೧ |
ಈಜಿಪ್ಟ್ ದೇಶದಲ್ಲಿ ಸರ್ವೇಶ್ವರ ಸ್ವಾಮಿ ಮೋಶೆ ಮತ್ತು ಆರೋನನ ಸಂಗಡ ಮಾತನಾಡಿ ಹೀಗೆಂದರು: |
೨ |
“ಎಲ್ಲ ಮಾಸಗಳಲ್ಲಿ ಇದೇ ನಿಮಗೆ ಆದಿ ಮಾಸವಾಗಿರಬೇಕು. ಇದೇ ನಿಮಗೆ ಪ್ರತಿ ವರ್ಷದ ಮೊದಲನೆಯ ತಿಂಗಳಾಗಿರಬೇಕು. |
೩ |
ಈ ವಿಷಯದಲ್ಲಿ ನೀವು ಇಸ್ರಯೇಲರ ಸಮಾಜಕ್ಕೆಲ್ಲ ಈ ರೀತಿ ಕಟ್ಟಳೆಯಿಡಬೇಕು: ‘ಈ ತಿಂಗಳ ಹತ್ತನೆಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊಂದು ಮನೆಯವರು ಒಂದೊಂದು ಕುರಿಮರಿಯನ್ನಾಗಲಿ, ಆಡುಮರಿಯನ್ನಾಗಲಿ ಆರಿಸಿಕೊಳ್ಳಬೇಕು. |
೪ |
ಕುಟುಂಬವು ಚಿಕ್ಕದಾಗಿದ್ದು ಒಂದು ಮರಿಯನ್ನು ಪೂರ್ತಿಯಾಗಿ ತಿನ್ನಲಾಗದಿದ್ದರೆ ಹತ್ತಿರದ ನೆರೆಮನೆಯ ಕುಟುಂಬದೊಂದಿಗೆ ಸೇರಿ ಒಬ್ಬೊಬ್ಬನು ಇಷ್ಟಿಷ್ಟು ತಿನ್ನುವನೆಂದು ಲೆಕ್ಕ ಹಾಕಿ ಜನಗಳ ಸಂಖ್ಯಾನುಸಾರ ಮರಿಗಳನ್ನು ಆರಿಸಿಕೊಳ್ಳಲಿ. |
೫ |
ಆ ಮರಿಯು ಯಾವ ದೋಷವೂ ಇಲ್ಲದ ಒಂದು ವರ್ಷದ ಗಂಡಾಗಿರಬೇಕು. ಕುರಿಗಳಿಂದಾಗಲಿ ಆಡುಗಳಿಂದಾಗಲಿ ಅದನ್ನು ಆರಿಸಿಕೊಳ್ಳಬಹುದು. |
೬ |
ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಂಡಿದ್ದು ಆ ದಿನದ ಸಂಜೆವೇಳೆಯಲ್ಲಿ ಇಸ್ರಯೇಲ್ ಸಮಾಜದವರೆಲ್ಲರು ತಮ್ಮ ತಮ್ಮ ಕೂಟಗಳಲ್ಲಿ ಕೊಯ್ಯಬೇಕು. |
೭ |
ಅವುಗಳ ರಕ್ತದಲ್ಲಿ ಸ್ವಲ್ಪ ತೆಗೆದು ತಾವು ಆ ಭೋಜನ ಮಾಡುವ ಮನೆಯ ಬಾಗಿಲಿನ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗೂ ಹಚ್ಚಬೇಕು. |
೮ |
ಆ ರಾತ್ರಿಯಲ್ಲೇ ಆ ಮಾಂಸವನ್ನು ತಿನ್ನಬೇಕು. ಅದನ್ನು ಬೆಂಕಿಯಲ್ಲಿ ಸುಟ್ಟು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿಯಾದ ಪಲ್ಯಗಳ ಸಮೇತ ಊಟಮಾಡಬೇಕು. |
