ನಾಗಲಿ, ಅನ್ನಪಾನ ದ್ರವ್ಯಗಳನ್ನಾಗಲಿ ಅರ್ಪಿಸಕೂಡದು. |
೧೦ |
ಆರೋನನು ಮತ್ತು ಅವನ ಸಂತತಿಯವರು ವರ್ಷಕ್ಕೊಮ್ಮೆ ಪಾಪಪರಿಹಾರಕ ಯಜ್ಞಪಶುವಿನ ರಕ್ತವನ್ನು ಆ ವೇದಿಕೆಯ ಕೊಂಬುಗಳಿಗೆ ಹಚ್ಚಿ ಅದರ ವಿಷಯವಾಗಿ ದೋಷಪರಿಹಾರವನ್ನು ಮಾಡಬೇಕು. ಅದು ಸರ್ವೇಶ್ವರನಾದ ನನಗೆ ಪರಮ ಪವಿತ್ರವಾದುದು. |
೧೧ |
ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆಂದು ಹೇಳಿದರು: |
೧೨ |
“ನೀನು ಇಸ್ರಯೇಲರ ಜನಗಣತಿ ಮಾಡುವಾಗ ಲೆಕ್ಕಿಸಬೇಕಾದ ಪ್ರತಿಯೊಬ್ಬನು ತನ್ನ ತನ್ನ ಪ್ರಾಣಕ್ಕೆ ಈಡಾಗಿ ಸರ್ವೇಶ್ವರನಾದ ನನಗೆ ತೆರಿಗೆಯನ್ನು ಕೊಡಬೇಕು. ಆಗ ಅವರಿಗೆ ಯಾವ ವಿಪತ್ತು ಸಂಭವಿಸದು. |
೧೩ |
ಲೆಕ್ಕಿತರಾದವರಲ್ಲಿ ಪ್ರತಿಯೊಬ್ಬನು ನನಗೆ ಅರ್ಧ ಶೆಕೆಲ್ ನಾಣ್ಯದ ಮೇರೆಗೆ ತೆರಿಗೆ ಕಟ್ಟಬೇಕು. ದೇವರ ಸೇವೆಗೆ ನೇಮಕವಾದ ಇಪ್ಪತ್ತು ‘ಗೇರಾ’ ತೂಕದ ನಾಣ್ಯದ ಮೇರೆಗೆ ಅರ್ಧರ್ಧ ನಾಣ್ಯವನ್ನು ತೆರಿಗೆಯಾಗಿ ಕೊಡಬೇಕು. |
೧೪ |
ಜನಗಣತಿಯಲ್ಲಿ ಸೇರಿಸಲಾದ ಇಪ್ಪತ್ತು ವರ್ಷದ ಹಾಗು ಅದಕ್ಕೂ ಹೆಚ್ಚು ವಯಸ್ಸಿನವರು ಈ ತೆರಿಗೆಯನ್ನು ನನಗೆ ಕಟ್ಟಬೇಕು. |
೧೫ |
ಪ್ರಾಣರಕ್ಷಣೆಯ ಈ ತೆರಿಗೆಯನ್ನು ನನಗೆ ಕೊಡುವವರಲ್ಲಿ ಐಶ್ವರ್ಯವಂತರು ಅರ್ಧನಾಣ್ಯಕ್ಕಿಂತ ಹೆಚ್ಚು ಕೊಡಬಾರದು; ಬಡವರು ಕಮ್ಮಿ ಕೊಡಬಾರದು. |
೧೬ |
ಪ್ರಾಣರಕ್ಷಣೆಯ ಈ ಹಣವನ್ನು ನೀನು ಇಸ್ರಯೇಲರಿಂದ ಶೇಖರಿಸಿ ದೇವದರ್ಶನದ ಗುಡಾರದ ಸೇವೆಗೆ ಉಪಯೋಗಿಸು. ಇಸ್ರಯೇಲರ ಪ್ರಾಣವನ್ನು ಉಳಿಸಬೇಕೆಂಬುದಾಗಿ ಈ ತೆರಿಗೆ ಸರ್ವೇಶ್ವರನಾದ ನನ್ನ ಸನ್ನಿಧಿಯಲ್ಲಿ ಜ್ಞಾಪಕಪಡಿಸುವುದು.” |
೧೭ |
ಸರ್ವೇಶ್ವರ ಮೋಶೆಗೆ ಮತ್ತೆ ಹೀಗೆಂದರು: |
೧೮ |
