೧ |
ಇಸ್ರಯೇಲಿನ ಜನರೆಲ್ಲರೂ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದರು. “ನೀವು ನಮ್ಮ ರಕ್ತಸಂಬಂಧಿ. |
೨ |
ಅರಸ ಸೌಲ ನಮ್ಮನ್ನು ಆಳುತ್ತಿದ್ದಾಗ ನೀವು ಇಸ್ರಯೇಲರ ದಳಪತಿಯಾಗಿ ಯುದ್ಧ ನಡೆಸಿದಿರಿ. ನಮ್ಮ ದೇವರಾದ ಸರ್ವೇಶ್ವರ, ‘ನೀನು ನನ್ನ ಪ್ರಜೆಗಳಾದ ಇಸ್ರಯೇಲರ ನಾಯಕನೂ ಪಾಲಕನೂ ಆಗುವೆ,’ ಎಂದು ವಾಗ್ದಾನ ಮಾಡಿದ್ದು ನಿಮ್ಮನ್ನು ಕುರಿತೇ” ಎಂದು ಹೇಳಿ ವಂದಿಸಿದರು. |
೩ |
ಹೀಗೆ ಇಸ್ರಯೇಲಿನ ನಾಯಕರೆಲ್ಲರೂ ಹೆಬ್ರೋನಿನಲ್ಲಿ ಅರಸ ದಾವೀದನ ಬಳಿಗೆ ಬಂದು ಬಿನ್ನವಿಸಿದರು. ದಾವೀದನು ಅವರೊಂದಿಗೆ ಸರ್ವೇಶ್ವರನ ಸನ್ನಿಧಿಯಲ್ಲಿ ಒಂದು ಒಪ್ಪಂದ ಮಾಡಿಕೊಂಡನು. ಅವರು ಅವನನ್ನು ಅಭಿಷೇಕಿಸಿದರು. ಹೀಗೆ ಸರ್ವೇಶ್ವರ ಸಮುವೇಲನ ಮುಖಾಂತರ ಮಾಡಿದ ವಾಗ್ದಾನ ನೆರವೇರಿತು; ದಾವೀದನು ಇಸ್ರಯೇಲರ ಅರಸನಾದನು. |
೪ |
ಆ ಕಾಲದಲ್ಲಿ ಜೆರುಸಲೇಮ್ ಪಟ್ಟಣವನ್ನು ‘ಯೆಬೂಸ’ ಎಂದು ಕರೆಯಲಾಗುತ್ತಿತ್ತು. ಅಲ್ಲಿಯ ಮೂಲನಿವಾಸಿಗಳಾದ ಯೆಬೂಸಿಯರು ಆ ಪ್ರದೇಶದಲ್ಲಿ ಇನ್ನೂ ವಾಸಿಸುತ್ತಿದ್ದರು. ಅರಸ ದಾವೀದನೂ ಎಲ್ಲಾ ಇಸ್ರಯೇಲರೂ ಜೆರುಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿದರು. |
೫ |
ದಾವೀದನು ಪಟ್ಟಣದೊಳಗೆ ಪ್ರವೇಶಿಸಲು ಎಂದಿಗೂ ಸಾಧ್ಯವಿಲ್ಲವೆಂದು ಯೆಬೂಸಿಯರು ಹೇಳಿದ್ದರು. ಆದರೂ ದಾವೀದನು ಪಟ್ಟಣವನ್ನು ಪ್ರವೇಶಿಸಿ ಸಿಯೋನ್ ಕೋಟೆಯನ್ನು ವಶಪಡಿಸಿಕೊಂಡನು. ಅದು ‘ದಾವೀದ್ ನಗರ’ ಎಂದು ಹೆಸರು ಪಡೆಯಿತು. |
೬ |
‘ಯೆಬೂಸಿಯರಲ್ಲಿ ಒಬ್ಬನನ್ನು ಯಾರು ಮೊದಲು ಕೊಲ್ಲುವನೋ ಅವನು ನನ್ನ ದಳಪತಿಯಾಗುವನು’ ಎಂದು ದಾವೀದ ಪ್ರಕಟಿಸಿದ್ದನು. ಜೆರೂಯಳ ಮಗ ಯೋವಾಬನು ಯುದ್ಧದಲ್ಲಿ ಮುಂದೆ ಹೋಗಿ ಸೇನಾಪತಿಯಾದನು. |
