೧ |
ಅದಕ್ಕೆ ಯೋಬನು ಕೊಟ್ಟ ಉತ್ತರ ಇದು: |
೨ |
“ಗಮನಕೊಡಿ ನನ್ನ ಮಾತುಗಳಿಗೆ ನಾನು ನಿಮ್ಮಿಂದ ಬಯಸುವ ಉಪಶಮನ ಇದುವೆ: |
೩ |
ನಾನು ಮಾತಾಡುವಾಗ ತಾಳ್ಮೆಯಿಂದಿರಿ ಬಳಿಕ ಬೇಕಾದರೆ ಪರಿಹಾಸ್ಯ ಮಾಡಿ. |
೪ |
ನನ್ನ ದೂರು ಮನುಷ್ಯನ ವಿರುದ್ಧವೆ? ಸಾಕಷ್ಟು ಕಾರಣವಿರಲು, ನಾನು ಬೇಸರಗೊಳ್ಳಬಾರದೆ? |
೫ |
ನನ್ನ ಕಡೆಗೆ ಗಮನ ಕೊಡಿ ಬಾಯಿಯ ಮೇಲೆ ಕೈಯಿಟ್ಟು ನಿಬ್ಬೆರಗಾಗಿರಿ. |
೬ |
ಇದನು ನೆನೆದಾಗ ನನಗೆ ತಲ್ಲಣವಾಗುತ್ತದೆ ನನ್ನ ದೇಹಕ್ಕೆ ನಡುಕ ಬರುತ್ತದೆ: |
೭ |
ದುರುಳರು ಮುದುಕರಾಗುವವರೆಗೂ ಬದುಕುವುದೇಕೆ? ಅಂಥವರು ಪ್ರಬಲರು, ಬಲಿಷ್ಠರು ಆಗುವುದೇಕೆ? |
೮ |
ಅವರ ಸಂತಾನ ಅವರ ಸಮ್ಮುಖದಲ್ಲಿ ಸುಸ್ಥಿರವಾಗಿದೆ ಅವರ ಕುಟುಂಬ ಅವರ ಕಣ್ಮುಂದೆಯೇ ಅಚಲವಾಗಿದೆ. |
೯ |
ಅವರ ಮನೆ ನಿರ್ಭೀತ, ಹಾಗೂ ಸುರಕ್ಷಿತ ಅವರ ಮೇಲೆ ಬೀಳದು ದೇವರ ದಂಡ. |
೧೦ |
ಅವರ ಹೋರಿ ತಪ್ಪದೆ ಫಲವತ್ತಾಗಿಸುತ್ತದೆ ಅವರ ಗೋವು ಕಂದುಹಾಕದೆ ಈಯುತ್ತದೆ. |
೧೧ |
ಅವರ ಮಕ್ಕಳು ಮುನ್ನಡೆಯುತ್ತಾರೆ ಮಂದೆಯಂತೆ ಅವರ ಬಾಲಬಾಲೆಯರು ಕುಣಿದಾಡುತ್ತಾರೆ ಜಿಂಕೆಯಂತೆ. |
೧೨ |
ಹಾಡುತ್ತಾರೆ ತಂಬೂರಿ ವೀಣೆಗಳನು ನುಡಿಸುತ್ತಾ ಉಲ್ಲಾಸಿಸುತ್ತಾರೆ ಕೊಳಲಿನ ಸ್ವರ ಕೇಳುತ್ತಾ. |
೧೩ |
ದಿನಗಳನು ಕಳೆಯುತ್ತಾರೆ ಸುಖಸಂತೋಷದಿಂದ ಸಮಾಧಿ ಸೇರುತ್ತಾರೆ ಸಮಾಧಾನದಿಂದ. |
೧೪ |
