೧ |
ಸರ್ವೇಶ್ವರನ ನಾಮಮಹತ್ತಿನಿಂದ ಸೊಲೊಮೋನನ ಕೀರ್ತಿ ಹರಡಿತು. ಇದನ್ನು ಕೇಳಿದ ಶೆಬದ ರಾಣಿ ಅವನನ್ನು ಒಗಟುಗಳಿಂದ ಪರೀಕ್ಷಿಸುವುದಕ್ಕೆ ಬಂದಳು. |
೨ |
ಆಕೆ ಸುಗಂಧದ್ರವ್ಯ, ಅಪರಿಮಿತವಾದ ಬಂಗಾರ, ರತ್ನ, ಇವುಗಳನ್ನು ಒಂಟೆಗಳ ಮೇಲೆ ಹೇರಿಸಿಕೊಂಡು ಮಹಾಪರಿವಾರದೊಡನೆ ಜೆರುಸಲೇಮಿಗೆ ಬಂದಳು. ತನ್ನ ಮನಸ್ಸಿನಲ್ಲಿ ಗೊತ್ತುಮಾಡಿಕೊಂಡಿದ್ದ ಎಲ್ಲಾ ವಿಷಯಗಳನ್ನು ಕುರಿತು ಸೊಲೊಮೋನನೊಡನೆ ಸಂಭಾಷಿಸಿದಳು. |
೩ |
ಸೊಲೊಮೋನನು ಆಕೆಯ ಎಲ್ಲಾ ಪ್ರಶ್ನೆಗಳಿಗೆ ಉತ್ತರಕೊಟ್ಟನು; ಅರಸನಿಗೆ ಬಿಡಿಸಲು ಕ್ಲಿಷ್ಟವಾದ ಒಗಟು ಒಂದೂ ಇರಲಿಲ್ಲ. |
೪ |
ಶೆಬದ ರಾಣಿ ಸೊಲೊಮೋನನ ಹಲವಿಧವಾದ ಜ್ಞಾನೋಕ್ತಿಗಳನ್ನು ಕೇಳಿದಳು; |
೫ |
ಅವನು ಕಟ್ಟಿಸಿದ ಅರಮನೆ, ಅವನ ಭೋಜನಪೀಠದ ಆಹಾರ, ಆ ಪೀಠದ ಸುತ್ತಲಿರುವ ಉದ್ಯೋಗಸ್ಥರ ಆಸನಗಳು, ಅವನ ಪರಿಚಾರಕರ ಸೇವಾಕ್ರಮ, ಅವರ ಉಡುಪುಗಳು, ಅವನ ಪಾನಕಗಳು ಇವುಗಳನ್ನು ಮತ್ತು ಸರ್ವೇಶ್ವರನ ಆಲಯದಲ್ಲಿ ಅವನು ಸಮರ್ಪಿಸುತ್ತಿದ್ದ ದಹನಬಲಿಗಳನ್ನು ನೋಡಿದಳು. ಇವುಗಳಿಂದ ಆಶ್ಚರ್ಯಚಕಿತಳಾಗಿ, |
೬ |
“ನಾನು ನನ್ನ ದೇಶದಲ್ಲಿ ನಿಮ್ಮ ಜ್ಞಾನವನ್ನೂ ಸಾಧನೆಗಳನ್ನೂ ಕುರಿತು ಕೇಳಿದ್ದು ಸತ್ಯವಾಗಿದೆ. |
೭ |
ನಾನಾಗಿ ಇಲ್ಲಿಗೆ ಬಂದು ಕಣ್ಣಾರೆ ನೋಡುವುದಕ್ಕೆ ಮೊದಲು ಜನರು ಹೇಳಿದ ಸುದ್ದಿಯನ್ನು ನಂಬಲಿಲ್ಲ; ಈಗ ನೋಡಿದರೆ ನಿಮ್ಮ ಜ್ಞಾನವೈಭವಗಳು, ನಾನು ಕೇಳಿದ್ದಕ್ಕಿಂತ ಮಿಗಿಲಾಗಿವೆ. ಜನರು ನನಗೆ ಇದರಲ್ಲಿ ಅರ್ಧವನ್ನಾದರೂ ವರದಿ ಮಾಡಿರಲಿಲ್ಲ. |
೮ |
ನಿಮ್ಮ ಪ್ರಜೆಗಳು ಭಾಗ್ಯವಂತರು! ಸದಾ ನಿಮ್ಮ ಸನ್ನಿಧಿಯಲ್ಲಿದ್ದು ನಿಮ್ಮ ಜ್ಞಾನವಾಕ್ಯಗಳನ್ನು ಕೇಳುವ ನಿಮ್ಮ ಸೇವಕರು ಧನ್ಯರು! |
