೧ |
ಮನಸ್ಸೆ ಅರಸನಾದಾಗ ಅವನಿಗೆ ಹನ್ನೆರಡು ವರ್ಷ ವಯಸ್ಸು. ಜೆರುಸಲೇಮಿನಲ್ಲಿ ಐವತ್ತೈದು ವರ್ಷ ಆಳಿದನು; ಅವನ ತಾಯಿಯ ಹೆಸರು ಹೆಫ್ಚಿಬಾ. |
೨ |
ಸರ್ವೇಶ್ವರ ಇಸ್ರಯೇಲರ ನಾಡಿನಿಂದ ಹೊರಡಿಸಿಬಿಟ್ಟ ಅನ್ಯಜನಾಂಗಗಳ ಅಸಹ್ಯಕಾರ್ಯಗಳನ್ನು ಅವನು ಅನುಸರಿಸಿ ಆ ಸರ್ವೇಶ್ವರನ ಚಿತ್ತಕ್ಕೆ ವಿರುದ್ಧವಾಗಿ ನಡೆದನು. |
೩ |
ತನ್ನ ತಂದೆ ಹಿಜ್ಕೀಯನು ತೆಗೆದುಹಾಕಿದ್ದ ಪೂಜಾಸ್ಥಳಗಳನ್ನು ಮತ್ತೆ ಸ್ಥಾಪಿಸಿ ಇಸ್ರಯೇಲರ ಅರಸನಾದ ಅಹಾಬನಂತೆ ಬಾಳ್ ದೇವತೆಗಾಗಿ ಬಲಿಪೀಠಗಳನ್ನು ಕಟ್ಟಿಸಿ, ಅಶೇರ ವಿಗ್ರಹಸ್ತಂಭವನ್ನು ನಿಲ್ಲಿಸಿ, ನಕ್ಷತ್ರಮಂಡಲಕ್ಕೆ ಕೈಮುಗಿದು, ಆರಾಧಿಸಿದನು. |
೪ |
ಸರ್ವೇಶ್ವರ ತಮ್ಮ ಹೆಸರನ್ನು ಸ್ಥಾಪಿಸುವುದಕ್ಕಾಗಿ ಆರಿಸಿಕೊಂಡ ಜೆರುಸಲೇಮಿನ ದೇವಾಲಯದ ಎರಡು ಪ್ರಾಕಾರಗಳಲ್ಲಿಯೂ |
೫ |
ಸರ್ವ ನಕ್ಷತ್ರಮಂಡಲಕ್ಕಾಗಿ ಬಲಿಪೀಠಗಳನ್ನು ಕಟ್ಟಿಸಿದನು. |
೬ |
ಇದಲ್ಲದೆ ಅವನು ತನ್ನ ಮಗನನ್ನು ಬಲಿಯಗ್ನಿಪರೀಕ್ಷೆಗೆ ಗುರಿಯಾಗಿಸಿದನು. ಕಣಿ ಹೇಳಿಸುವುದು, ತಂತ್ರಮಂತ್ರಗಳನ್ನು ಮಾಡಿಸುವುದು, ಭೂತಪ್ರೇತಗಳನ್ನು ವಿಚಾರಿಸುವವರನ್ನು ಸಂಪರ್ಕಿಸುವುದು ಇವೇ ಮೊದಲಾದ ದುಷ್ಕೃತ್ಯಗಳಿಂದ ಸರ್ವೇಶ್ವರನಿಗೆ ಕೋಪವನ್ನೆಬ್ಬಿಸಿದನು. |
೭ |
ತಾನು ಮಾಡಿಸಿದ ಅಶೇರ ವಿಗ್ರಹಸ್ತಂಭವನ್ನು ದೇವಾಲಯದಲ್ಲಿ ಇಡಿಸಿದನು. ಸರ್ವೇಶ್ವರ ಆ ಆಲಯದಲ್ಲಿ ದಾವೀದನಿಗೂ ಅವನ ಮಗ ಸೊಲೊಮೋನನಿಗೂ, “ಇಸ್ರಯೇಲರು ತಮಗೆ ಮೋಶೆಯ ಮುಖಾಂತರ ಕೊಡಲಾದ ನನ್ನ ಧರ್ಮಶಾಸ್ತ್ರದ ನಿಬಂಧನೆಗಳನ್ನು ಅನುಸರಿಸಿ ನಡೆಯುವುದಾದರೆ |
೮ |
ನನ್ನ ನಾಮಮಹತ್ತು ಈ ದೇವಾಲಯದಲ್ಲು, ಇಸ್ರಯೇಲರ ಊರುಗಳಲ್ಲು ಹಾಗು ನನಗೆ ಪ್ರಿಯವಾಗಿರುವ ಜೆರುಸಲೇಮಿನಲ್ಲು ಸದಾಕಾಲ ಇರುವುದು. ಇಸ್ರಯೇಲರು ಇನ್ನು ಮುಂದೆ ದೇಶಭ್ರಷ್ಟರಾಗಿ ಅಲೆದಾಡದೆ ತಮ್ಮ ಪಿತೃಗಳಿಗೆ ಕೊಡಲಾದ ನಾಡಿನಲ್ಲಿಯೇ ವಾಸವಾಗಿರುವಂತೆ ಮಾಡುವೆನು,” ಎಂದು ಹೇಳಿದ್ದರು. |