೭ |
ಆ ಕೋಟೆಯನ್ನು ದಾವೀದನು ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡದ್ದರಿಂದ ಅದಕ್ಕೆ ‘ದಾವೀದ ನಗರ’ ಎಂದು ಹೆಸರಾಯಿತು. |
೮ |
ಗುಡ್ಡದ ಪೂರ್ವದಿಕ್ಕಿನ ಸ್ಥಳವನ್ನು ಮಟ್ಟಮಾಡಿ ಪಟ್ಟಣವನ್ನು ಪುನಃ ಕಟ್ಟಿದನು. ಯೋವಾಬನು ಪಟ್ಟಣದ ಉಳಿದ ಭಾಗವನ್ನು ಜೀರ್ಣೋದ್ಧಾರ ಮಾಡಿದನು. |
೯ |
ಸರ್ವಶಕ್ತ ಸರ್ವೇಶ್ವರಸ್ವಾಮಿ ದಾವೀದನೊಂದಿಗೆ ಇದ್ದುದರಿಂದ ಅವನು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದಿದನು. |
೧೦ |
ದಾವೀದನ ಸುಪ್ರಸಿದ್ಧ ರಣವೀರರ ಪಟ್ಟಿ ಇದು: ಸರ್ವೇಶ್ವರ ಮಾಡಿದ ವಾಗ್ದಾನಕ್ಕೆ ಅನುಗುಣವಾಗಿ ದಾವೀದನು ಅರಸನಾಗಲು ಇತರ ಇಸ್ರಯೇಲರೊಂದಿಗೆ ಸಹಾಯ ಮಾಡಿದವರು ಹಾಗೂ ಅವನ ರಾಜ್ಯ ಶಕ್ತಿಯುತವಾಗಿರುವಂತೆ ಮಾಡಿದವರು ಇವರು: |
೧೧ |
ಹಕ್ಮೋನ ಗೋತ್ರದ ಯಾಷೊಬ್ಬಾಮ ಮೊದಲನೆಯವನು. ಇವನು ‘ಮೂವರು ಪ್ರಮುಖ ವೀರರು’ ಎಂಬ ಪಡೆಯ ನಾಯಕ. ಇವನು ತನ್ನ ಈಟಿಯಿಂದ ಮುನ್ನೂರು ಜನರ ಮೇಲೆ ಹೋರಾಡಿ ಅವರೆಲ್ಲರನ್ನೂ ಒಂದೇ ಕಾಳಗದಲ್ಲಿ ಕೊಂದುಹಾಕಿದನು. |
೧೨ |
ಪ್ರಸಿದ್ಧರಾದ ‘ಮೂವರು ಪ್ರಮುಖರು’ ಎಂಬ ಪಡೆಯಲ್ಲಿ ಎರಡನೆಯವನು ಅಹೋಹ್ಯ ಗೋತ್ರದ ದೋದೋ ಎಂಬವನ ಮಗ ಎಲ್ಲಾಜಾರನು. |
೧೩ |
ಈತ ಪಸ್ದಮ್ಮೀಮಿ ಎಂಬಲ್ಲಿ ಫಿಲಿಷ್ಟಿಯರಿಗೆ ವಿರುದ್ಧ ಹೂಡಿದ ಕಾಳಗದಲ್ಲಿ ದಾವೀದನ ಪರವಾಗಿ ಹೋರಾಡಿದನು. ಇಸ್ರಯೇಲರು ಹಿಂಜರಿದು ಓಡಿಹೋಗುತ್ತಿದ್ದಾಗ ಇವನು ಜವೆಗೋದಿಯ ಹೊಲದಲ್ಲಿ ಇದ್ದನು. |
೧೪ |