ಆದರೆ ಈ ದುರುಳರೇ, ದೇವರಿಗೆ, ‘ನಮ್ಮನ್ನು ಬಿಟ್ಟು ತೊಲಗು, ನಮಗೆ ಬೇಡವಾಗಿದೆ ನಿನ್ನ ಮಾರ್ಗದ ಅರಿವು’. |
೧೫ |
‘ಈ ಸರ್ವಶಕ್ತ ಎಷ್ಟರವನು: ಆತನ ಸೇವೆ ನಮಗೇಕೆ? ಆತನಿಗೆ ಪ್ರಾರ್ಥನೆಮಾಡಿ ಪ್ರಯೋಜನವೇನು?’ ಎಂದಿದ್ದಾರೆ. |
೧೬ |
ಆಹಾ! ಸದ್ಯಕ್ಕೆ ಸುಖಶಾಂತಿ ನೆಲಸಿಲ್ಲ ಅವರ ಕೈಯಲಿ ಆ ದುರುಳರ ಆಲೋಚನೆ ನನ್ನಿಂದ ದೂರವಿರಲಿ. |
೧೭ |
ಆ ದುರುಳರ ದೀಪ ಆರಿಹೋದದ್ದು ಎಷ್ಟುಸಾರಿ? ಅವರಿಗೆ ವಿಪತ್ತು ಸಂಭವಿಸಿದ್ದು ಎಷ್ಟುಸಾರಿ? ಅವರ ಕೋಪ ಅವರಿಗೆ ಸಂಕಟ ತಂದದ್ದು ಎಷ್ಟುಬಾರಿ? |
೧೮ |
ಅವರು ಗಾಳಿಗೆ ತೂರಿಹೋದ ಹುಲ್ಲಾದುದು ಎಷ್ಟು ಸಲ? ಬಿರುಗಾಳಿ ಕೊಚ್ಚಿಕೊಂಡುಹೋದ ಹೊಟ್ಟಾದುದು ಎಷ್ಟು ಸಲ? |
೧೯ |
ದುಷ್ಟ ತಂದೆಯ ಪಾಪಫಲವನು ಮಕ್ಕಳಿಗೆ ಕಾದಿಟ್ಟಿದ್ದಾರೆಯೇ ದೇವರು? ಅವನಿಗೇ ಆ ದಂಡನೆ ಆಗಲಿ ಆ ದುಷ್ಟನೇ ಅದನ್ನು ಅನುಭವಿಸಲಿ. |
೨೦ |
ಅವನೇ ತನ್ನ ವಿನಾಶವನು ಕಣ್ಣಾರೆ ಕಾಣಲಿ ಅವನೇ ಸರ್ವಶಕ್ತನಾ ರೌದ್ರರಸವನು ಸವಿಯಲಿ. |
೨೧ |
ಅವನ ಆಯುಸ್ಸೇ ಕತ್ತರಿಸಿಹೋದ ಮೇಲೆ ಅವನಿಗೆಲ್ಲಿಯದು ತನ್ನಾನಂತರ ಬರುವ ಸಂತತಿಯ ಚಿಂತೆ? |
೨೨ |
ದೇವರಿಗೆ ಜ್ಞಾನಬೋಧೆ ಮಾಡಬಲ್ಲವನು ಇದ್ದಾನೆಯೇ? ಉನ್ನತರಿಗೂ ನ್ಯಾಯತೀರಿಸುವಂಥವನು ಆತನೇ ಅಲ್ಲವೇ? |
೨೩ |
ಒಬ್ಬ ಸಾಯುತ್ತಾನೆ ಸಮೃದ್ಧನಾಗಿರುವಾಗ ಸುಖಶಾಂತಿಯಿಂದ ನೆಮ್ಮದಿಯಾಗಿರುವಾಗ. |
೨೪ |
ಅವನ ದೇಹ ಬೆಳೆದು ಕೊಬ್ಬೇರಿರುತ್ತದೆ ಅವನ ಅಸ್ತಿಗಳ ಮಜ್ಜೆ ಸಾರವತ್ತಾಗಿರುತ್ತದೆ. |