೯ |
ಅದನ್ನು ಹಸಿಯಾಗಿಯೋ ಅಥವಾ ನೀರಿನಲ್ಲಿ ಬೇಯಿಸಿಯೋ ತಿನ್ನಕೂಡದು. ಅದನ್ನೆಲ್ಲಾ, ತಲೆ, ಕಾಲು, ಒಳ ಭಾಗಗಳ ಸಹಿತವಾಗಿ, ಬೆಂಕಿಯಲ್ಲಿ ಸುಟ್ಟೇ ತಿನ್ನಬೇಕು. |
10 |
ಮರುದಿನದ ಬೆಳಗಿನ ತನಕ ಅದರಲ್ಲಿ ಸ್ವಲ್ಪವನ್ನಾದರು ಮಿಗಿಸಕೂಡದು. ಬೆಳಗಿನವರೆಗೆ ಮಿಕ್ಕದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು. |
11 |
ಆ ಭೋಜನವನ್ನು ಮಾಡಬೇಕಾದ ಕ್ರಮ ಇದು: ನೀವು ನಡುಕಟ್ಟಿಕೊಂಡು, ಕೆರಮೆಟ್ಟಿಕೊಂಡು ಊರುಗೋಲನ್ನು ಹಿಡಿದುಕೊಂಡು ಬೇಗ ಬೇಗನೆ ಊಟಮಾಡಬೇಕು. ಏಕೆಂದರೆ ಅದು ಸರ್ವೇಶ್ವರ ಸ್ವಾಮಿಗೆ ಆಚರಿಸತಕ್ಕ ಪಾಸ್ಕಹಬ್ಬ. |
12 |
ಆ ರಾತ್ರಿ ನಾನು ಈಜಿಪ್ಟ್ ದೇಶದ ನಡುವೆ ಹಾದುಹೋಗುವೆನು; ಮನುಷ್ಯರಾಗಲಿ, ಪ್ರಾಣಿಗಳಾಗಲಿ ಚೊಚ್ಚಲಾದುದೆಲ್ಲವನ್ನು ಸಂಹರಿಸುವೆನು. ಈಜಿಪ್ಟ್ ದೇಶದ ಸಮಸ್ತ ದೇವತೆಗಳನ್ನೂ ದಂಡಿಸುವೆನು. ನಾನೇ ಸರ್ವೇಶ್ವರ! |
13 |
ನೀವು ಬಾಗಿಲಿಗೆ ಹಚ್ಚಿದ ಆ ರಕ್ತವು ನೀವಿರುವ ಮನೆಗಳನ್ನು ಸೂಚಿಸುವುದು. ಅದನ್ನು ಕಂಡು ನಿಮಗೆ ಯಾವ ಹಾನಿಯನ್ನು ಮಾಡದೆ ಮುಂದಕ್ಕೆ ದಾಟಿಹೋಗುವೆನು. ನಾನು ಈಜಿಪ್ಟಿನವರನ್ನು ಸಂಹರಿಸುವಾಗ ನಿಮಗೆ ಯಾವ ಕೇಡೂ ಆಗದು. |
14 |
ಆ ದಿನವು ನಿಮಗೆ ಸ್ಮರಣೀಯ ದಿನವಾಗಿರುವುದು. ಅಂದು ನೀವು ಸರ್ವೇಶ್ವರನ ಗೌರವಾರ್ಥ ಹಬ್ಬವನ್ನು ಕೊಂಡಾಡಬೇಕು. ಅದನ್ನು ಶಾಶ್ವತ ನಿಯಮವೆಂದು ತಲತಲಾಂತರಕ್ಕೂ ಆಚರಿಸಬೇಕು. |
15 |
