೧ |
ಆಗ ತೇಮಾನ್ಯನಾದ ಎಲೀಫಜನು ಮತ್ತೆ ಹೀಗೆಂದು ಹೇಳಿದನು: |
೨ |
“ಬುದ್ಧಿವಂತನು ಗಾಳಿಮಾತನ್ನಾಡುವುದು ಸರಿಯೆ? ಸುಡುಗಾಳಿಯಿಂದ ಹೊಟ್ಟೆ ತುಂಬಿಸಿಕೊಳ್ಳಬಹುದೇ? |
೩ |
ಅಂಥವನು ನಿಷ್ಪ್ರಯೋಜಕವಾಗಿ ವಾದಿಸುತ್ತಾನೆಯೆ? ನಿರರ್ಥಕವಾಗಿ ವ್ಯಾಜ್ಯವಾಡುತ್ತಾನೆಯೆ? |
೪ |
ನೀನಾದರೋ ದೇವರ ಭಯಭಕ್ತಿಯನ್ನು ಕೆಡಿಸುತ್ತಿರುವೆ ದೇವರ ಧ್ಯಾನಕ್ಕೆ ಅಡ್ಡಿಬರುತ್ತಿರುವೆ. |
೫ |
ನಿನ್ನ ಪಾಪವೆ ನಿನಗೆ ಮಾತನು ಕಲಿಸಿಕೊಟ್ಟಿದೆ ಕಪಟಿಗಳಾಡುವ ನುಡಿಯನೆ ನೀನು ಆರಿಸಿಕೊಂಡಿರುವೆ. |
೬ |
ನಾನಲ್ಲ, ನಿನ್ನ ಬಾಯೇ, ನಿನ್ನನು ಅಪರಾಧಿಯನ್ನಾಗಿಸುತ್ತಿದೆ ನಿನ್ನ ತುಟಿಗಳೇ ನಿನಗೆ ವಿರುದ್ಧ ಸಾಕ್ಷಿಕೊಡುತ್ತಿವೆ. |
೭ |
ನೀನು ಮನುಜರಿಗೆಲ್ಲ ಆದಿಪುರುಷನೋ? ಬೆಟ್ಟಗಳಿಗಿಂತ ಮುಂಚಿತವಾಗಿ ಹುಟ್ಟಿದವನೋ? |
೮ |
ದೇವರ ಆಲೋಚನಾಸಭೆಯಲಿ ನೀನು ಭಾಗವಹಿಸಿದ್ದೆಯೋ? ಜ್ಞಾನವೆಂಬುದು ನಿನಗೆ ಮಾತ್ರ ಮೀಸಲೋ? |
೯ |
ನಮಗೆ ತಿಳಿಯದಿರುವುದು ನಿನಗೆ ತಿಳಿದಿದೆಯೆ? ನಮಗೆ ಅರ್ಥವಾಗದಿರುವುದು ನಿನಗೆ ಅರ್ಥವಾಗಿದೆಯೆ? |
೧೦ |
ನಮ್ಮಲ್ಲಿದ್ದಾರೆ ತಲೆ ನರೆತವರು, ವಯೋವೃದ್ಧರು ನಿಮ್ಮಪ್ಪನಿಗಿಂತಲೂ ಹೆಚ್ಚು ಮುದುಕರಾದವರು. |
೧೧ |
ಕೇವಲವಾಯಿತೋ ನಿನಗೆ ದೇವರಿತ್ತ ಸಾಂತ್ವನ? ನಿನಗೆ ದೊರೆತ ಮೃದುವಾದ ಹಿತವಚನ? |
೧೨ |
ನಿನ್ನ ಹೃದಯ ನಿನ್ನನ್ನು ದೂರ ಒಯ್ದಿದೆ, ಏಕೆ? ನಿನ್ನ ಕಣ್ಣು ಕಿಡಿಕಾರುತ್ತಿದೆ ಏಕೆ? |
೧೩ |
ದೇವರಿಗೆ ವಿರುದ್ಧ ಕುದಿಯುತ್ತಿರುವೆ ಏಕೆ? ಬಾಯಿಂದ ಮಾತು ಹರಿಯುತ್ತಿವೆ ಏಕೆ? |