೨೫ |
ಮತ್ತೊಬ್ಬ ಕಿಂಚಿತ್ತೂ ಸುಖಾನುಭವವಿಲ್ಲದೆ ಮನೋವ್ಯಥೆಪಡುತ್ತಾ ಪ್ರಾಣಬಿಡುತ್ತಾನೆ. |
೨೬ |
ಇವರಿಬ್ಬರೂ ಮಣ್ಣಿನಲ್ಲಿ ಹೂಣಲ್ಪಡುತ್ತಾರೆ ಹುಳುಗಳು ಅವರನು ಮುತ್ತಿಕೊಳ್ಳುತ್ತವೆ. |
೨೭ |
ಕೇಳಿ, ನಿಮ್ಮ ಆಲೋಚನೆಗಳನು ನಾನು ಬಲ್ಲೆ ನನಗೆ ವಿರುದ್ಧ ನೀವು ಮಾಡುವ ಕುಯುಕ್ತಿ ನನಗೆ ತಿಳಿದಿದೆ. |
೨೮ |
ನಿಮ್ಮ ಪ್ರಶ್ನೆ ಇದು: “ಆ ಖದೀಮನ ಮನೆ ಏನಾಯಿತು? ಆ ದುರುಳರು ನಿವಾಸಿಸುತ್ತಿದ್ದ ಗುಡಾರ ಏನಾಯಿತು?” |
೨೯ |
ದಾರಿಹೋಕರನ್ನು ನೀವು ವಿಚಾರಿಸಿಲ್ಲವೆ? ಅವರು ಕೊಟ್ಟ ದೃಷ್ಟಾಂತ ನಿಮಗೆ ಹಿಡಿಸಲಿಲ್ಲವೆ? |
೩೦ |
ದುರುಳನು ಆಪತ್ತಿನಾ ದಿನ ಸುರಕ್ಷಿತನಾಗಿರುತ್ತಾನೆ ದೇವರ ಆ ಕೋಪೋದ್ರೇಕದ ದಿನ ಆಶ್ರಯ ಪಡೆಯುತ್ತಾನೆ. |
೩೧ |
ಅವನಿಗೆ ‘ನೀನು ದುರ್ಮಾರ್ಗಿ’ ಎಂದು ಮುಖಾಮುಖಿಯಾಗಿ ಹೇಳಿದವರಾರು? ಅವನು ಮಾಡಿದ ದುಷ್ಕೃತ್ಯಗಳಿಗೆ ಮುಯ್ಯಿತೀರಿಸುವವರಾರು? |
೩೨ |
ಮೆರವಣಿಗೆಯಾಗಿ ಅವನನ್ನು ಸಮಾಧಿಗೆ ಒಯ್ಯುತ್ತಾರೆ ಅವನ ಗೋರಿಗೆ ಕಾವಲು ಕೂಡ ಇಡುತ್ತಾರೆ. |
೩೩ |
ಅವನಿಗೆ ಹಿಡಿಸುತ್ತದೆ ತಗ್ಗಿನಾ ಹೆಂಟೆಮಣ್ಣು ಅವನನು ಹಿಂಬಾಲಿಸುತ್ತಾರೆ ಅಸಂಖ್ಯಾತ ಜನರು ಮುಂದಕ್ಕೂ ಹಿಂಬಾಲಿಸುತ್ತಾರೆ ಲೆಕ್ಕವಿಲ್ಲದ ಜನರು. |
೩೪ |
ಇಂತಿರಲು ನಿಮ್ಮ ಉಪಶಮನದ ಮಾತು ವ್ಯರ್ಥ ನಿಮ್ಮ ಮಾತುಗಳ ಸಾರಾಂಶ ಮಿತ್ರದ್ರೋಹ.”
|
Kannada Bible (KNCL) 2016 |
No Data |