ಏಳು ದಿವಸ ನೀವು ಹುಳಿರಹಿತ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲೇ ಹುಳಿಹಿಟ್ಟನ್ನೆಲ್ಲಾ ನಿಮ್ಮ ಮನೆಗಳಿಂದ ತೆಗೆದುಬಿಡಬೇಕು. ಆ ಏಳು ದಿನಗಳಲ್ಲಿ ಯಾವನಾದರೂ ಹುಳಿಬೆರಸಿದ್ದನ್ನು ತಿಂದರೆ ಅವನನ್ನು ಇಸ್ರಯೇಲರಿಂದ ಬಹಿಷ್ಕರಿಸಬೇಕು. |
16 |
ಮೊದಲನೆಯ ದಿನದಲ್ಲೇ ದೇವಾರಾಧನೆಗಾಗಿ ಸಭೆ ಸೇರಬೇಕು. ಏಳನೆಯ ದಿನದಲ್ಲೂ ದೇವಾರಾಧನೆಗಾಗಿ ಸಭೆಸೇರಬೇಕು. ಈ ಎರಡೂ ದಿವಸಗಳಲ್ಲಿ ಯಾವ ಕೆಲಸವನ್ನೂ ಮಾಡಕೂಡದು. ಊಟಕ್ಕೆ ಬೇಕಾದುದನ್ನು ಮಾತ್ರ ಮಾಡಬಹುದು. |
17 |
ಹುಳಿರಹಿತ ರೊಟ್ಟಿಯನ್ನು ತಿನ್ನುವ ಹಬ್ಬವನ್ನು ನೀವು ಆಚರಿಸಬೇಕು. ಏಕೆಂದರೆ ಆ ದಿನದಲ್ಲೇ ನಾನು ನಿಮ್ಮ ಪಾಳೆಯದವರನ್ನು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದದ್ದು. ನೀವೂ ನಿಮ್ಮ ಸಂತತಿಯವರೂ ಆ ದಿನವನ್ನು ಆಚರಣೆಗೆ ತರಬೇಕು. |
18 |
ಮೊದಲನೇ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆಯಿಂದ ಇಪ್ಪತ್ತೊಂದನೆಯ ದಿನದ ಸಂಜೆಯವರೆಗೂ ನೀವು ಹುಳಿಯಿಲ್ಲದ ರೊಟ್ಟಿಗಳನ್ನೇ ತಿನ್ನಬೇಕು. |
19 |
ಏಳು ದಿನ ನಿಮ್ಮ ಮನೆಗಳಲ್ಲಿ ಹುಳಿಹಿಟ್ಟೇ ಇರಕೂಡದು. ಹುಳಿ ಬೆರಸಿದ್ದನ್ನು ತಿನ್ನುವವನು ಪರದೇಶದವನಾಗಿರಲಿ, ಸ್ವದೇಶದವನಾಗಿರಲಿ ಇಸ್ರಯೇಲ್ ಜನರಿಂದ ಬಹಿಷ್ಕೃತನು. |
20 |
ನೀವು ನಿಮ್ಮ ಎಲ್ಲಾ ಮನೆಗಳಲ್ಲಿ ಹುಳಿರಹಿತ ರೊಟ್ಟಿಗಳನ್ನು ತಿನ್ನಬೇಕೇ ಹೊರತು ಹುಳಿಸಹಿತವಾದ ಯಾವುದನ್ನೂ ತಿನ್ನಕೂಡದು,” ಎಂದು ವಿಧಿಸಿದರು. |
21 |
ಮೋಶೆ ಇಸ್ರಯೇಲರ ಹಿರಿಯರೆಲ್ಲರನ್ನು ಕರೆಯಿಸಿ ಅವರಿಗೆ, “ನೀವು ನಿಮ್ಮ ನಿಮ್ಮ ಕುಟುಂಬಗಳಿಗಾಗಿ ಹಿಂಡಿನಿಂದ ಮರಿಗಳನ್ನು ಆರಿಸಿಕೊಂಡು ಪಾಸ್ಕ ಹಬ್ಬಕ್ಕೆ ಕೊಯ್ಯಿರಿ. |
