೧ |
“ಕೂಗಿ ನೋಡು, ಯಾರಿದ್ದಾರೆ ಉತ್ತರಕೊಡುವವರು ನಿನಗೆ? ಈಗ ಯಾರ ಕಡೆಗೆ, ಯಾವ ದೇವದೂತರ ಕಡೆಗೆ ತಿರುಗುವೆ? |
೨ |
ಮೂರ್ಖನಿಗೆ ನಾಶ ಕೋಪದಿಂದ ಮೂಢನಿಗೆ ಮರಣ ರೋಷದಿಂದ. |
೩ |
ಮೂರ್ಖನು ಬೇರೂರುವುದನು ನೋಡಿದೆ ಕೂಡಲೆ ಅವನ ನಿವಾಸ ಶಾಪಕ್ಕೀಡಾಗುವುದನು ಕಂಡೆ. |
೪ |
ಆಶ್ರಯ ಎಂಬುದು ಅವನ ಮಕ್ಕಳಿಗಿಲ್ಲ ನ್ಯಾಯಸ್ಥಾನದಲ್ಲಿ ಗೆಲುವು ಅವರಿಗಿಲ್ಲ ಅವರನ್ನು ಬಿಡಿಸತಕ್ಕವರಾರೂ ಇಲ್ಲ. |
೫ |
ಹಸಿದವರು ಅವನ ಬೆಳೆಯನು ತಿಂದುಬಿಡುವರು ಮುಳ್ಳುಬೇಲಿ ಹಾಕಿದ್ದರೂ ಅದನು ತಿಂದುಬಿಡುವರು ಅವನ ಸೊತ್ತನು ನುಂಗಲು ಬಾಯ್ದೆರೆದು ಕಾದಿರುವರು. |
೬ |
ಕೇಡುಹುಟ್ಟುವುದು ಮಣ್ಣಿನಿಂದಲ್ಲ ದುಃಖ ಮೊಳೆವುದು ಭೂಮಿಯಿಂದಲ್ಲ. |
೭ |
ಜ್ವಾಲೆಗಳು ಏರುವುದು ಮೇಲಕೆ ಜನರು ಹುಟ್ಟಿರುವುದು ದುಃಖಕೆ. |
೮ |
ನಾನು ನೀನಾಗಿದ್ದರೆ ದೇವರಿಗೆ ಮೊರೆಯಿಡುತ್ತಿದ್ದೆ ನನ್ನ ವಿಷಯವನು ಆತನ ಕೈಗೆ ಬಿಡುತ್ತಿದ್ದೆ. |
೯ |
ದೇವರೆಸಗುತ್ತಾನೆ ಅಸಾಧ್ಯ ಅತಿಶಯಗಳನು ಅಸಂಖ್ಯವಾದ ಅದ್ಭುತಕಾರ್ಯಗಳನು. |
೧೦ |
ಮಳೆಗರೆಯುತ್ತಾನೆ ಭೂಮಿಯ ಮೇಲೆ ನೀರೊದಗಿಸುತ್ತಾನೆ ಹೊಲಗದ್ದೆಗಳಿಗೆ. |
೧೧ |
ಉನ್ನತಿಗೇರಿಸುತ್ತಾನೆ ದೀನದಲಿತರನು ಸುರಕ್ಷತೆಗೊಯ್ಯುತ್ತಾನೆ ದುಃಖಿತರನು. |
೧೨ |
ಭಂಗಪಡಿಸುತ್ತಾನೆ ವಂಚಕರ ಉಪಾಯಗಳನು ಕೈಗೂಡಗೊಳಿಸನು ಅವರ ಪ್ರಯತ್ನಗಳನು. |
೧೩ |
ನಿರರ್ಥಕಗೊಳಿಸುತ್ತಾನೆ ವಕ್ರಿಗಳ ತಂತ್ರೋಪಾಯಗಳನು ಸಿಕ್ಕಿಸಿಬಿಡುತ್ತಾನೆ ಅವರವರ ಯೋಜನೆಗಳಲ್ಲೆ ಜ್ಞಾನಿಗಳನು. |
೧೪ |
ಕತ್ತಲು ಅಂಥವರನು ಸುತ್ತುವರೆದಿರುತ್ತದೆ ಹಾಡುಹಗಲಲ್ಲೆ ರಾತ್ರಿಯಲ್ಲೋ ಎಂಬಂತೆ ತಡಕಾಡುತ್ತಾರೆ ಅವರು ನಡುಹಗಲಲ್ಲೇ. |
೧೫ |
