೧ |
ಆಮೇಲೆ ತೇಮಾನ್ಯನಾದ ಎಲೀಫಜನು ಮತ್ತೆ ಹೀಗೆಂದನು: |
೨ |
“ನರಮಾನವನಿಂದ ದೇವರಿಗೇನು ಪ್ರಯೋಜನ? ಬುದ್ಧಿವಂತನಾಗಿ ನಡೆದುಕೊಂಡರೆ ಅದು ಅವನಿಗೇ ಪ್ರಯೋಜನ. |
೩ |
ನೀನು ಸಜ್ಜನನಾಗಿದ್ದರೆ ಅದರಿಂದ ಸರ್ವಶಕ್ತನಿಗೆ ಸುಖವೇ? ನಿನ್ನ ನಿರ್ದೋಷ ನಡತೆಯಿಂದ ಆತನಿಗೆ ಲಾಭವೇ? |
೪ |
ನಿನ್ನ ಭಯಭಕ್ತಿಗಾಗಿ ಆತ ನಿನ್ನನ್ನು ಶಿಕ್ಷಿಸುತ್ತಾನೆಯೇ? ಅದಕ್ಕಾಗಿ ನಿನ್ನನು ನ್ಯಾಯತೀರ್ಪಿಗೆ ಗುರಿಪಡಿಸುತ್ತಾನೆಯೆ? |
೫ |
ಇಲ್ಲ,ಹಾಗೆಮಾಡುವುದು ನಿನ್ನ ಕೆಟ್ಟತನ ಹೆಚ್ಚಿದುದಕ್ಕಾಗಿ. ನಿನ್ನ ಪಾಪಗಳಿಗೆ ಮಿತಿಯಿಲ್ಲದುದಕ್ಕಾಗಿ. |
೬ |
ನೀನು ನಿನ್ನ ಸೋದರನಿಂದ ಬಟ್ಟೆಯನು ಒತ್ತೆಯಾಗಿ ಪಡೆದೆ ಬಟ್ಟೆಕಿತ್ತುಕೊಂಡು ಅವನನ್ನು ಬೆತ್ತಲೆಯಾಗಿಸಿದೆ. |
೭ |
ದಣಿದವನಿಗೆ ನೀ ಕೊಡಲಿಲ್ಲ ಪಾನ ಹಸಿದವನಿಗೆ ಬಡಿಸಲಿಲ್ಲ ಅನ್ನ. |
೮ |
ನಿನ್ನನಿಸಿಕೆಯಂತೆ ಬಲಿಷ್ಠನಿಗೆ ನಾಡಿನೊಡೆತನ ಘನವಂತನಿಗೇ ಅಲ್ಲಿ ಮನೆತನ |
೯ |
ವಿಧವೆಯರನ್ನು ಬರಿಗೈಯಲ್ಲಿ ಕಳಿಸಿಬಿಟ್ಟೆ ತಬ್ಬಲಿಯ ಕೈಗಳನು ನೀನು ಮುರಿದುಬಿಟ್ಟೆ. |
೧೦ |
ನಿನ್ನ ಸುತ್ತಲು ಉರುಲುಗಳು ಕಾದಿವೆ ಈ ಕಾರಣ ನಿನ್ನನು ತಲ್ಲಣಗೊಳಿಸಲಿದೆ ಭಯಭ್ರಾಂತಿ ತಟ್ಟನೆ. |
೧೧ |
ನಿನಗೆ ದಾರಿಕಾಣದಿರಲು ಬೆಳಕೇ ಕತ್ತಲಾಗಿದೆ ನಿನ್ನನು ಮುಳುಗಿಸಲು ಜಲಪ್ರವಾಹವಿದೆ. |
೧೨ |
ದೇವರು ಉನ್ನತ ಆಕಾಶದಲ್ಲಿ ಇದ್ದಾನಲ್ಲವೇ? ನಕ್ಷತ್ರಗಳನ್ನು ನೋಡು, ಎಷ್ಟು ಗಹನವಾಗಿವೆ! |
೧೩ |
ಈ ನಿಮಿತ್ತ ನೀನು, ‘ದೇವರಿಗೇನು ಗೊತ್ತು? ನ್ಯಾಯ ತೀರಿಸಬಲ್ಲನೆ ಕಾರ್ಗತ್ತಲು ಅಡ್ಡವಿರಲು? |
೧೪ |
ಆತ ನೋಡಲಾಗದಂತೆ ದಟ್ಟವಾದ ಮೋಡಗಳ ಪರದೆ ಇದೆ ಆತನ ನಡೆದಾಟವೆಲ್ಲ ಆಕಾಶದ ಮೇಲ್ಗಡೆಯಲ್ಲವೆ?’ ಎಂದೆ. |
೧೫ |
ನೀನು ಹಿಡಿದಿರುವುದು ಪುರಾತನ ಹಾದಿಯನೇ ದುರ್ಜನರು ನಡೆದುಬಂದ ಆ ಬೀದಿಯನೇ. |
೧೬ |