ಆಗ ಅವನೂ ಅವನ ಸಂಗಡಿಗರೂ ಹೊಲದ ಮಧ್ಯದಲ್ಲಿ ನಿಂತುಕೊಂಡು ಫಿಲಿಷ್ಟಿಯರಿಗೆ ವಿರೋಧವಾಗಿ ಕಾದಾಡಿದರು. ಸರ್ವೇಶ್ವರ ಅವನಿಗೆ ಮಹಾಜಯವನ್ನು ದಯಪಾಲಿಸಿದರು. |
೧೫ |
ಅದುಲ್ಲಾಮ್ ಗವಿಯ ಹತ್ತಿರ ದಾವೀದನು ವಾಸಿಸುತ್ತಿದ್ದಾಗ, ಮೂವತ್ತು ಪ್ರಮುಖ ರಣವೀರರಲ್ಲಿ ಮೂವರು ಒಂದು ದಿನ ಒಂದು ಬಂಡೆಯ ಬಳಿಗೆ ಹೋದರು. ಅಲ್ಲಿ ಫಿಲಿಷ್ಟಿಯರ ಸೈನ್ಯವು ರೆಫಾಯಿಮ್ ಕೊಳ್ಳದಲ್ಲಿ ಬೀಡುಬಿಟ್ಟದ್ದನ್ನು ಕಂಡರು. |
೧೬ |
ಆ ಸಮಯದಲ್ಲಿ ದಾವೀದನು ಭದ್ರವಾದ ದಿಣ್ಣೆಯ ಮೇಲಿದ್ದನು. ಫಿಲಿಷ್ಟಿಯರು ಬೆತ್ಲೆಹೇಮನ್ನು ವಶಪಡಿಸಿಕೊಂಡಿದ್ದರು. |
೧೭ |
ದಾವೀದನು ತನ್ನೂರನ್ನು ಜ್ಞಾಪಿಸಿಕೊಂಡು ಅಸ್ವಸ್ಥನಾಗಿ ‘ಬೆತ್ಲೆಹೇಮಿನ ದ್ವಾರದ ಬಳಿಯಿರುವ ಬಾವಿಯಿಂದ ನನಗೆ ಕುಡಿಯಲು ಯಾರಾದರೂ ನೀರನ್ನು ತಂದುಕೊಡಬಲ್ಲಿರೋ!’ ಎಂದು ತನ್ನ ಅಪೇಕ್ಷೆಯನ್ನು ವ್ಯಕ್ತಪಡಿಸಿದನು. |
೧೮ |
ಪ್ರಸಿದ್ಧರಾದ ಮೂವರು ರಣವೀರರು ಫಿಲಿಷ್ಟಿಯರ ಪಾಳೆಯವನ್ನು ಹಾದುಹೋಗಿ ಬಾವಿಯಿಂದ ನೀರನ್ನು ಸೇದಿಕೊಂಡು ದಾವೀದನಿಗೆ ತಂದುಕೊಟ್ಟರು. “ನಾನು ಈ ನೀರನ್ನು ಎಂದೆಂದಿಗೂ ಕುಡಿಯಬಾರದು. ಇದನ್ನು ಕುಡಿದರೆ, ತಮ್ಮ ಪ್ರಾಣಗಳನ್ನೇ ಪಣವಾಗಿಟ್ಟ ಈ ಮೂವರ ರಕ್ತವನ್ನು ಕುಡಿದಂತಾಗುವುದು,” ಎಂದು ಹೇಳಿ, |
೧೯ |
ದಾವೀದನು ಆ ನೀರನ್ನು ಕುಡಿಯದೇ ಸರ್ವೇಶ್ವರನಿಗೆ ಸಮರ್ಪಿಸುವಂತೆ ನೆಲದ ಮೇಲೆ ಸುರಿದನು. ಈ ಮೂರು ಮಂದಿ ರಣವೀರರು ಸಾಧಿಸಿದ ಪರಾಕ್ರಮವಿದು. |
೨೦ |
ಯೋವಾಬನ ಸಹೋದರ ಅಬ್ಷೈ ‘ಮೂವತ್ತು ಪ್ರಮುಖ ವೀರರು,’ ಎಂಬ ಪಡೆಯ ನಾಯಕನಾಗಿದ್ದನು. ಅವನು ತನ್ನ ಈಟಿಯಿಂದ ಮುನ್ನೂರು ಜನರಿಗೆ ವಿರೋಧವಾಗಿ ಹೋರಾಡಿ ಅವರನ್ನು ಕೊಂದುಹಾಕಿ ‘ಮೂವತ್ತು ಪ್ರಮುಖ ವೀರರು ‘ ಎಂಬ ಪಡೆಯಲ್ಲಿ ಪ್ರಖ್ಯಾತ ನಾದನು. |