೯ |
ಆದರೆ ಇಸ್ರಯೇಲರು ಅವರ ಮಾತನ್ನು ಕೇಳದೆ, ಮನಸ್ಸೆಯಿಂದ ಪ್ರೇರಿತರಾಗಿ, ತಮ್ಮ ಮುಂದೆಯೇ ಸರ್ವೇಶ್ವರನಿಂದ ಸಂಹೃತರಾದ ಅನ್ಯಜನಾಂಗಗಳಿಗಿಂತಲೂ ದುಷ್ಟರಾದರು. |
೧೦ |
ಆಗ ಸರ್ವೇಶ್ವರ ತನ್ನ ದಾಸರಾದ ಪ್ರವಾದಿಗಳ ಮುಖಾಂತರ. |
೧೧ |
“ಯೆಹೂದ್ಯರ ಅರಸನಾದ ಮನಸ್ಸೆಯು, ಹಿಂದೆ ಇದ್ದ ಅಮೋರಿಯರ ಕೃತ್ಯಗಳಿಗಿಂತ ಅಸಹ್ಯವಾದ ಕೃತ್ಯಗಳನ್ನು ನಡೆಸಿದ್ದಾನೆ. ವಿಗ್ರಹಗಳಿಂದ ಯೆಹೂದ್ಯರನ್ನು ಪಾಪಕ್ಕೆ ಪ್ರೇರಿಸಿದ್ದಾನೆ; |
೧೨ |
ಆದ್ದರಿಂದ ಇಸ್ರಯೇಲ್ ದೇವರಾದ ಸರ್ವೇಶ್ವರ ಎಂಬ ನಾನು ಜೆರುಸಲೇಮಿನವರ ಮೇಲೂ ಜುದೇಯದವರ ಮೇಲೂ ಕೇಡನ್ನು ಬರಮಾಡುವೆನು; ಅದನ್ನು ಕೇಳುವವರ ಎರಡು ಕಿವಿಗಳೂ ಬಿರಿಯುವುವು. |
೧೩ |
ನೂಲು, ಮಟ್ಟಗೋಲು ಇವುಗಳಿಂದಲೋ ಎಂಬಂತೆ ಸಮಾರಿಯವನ್ನೂ ಅಹಾಬನ ಮನೆಯನ್ನೂ ನೆಲಸಮ ಮಾಡಿಬಿಟ್ಟೆನಲ್ಲವೆ? ಜೆರುಸಲೇಮನ್ನೂ ಅವುಗಳಂತೆಯೇ ಮಾಡುವೆನು. ಒಬ್ಬನು ಪಾತ್ರೆಯನ್ನು ಉಜ್ಜಿ ತಲೆ ಕೆಳಗಾಗಿ ಇಡುವಂತೆ ನಾನು ಜೆರುಸಲೇಮನ್ನು ಉಜ್ಜಿ ತಲೆ ಕೆಳಗಾಗಿ ಮಾಡುವೆನು. |
೧೪ |
ನನ್ನ ಪ್ರಜೆಗಳಲ್ಲಿ ಉಳಿದಿರುವವರನ್ನು ತಳ್ಳಿಬಿಟ್ಟು ಶತ್ರುಗಳ ಕೈಗೆ ಒಪ್ಪಿಸುವೆನು. ಅವರ ಶತ್ರುಗಳೆಲ್ಲಾ ಬಂದು ಅವರನ್ನು ಸುಲಿದು ಸೂರೆಮಾಡುವರು. |
೧೫ |
ಅವರು ಈಜಿಪ್ಟ್ ದೇಶವನ್ನು ಬಿಟ್ಟುಬಂದ ಪಿತೃಗಳ ಕಾಲ ಮೊದಲ್ಗೊಂಡು ಇಂದಿನವರೆಗೂ ತಮ್ಮ ಪಾಪಗಳಿಂದ ನನ್ನನ್ನು ರೇಗಿಸುತ್ತಾ ಬಂದದ್ದೇ ಇದಕ್ಕೆ ಕಾರಣ,” ಎಂದು ಹೇಳಿಸಿದರು. |
೧೬ |
ಮನಸ್ಸೆಯು ಯೆಹೂದ್ಯರನ್ನು ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದನ್ನು ಮಾಡಲು ಪ್ರೇರಿಸಿದ್ದಲ್ಲದೆ, ನಿರಪರಾಧಿಗಳ ವಧೆಯಿಂದ ಜೆರುಸಲೇಮನ್ನೆಲ್ಲಾ ರಕ್ತಮಯವಾಗಿಸಿದನು. |
