೧ |
ಯೋಬನು ತಾನು ಸತ್ಯವಂತನೆಂದು ಸಾಧಿಸಿದ್ದನು. ಇದನ್ನು ಕೇಳಿದ ಅವನ ಮೂವರು ಮಿತ್ರರು ವಾದಿಸುವುದನ್ನು ನಿಲ್ಲಿಸಿಬಿಟ್ಟರು. |
೨ |
ಆಗ ಬೂಜ್ನವನಾದ ಬರಕೇಲನ ಮಗ ಎಲೀಹುವನಿಗೆ ಸಿಟ್ಟೇರಿತು. ಇವನು ರಾಮ್ಗೋತ್ರಕ್ಕೆ ಸೇರಿದವನು. ಯೋಬನು ತಾನು ದೇವರಿಗಿಂತ ನ್ಯಾಯವಂತನೆಂದು ಎಣಿಸಿಕೊಂಡ ಕಾರಣ ಎಲೀಹುವನಿಗೆ ಸಿಟ್ಟುಹತ್ತಿತ್ತು. |
೩ |
ಯೋಬನ ಆ ಮೂವರು ಮಿತ್ರರ ಮೇಲೂ ಅವನು ಕೋಪಗೊಂಡನು. ಏಕೆಂದರೆ ಯೋಬನಿಗೆ ತಕ್ಕ ಉತ್ತರ ಕೊಡಲಾಗದೆ ದೇವರನ್ನೇ ತಪ್ಪಿತಸ್ಥರನ್ನಾಗಿಸಿದ್ದರು. |
೪ |
ಆ ಮಿತ್ರರು ತನಗಿಂತ ಹಿರಿಯವರಾಗಿದ್ದುದರಿಂದ ಎಲೀಹುವನು ಮೊದಲೇ ಮಾತನಾಡದೆ ಈವರೆಗೂ ಕಾದುಕೊಂಡಿದ್ದನು. |
೫ |
ಆ ಮೂವರ ಬಾಯಿಯಲ್ಲಿ ಉತ್ತರವೇ ಇಲ್ಲದುದನ್ನು ಕಂಡು ಕಿಡಿಕಿಡಿಯಾದನು. |
೬ |
ಆಗ ಬೂಜಿನವನಾದ ಬರಕೇಲನ ಮಗ ಎಲೀಹುವನು ಕೊಟ್ಟ ಉತ್ತರ: “ನಾನು ಕಿರಿಯವನು, ನೀವು ಎಷ್ಟೋ ಹಿರಿಯವರು ಎಂದೇ ಸಂಕೋಚಪಟ್ಟೆನು ನನ್ನ ಅಭಿಪ್ರಾಯ ತಿಳಿಸಲು ಅಂಜಿದೆನು. |
೭ |
ದೊಡ್ಡವರು ಮಾತಾಡಲಿ ಎಂದುಕೊಂಡೆನು ವಯೋವೃದ್ಧರು ಸುಜ್ಞಾನವನು ಬೋಧಿಸಲಿ ಎಂದೆನು. |
೮ |
ಆದರೆ ಮಾನವರಿಗುಂಟು ಒಂದು ಆತ್ಮ ಸರ್ವಶಕ್ತಸ್ವಾಮಿಯ ಉಸಿರಿನ ಮೂಲಕ ಅವರಿಗೆ ದೊರಕುತ್ತದೆ ವಿವೇಕ. |
೯ |
ವಯೋವೃದ್ಧರು ಮಾತ್ರ ಜ್ಞಾನಿಗಳಲ್ಲ ಮುದುಕರು ಮಾತ್ರ ನ್ಯಾಯಬಲ್ಲವರಲ್ಲ. |
೧೦ |
ಆದಕಾರಣ ನನ್ನ ಕಡೆಗೂ ಕಿವಿಗೊಡಿ ನನ್ನ ಅಭಿಪ್ರಾಯ ತಿಳಿಸುತ್ತೇನೆ, ಕೇಳಿ: |
೧೧ |
