೧ |
ನಾವು ಪೌಳಿಗೋಡೆಯನ್ನು ಕಟ್ಟುತ್ತಿದ್ದ ಸುದ್ದಿ ಸನ್ಬಲ್ಲಟನಿಗೆ ಮುಟ್ಟಿತು. ಅವನು ಬಹಳ ಹೊಟ್ಟೆಕಿಚ್ಚಿನ ಹಾಗು ಸಿಡುಕಿನ ವ್ಯಕ್ತಿ. |
೨ |
“ನನ್ನ ಸಹೋದರರ ಮುಂದೆ ಹಾಗು ಸಮಾರಿಯದ ದಂಡಿನವರ ಮುಂದೆ ಅಶಕ್ತರಾದ ಈ ಯೆಹೂದ್ಯರು ಮಾಡುವುದಾದರೂ ಏನು? ಇವರು ತಮ್ಮನ್ನೇ ಬಲಪಡಿಸಿಕೊಳ್ಳಬೇಕೆಂದು ಇರುವರೋ? ಬಲಿಯರ್ಪಿಸುವರೋ? ಈ ದಿನವೇ ಈ ಕೆಲಸವನ್ನು ಮಾಡಿಮುಗಿಸುವರೋ? ಸುಟ್ಟುಹೋದ ಪಟ್ಟಣದ ಬೂದಿಯ ರಾಶಿಯೊಳಗೆ ಹುದುಗಿಹೋದ ಕಲ್ಲುಗಳನ್ನು ಬದುಕಿಸುವರೋ?’ ಎಂದು ಹೇಳಿ ಯೆಹೂದ್ಯರನ್ನು ಪರಿಹಾಸ್ಯ ಮಾಡಿದನು. |
೩ |
ಅವನ ಬಳಿಯಲ್ಲೇ ನಿಂತಿದ್ದ ಅಮ್ಮೋನಿಯನಾದ ಟೋಬೀಯನು, “ಅವರು ಕಟ್ಟುವ ಕಲ್ಲು ಗೋಡೆಯ ಮೇಲೆ ನರಿ ಹಾರಿದರೆ ಅದು ಬಿದ್ದುಹೋಗುವುದು!” ಎಂದು ಅಣಕಿಸಿದನು. |
೪ |
“ನಮ್ಮ ದೇವರೇ ಆಲಿಸಿ: ಅವರು ನಮ್ಮನ್ನು ಎಷ್ಟು ಹೀಯಾಳಿಸುತ್ತಾರೆ! ಈ ನಿಂದೆಯನ್ನು ಅವರ ತಲೆಯ ಮೇಲೆಯೇ ಬರಮಾಡಿ. ಅವರು ದೇಶಭ್ರಷ್ಟರಾಗಿ ಸೂರೆಹೋಗುವಂತೆ ಮಾಡಿ. |
೫ |
ಅವರ ಅಪರಾಧವನ್ನು ಕ್ಷಮಿಸಬೇಡಿ. ನಿಮ್ಮೆದುರಿಗಿರುವ ಅವರ ಪಾಪವನ್ನು ಅಳಿಸಿಬಿಡಬೇಡಿ. ಏಕೆಂದರೆ ಕಟ್ಟುವವರ ಮುಂದೆಯೇ ಅವರು ನಿಮ್ಮನ್ನು ಕೆಣಕಿದ್ದಾರೆ,” ಎಂದು ನಾನು ಪ್ರಾರ್ಥಿಸಿದೆ. |
೬ |
ಇದಾದ ಮೇಲೆ ನಾವು ಕಟ್ಟುವ ಕೆಲಸವನ್ನು ಮುಂದುವರಿಸಿದೆವು. ಜನರು ಮನಸ್ಸುಮಾಡಿ ಅರ್ಧಗೋಡೆಯನ್ನು ಕಟ್ಟಿದರು. |
೭ |
ಸನ್ಬಲ್ಲಟನು, ಟೋಬೀಯನು, ಅರೇಬಿಯರು, ಅಮ್ಮೋನಿಯರು ಹಾಗು ಅಷ್ಡೋದಿನವರು ಜೆರುಸಲೇಮಿನ ಗೋಡೆಯ ದುರಸ್ತಿಕಾರ್ಯ ಮುಂದುವರಿದಿದೆ ಹಾಗು ಅದರ ಸಂದುಗಳು ಮತ್ತೆ ಮುಚ್ಚಿಕೊಳ್ಳುತ್ತಿವೆ ಎಂಬುದನ್ನು ಕೇಳಿದರು. |
೮ |
ಅವರಿಗೆ ಬಹುಕೋಪ ಬಂದಿತು. “ನಾವು ಒಟ್ಟಾಗಿ ಜೆರುಸಲೇಮಿನವರ ವಿರುದ್ಧ ಯುದ್ಧಕ್ಕೆ ಹೋಗಿ ಅವರನ್ನು ತಳಮಳಗೊಳಿಸೋಣ,” ಎಂದು ಒಳಸಂಚು ಮಾಡಿಕೊಂಡರು. |