೧೪ |
ನರನು ಎಷ್ಟರವನು? ಅವನು ಪರಿಶುದ್ಧನಿರಲು ಸಾಧ್ಯವೆ? ಸ್ತ್ರೀಯರಲ್ಲಿ ಹುಟ್ಟಿದವನು ನೀತಿವಂತನಾಗಿರಬಹುದೆ? |
೧೫ |
ದೇವರಿಗೋ, ತನ್ನ ದೂತರಲ್ಲೂ ನಂಬಿಕೆಯಿಲ್ಲ ಆಕಾಶವೂ ಆತನ ದೃಷ್ಟಿಯಲ್ಲಿ ನಿರ್ಮಲವಲ್ಲ. |
೧೬ |
ಇಂತಿರಲು, ಮತ್ತಷ್ಟೂ ಮಲಿನನಲ್ಲವೆ ನರಮಾನವನು? ಅಸಹ್ಯನು, ಅಕ್ರಮಿಯು, ಕೇಡನ್ನು ನೀರಿನಂತೆ ಕುಡಿಯುವವನು? |
೧೭ |
ಕೇಳು ನಾನು ತಿಳಿಸುವ ಈ ಸಂಗತಿಯನು ನಾನು ಕಂಡದ್ದನ್ನೇ ನಿನಗೆ ವಿವರಿಸುವೆನು: |
೧೮ |
ಜ್ಞಾನಿಗಳು ತಮ್ಮ ಪೂರ್ವಜರಿಂದ ಕಲಿತಿದ್ದನು ಮುಚ್ಚುಮರೆಯಿಲ್ಲದೆ ಪ್ರಕಟಿಸಿದವುಗಳನು ಕೇಳು - ನಾನು ನಿನಗೆ ತಿಳಿಸುವೆನು: |
೧೯ |
ಅವರು ತಮ್ಮ ನಾಡಿನ ಬಾಧ್ಯತೆಯನ್ನು ಕಳೆದುಕೊಂಡವರಲ್ಲ ಪರದೇಶೀಯರು ಅವರ ಮಧ್ಯೆ ಹಾದುಹೋಗುವಂತಿರಲಿಲ್ಲ. |
೨೦ |
ಹಿಂಸಾತ್ಮಕನ ವರುಷಗಳು ಎಣಿಸಲಾಗಿವೆ ಆ ದುಷ್ಟನು ಜೀವಮಾನವೆಲ್ಲ ಬಾಧೆಪೀಡಿತನೆ. |
೨೧ |
ಭಯಹುಟ್ಟಿಸುವ ಅಪಾಯಗಳ ಸಪ್ಪಳ ಅವನ ಕಿವಿಯಲ್ಲಿ ಸೂರೆಗಾರನ ಧಾಳಿಯ ದಿಗಿಲು ಅವನು ಸುಖವಿರುವಲ್ಲಿ. |
೨೨ |
ಕತ್ತಲಿಂದ ಹಿಂದಿರುಗುವ ನಂಬಿಕೆ ಅವನಿಗಿಲ್ಲ ಕತ್ತಿ ತನಗಾಗಿ ಕಾದಿದೆಯೆಂಬುದರಲ್ಲಿ ಸಂದೇಹವಿಲ್ಲ. |
೨೩ |
ಹೊಟ್ಟೆಪಾಡಿಗಾಗಿ ಹುಡುಕುತ್ತಾ ಅಲೆದಾಡುತ್ತಾನೆ ಆ ಕತ್ತಲ ದಿನ ಹತ್ತಿರವಿದೆಯೆಂದು ಅರಿತಿದ್ದಾನೆ. |
೨೪ |
ಸಂಕಟ - ಪೇಚಾಟ ಅವನನ್ನು ಕಾಡುತ್ತಿರುತ್ತವೆ ಯುದ್ಧಸನ್ನದ್ಧ ರಾಜರಂತೆ ಅವನಿಗೆ ಸೋಲನು ತರುತ್ತವೆ. |
