೧ |
ಸೊಲೊಮೋನನು ಈಜಿಪ್ಟಿನ ಅರಸ ಫರೋಹನ ಮಗಳನ್ನು ಮದುವೆಮಾಡಿಕೊಂಡು ಅವನ ಅಳಿಯನಾದ. ತನ್ನ ಅರಮನೆಯನ್ನು, ಸರ್ವೇಶ್ವರನ ಮಹಾದೇವಾಲಯವನ್ನು ಹಾಗು ಜೆರುಸಲೇಮಿನ ಸುತ್ತಣ ಗೋಡೆಯನ್ನು ಕಟ್ಟಿಮುಗಿಸುವ ತನಕ ಆಕೆಯನ್ನು ದಾವೀದನಗರದಲ್ಲೇ ಇರಿಸಿಕೊಂಡನು. |
೨ |
ಅಲ್ಲಿಯವರೆಗೂ ಸರ್ವೇಶ್ವರಸ್ವಾಮಿಯ ನಾಮಕ್ಕೋಸ್ಕರ ಆಲಯವೇ ಇರಲಿಲ್ಲ. ಆದುದರಿಂದ ಜನರು ಪೂಜಾಸ್ಥಳಗಳಲ್ಲಿ ಬಲಿಯರ್ಪಣೆ ಮಾಡುತ್ತಿದ್ದರು. |
೩ |
ಸೊಲೊಮೋನನು ಸರ್ವೇಶ್ವರನನ್ನು ಪ್ರೀತಿಸಿ, ತನ್ನ ತಂದೆ ದಾವೀದನ ವಿಧಿಗಳನ್ನು ಕೈಗೊಳ್ಳುತ್ತಿದ್ದರೂ ಆ ಪೂಜಾಸ್ಥಳಗಳಲ್ಲೇ ಬಲಿಯರ್ಪಿಸುತ್ತಿದ್ದನು; ಅಲ್ಲಿಯೇ ಧೂಪಾರತಿ ಎತ್ತುತ್ತಿದ್ದನು. |
೪ |
ಒಮ್ಮೆ ಅರಸ ಸೊಲೊಮೋನನು ಬಲಿಯರ್ಪಿಸುವುದಕ್ಕಾಗಿ ಪೂಜಾಸ್ಥಳಗಳಲ್ಲೇ ಪ್ರಾಮುಖ್ಯವಾದ ಗಿಬ್ಯೋನಿಗೆ ಹೋದನು. ಅಲ್ಲಿನ ಪೀಠದ ಮೇಲೆ ಸಹಸ್ರಬಲಿಗಳನ್ನು ಸಮರ್ಪಿಸಿದಾಗ, |
೫ |
ದೇವರಾದ ಸರ್ವೇಶ್ವರ ಆ ರಾತ್ರಿ ಕನಸಿನಲ್ಲಿ ಅವನಿಗೆ ಕಾಣಿಸಿಕೊಂಡರು; “ನಿನಗೆ ಯಾವ ವರಬೇಕು ಕೇಳಿಕೋ,” ಎಂದು ಹೇಳಿದರು. |
೬ |
ಸೊಲೊಮೋನನು, “ನಿಮಗೆ ಪ್ರಾಮಾಣಿಕನಾಗಿ ನೀತಿಯಿಂದಲೂ ಯಥಾರ್ಥಚಿತ್ತದಿಂದಲೂ ನಡೆದುಕೊಂಡ ನಿಮ್ಮ ದಾಸನೂ ನನ್ನ ತಂದೆಯೂ ಆದ ದಾವೀದನಿಗೆ ನೀವು ಮಹಾಕೃಪೆಯನ್ನು ತೋರಿಸಿದಿರಿ; ಆ ಕೃಪೆಯನ್ನು ಮುಂದುವರಿಸುತ್ತಾ ಈಗ ಅವರ ಸಿಂಹಾಸನಕ್ಕೆ ಒಬ್ಬ ಮಗನನ್ನು ಅನುಗ್ರಹಿಸಿ ಅದನ್ನು ಸಂಪೂರ್ಣಗೊಳಿಸಿದ್ದೀರಿ. |
೭ |