ನೀವು ಆಡುತ್ತಿದ್ದ ಮಾತುಗಳನು, ಮಾಡುತ್ತಿದ್ದ ಆಲೋಚನೆಗಳನು ಮುಂದಿಡುತ್ತಿದ್ದ ವಾದಗಳನು ನಾನು ಕಾದು ಕೇಳುತ್ತಿದ್ದೆನು. |
೧೨ |
ಯೋಬನನು ಖಂಡಿಸಬಲ್ಲವನು, ಅವನಿಗೆ ತಕ್ಕ ಉತ್ತರಕೊಡಬಲ್ಲವನು ನಿಮ್ಮಲ್ಲಿ ಯಾರೂ ಇಲ್ಲದಿರುವುದನು ನಾನು ಗಮನಿಸಿದೆನು. |
೧೩ |
‘ನಿಮಗೆ ಬುದ್ಧಿ ಬಂದಿದೆ’ ಎಂದುಕೊಳ್ಳಬೇಡಿ ‘ದೇವರೇ ಅವನನು ಖಂಡಿಸಲಿ, ನರನಿಂದಾಗದು,’ ಎನ್ನದಿರಿ. |
೧೪ |
ಯೋಬನು ನನ್ನೊಡನೆ ವಾದಮಾಡಲಿಲ್ಲ ನಿಮ್ಮ ಹಾಗೆ ಅವನಿಗೆ ನಾನು ಉತ್ತರಿಸುವುದಿಲ್ಲ. |
೧೫ |
“ಯೋಬನೇ, ಇವರು ಉತ್ತರಿಸದೆ ನಿಬ್ಬೆರಗಾಗಿರುವರು ಇವರ ಸೊಲ್ಲೇ ಅಡಗಿಹೋಗಿರುವುದು. |
೧೬ |
ಉತ್ತರ ಕೊಡಲಾಗದೆ ಇವರು ಮೌನದಿಂದಿರಲು ನಾನಿನ್ನೂ ಸುಮ್ಮನೆ ಕಾದುಕೊಂಡಿರಲಾಗದು. |
೧೭ |
ನಾನು ನನ್ನ ಪಾಲಿನ ಉತ್ತರವನು ಹೇಳುವೆನು ನಿನಗೆ ನನ್ನ ಅಭಿಪ್ರಾಯವನು ತಿಳಿಸುವೆನು. |
೧೮ |
ಹೇಳಬೇಕಾದವು ನನ್ನಲ್ಲಿ ತುಂಬಿವೆ ಹೇಳಲು ನನ್ನ ಅಂತರಾತ್ಮ ಒತ್ತಾಯಪಡಿಸುತ್ತಿದೆ. |
೧೯ |
ದ್ರಾಕ್ಷಾರಸ ತುಂಬಿ ಬಾಯಿಕಟ್ಟಿದ ಹೊಸಬುದ್ದಲಿಯಂತೆ ನನ್ನ ಅಂತರಂಗವು ಬಿರಿದು ಒಡೆದುಹೋಗುವ ಹಾಗಿದೆ. |
೨೦ |
ತುಟಿ ತೆರೆದು ನಾನು ಉತ್ತರಿಸಲೇಬೇಕು ನೆಮ್ಮದಿಯಿಂದಿರಲು ನಾನು ಮಾತಾಡಲೇಬೇಕು. |
೨೧ |
ನಾನಾರಿಗೂ ಮುಖದಾಕ್ಷಿಣ್ಯ ತೋರುವುದಿಲ್ಲ ಯಾವ ಮಾನವನಿಗೂ ಮುಖಸ್ತುತಿ ಸಲ್ಲಿಸುವುದಿಲ್ಲ. |
೨೨ |
ಮುಖಸ್ತುತಿ ಮಾಡಲು ನನ್ನಿಂದಾಗುವುದಿಲ್ಲ. ಮಾಡಿದರೆ ಸೃಷ್ಟಿಕರ್ತ ನನ್ನನು ಬೇಗ ನಿರ್ಮೂಲಮಾಡಬಲ್ಲ.”
|
Kannada Bible (KNCL) 2016 |
No Data |