೨೫ |
ದೇವರಿಗೆ ವಿರುದ್ಧ ಅವನು ಮುಷ್ಠಿ ತೋರಿದನಲ್ಲವೆ? ಸರ್ವಶಕ್ತನನು ಧಿಕ್ಕರಿಸುತಾ ಶೂರನಂತೆ ಮೆರೆದನಲ್ಲವೆ? |
೨೬ |
ಗಟ್ಟಿಮುಟ್ಟಾದ ಗುರಾಣಿಯನ್ನು ಹಿಡಿದುಕೊಂಡೇ ಆತನ ಮೇಲೆ ಬೀಳಲು ತಲೆ ನಿಮಿರಿ ಓಡಿದನಲ್ಲವೆ? |
೨೭ |
ಕೊಬ್ಬೇರಿತ್ತು ಅವನ ಮೋರೆಯಲಿ ಬೊಜ್ಜು ಬೆಳೆದಿತ್ತು ಅವನ ಸೊಂಟದಲಿ. |
೨೮ |
ಹಾಳುಮಾಡಿದ್ದ ಪಟ್ಟಣಗಳಲ್ಲೆ ಅವನು ಸೇರಿಕೊಂಡಿದ್ದ ಯಾರೂ ವಾಸಮಾಡದೆ ದಿಬ್ಬವಾಗಿ ಮಾರ್ಪಟ್ಟಿದ್ದ ಶಾಪಗ್ರಸ್ತ ಮನೆಗಳಲ್ಲಿ ವಾಸಮಾಡಿಕೊಂಡಿದ್ದ. |
೨೯ |
ಇಂಥವನು ಸಿರಿವಂತನಾಗಿ ಉಳಿಯನು ಅವನ ಆಸ್ತಿ ಸ್ಥಿರವಾಗಿ ನಿಲ್ಲದು ಅವನು ಧರೆಯಲ್ಲಿ ಬೇರೂರಿ ಬೆಳೆಯನು. |
೩೦ |
ಕತ್ತಲೊಳಗಿಂದ ಪಾರಾಗನವನು ಸುಡುವುದು ಕಿಚ್ಚು ಅವನ ಕೊಂಬೆಯನು ಬಡಿದೊಯ್ಯುವುದು ಗಾಳಿ ಅದರ ಫಲವನು. |
೩೧ |
ವ್ಯರ್ಥವಾದುದನು ನಂಬಿ ಅವನು ಮೋಸಹೋಗದಿರಲಿ ಇಲ್ಲವಾದರೆ ಅವನಿಗೆ ಸಿಗುವ ಪ್ರತಿಫಲ ವ್ಯರ್ಥವೇ ಸರಿ. |
೩೨ |
ಅವನ ಬುಡ ಒಣಗುವುದು ಕಾಲಕ್ಕೆ ಮುಂಚೆ ಪಚ್ಚೆಪಸಿರಾಗದು ಅವನ ಕೊಂಬೆ. |
೩೩ |
ಅವನಾಗುವನು ಮಾಗದ ಹಣ್ಣನ್ನು ಕಳೆದುಕೊಂಡ ದ್ರಾಕ್ಷಿಬಳ್ಳಿಯಂತೆ ಹೂಗಳನ್ನು ಉದುರಿಸಿಕೊಂಡ ಓಲಿವ್ ಎಣ್ಣೆ ಮರದಂತೆ. |
೩೪ |
ದುರುಳರ ಸಂಘವದು ಬರಡಾದುದು ಸುಡುವುದು ಬೆಂಕಿ ಲಂಚಕೋರರ ಗುಡಾರವನು. |
೩೫ |
ಉದರದಲ್ಲಿ ವಂಚನೆಯನ್ನು ಗರ್ಭಧರಿಸುವರು ಕೇಡನು ಹಡೆವೆನೆಂದೆಣಿಸಿ ಶೂನ್ಯವ ಹೆರುವುದ ನೋಡು.
|
Kannada Bible (KNCL) 2016 |
No Data |