ನನ್ನ ದೇವರಾದ ಸರ್ವೇಶ್ವರಾ, ನನ್ನ ತಂದೆಗೆ ಬದಲಾಗಿ ನಿಮ್ಮಿಂದ ಅರಸನಾಗಿ ನೇಮಕಗೊಂಡಿರುವ ನಿಮ್ಮ ದಾಸನಾದ ನಾನು ಇನ್ನೂ ಚಿಕ್ಕವನು. |
೮ |
ವ್ಯವಹಾರಜ್ಞಾನ ಇಲ್ಲದವನು; ನಿಮ್ಮ ದಾಸನಾದ ನಾನು ಅಸಂಖ್ಯಾತ ಮಹಾಜನಾಂಗವಾದ ನಿಮ್ಮ ಸ್ವಕೀಯ ಪ್ರಜೆಯ ಮಧ್ಯೆ ಇದ್ದೇನೆ. |
೯ |
ಆದುದರಿಂದ ಅದನ್ನು ಆಳುವುದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವಿವೇಕವನ್ನು ದಯಪಾಲಿಸಿರಿ. ಈ ಮಹಾಜನಾಂಗವನ್ನು ಆಳಲು ಯಾರೂ ಸಮರ್ಥರಲ್ಲ,” ಎಂದು ಬೇಡಿಕೊಂಡನು. |
೧೦ |
ಸೊಲೊಮೋನನ ಈ ಬಿನ್ನಹವನ್ನು ಸರ್ವೇಶ್ವರನಾದ ದೇವರು ಮೆಚ್ಚಿದರು. |
೧೧ |
ಅವರು ಆತನಿಗೆ, “ನೀನು ದೀರ್ಘಾಯುಷ್ಯವನ್ನಾಗಲಿ, ಸಿರಿಸಂಪತ್ತನ್ನಾಗಲಿ, ಶತ್ರುವಿನಾಶವನ್ನಾಗಲಿ ಕೇಳಿಕೊಳ್ಳಲಿಲ್ಲ. ನ್ಯಾಯನಿರ್ಣಯಿಸುವುದಕ್ಕೆ ಬೇಕಾದ ವಿವೇಕವನ್ನು ಬೇಡಿಕೊಂಡೆ. |
೧೨ |
ಆದ್ದರಿಂದ ನಿನ್ನ ಬಿನ್ನಹವನ್ನು ನೆರವೇರಿಸಿದ್ದೇನೆ. ನೋಡು, ನಿನಗೆ ಜ್ಞಾನವನ್ನೂ ವಿವೇಕವನ್ನೂ ಅನುಗ್ರಹಿಸಿದ್ದೇನೆ; ನಿನ್ನಂಥ ಜ್ಞಾನಿಯು ಹಿಂದೆ ಇರಲಿಲ್ಲ, ಮುಂದೆಯೂ ಇರುವುದಿಲ್ಲ. |
೧೩ |
ಇದಲ್ಲದೆ, ನೀನು ಕೇಳಿದಂಥದ್ದನ್ನೂ ನಿನಗೆ ಅನುಗ್ರಹಿಸಿದ್ದೇನೆ. ನಿನ್ನ ಜೀವಮಾನದಲ್ಲೆಲ್ಲಾ ಸಿರಿಸಂಪತ್ತಿನಲ್ಲಿಯೂ ಘನತೆ ಗೌರವದಲ್ಲಿಯೂ ನಿನಗೆ ಸಮಾನವಾದ ಅರಸನು ಇನ್ನೊಬ್ಬನಿರುವುದಿಲ್ಲ. |
೧೪ |
ನೀನು ನಿನ್ನ ತಂದೆ ದಾವೀದನಂತೆ ನನ್ನ ಮಾರ್ಗದಲ್ಲೇ ನಡೆದು ನನ್ನ ಆಜ್ಞಾವಿಧಿಗಳನ್ನು ಕೈಗೊಳ್ಳುವುದಾದರೆ ನಿನ್ನ ಆಯುಷ್ಯವನ್ನೂ ಹೆಚ್ಚಿಸುವೆನು,” ಎಂದರು. |