22 |
ಹಿಸ್ಸೋಪ್ ಗಿಡದ ಕುಚ್ಚನ್ನು ಬಟ್ಟಲಿನಲ್ಲಿರುವ ಆ ರಕ್ತದಲ್ಲಿ ಅದ್ದಿ ಬಾಗಿಲಿನ ಪಟ್ಟಿಗೂ ಅದರ ನಿಲುವು ಕಂಬಗಳೆರಡಕ್ಕೂ ಹಚ್ಚಿರಿ. ಬಳಿಕ ನಿಮ್ಮಲ್ಲಿ ಒಬ್ಬರೂ ಸೂರ್ಯೋದಯದವರೆಗೆ ಬಾಗಿಲಿನಿಂದ ಹೊರಗೆ ಹೋಗಕೂಡದು. |
23 |
ಸರ್ವೇಶ್ವರ ಈಜಿಪ್ಟಿನವರನ್ನು ವಧಿಸಲು ಆ ದೇಶದ ನಡುವೆ ಹಾದುಹೋಗುವಾಗ ನಿಮ್ಮ ನಿಮ್ಮ ಮನೆಬಾಗಲಿನ ಮೇಲ್ಪಟ್ಟಿಯಲ್ಲೂ ಹಾಗೂ ಎರಡು ನಿಲುವು ಕಂಬಗಳಲ್ಲೂ ಆ ರಕ್ತವನ್ನು ಕಂಡು ಮುಂದಕ್ಕೆ ದಾಟಿಹೋಗುವರು. ನಿಮ್ಮನ್ನು ವಧಿಸಲು ವಿನಾಶಕನನ್ನು ನಿಮ್ಮ ಮನೆಗಳಿಗೆ ಅವರು ಬರಗೊಡಿಸುವುದೇ ಇಲ್ಲ. |
24 |
ನೀವು ಮತ್ತು ನಿಮ್ಮ ಸಂತತಿಯವರು ಈ ನಿಯಮಗಳನ್ನು ಶಾಶ್ವತವಾಗಿ ಆಚರಿಸಬೇಕು. |
25 |
ಸರ್ವೇಶ್ವರ ತಮ್ಮ ವಾಗ್ದಾನದ ಮೇರೆಗೆ ನಿಮಗೆ ಕೊಡುವ ನಾಡಿಗೆ ನೀವು ಸೇರಿದಾಗ ಈ ವಿಧಿಯನ್ನು ಅನುಸರಿಸಬೇಕು. |
26 |
ಮುಂದಕ್ಕೆ ನಿಮ್ಮ ಮಕ್ಕಳು, ‘ನೀವು ನಡೆಸುವ ಈ ವಿಧಿಯ ಅರ್ಥವೇನು?’ ಎಂದು ಕೇಳಿದಾಗ ನೀವು ಅವರಿಗೆ, |
27 |
‘ಸರ್ವೇಶ್ವರ ಸ್ವಾಮಿ ಈಜಿಪ್ಟಿನವರನ್ನು ಸಂಹರಿಸಿದಾಗ ಆ ದೇಶದಲ್ಲೇ ಇದ್ದ ಇಸ್ರಯೇಲರ ಮನೆಗಳನ್ನು ಪ್ರವೇಶಿಸದೆ ಮುಂದಕ್ಕೆ ದಾಟಿ ನಮ್ಮವರನ್ನು ಉಳಿಸಿದರು. ಆದ್ದರಿಂದ ಸರ್ವೇಶ್ವರ ಸ್ವಾಮಿಯ ಗೌರವಾರ್ಥ ಈ ಪಾಸ್ಕ ಬಲಿಯ ಆಚರಣೆಯನ್ನು ನಡೆಸುತ್ತಿದ್ದೇವೆ’ ಎಂದು ಉತ್ತರಕೊಡಿ,” ಎಂದು ಹೇಳಿದನು. ... |
28 |
ಜನರು ತಲೆಬಾಗಿ ನಮಸ್ಕರಿಸಿದರು. ಇಸ್ರಯೇಲರು ಅಲ್ಲಿಂದ ಹೊರಟು ಸರ್ವೇಶ್ವರ ಸ್ವಾಮಿ ಮೋಶೆ ಮತ್ತು ಆರೋನರಿಗೆ ಆಜ್ಞಾಪಿಸಿದ ಪ್ರಕಾರವೇ ನಡೆದುಕೊಂಡರು. |