೨೧ |
ಅವನು ಈ ‘ಮೂವತ್ತು ಪ್ರಮುಖ ವೀರರ’ ಪಡೆಯಲ್ಲಿ ಪ್ರಸಿದ್ಧನಾದುದಲ್ಲದೇ ಅದರ ನಾಯಕನೂ ಆದನು. ಆದರೆ ‘ಮೂವರು ಪ್ರಮುಖ ವೀರರು’ ಎಂಬ ಪಡೆಯವರಷ್ಟು ಪ್ರಸಿದ್ಧನಾಗಲಿಲ್ಲ. |
೨೨ |
ಕಬ್ಜಯೇಲಿನ ಯೆಹೋಯಾದನ ಮಗ ಬೇನಾಯನು ಪ್ರಖ್ಯಾತಿ ಪಡೆದ ಸೈನಿಕನಾಗಿದ್ದನು. ಅವನು ಅನೇಕ ಶೂರಕೃತ್ಯಗಳನ್ನೆಸಗಿದನು: ಮೋವಾಬ್ಯರ ಇಬ್ಬರು ಬಲಶಾಲಿ ಯುದ್ಧವೀರರನ್ನು ಕೊಂದದ್ದೂ ಈ ಕೃತ್ಯಗಳಲ್ಲಿ ಒಂದಾಗಿದೆ. ಒಮ್ಮೆ ಚಳಿಗಾಲದಲ್ಲಿ ತಗ್ಗುಪ್ರದೇಶದಲ್ಲಿ ಹೋಗಿ ಒಂದು ಸಿಂಹವನ್ನು ಕೊಂದನು. |
೨೩ |
ಇನ್ನೊಮ್ಮೆ ಏಳುವರೆ ಅಡಿ ಎತ್ತರದ, ಅತೀ ಬಲವಾದ ಈಟಿಯನ್ನು ಹೊಂದಿದ್ದ, ಬಲಾಢ್ಯನಾದ ಈಜಿಪ್ಟನೊಬ್ಬನನ್ನು ಸೋಲಿಸಿದನು. ಆ ಈಜಿಪ್ಟಿನವನ ಕೈಯಲ್ಲಿ ಬಲವಾದ ಈಟಿ ಇತ್ತು. ಇವನಾದರೋ ಒಂದು ಕೋಲನ್ನು ಮಾತ್ರ ಹಿಡಿದುಕೊಂಡು ಹೋಗಿ, ಅವನ ಕೈಯಲ್ಲಿದ್ದ ಈಟಿಯನ್ನು ಕಿತ್ತುಕೊಂಡು ಅದರಿಂದಲೇ ಅವನನ್ನು ಸಂಹರಿಸಿದನು. |
೨೪ |
‘ಮೂವತ್ತು ಪ್ರಮುಖ ವೀರರು’ ಪಡೆಯ ಒಬ್ಬನಾದ ಬೆನಾಯ ಮಾಡಿದ ಶೂರಕೃತ್ಯ ಇದು. |
೨೫ |
ಇವನು ‘ಮೂವತ್ತು ಪ್ರಮುಖ ವೀರರ’ ಪಡೆಯಲ್ಲಿ ಪ್ರಸಿದ್ಧನಾಗಿದ್ದನೇ ಹೊರತು, ‘ಮೂವರು ಪ್ರಮುಖ ವೀರರ’ ಪಡೆಯವರಷ್ಟು ಪ್ರಖ್ಯಾತನಾಗಲಿಲ್ಲ. ಅವನನ್ನು ದಾವೀದನು ತನ್ನ ಕಾವಲುಗಾರರಲ್ಲಿ ಮುಖ್ಯಸ್ಥನನ್ನಾಗಿ ಇಟ್ಟುಕೊಂಡಿದ್ದನು. |
೨೬ |
ಪ್ರಖ್ಯಾತರಾದ ಇನ್ನಿತರ ಸೈನಿಕರು: ಯೋವಾಬನ ತಮ್ಮ ಅಸಾಹೇಲ, ಬೆತ್ಲೆಹೇಮಿನ ದೋದೋವಿನ ಮಗ ಎಲ್ಖಾನಾನ್, |
೨೭ |
ಹರೋರಿನ ಶಮ್ಮೋತ್, ಪೆಲೋನ್ಯನಾದ ಹೆಲೆಚ್, |
೨೮ |