೧೫ |
ಸೊಲೊಮೋನನು ನಿದ್ರೆಯಿಂದ ಎಚ್ಚೆತ್ತಾಗ, ಅದು ಕನಸೆಂದು ತಿಳಿದುಕೊಂಡನು. ಅವನು ಜೆರುಸಲೇಮಿಗೆ ಬಂದನಂತರ ಸರ್ವೇಶ್ವರನ ಒಡಂಬಡಿಕೆಯ ಮಂಜೂಷದ ಮುಂದೆ ನಿಂತು ದಹನಬಲಿಗಳನ್ನೂ ಶಾಂತಿಸಮಾಧಾನದ ಬಲಿಗಳನ್ನೂ ಸಮರ್ಪಿಸಿ, ತನ್ನ ಎಲ್ಲಾ ಪರಿವಾರದವರಿಗೆ ಔತಣವನ್ನು ಏರ್ಪಡಿಸಿದನು. |
೧೬ |
ಒಂದು ದಿನ ಇಬ್ಬರು ವೇಶ್ಯೆಯರು ಅರಸನ ಸನ್ನಿಧಿಗೆ ಬಂದರು. |
೧೭ |
ಅವರಲ್ಲಿ ಒಬ್ಬಳು ಅರಸನಿಗೆ, “ಒಡೆಯಾ, ಕೇಳಿ; ನಾನೂ ಇವಳೂ ಒಂದೇ ಮನೆಯಲ್ಲಿ ವಾಸಿಸುತ್ತೇವೆ. ಇವಳು ಮನೆಯಲ್ಲಿದ್ದಾಗಲೇ ನಾನು ಒಂದು ಮಗವನ್ನು ಹೆತ್ತೆ. |
೧೮ |
ಮೂರನೆಯ ದಿನದಲ್ಲಿ ಇವಳೂ ಹೆತ್ತಳು. ನಾವಿಬ್ಬರೂ ಒಟ್ಟಿಗೆ ಇದ್ದೆವು; ನಮ್ಮಿಬ್ಬರ ಹೊರತು ಆ ಮನೆಯಲ್ಲಿ ಯಾರೂ ಇರಲಿಲ್ಲ. |
೧೯ |
ಇವಳು ರಾತ್ರಿಯಲ್ಲಿ ತನ್ನ ಕೂಸಿನ ಮೇಲೆ ಹೊರಳಿದ್ದರಿಂದ ಅದು ಸತ್ತಿತು. |
೨೦ |
ಮಧ್ಯರಾತ್ರಿಯಲ್ಲಿ ಇವಳೆದ್ದು, ನಿಮ್ಮ ಸೇವಕಳಾದ ನಾನು ಗಾಢನಿದ್ರೆಯಲ್ಲಿದ್ದಾಗ, ನನ್ನ ಮಗುವನ್ನು ನನ್ನ ಬಳಿಯಿಂದ ತೆಗೆದು ತನ್ನ ಮಗ್ಗುಲಲ್ಲಿ ಇಟ್ಟುಕೊಂಡಳು. ಸತ್ತುಹೋದ ತನ್ನ ಮಗುವನ್ನು ನನ್ನ ಮಗ್ಗುಲಲ್ಲಿಟ್ಟಳು. |
೨೧ |
ನಾನು ಬೆಳಿಗ್ಗೆ ಎದ್ದು ಮಗುವಿಗೆ ಮೊಲೆಕುಡಿಸಬೇಕೆಂದಿರುವಾಗ ಅದು ಸತ್ತಿತ್ತು. ಆದರೆ ಅದನ್ನು ಬೆಳಕಿನಲ್ಲಿ ನೋಡಿದಾಗ ಅದು ನಾನು ಹೆತ್ತ ಕೂಸಾಗಿರಲಿಲ್ಲ,” ಎಂದು ಹೇಳಿದಳು. |
೨೨ |