೯ |
ನಾವಾದರೋ ನಮ್ಮ ದೇವರಿಗೆ ಮೊರೆಯಿಟ್ಟು ಆ ಜನರು ಬರುವ ದಾರಿಯಲ್ಲಿ ಹಗಲಿರುಳು ಕಾವಲಿಟ್ಟೆವು. |
೧೦ |
ಇತ್ತ ಯೆಹೂದ್ಯರೇ, “ಹೊರೆಹೊರುವವರ ಬಲ ಕುಂದಿಹೋಯಿತು. ಧೂಳಿನ ರಾಶಿ ವಿಪರೀತ ಆಗಿದೆ; ಈ ಗೋಡೆಯನ್ನು ಕಟ್ಟುವುದು ನಮ್ಮಿಂದಾಗದು,” ಎಂದರು. |
೧೧ |
ಅತ್ತ ನಮ್ಮ ವಿರೋಧಿಗಳು, “ಅವರಿಗೆ ತಿಳಿಯದೆ, ಗೋಚರವಾಗದೆ, ಫಕ್ಕನೆ ಅವರೊಳಗೆ ನುಗ್ಗಿ ಅವರನ್ನು ಕೊಂದು ಕೆಲಸವನ್ನು ನಿಲ್ಲಿಸಿಬಿಡೋಣ,” ಎಂದುಕೊಳ್ಳುತ್ತಿದ್ದರು. |
೧೨ |
ಅವರ ನೆರೆಯೂರುಗಳಲ್ಲಿ ವಾಸಿಸುತ್ತಿದ್ದ ಯೆಹೂದ್ಯರು ಬಂದು, “ನೀವು ಯಾವ ಕಡೆಗೆ ತಿರುಗಿಕೊಂಡರೂ ಆ ಎಲ್ಲಾ ಕಡೆಗಳಿಂದ ನಮಗೆ ವಿರೋಧವಾಗಿ ಯುದ್ಧಕ್ಕೆ ಬರುತ್ತಾರೆ,” ಎಂದು ಪದೇ ಪದೇ ತಿಳಿಸುತ್ತಿದ್ದರು. |
೧೩ |
ಆಗ ನಾನು ಜನರಿಗೆ, “ಕತ್ತಿ, ಬಿಲ್ಲು, ಬರ್ಜಿಗಳನ್ನು ಹಿಡಿದುಕೊಂಡು ಗೋಡೆಯ ಹಿಂದಣ ತಗ್ಗಾದ ಬಯಲುಗಳಲ್ಲಿ ಗೋತ್ರಗೋತ್ರಗಳಾಗಿ ನಿಲ್ಲಿ,” ಎಂದು ಆಜ್ಞಾಪಿಸಿದೆ. |
೧೪ |
ಅವರನ್ನು ಸಂದರ್ಶಿಸಿ, ಅವರ ಮುಂದೆ ನಿಂತು, ಶ್ರೀಮಂತರನ್ನೂ ಅಧಿಕಾರಿಗಳನ್ನೂ ಉಳಿದ ಜನರನ್ನೂ ಸಂಬೋಧಿಸಿ, “ನಿಮ್ಮ ಹಗೆಗಳಿಗೆ ಹೆದರಬೇಡಿ; ಮಹೋನ್ನತರೂ ಭಯಭಕ್ತಿಗೆ ಪಾತ್ರರೂ ಆದ ಸರ್ವೇಶ್ವರಸ್ವಾಮಿಯನ್ನು ಸ್ಮರಿಸಿಕೊಂಡು, ನಿಮ್ಮ ಸಹೋದರರಿಗಾಗಿ, ಮಡದಿಮಕ್ಕಳಿಗಾಗಿ ಹಾಗು ನಿಮ್ಮ ಮನೆಮಠಗಳಿಗಾಗಿ ಕಾದಾಡಿರಿ,” ಎಂದು ಹುರಿದುಂಬಿಸಿದೆ. |
೧೫ |
ನಮ್ಮ ಶತ್ರುಗಳು ತಮ್ಮ ಹಂಚಿಕೆ ನಮಗೆ ಗೊತ್ತಾಯಿತೆಂದೂ ದೇವರು ಅದನ್ನು ವ್ಯರ್ಥಮಾಡಿದರೆಂದೂ ತಿಳಿದುಕೊಂಡರು. ನಮ್ಮನ್ನು ಬಿಟ್ಟುಹೋದರು; ನಾವೆಲ್ಲರು ನಮ್ಮ ನಮ್ಮ ಗೋಡೆಯ ಕೆಲಸಕ್ಕೆ ಮತ್ತೆ ಕೈಹಾಕಿದೆವು. |
೧೬ |