ಅವರನ್ನು ಅಕಾಲ ಮರಣ ಅಪಹರಿಸಿತು ಅವರಿಗಿದ್ದ ಅಡಿಪಾಯ ನೀರುಪಾಲಾಯಿತು. |
೧೭ |
ದೇವರು ಅವರ ಮನೆಗಳನ್ನು ಸಂಪತ್ತಿನಿಂದ ತುಂಬಿಸಿದ್ದರೂ ಅವರು ಆತನಿಗೆ, ‘ತೊಲಗಿಹೋಗು ನಮ್ಮಿಂದ’ ಎಂದರು. |
೧೮ |
ಅಲ್ಲದೆ, ‘ಸರ್ವಶಕ್ತ ನಮಗೇನು ಮಾಡಬಲ್ಲ?’ ಎಂದುಕೊಂಡರು ಅಕಟ, ನನ್ನಿಂದ ದೂರ ಇರಲಿ! ದುರುಳರ ಈ ಮಾತು. |
೧೯ |
ದುರುಳರ ದುರ್ಗತಿಯನು ನೋಡಿ ಸಜ್ಜನರು ಹಿಗ್ಗುವರು ನಿರ್ದೋಷಿಗಳು ಅವರನು ಈ ಪರಿ ಅಣಕಿಸಿ ಹಾಸ್ಯಮಾಡುವರು: |
೨೦ |
‘ನೋಡಿ, ನಮ್ಮ ವೈರಿಗಳು ಹೇಗೆ ಹಾಳಾಗಿಹೋದರು! ಅವರು ಬಿಟ್ಟುಹೋದ ಆಸ್ತಿ ಬೆಂಕಿಯಿಂದ ಭಸ್ಮವಾಯಿತು!’ |
೨೧ |
ದೇವರ ಚಿತ್ತಕ್ಕೆ ಮಣಿದು ಸಮಾಧಾನದಿಂದಿರು ಇದರಿಂದ ನಿನಗೆ ಶುಭವಾಗುವುದು. |
೨೨ |
ಆತನ ಬಾಯಿಂದ ಬುದ್ಧಿ ಕಲಿತುಕೊ ಆತನ ಮಾತನು ಹೃದಯದಲ್ಲಿಟ್ಟುಕೊ. |
೨೩ |
ಸರ್ವಶಕ್ತನ ಕಡೆಗೆ ಹಿಂದಿರುಗಿದೆಯಾದರೆ ನಿನ್ನ ಗುಡಾರಗಳಿಂದ ಅನ್ಯಾಯವನು ತೊರೆದೆಯಾದರೆ, ನೀನು ಉದ್ಧಾರವಾಗುವೆ. |
೨೪ |
ಎಸೆದುಬಿಡು ನಿನ್ನ ಬಂಗಾರವನು ಧೂಳಿಗೆ ಓಫಿರ್ ನಾಡಿನ ಅಪರಂಜಿಯನು ನದಿತೀರದ ಕಲ್ಲುಗಳಿಗೆ. |
೨೫ |
ಸರ್ವಶಕ್ತನಾದ ಸ್ವಾಮಿಯೇ ನಿನಗೆ ಬಂಗಾರವಾಗಿರಲಿ ಆತನೇ ನಿನಗೆ ಬೆಳ್ಳಿಯ ರಾಶಿಯಾಗಿರಲಿ. |
೨೬ |
ಆಗ ನೀನು ಸರ್ವಶಕ್ತನಲಿ ಆನಂದಿಸುವೆ ತಲೆಯೆತ್ತಿ ದೇವರಿಗೆ ಅಭಿಮುಖಿಯಾಗುವೆ. |
೨೭ |
ಆತನನು ಪ್ರಾರ್ಥಿಸುವೆ, ಆತ ಆಲಿಸುವನು ತೀರಿಸುವೆ ಆತನಿಗೆ ನೀ ಹೊತ್ತ ಹರಕೆಗಳನು. |
೨೮ |
ನಿನ್ನ ಯೋಜನೆಗಳು ಸಫಲವಾಗುವುವು ನಿನ್ನ ಮಾರ್ಗಗಳು ಪ್ರಜ್ವಲಿಸುವುವು. |
೨೯ |
ದೇವರು ಕೆಳಕ್ಕೆ ದಬ್ಬುತ್ತಾನೆ ಗರ್ವಿಗಳನು ಉದ್ಧರಿಸುತ್ತಾನೆ ದೀನಮನಸ್ಕರನು. |
೩೦ |
ಆತ ವಿಮೋಚಿಸುತ್ತಾನೆ ನಿರ್ದೋಷಿಗಳನು ನಿನ್ನ ಕೈ ಶುದ್ಧವಿರಲಿ ವಿಮೋಚಿಸುವನು ನಿನ್ನನು.
|
Kannada Bible (KNCL) 2016 |
No Data |