29 |
ಅರ್ಧರಾತ್ರಿಯಲ್ಲಿ ಸರ್ವೇಶ್ವರ ಸ್ವಾಮಿ ಸಿಂಹಾಸನಾರೂಢನಾಗಬೇಕಾಗಿದ್ದ ಫರೋಹನ ಚೊಚ್ಚಲು ಮಗನು ಮೊದಲ್ಗೊಂಡು ಸೆರೆಯಲ್ಲಿದ್ದ ಖೈದಿಯ ಚೊಚ್ಚಲ ಮಗನವರೆಗೂ ಈಜಿಪ್ಟ್ ದೇಶದಲ್ಲಿದ್ದ ಎಲ್ಲ ಚೊಚ್ಚಲು ಮಕ್ಕಳನ್ನೂ ಪ್ರಾಣಿಗಳ ಚೊಚ್ಚಲ ಮರಿಗಳನ್ನೂ ಸಂಹಾರ ಮಾಡಿದರು. |
30 |
ಆ ರಾತ್ರಿ ಫರೋಹನೂ ಅವನ ಪರಿವಾರದವರೂ ಈಜಿಪ್ಟಿನವರೆಲ್ಲರೂ ಎದ್ದು ನೋಡಿದಾಗ ಶವವಿಲ್ಲದ ಮನೆ ಒಂದೂ ಇರಲಿಲ್ಲ. ಆದ್ದರಿಂದ ಆ ದೇಶದಲ್ಲೆಲ್ಲಾ ದೊಡ್ಡ ಗೋಳಾಟ ಎದ್ದಿತು. |
31 |
ಫರೋಹನು ಆ ರಾತ್ರಿಯಲ್ಲೆ ಮೋಶೆ ಮತ್ತು ಆರೋನರನ್ನು ಕರೆಯಿಸಿದನು. “ನೀವೂ ಹಾಗು ಇಸ್ರಯೇಲರೆಲ್ಲರೂ ನನ್ನ ಜನರನ್ನು ಬಿಟ್ಟು ಹೊರಟುಹೋಗಿ. |
32 |
ನೀವು ಕೇಳಿಕೊಂಡಂತೆ ಸರ್ವೇಶ್ವರನನ್ನು ಆರಾಧಿಸಿ. ನಿಮ್ಮ ಕೋರಿಕೆಯಂತೆ ಕುರಿದನಗಳನ್ನೂ ತೆಗೆದುಕೊಂಡು ಹೋಗಬಹುದು. ನನ್ನ ಹಿತಕ್ಕಾಗಿಯೂ ಪ್ರಾರ್ಥನೆಮಾಡಿ,” ಎಂದನು. |
33 |
ಈಜಿಪ್ಟಿನವರು, “ನಾವೆಲ್ಲರು ಸಾಯುತ್ತೇವೆ,” ಎಂದುಕೊಂಡು ತಮ್ಮ ದೇಶವನ್ನು ಬಿಟ್ಟು ಬೇಗನೆ ಹೋಗಬೇಕೆಂದು ಇಸ್ರಯೇಲರನ್ನು ಒತ್ತಾಯಪಡಿಸಿದರು. |
34 |
ಆದುದರಿಂದ ಇಸ್ರಯೇಲರು ಹಿಟ್ಟಿಗೆ ಹುಳಿಹಾಕುವುದಕ್ಕಿಂತ ಮುಂಚೆಯೇ ನಾದುವ ಹರಿವಾಣಗಳಲ್ಲಿದ್ದ ಕಣಕದ ಮುದ್ದೆಯನ್ನು ಹಾಗೆಯೇ ಗಂಟುಕಟ್ಟಿ ತಮ್ಮ ಹೆಗಲಿನ ಮೇಲೆ ಹಾಕಿಕೊಂಡು ಹೊರಟೇಬಿಟ್ಟರು. |
35 |
ಮೋಶೆ ಹೇಳಿಕೊಟ್ಟ ಹಾಗೆ ಈಜಿಪ್ಟಿನವರಿಂದ ಬೆಳ್ಳಿಬಂಗಾರದ ಒಡವೆಗಳನ್ನು ಹಾಗು ಬಟ್ಟೆಗಳನ್ನು ಕೇಳಿಕೊಂಡರು. |
36 |