ತೆಕೋವದ ಇಕ್ಕೇಷನ ಮಗ ಈರ, ಅನತೋತಿನ ಅಬೀಯೆಜೆರ್, |
೨೯ |
ಹುಷ ಊರಿನ ಸಿಬ್ಕೈ, ಅಹೋಹಿನ ಈಲೈ, |
೩೦ |
ನೆಟೋಫದ ಮಹರೈ, ನೆಟೋಫದ ಬಾಣನ ಮಗ ಹೇಲೆದ್, |
೩೧ |
ಬೆನ್ಯಾಮೀನ್ ದೇಶದ ಗಿಬೆಯ ಊರಿನ ರೀಬೈನ ಮಗ ಈತೈ, ಪಿರಾತೋನ್ಯದ ಬೆನಾಯ, |
೩೨ |
ನಹಲೇಗಾಷಿನ ಹೂರೈ, ಅರಾಮಾ ತಗ್ಗಿನ ಅಬೀಯೇಲ್, |
೩೩ |
ಬಹರೂಮ್ಯದ ಅಜ್ಮಾವೆತ್, ಶಾಲ್ಬೋನ್ಯದ ಎಲೆಯಖ್ಬ, |
೩೪ |
ಗೀಜೋನಿನ ಹಾಷೇಮನ ಮಕ್ಕಳು, ಹರಾರ್ಯದ ಶಾಗೇಯನ ಮಗ ಯೋನಾತಾನ, |
೩೫ |
ಹರಾರ್ಯದ ಶಾಕಾರನ ಮಗ ಅಹೀಯಾಮ್, ಊರನ ಮಗ ಎಲೀಫಲ್, |
೩೬ |
ಮೆಕೆರಾತ್ಯದ ಹೇಫೆರ್, ಪೆಲೋನ್ಯದ ಅಹೀಯ, |
೩೭ |
ಕರ್ಮೇಲ್ಯದ ಹೆಚ್ರೋ, ಎಜ್ಬೈಯ ಮಗ ನಾರೈ, |
೩೮ |
ನಾತಾನನ ತಮ್ಮ ಯೋವೇಲ್, ಹಗ್ರೀಯನ ಮಗ ಮಿಬ್ದಾರ್, |
೩೯ |
ಅಮ್ಮೋನಿನ ಚೆಲೆಕ್, ಬೇರೋತ್ಯನೂ ಚೆರೂಯಳ ಮಗ ಯೋವಾಬನ ಆಯುಧವಾಹಕನೂ ಆಗಿದ್ದ ನಹರೈ, |
೪೦ |
ಇತ್ರೀಯರಾದ ಈರ ಮತ್ತು ಗಾರೇಬ, |
೪೧ |
ಹಿತ್ತೀಯನಾದ ಊರೀಯ, ಅಹ್ಲೈಯ ಮಗ ಜಾಬಾದ್, |
೪೨ |
ಶೀಜನ ಮಗ ಅದೀನ, (ಈತ ರೂಬೇನ್ ಗೋತ್ರದ ಪ್ರಮುಖ ಸದಸ್ಯ, ಮೂವತ್ತು ಸೈನಿಕರ ಒಂದು ಗುಂಪೂ ಅವನಿಗಿತ್ತು). |
೪೩ |
ಮಾಕನ ಮಗ ಹಾನಾನ್, ಮೆತೆನ ಊರಿನ ಯೋಷಾಫಾಟ್, |
೪೪ |
ಅಷ್ಟೆರಾತ್ಯದ ಉಜ್ಜೀಯ, ಅರೋಯೇರಿನ ಹೋತಾಮನ ಮಕ್ಕಳಾದ ಶಾಮಾ, ಯೆಗೀಯೇಲರು, |
೪೫ |
ಶಮ್ರಿಯ ಮಗ ಎದೀಗಯೇಲ್, ಎದೀಗಯೇಲನ ತಮ್ಮನೂ ತೀಚೀಯನೂ ಆದ ಯೋಹ, |
೪೬ |
ಮಹವೀಯದ ಎಲೀಯೇಲ್, ಎಲ್ನಾಮನ ಮಕ್ಕಳಾದ ಯೆರೀಬೈ ಮತ್ತು ಯೋಷವ್ಯ, ಮೋವಾಬ್ಯನಾದ ಇತ್ಮ, ಎಲೀಯೇಲ್, ಓಬೆದ್, |
೪೭ |
ಮೆಚೋಬಾಯದ ಯಾಸೀಯೇಲ.
|
Kannada Bible (KNCL) 2016 |
No Data |