“ಸ್ನಾನಕ್ಕಾಗಿ ಒಂದು ತಾಮ್ರದ ತೊಟ್ಟಿಯನ್ನು ಕಟ್ಟಿಸು. ಅದನ್ನು ಇಡಲು ಒಂದು ತಾಮ್ರದ ಪೀಠವನ್ನು ಮಾಡಿಸು. ದೇವದರ್ಶನದ ಗುಡಾರಕ್ಕೂ ಬಲಿಪೀಠಕ್ಕೂ ನಡುವೆ ಅದನ್ನಿಟ್ಟು ಅದರಲ್ಲಿ ನೀರನ್ನು ತುಂಬಿಸಿಡಬೇಕು. |
೧೯ |
ಆರೋನನು ಮತ್ತು ಅವನ ಮಕ್ಕಳು ಅದರಿಂದ ಕೈಕಾಲುಗಳನ್ನು ತೊಳೆದುಕೊಳ್ಳಬೇಕು. |
೨೦ |
ಅವರು ದೇವದರ್ಶನದ ಗುಡಾರಕ್ಕೆ ಹೋಗುವಾಗಲೆಲ್ಲಾ ಆ ನೀರಿನಿಂದ ಕೈಕಾಲುಗಳನ್ನು ತೊಳೆದುಕೊಂಡು ಹೋಗಬೇಕು. ತೊಳೆಯದೆ ಹೋದರೆ ಸಾಯುವರು. ಹಾಗೆಯೇ ಅವರು ದೇವರ ಸೇವೆಗೈಯುವವರಾಗಿ ಸರ್ವೇಶ್ವರನಾದ ನನಗೆ ದಹನ ಬಲಿಯರ್ಪಿಸಲು ಬಲಿಪೀಠದ ಬಳಿಗೆ ಬರುವಾಗಲೂ ಕೈಕಾಲುಗಳನ್ನು ತೊಳೆದುಕೊಂಡು ಬರಬೇಕು. |
೨೧ |
ತೊಳೆದುಕೊಳ್ಳದೆ ಬಂದರೆ ಸಾಯುವರು. ಇದು ಅವನಿಗೂ ಅವನ ಸಂತತಿಯವರಿಗೂ ಶಾಶ್ವತವಾದ ನಿಯಮ. |
೨೨ |
ಇದೂ ಅಲ್ಲದೆ ಸರ್ವೇಶ್ವರ ಮೋಶೆಗೆ ಇಂತೆಂದರು: |
೨೩ |
“ಸುಗಂಧ ದ್ರವ್ಯಗಳಲ್ಲಿ ದೇವರ ಸೇವೆಗೆ ನೇಮಕವಾದ ತೂಕದ ಮೇರೆಗೆ ಆರು ಕಿಲೋಗ್ರಾಂ ಅಚ್ಚರಕ್ತಬೋಳ, ಮೂರು ಕಿಲೋಗ್ರಾಂ ಶ್ರೇಷ್ಠವಾದ ಲವಂಗಚಕ್ಕೆ, ಮೂರು ಕಿಲೋಗ್ರಾಂ ಸುಗಂಧವಾದ ಬಜೆ ಹಾಗು ಆರು ಕಿಲೋಗ್ರಾಂ ದಾಲ್ಚಿನ್ನಿಯನ್ನು ತೆಗೆದುಕೊಳ್ಳಬೇಕು. |
೨೪ |
ಅದಕ್ಕೆ ನಾಲ್ಕು ಲೀಟರು ಓಲಿವ್ ಎಣ್ಣೆಯನ್ನು ಕೂಡಿಸಬೇಕು. |
೨೫ |
ಬುಕ್ಕಿಟ್ಟುಗಾರರ ಪದ್ಧತಿಯ ಮೇರೆಗೆ ಇವುಗಳನ್ನು ಮಿಶ್ರಮಾಡಿ ದೇವರ ಸೇವೆಗಾಗಿ ಅಭಿಷೇಕ ತೈಲವನ್ನು ತಯಾರಿಸಬೇಕು. |
೨೬ |
ಅದರಿಂದ ದೇವದರ್ಶನದ ಗುಡಾರ, ಆಜ್ಞಾಶಾಸನಗಳ ಮಂಜೂಷ, ಮೇಜು, ಮೇಜಿನ ಉಪಕರಣಗಳು, |
೨೭ |
ದೀಪವೃಕ್ಷ, ದೀಪವೃಕ್ಷದ ಉಪಕರಣಗಳು, ಧೂಪವೇದಿಕೆ, |
೨೮ |
ಬಲಿಪೀಠ, ಬಲಿಪೀಠದ ಉಪಕರಣಗಳು, ನೀರಿನ ತೊಟ್ಟಿ ಹಾಗು ಅದರ ಪೀಠ ಇವುಗಳನ್ನೆಲ್ಲ ಅಭಿಷೇಕಿಸಬೇಕು. |
೨೯ |
ಅವು ಅತಿ ಪರಿಶುದ್ಧವಾಗುವಂತೆ ಪ್ರತಿಷ್ಠಿಸಬೇಕು. ಅವುಗಳಿಗೆ ಸೋಕಿದ್ದೆಲ್ಲವು ಪರಿಶುದ್ಧವಾಗುವುದು. |
೩೦ |