ಅಂದಿನಿಂದ ನನ್ನ ಸ್ವಂತ ಆಳುಗಳಲ್ಲಿ ಅರ್ಧಮಂದಿ ಕಟ್ಟಡ ಕೆಲಸದಲ್ಲಿ ನಿರತರಾದರು. ಅರ್ಧಮಂದಿ ಕವಚವನ್ನು ಧರಿಸಿಕೊಂಡು ಬರ್ಜಿ, ಗುರಾಣಿ, ಬಿಲ್ಲುಗಳನ್ನು ಹಿಡಿದುಕೊಂಡು ನಿಂತರು. ಅದೇ ಪ್ರಕಾರ ಅಧಿಕಾರಿಗಳೂ ಗೋಡೆ ಕಟ್ಟುವ ಯೆಹೂದ್ಯರ ಹಿಂದೆ ನಿಂತರು. |
೧೭ |
ಹೊರೆಹೊರುವವರೂ ಒಂದು ಕೈಯಿಂದ ಹೊರೆಹೊತ್ತು ಇನ್ನೊಂದು ಕೈಯಿಂದ ಈಟಿ ಹಿಡಿದುಕೊಳ್ಳುತ್ತ ಇದ್ದರು. |
೧೮ |
ಕಟ್ಟುವವರಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಕತ್ತಿಯನ್ನು ಸೊಂಟಕ್ಕೆ ಬಿಗಿದುಕೊಳ್ಳುತ್ತ ಇದ್ದನು. ನಾನಂತೂ ಕಹಳೆ ಊದುವವನೊಬ್ಬನನ್ನು ನನ್ನ ಬಳಿಯಲ್ಲೇ ಇರಿಸಿಕೊಂಡಿದ್ದೆ. |
೧೯ |
ಶ್ರೀಮಂತರಿಗು, ಅಧಿಕಾರಿಗಳಿಗು ಹಾಗು ಉಳಿದ ಜನರಿಗು, “ನಾವು ಮಾಡುವ ಕೆಲಸ ದೊಡ್ಡದು, ಹಲವಾರು ಎಡೆಗಳಲ್ಲಿ ನಡೆಯುವಂಥದ್ದು; ನಾವು ಗೋಡೆಯ ನಿಮಿತ್ತ ಒಬ್ಬರಿಂದ ಒಬ್ಬರು ದೂರವಾಗಿರುತ್ತೇವೆ. |
೨೦ |
ನಿಮಗೆ ಕಹಳೆಯ ಧ್ವನಿ ಕೇಳಿದಕೂಡಲೆ, ನಮ್ಮ ಬಳಿಗೆ ಕೂಡಿಬನ್ನಿರಿ. ನಮ್ಮ ದೇವರು ನಮ್ಮ ಪರವಾಗಿ ಯುದ್ಧಮಾಡುವರು,” ಎಂದು ಹೇಳಿದ್ದೆ. |
೨೧ |
ಹೀಗೆ ನಾವು ಅರುಣೋದಯದಿಂದ ನಕ್ಷತ್ರಗಳು ಮೂಡುವವರೆಗೂ ಕೆಲಸಮಾಡುತ್ತಿದ್ದೆವು; ನನ್ನ ಸೇವಕರಲ್ಲಿ ಅರ್ಧಮಂದಿ ಬರ್ಜಿ ಹಿಡಿದುಕೊಂಡಿದ್ದರು. |
೨೨ |
ಇದಲ್ಲದೆ, ನಾನು ಮೇಸ್ತ್ರಿಗಳಿಗೆ, “ನಿಮ್ಮ ಆಳುಗಳು ರಾತ್ರಿಯಲ್ಲಿ ನಮಗೆ ಕಾವಲಾಗಿರಲು ಹಾಗು ಹಗಲಿನಲ್ಲಿ ಕೆಲಸಮಾಡಲು ಸಾಧ್ಯವಾಗುವಂತೆ, ನೀವು ನಿಮ್ಮ ನಿಮ್ಮ ಆಳುಗಳೊಡನೆ ಜೆರುಸಲೇಮಿನಲ್ಲೇ ವಾಸಮಾಡಬೇಕು,” ಎಂದು ಅಪ್ಪಣೆಮಾಡಿದ್ದೆ. |
೨೩ |
ನಾನು, ನನ್ನ ಸಹೋದರರು, ಸೇವಕರು ಹಾಗು ಮೈಗಾವಲಿನವರು ಸ್ನಾನ ಸಮಯದಲ್ಲಿ ಹೊರತು, ಬೇರೆ ಸಮಯದಲ್ಲಿ ನಮ್ಮ ಬಟ್ಟೆಗಳನ್ನು ತೆಗೆದುಹಾಕುತ್ತಿರಲಿಲ್ಲ.
|
Kannada Bible (KNCL) 2016 |
No Data |