೧೭ |
ಮನಸ್ಸೆಯ ಉಳಿದ ಚರಿತ್ರೆ ಅವನ ಕಾರ್ಯಕಲಾಪಗಳು ಹಾಗು ಅವನು ಮಾಡಿದ ಪಾಪಕೃತ್ಯಗಳು ಜುದೇಯ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿವೆ. |
೧೮ |
ಅವನು ಸತ್ತು ಪಿತೃಗಳ ಬಳಿ ಸೇರಿದಾಗ ಅವನ ಶವವನ್ನು ಅವನ ಅರಮನೆಯಿರುವ ಉಜ್ಜನ ವನದಲ್ಲಿ ಸಮಾಧಿ ಮಾಡಿದರು. ಅವನ ಸ್ಥಾನದಲ್ಲಿ ಅವನ ಮಗ ಆಮೋನನು ಅರಸನಾದನು. |
೧೯ |
ಆಮೋನನು ಅರಸನಾದಾಗ ಇಪ್ಪತ್ತೆರಡು ವರ್ಷ ವಯಸ್ಸು. ಜೆರುಸಲೇಮಿನಲ್ಲಿ ಎರಡು ವರ್ಷ ಆಳಿದನು. ಯೊಟ್ಟಾ ಊರಿನವಳೂ ಹಾರೂಚನ ಮಗಳೂ ಆದ ಮೆಷುಲ್ಲೆಮೆತ್ ಎಂಬಾಕೆ ಅವನ ತಾಯಿ. |
೨೦ |
ಅವನು ತನ್ನ ತಂದೆ ಮನಸ್ಸೆಯ ದುರ್ಮಾರ್ಗದಲ್ಲೇ ನಡೆದು ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು. |
೨೧ |
ತನ್ನ ಪೂರ್ವಜರ ದೇವರಾದ ಸರ್ವೇಶ್ವರನನ್ನೂ ಅವರು ಮೆಚ್ಚುವ ಮಾರ್ಗವನ್ನೂ ಬಿಟ್ಟು ತನ್ನ ತಂದೆಯ ಮಾರ್ಗದಲ್ಲೇ ನಡೆದನು. |
೨೨ |
ಅವನು ಪೂಜಿಸಿದ ವಿಗ್ರಹಗಳನ್ನು ತಾನೂ ಪೂಜಿಸಿ ಅವುಗಳಿಗೆ ಅಡ್ಡಬಿದ್ದನು. |
೨೩ |
ಅವನ ಸೇವಕರು ಅವನಿಗೆ ವಿರುದ್ಧ ಒಳಸಂಚು ಮಾಡಿ ಅವನನ್ನು ಅರಮನೆಯಲ್ಲಿಯೇ ಕೊಂದರು. |
೨೪ |
ಆದರೆ ನಾಡಿನ ಜನರು ಒಳಸಂಚು ಮಾಡಿದವರನ್ನೆಲ್ಲಾ ಕೊಂದುಹಾಕಿ ಆಮೋನನಿಗೆ ಬದಲಾಗಿ ಅವನ ಮಗ ಯೋಷೀಯನನ್ನು ಅರಸನನ್ನಾಗಿ ಮಾಡಿದರು. |
೨೫ |
ಆಮೋನನ ಉಳಿದ ಚರಿತ್ರೆ ಹಾಗು ಅವನ ಕೃತ್ಯಗಳು ಜುದೇಯ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತವೆ. |
೨೬ |
ಅವನ ಶವವನ್ನು ಉಜ್ಜನ ವನದಲ್ಲಿ ಸಮಾಧಿಮಾಡಿದರು. ಅಲ್ಲಿ ಅವನು ಮೊದಲೇ ತನಗಾಗಿ ಒಂದು ಸಮಾಧಿಯನ್ನು ಸಿದ್ಧಪಡಿಸಿಟ್ಟಿದ್ದನು. ಅವನ ಸ್ಥಾನದಲ್ಲಿ ಅವನ ಮಗ ಯೋಷೀಯನು ಅರಸನಾದನು.
|
Kannada Bible (KNCL) 2016 |
No Data |