೯ |
ನಿಮ್ಮನ್ನು ಮೆಚ್ಚಿ ಇಸ್ರಯೇಲ್ ಸಿಂಹಾಸನದ ಮೇಲೆ ಕುಳ್ಳಿರಿಸಿದ ನಿಮ್ಮ ದೇವರಾದ ಸರ್ವೇಶ್ವರನಿಗೆ ಸ್ತೋತ್ರವಾಗಲಿ! ಅವರು ಇಸ್ರಯೇಲರನ್ನು ಸದಾ ಪ್ರೀತಿಸುವವರಾಗಿರುವುದರಿಂದ ಆ ಜನರ ನೀತಿನ್ಯಾಯಗಳನ್ನು ಸ್ಥಾಪಿಸುವುದಕ್ಕಾಗಿ ನಿಮ್ಮನ್ನು ಅರಸನನ್ನಾಗಿ ನೇಮಿಸಿದ್ದಾರೆ,” ಎಂದು ಹೇಳಿದಳು. |
೧೦ |
ಆಕೆ ಅರಸನಿಗೆ ನಾಲ್ಕು ಸಾವಿರ ಕಿಲೋಗ್ರಾಂಗೂ ಹೆಚ್ಚು ಬಂಗಾರವನ್ನು, ಅಪರಿಮಿತ ಸುಗಂಧದ್ರವ್ಯವನ್ನು ಹಾಗು ರತ್ನಗಳನ್ನು ಕೊಟ್ಟಳು. ಶೆಬದ ರಾಣಿ ಅರಸ ಸೊಲೊಮೋನನಿಗೆ ಕೊಟ್ಟಷ್ಟು ಸುಗಂಧದ್ರವ್ಯವನ್ನು ಬೇರೆ ಯಾರೂ ಈ ನಾಡಿಗೆ ಕೊಟ್ಟಿರಲಿಲ್ಲ. |
೧೧ |
ಹೀರಾಮನ ಹಡಗುಗಳು ಓಫೀರ್ ದೇಶದಿಂದ ಬಂಗಾರ ಮಾತ್ರವಲ್ಲ ಸುಗಂಧದ ಮರವನ್ನೂ ರತ್ನಗಳನ್ನೂ ರಾಶಿರಾಶಿಯಾಗಿ ತಂದವು. |
೧೨ |
ಅರಸನು ಸುಗಂಧದ ಮರದಿಂದ ದೇವಾಲಯಕ್ಕೆ ಹಾಗು ಅರಮನೆಗಳಿಗೆ ಮೆಟ್ಟಲುಗಳನ್ನು ವಾದ್ಯಗಾರರಿಗಾಗಿ ಕಿನ್ನರಿಗಳನ್ನು ಹಾಗು ಸ್ವರಮಂಡಲಗಳನ್ನು ಮಾಡಿಸಿದನು. ಆಗ ಬಂದಷ್ಟು ಸುಗಂಧದಮರ ಇಂದಿನವರೆಗೂ ಬರಲಿಲ್ಲ, ಮತ್ತು ಯಾರೂ ಅಷ್ಟನ್ನು ಕಾಣಲೇ ಇಲ್ಲ. |
೧೩ |
ಅರಸ ಸೊಲೊಮೋನನು ಶೆಬದ ರಾಣಿಗೆ ತಾನಾಗಿ ರಾಜಮರ್ಯಾದೆಯಿಂದ ಕೊಟ್ಟ ವಸ್ತುಗಳಲ್ಲದೆ, ಆಕೆ ಕೇಳಿದವುಗಳನ್ನೆಲ್ಲಾ ಕೊಟ್ಟುಬಿಟ್ಟನು. ಅನಂತರ ಆಕೆ ತನ್ನ ಪರಿವಾರದೊಡನೆ ಸ್ವದೇಶಕ್ಕೆ ಹೊರಟುಹೋದಳು. |
೧೪ |
ಸೊಲೊಮೋನನಿಗೆ ದೇಶಾಂತರ ವ್ಯಾಪಾರಿಗಳು, ವರ್ತಕರು, ಅರೇಬಿಯದ ಅರಸರು ಹಾಗು ಪ್ರದೇಶಾಧಿಪತಿಗಳು ತರುತ್ತಿದ್ದ ಬಂಗಾರವಲ್ಲದೆ |
೧೫ |