ಅಲ್ಲದೆ ಆರೋನನು ಅವನ ಮಕ್ಕಳೂ ನನಗೆ ಯಾಜಕರಾಗುವಂತೆ ಅವರನ್ನೂ ಅಭಿಷೇಕಿಸಿ ಪ್ರತಿಷ್ಠಿಸಬೇಕು. |
೩೧ |
ನೀನು ಇಸ್ರಯೇಲರಿಗೆ, ‘ನೀವು ಮತ್ತು ನಿಮ್ಮ ಸಂತತಿಯವರು ಈ ತೈಲವನ್ನು ನನ್ನ ಸೇವೆಗೆ ನೇಮಕವಾದ ಅಭಿಷೇಕ ತೈಲವೆಂದು ತಿಳಿದುಕೊಳ್ಳಬೇಕು. |
೩೨ |
ಮೈಗೆ ಹಚ್ಚಿಕೊಳ್ಳುವುದಕ್ಕೆ ಇದನ್ನು ಉಪಯೋಗಿಸಬಾರದು. ಈ ವಿಧಾನವನ್ನು ಅನುಸರಿಸಿ ಬೇರೆ ಕಾರ್ಯಕ್ಕಾಗಿ ತೈಲವನ್ನು ತಯಾರಿಸಲೇ ಕೂಡದು. ಇದು ದೇವರ ವಸ್ತು. ಇದು ಮೀಸಲೆಂದು ನೀವು ತಿಳಿದುಕೊಳ್ಳಬೇಕು. |
೩೩ |
ಇದರಂತೆ ತೈಲವನ್ನು ಮಾಡುವವನು ಹಾಗು ಇದನ್ನು ಯಾಜಕನಲ್ಲದವನ ಮೇಲೆ ಹಚ್ಚುವವನು ತನ್ನ ಕುಲದಿಂದ ಬಹಿಷ್ಕೃತನಾಗಬೇಕು. |
೩೪ |
ಸರ್ವೇಶ್ವರ ಮೋಶೆಗೆ ಮತ್ತೆ ಆಜ್ಞಾಪಿಸಿದ್ದೇನೆಂದರೆ: “ನೀನು ಹಾಲುಮಡ್ಡಿ, ಗುಗ್ಗುಲ ಹಾಗು ಗಂಧದಚೆಕ್ಕೆ ಎಂಬ ಪರಿಮಳ ದ್ರವ್ಯಗಳನ್ನು ಮತ್ತು ಸ್ವಚ್ಚವಾದ ಧೂಪವನ್ನು ಸಮಭಾಗವಾಗಿ ತೆಗೆದುಕೊಂಡು ಸುವಾಸನೆಯುಳ್ಳ ಬುಕ್ಕಿಟ್ಟಾಗಿರುವಂತೆ |
೩೫ |
ಪರಿಮಳದ್ರವ್ಯಕಾರರು ಮಾಡುವಂತೆ ಕಲಸಿ, ಉಪ್ಪು ಹಾಕಿ, ದೇವರ ಸೇವೆಗೆ ಸ್ವಚ್ಚವಾದ ಧೂಪದ್ರವ್ಯವನ್ನು ಮಾಡಿಸಬೇಕು. |
೩೬ |
ಅದರಲ್ಲಿ ಸ್ವಲ್ಪವನ್ನು ಪುಡಿಮಾಡಿಸಿ ದೇವದರ್ಶನ ಗುಡಾರದೊಳಗೆ ಆಜ್ಞಾಶಾಸನಗಳಿರುವ ಮಂಜೂಷದ ಎದುರಾಗಿ ನಾನು ನಿನಗೆ ದರ್ಶನಕೊಡುವ ಸ್ಥಳದಲ್ಲಿ ಇಡಬೇಕು. |
೩೭ |
ನೀವು ಆ ಧೂಪದ್ರವ್ಯದ ವಿಧಾನದ ಮೇರೆಗೆ ನಿಮ್ಮ ಸ್ವಂತ ಉಪಯೋಗಕ್ಕೋಸ್ಕರ ಧೂಪದ್ರವ್ಯವನ್ನು ಮಾಡಿಸಲೇಬಾರದು. ಅದು ಸರ್ವೇಶ್ವರನಾದ ನನ್ನ ಸೇವೆಗೆ ಮಾತ್ರ ಉಪಯೋಗಿಸಬೇಕಾದ, ಮೀಸಲಾದ ಪದಾರ್ಥವೆಂದು ಭಾವಿಸಬೇಕು. |
೩೮ |
ಕೇವಲ ಸುವಾಸನೆಗಾಗಿ ಅಂಥದ್ದನ್ನು ಮಾಡಿಕೊಳ್ಳುವವನನ್ನು ಅವನ ಕುಲದಿಂದ ಬಹಿಷ್ಕರಿಸಬೇಕು.”
|
Kannada Bible (KNCL) 2016 |
No Data |