ಇಸ್ರಯೇಲರ ಮೇಲೆ ಈಜಿಪ್ಟಿನವರಿಗೆ ದಯೆ ಹುಟ್ಟುವಂತೆ ಮಾಡಿದ್ದರು ಸರ್ವೇಶ್ವರ. ಆದ್ದರಿಂದ ಅವರು ಕೇಳಿಕೊಂಡದ್ದನ್ನು ಈಜಿಪ್ಟಿನವರು ಕೊಟ್ಟುಬಿಟ್ಟರು. ಹೀಗೆ ಇಸ್ರಯೇಲರು ಈಜಿಪ್ಟಿನವರ ಸೊತ್ತನ್ನು ಸುಲಿಗೆ ಮಾಡಿಕೊಂಡರು. |
37 |
ಇಸ್ರಯೇಲರು ರಮ್ಸೇಸ್ ಪಟ್ಟಣದಿಂದ ಹೊರಟು ಸುಕ್ಕೋತಿಗೆ ಬಂದರು. ಅವರಲ್ಲಿ ಮಹಿಳೆಯರನ್ನೂ ಮಕ್ಕಳನ್ನೂ ಬಿಟ್ಟು ಗಂಡಸರ ಸಂಖ್ಯೆಯೇ ಸುಮಾರು ಆರು ಲಕ್ಷವಿತ್ತು. |
38 |
ಅವರೊಂದಿಗೆ ಬಹುಮಂದಿ ಅನ್ಯದೇಶೀಯರೂ ಹೊರಟು ಬಂದಿದ್ದರು. ಕುರಿ, ದನ ಮುಂತಾದ ಪಶುಪ್ರಾಣಿಗಳು ಬಹಳವಿದ್ದವು. |
39 |
ಈಜಿಪ್ಟ್ ದೇಶದಿಂದ ಅವರು ತಂದಿದ್ದ ಕಣಕದ ಮುದ್ದೆಯಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿ ಸುಟ್ಟರು. ಅಲ್ಲಿಂದ ಅವರನ್ನು ಹೊರಡಿಸಿದಾಗ ಸ್ವಲ್ಪವೂ ಸಮಯ ಸಿಕ್ಕದೆ ಕಣಕದಲ್ಲಿ ಹುಳಿಯನ್ನು ಕಲಸಲಿಕ್ಕೂ ಆಗಲಿಲ್ಲ ಹಾಗು ಬೇರೆ ಆಹಾರವನ್ನು ಸಿದ್ಧಪಡಿಸಿಕೊಳ್ಳಲೂ ಸಾಧ್ಯವಾಗಿರಲಿಲ್ಲ. |
40 |
ಇಸ್ರಯೇಲರು ಈಜಿಪ್ಟ್ ದೇಶದಲ್ಲಿ ನಾನೂರಮೂವತ್ತು ವರ್ಷಗಳ ಕಾಲ ವಾಸವಾಗಿದ್ದರು. |
41 |
ಈ ನಾನೂರ ಮೂವತ್ತು ವರ್ಷಗಳು ಕಳೆದ ನಂತರ ಅದೇ ದಿವಸದಲ್ಲಿ ಸರ್ವೇಶ್ವರನ ಪಡೆಗಳೆಲ್ಲವೂ ಈಜಿಪ್ಟ್ ದೇಶವನ್ನು ಬಿಟ್ಟು ಹೊರಟುಬಂದವು. |
42 |
ಸರ್ವೇಶ್ವರ ಅವರನ್ನು ಈಜಿಪ್ಟ್ ದೇಶದಿಂದ ಹೊರಗೆ ಬರಮಾಡಲು ಜಾಗರೂಕರಾಗಿದ್ದದ್ದು ಆ ರಾತ್ರಿಯೇ. ಆದುದರಿಂದಲೆ ಇಸ್ರಯೇಲರೆಲ್ಲರು ತಲತಲಾಂತರಕ್ಕೂ ಸರ್ವೇಶ್ವರನ ಗೌರವಾರ್ಥ ಈ ರಾತ್ರಿಯಲ್ಲೇ ಜಾಗರಣೆಯನ್ನು ಅನುಸರಿಸಬೇಕು. |
43 |