ಪ್ರತಿವರ್ಷ ಸುಮಾರು ಇಪ್ಪತ್ತಮೂರು ಸಾವಿರ ಕಿಲೋಗ್ರಾಂ ಬಂಗಾರ ದೊರಕುತ್ತಿತ್ತು. |
೧೬ |
ಅರಸ ಸೊಲೊಮೋನನು ಬಂಗಾರದ ತಗಡಿನಿಂದ ಇನ್ನೂರು ಗುರಾಣಿಗಳನ್ನು ಮಾಡಿಸಿದನು; ಪ್ರತಿಯೊಂದು ಗುರಾಣಿಗೆ ಸುಮಾರು ಏಳು ಕಿಲೋಗ್ರಾಂ ಬಂಗಾರ ಹಿಡಿಯಿತು. |
೧೭ |
ಅವನು ಬಂಗಾರದ ತಗಡಿನಿಂದ ಮುನ್ನೂರು ಖೇಡ್ಯಗಳನ್ನೂ ಮಾಡಿಸಿದನು. ಪ್ರತಿಯೊಂದು ಖೇಡ್ಯಕ್ಕೆ ಎರಡು ಕಿಲೋಗ್ರಾಂ ಬಂಗಾರ ಹಿಡಿಯಿತು. ಇವುಗಳನ್ನು ‘ಲೆಬನೋನಿನ ತೋಪು’ ಎನಿಸಿಕೊಳ್ಳುವ ಮಂದಿರದಲ್ಲಿ ಇರಿಸಿದನು. |
೧೮ |
ಇದಲ್ಲದೆ, ಅರಸನು ದೊಡ್ಡದಾದ ಒಂದು ದಂತಸಿಂಹಾಸನವನ್ನು ಮಾಡಿಸಿ ಅದನ್ನು ಚೊಕ್ಕಬಂಗಾರದ ತಗಡಿನಿಂದ ಹೊದಿಸಿದನು; |
೧೯ |
ಅದಕ್ಕೆ ಆರು ಮೆಟ್ಟಲುಗಳಿದ್ದವು. ಅದರ ಹಿಂಭಾಗದ ತುದಿ ಚಕ್ರಾಕಾರವಾಗಿತ್ತು. ಆಸನಕ್ಕೆ ಎರಡು ಕೈಗಳೂ, ಅವುಗಳ ಹತ್ತಿರ ಎರಡು ಸಿಂಹಗಳೂ ಇದ್ದವು. |
೨೦ |
ಆರು ಮೆಟ್ಟಲುಗಳ ಎರಡು ಕಡೆಗಳಲ್ಲೂ ಒಟ್ಟು ಹನ್ನೆರಡು ಸಿಂಹಗಳು ನಿಂತಿದ್ದವು; ಇಂಥ ಸಿಂಹಾಸನವು ಬೇರೆ ಯಾವ ರಾಜ್ಯದಲ್ಲಿಯೂ ಇರಲಿಲ್ಲ. |
೨೧ |
ಅರಸ ಸೊಲೊಮೋನನ ಎಲ್ಲಾ ಪಾನಪಾತ್ರೆಗಳು ಬಂಗಾರದವುಗಳು; ‘ಲೆಬನೋನಿನ ತೋಪು’ ಎನಿಸಿಕೊಳ್ಳುವ ಮಂದಿರದ ಸಾಮಾನುಗಳು ಚೊಕ್ಕ ಬಂಗಾರದವುಗಳು. ಸೊಲೊಮೋನನ ಕಾಲದಲ್ಲಿ ಬೆಳ್ಳಿಗೆ ಬೆಲೆಯಿರಲಿಲ್ಲ. ಆದುದರಿಂದ ಅವನಲ್ಲಿ ಬೆಳ್ಳಿಯ ಸಾಮಾನು ಒಂದಾದರೂ ಕಾಣಿಸಲಿಲ್ಲ. |
೨೨ |
ಹೀರಾಮನ ನಾವೆಗಳ ಜೊತೆಯಲ್ಲಿ ಸೊಲೊಮೋನನ ತಾರ್ಷಿಷ್ ಹಡಗುಗಳು ಹೋಗಿ ಮೂರು ವರ್ಷಕ್ಕೊಮ್ಮೆ ಬಂಗಾರ, ಬೆಳ್ಳಿ, ದಂತ, ಕಪಿ, ನವಿಲು ಇವುಗಳನ್ನು ತರುತ್ತಿದ್ದವು. |
೨೩ |