ಆಗ ಎರಡನೆಯವಳು, “ಹಾಗಲ್ಲ, ಬದುಕಿರುವವನು ನನ್ನ ಮಗ; ಸತ್ತಿರುವವನು ನಿನ್ನ ಮಗ,” ಎಂದು ನುಡಿದಳು. ಮೊದಲನೆಯವಳು ಮತ್ತೆ, “ಇಲ್ಲ ಸತ್ತಿರುವವನು ನಿನ್ನ ಮಗ ಬದುಕಿರುವವನು ನನ್ನ ಮಗ,” ಎಂದಳು. ಹೀಗೆ ಅವರು ಅರಸನ ಮುಂದೆ ವಾದಿಸುತ್ತಾ ಇದ್ದರು. |
೨೩ |
ಆಗ ಅರಸನು, “ಜೀವದಿಂದಿರುವ ಕೂಸು ನನ್ನದು, ಸತ್ತಿರುವುದು ನಿನ್ನದು,’ ಎಂದು ಒಬ್ಬಳು ಹೇಳುತ್ತಾಳೆ; ಇನ್ನೊಬ್ಬಳು, ‘ಇಲ್ಲ, ಸತ್ತಿರುವುದು ನಿನ್ನದು, ಜೀವದಿಂದಿರುವುದು ನನ್ನದು,’ ಎನ್ನುತ್ತಾಳೆ. |
೨೪ |
ನನಗೊಂದು ಕತ್ತಿಯನ್ನು ತಂದುಕೊಡಿ,” ಎಂದು ಸೇವಕರಿಗೆ ಹೇಳಿದನು. |
೨೫ |
ಅವರು ತಂದರು. ಅರಸನು ಅವರಿಗೆ, “ಜೀವದಿಂದಿರುವ ಕೂಸನ್ನು ಕಡಿದು, ಎರಡು ಭಾಗಮಾಡಿ, ಅರ್ಧವನ್ನು ಅವಳಿಗೂ ಅರ್ಧವನ್ನು ಇವಳಿಗೂ ಕೊಡಿ,” ಎಂದು ಅಪ್ಪಣೆಮಾಡಿದನು. |
೨೬ |
ಆಗ, ಜೀವದಿಂದಿದ್ದ ಕೂಸಿನ ನಿಜವಾದ ತಾಯಿಗೆ ಕೂಸಿನ ವಿಷಯದಲ್ಲಿ ಕರುಳುಕರಗಿತು; “ನನ್ನೊಡೆಯಾ, ಬೇಡಿ; ಬದುಕಿರುವ ಕೂಸನ್ನು ಅವಳಿಗೇ ಕೊಟ್ಟುಬಿಡಿ; ಅದನ್ನು ಕೊಲ್ಲಿಸಬೇಡಿ,” ಎಂದು ಬೇಡಿಕೊಂಡಳು; ಎರಡನೆಯವಳು, “ಅದು ನನಗೂ ಬೇಡ, ನಿನಗೂ ಬೇಡ, ಕಡಿಯಲಿ,” ಎಂದು ಕೂಗಿದಳು. |
೨೭ |
ಕೂಡಲೆ ಅರಸನು, “ಬದುಕಿರುವ ಕೂಸನ್ನು ಕೊಲ್ಲಬೇಡಿ, ಅದನ್ನು ಆ ಸ್ತ್ರೀಗೆ ಕೊಡಿ; ಅವಳೇ ಅದರ ತಾಯಿ,” ಎಂದು ಆಜ್ಞಾಪಿಸಿದನು. |
೨೮ |
ಇಸ್ರಯೇಲರೆಲ್ಲರೂ ಅರಸನ ಈ ತೀರ್ಪನ್ನು ಕೇಳಿದರು. ನ್ಯಾಯನಿರ್ಣಯಿಸುವುದಕ್ಕೆ ಈತನಲ್ಲಿ ದೇವದತ್ತ ಜ್ಞಾನವಿದೆ ಎಂದು ತಿಳಿದು ಅವನ ಬಗ್ಗೆ ಅಪಾರ ಗೌರವ ಉಳ್ಳವರಾದರು.
|
Kannada Bible (KNCL) 2016 |
No Data |