ಸರ್ವೇಶ್ವರ ಸ್ವಾಮಿ ಮೋಶೆ ಮತ್ತು ಆರೋನರಿಗೆ ಹೀಗೆಂದರು: “ಪಾಸ್ಕಹಬ್ಬ ಆಚರಣೆಯ ಕ್ರಮ ಇದು - ವಿದೇಶೀಯನಾರೂ ಆ ಭೋಜನದಲ್ಲಿ ಪಾಲ್ಗೊಳ್ಳಬಾರದು. |
44 |
ನೀವು ಕ್ರಯಕ್ಕೆ ಕೊಂಡ ಜೀತಗಾರನು ಸುನ್ನತಿ ಮಾಡಿಸಿಕೊಂಡವನಾದರೆ ಅಂಥವನು ಅದರಲ್ಲಿ ಭಾಗವಹಿಸಬಹುದು. |
45 |
ತಾತ್ಕಾಲಿಕವಾಗಿ ತಂಗಿರುವವನಾಗಲಿ ಕೂಲಿಯಾಳಾಗಲಿ ಅದರಲ್ಲಿ ಭಾಗವಹಿಸಬಾರದು. |
46 |
ಅಡಿಗೆ ಮಾಡಿದ ಮನೆಯಲ್ಲೆ ಅದನ್ನು ಊಟಮಾಡಬೇಕು. ಅದರಲ್ಲಿ ಕಿಂಚಿತ್ತನ್ನೂ ಆ ಮನೆಯಿಂದ ಹೊರಗೆ ತೆಗೆದುಕೊಂಡು ಹೋಗಬಾರದು. ಬಲಿಪ್ರಾಣಿಯ ಎಲುಬೊಂದನ್ನಾದರೂ ಮುರಿಯಕೂಡದು. |
47 |
ಇಸ್ರಯೇಲರೆಲ್ಲರೂ ಈ ಹಬ್ಬವನ್ನು ಆಚರಿಸಬೇಕು. |
48 |
ನಿಮ್ಮ ಬಳಿ ವಾಸವಾಗಿರುವ ವಿದೇಶೀಯನೊಬ್ಬನು ಸರ್ವೇಶ್ವರನಿಗೆ ಈ ಪಾಸ್ಕಹಬ್ಬವನ್ನು ಕೊಂಡಾಡಬೇಕೆಂಬ ಆಸೆಯಿದ್ದರೆ ಅವನೂ ಅವನ ಕುಟುಂಬಕ್ಕೆ ಸೇರಿದ ಗಂಡಸರೆಲ್ಲರೂ ಸುನ್ನತಿಮಾಡಿಸಿಕೊಳ್ಳಬೇಕು. ಬಳಿಕ ಅವನು ಬಂದು ಈ ಹಬ್ಬವನ್ನು ಆಚರಿಸಬಹುದು. ಅಂಥವನು ಸ್ವದೇಶದವನಂತೆ ಆಗುತ್ತಾನೆ. ಆದರೆ ಸುನ್ನತಿ ಮಾಡಿಸಿಕೊಳ್ಳದ ಯಾವನೂ ಆ ಭೋಜನದಲ್ಲಿ ಭಾಗಿ ಆಗಕೂಡದು. |
49 |
ಸ್ವದೇಶಿಗೂ ನಿಮ್ಮೊಡನೆ ವಾಸವಾಗಿರುವ ವಿದೇಶಿಗೂ ಅನ್ವಯಿಸುವ ವಿಧಿ ಒಂದೇ ಆಗಿರುತ್ತದೆ,” |
50 |
ಮೋಶೆ ಮತ್ತು ಆರೋನರಿಗೆ ಸರ್ವೇಶ್ವರ ಆಜ್ಞಾಪಿಸಿದ ಮೇರೆಗೆ ಇಸ್ರಯೇಲರೆಲ್ಲರೂ ನಡೆದುಕೊಂಡರು. |
51 |
ಆ ದಿನ ಸರ್ವೇಶ್ವರ ಇಸ್ರಯೇಲರನ್ನು ಪಡೆಪಡೆಯಾಗಿ ಈಜಿಪ್ಟ್ ದೇಶದಿಂದ ಹೊರಗೆ ಕರೆದೊಯ್ದರು.
|
Finnish Bible 2017 STLK |
Free Ro Use: Pyhä Raamattu (STLK 2017) |