ಈ ಪ್ರಕಾರ ಅರಸನಾದ ಸೊಲೊಮೋನನು ಐಶ್ವರ್ಯದಲ್ಲಿಯೂ ಜ್ಞಾನದಲ್ಲಿಯೂ ಭೂಲೋಕದ ಎಲ್ಲಾ ಅರಸರಿಗಿಂತ ಮಿಗಿಲಾಗಿ ಇದ್ದನು. |
೨೪ |
ಭೂಲೋಕದವರೆಲ್ಲರೂ, ದೇವರು ಅವನಿಗೆ ಅನುಗ್ರಹಿಸಿದ್ದ ಜ್ಞಾನವಾಕ್ಯಗಳನ್ನು ಕೇಳುವುದಕ್ಕಾಗಿ ಅವನ ದರ್ಶನಕ್ಕೆ ಬರುತ್ತಿದ್ದರು. |
೨೫ |
ಅವರೆಲ್ಲರೂ ಅವನಿಗೆ ವರ್ಷ ವರ್ಷ ಬೆಳ್ಳಿ ಬಂಗಾರದ ಸಾಮಾನು, ಉಡುಪು, ಯುದ್ಧಾಯುಧ, ಸುಗಂಧದ್ರವ್ಯ, ಕುದುರೆ, ಹೇಸರಗತ್ತೆ ಇವುಗಳನ್ನು ಕಾಣಿಕೆಯಾಗಿ ಕೊಡುತ್ತಿದ್ದರು. |
೨೬ |
ಸೊಲೊಮೋನನು ರಥಗಳನ್ನೂ ರಾಹುತರನ್ನೂ ಸಂಗ್ರಹಿಸುತ್ತಿದ್ದನು. ಅವನ ರಥಗಳು ಸಾವಿರದ ನಾನೂರು; ರಾಹುತರು ಹನ್ನೆರಡು ಸಾವಿರ. ಇವುಗಳಲ್ಲಿ ಕೆಲವನ್ನು ಜೆರುಸಲೇಮಿನಲ್ಲಿ ತನ್ನ ಬಳಿಯಲ್ಲೇ ಇರಿಸಿದ್ದನು; ಉಳಿದವುಗಳನ್ನು ರಥಗಳಿಗಾಗಿಯೇ ನೇಮಿಸಿದ್ದ ಪಟ್ಟಣಗಳಲ್ಲಿ ಇರಿಸಿದ್ದನು. |
೨೭ |
ಅವನ ಕಾಲದಲ್ಲಿ ಜೆರುಸಲೇಮಿನಲ್ಲಿದ್ದ ಬೆಳ್ಳಿಯು ಕಲ್ಲಿನಂತೆ ಹಾಗು ದೇವದಾರು ಮರಗಳು ಇಳಕಲ್ಲಿನ ಪ್ರದೇಶದಲ್ಲಿ ಬೆಳೆಯುವ ಅತ್ತಿಮರಗಳಂತೆ ವಿಪುಲವಾಗಿದ್ದವು. |
೨೮ |
ಅರಸ ಸೊಲೊಮೋನನ ಕುದುರೆಗಳು ಈಜಿಪ್ಟ್ ದೇಶದವುಗಳು; ಅವನ ವರ್ತಕರು ಅವುಗಳನ್ನು ಹಿಂಡುಗಟ್ಟಳೆಯಾಗಿ ಕೊಂಡುಕೊಂಡು ಬರುತ್ತಿದ್ದರು. |
೨೯ |
ಈಜಿಪ್ಟ್ ದೇಶದಿಂದ ರಥಗಳನ್ನೂ ಕುದುರೆಗಳನ್ನೂ ತರಿಸಬೇಕಾದರೆ ಪ್ರತಿಯೊಂದು ರಥಕ್ಕೆ ಆರುನೂರು ಬೆಳ್ಳಿನಾಣ್ಯಗಳನ್ನೂ ಕುದುರೆಗೆ ನೂರೈವತ್ತು ಬೆಳ್ಳಿನಾಣ್ಯಗಳನ್ನೂ ಕೊಡಬೇಕಾಗಿತ್ತು. ಅವು ಹಿತ್ತಿಯರ ಮತ್ತು ಸಿರಿಯಾದವರ ಎಲ್ಲಾ ಅರಸರಿಗೆ ಇವರ ಮುಖಾಂತರವೇ ಮಾರಾಟವಾಗುತ್ತಿದ್ದವು.
|
Kannada Bible (KNCL) 2016 |
No Data |