ದಿಕ್ಕಿಲ್ಲದವರನು ರಕ್ಷಿಸುತ್ತಾನೆ ದೇವರು ಅಂಥವರ ಬಾಯಿಗತ್ತಿಯಿಂದ ಬಿಡಿಸುತ್ತಾನೆ ಅವರನ್ನು ಬಲಾಢ್ಯರ ಕೈಯಿಂದ. |
೧೬ |
ಎಂತಲೇ ಬಡವನಿಗೆ ನಿರೀಕ್ಷೆ ಇರುತ್ತದೆ. ಅನ್ಯಾಯ ಆಡುವ ಬಾಯಿ ಮುಚ್ಚಿಕೊಳ್ಳುತ್ತದೆ. |
೧೭ |
ದೇವರು ಯಾರನ್ನು ತಿದ್ದುತ್ತಾನೋ ಅವನು ಧನ್ಯನು ಅಲಕ್ಷ್ಯಮಾಡಬೇಡ ನೋಡು, ಸರ್ವಶಕ್ತನ ದಂಡನೆಯನು. |
೧೮ |
ಗಾಯಮಾಡುವವನೂ ಗಾಯಕಟ್ಟುವವನೂ ದೇವರೇ ಹೊಡೆಯುವುದೂ, ಗುಣಪಡಿಸುವುದೂ ಆತನ ಕೈಯೇ. |
೧೯ |
ಐದಾರು ಇಕ್ಕಟ್ಟುಗಳಿಂದ ನಿನ್ನನು ಬಿಡಿಸುವನು ಏಳನೆಯದು ಬಂದರೂ ನಿನ್ನನು ಕೇಡು ಮುಟ್ಟದು. |
೨೦ |
ಬರಗಾಲದಲ್ಲಿ ಮರಣದಿಂದ ಕಾಪಾಡುವನು ಯುದ್ಧಕಾಲದಲ್ಲಿ ಕತ್ತಿಯಿಂದ ರಕ್ಷಿಸುವನು. |
೨೧ |
ನಾಲಿಗೆಯೆಂಬ ಚಾಟಿಹೊಡೆತಕ್ಕೆ ಮರೆಯಾಗಿರುವೆ ಪರಿವಿನಾಶ ಬಂದರೂ ನೀನು ಹೆದರದಿರುವೆ. |
೨೨ |
ಕ್ಷಾಮಡಾಮರದಲ್ಲೂ ನೀನು ನಗುತ್ತಿರುವೆ ಕಾಡುಮೃಗಗಳಿಗೂ ನೀನು ಅಂಜದಿರುವೆ. |
೨೩ |
ಹೊಲದ ಕಲ್ಲುಬಂಡೆಗಳೊಡನೆ ಒಪ್ಪಂದಮಾಡಿಕೊಳ್ಳುವೆ ಆ ಕಾಡುಪ್ರಾಣಿಗಳೊಂದಿಗೆ ನೆಮ್ಮದಿಯಿಂದ ಬಾಳುವೆ. |
೨೪ |
ನಿನ್ನ ಗುಡಾರಕ್ಕೆ ಗಂಡಾಂತರವಿಲ್ಲವೆಂಬ ನೆಮ್ಮದಿ ನಿನಗಿರುವುದು ನಿನ್ನ ಮಂದೆಯನು ನೀನು ನೋಡಬಂದಾಗ ಕೊರತೆ ಕಾಣಬರದು. |
೨೫ |
ನಿನ್ನ ಸಂತತಿ ದೊಡ್ಡದೆಂಬುದನು ನೀನು ತಿಳಿಯುವೆ ಅದು ಇಳೆಯ ಹುಲ್ಲಿನಂತೆ ಹುಲುಸಾಗಿ ಬೆಳೆವುದನು ಕಾಣುವೆ. |
೨೬ |
ಸುಗ್ಗಿಕಾಲದಲ್ಲಿ ಕಾಳುತೆನೆ ಕಣ ಸೇರುವಂತೆ ವೃದ್ಧಾಪ್ಯ ಕಳೆದ ಮೇಲೆ ನೀನು ಸಮಾಧಿ ಸೇರುವೆ. |
೨೭ |
ಇದನು ನಾವು ಪರಿಶೋಧಿಸಿದ್ದೇವೆ, ಇದು ಯಥಾರ್ಥ ಇದನು ಕೇಳಿ ತಿಳಿದುಕೊ - ಇದು ನಿನಗೆ ಹಿತಕರ.”
|
Kannada Bible (KNCL) 2016 |
No Data |