೧ |
ಆಗ ಇಸಾಕನು ಯಕೋಬನನ್ನು ಕರೆದು, “ನೀನು ಕಾನಾನ್ಯರ ಹೆಣ್ಣನ್ನು ಮದುವೆಮಾಡಿಕೊಳ್ಳಬೇಡ; |
೨ |
ಮೆಸಪೊಟೇಮಿಯಾ ನಾಡಿನಲ್ಲಿರುವ ನಿನ್ನ ತಾತ ಬೆತೂವೇಲನ ಮನೆಗೆ ಹೊರಟುಹೋಗು. ಅಲ್ಲಿ ನಿನ್ನ ಸೋದರಮಾವನಾದ ಲಾಬಾನನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆಮಾಡಿಕೊ,” ಎಂದು ಅಪ್ಪಣೆ ಮಾಡಿದನು. |
೩ |
“ಸರ್ವಶಕ್ತ ದೇವರು ನಿನ್ನನ್ನು ಆಶೀರ್ವದಿಸಲಿ; ನಿನಗೆ ಬಹಳ ಸಂತತಿಯನ್ನು ಕೊಡಲಿ; ನಿನ್ನಿಂದ ಅನೇಕ ಜನಾಂಗಗಳು ಹುಟ್ಟುವಂತೆ ಅನುಗ್ರಹಿಸಲಿ; |
೪ |
ದೇವರು ಅಬ್ರಹಾಮನಿಗೆ ಕೊಟ್ಟ ಆಶೀರ್ವಾದವನ್ನು ನಿನಗೂ ನಿನ್ನ ಸಂತತಿಗೂ ಕೊಡಲಿ; ನೀನು ಪ್ರವಾಸಿಯಾಗಿರುವ ಈ ನಾಡನ್ನು, ಅಂದರೆ ಅಬ್ರಹಾಮನಿಗೆ ದೇವರು ವಾಗ್ದಾನಮಾಡಿದ್ದ ಈ ನಾಡನ್ನು, ನೀನು ಸ್ವಂತ ಸೊತ್ತಾಗಿಸಿಕೊಳ್ಳುವಂತಾಗಲಿ!” ಎಂದು ಹರಸಿ ಕಳುಹಿಸಿಬಿಟ್ಟನು. |
೫ |
ಯಕೋಬನು ಮೆಸಪೊಟೇಮಿಯಗೆ ಹೊರಟು, ಅರಾಮ್ಯನಾದ ಬೆತೂವೇಲನ ಮಗನೂ ಮತ್ತು ಯಕೋಬ ಹಾಗು ಏಸಾವನಿಗೆ ತಾಯಿಯಾದ ರೆಬೆಕ್ಕಳಿಗೆ ಅಣ್ಣನೂ ಆಗಿದ್ದ ಲಾಬಾನನ ಬಳಿಗೆ ಹೋದನು. |
೬ |
ಇಸಾಕನು ಯಕೋಬನನ್ನು ಹರಸಿ ಮೆಸಪೊಟೇಮಿಯಾದಲ್ಲಿ ಹೆಣ್ಣನ್ನು ತೆಗೆದುಕೊಳ್ಳುವುದಕ್ಕಾಗಿ ಕಳುಹಿಸಿದ್ದು, ಹರಸುವಾಗ ಕಾನಾನ್ಯರ ಹೆಣ್ಣನ್ನು ತೆಗೆದುಕೊಳ್ಳಬಾರದೆಂದು ಅಪ್ಪಣೆಮಾಡಿದ್ದು, |
೭ |
ಹಾಗೂ ಯಕೋಬನು ತನ್ನ ತಂದೆ ತಾಯಿಗಳು ಹೇಳಿದಂತೆ ಮೆಸಪೊಟೇಮಿಯಗೆ ಹೋದದ್ದು - ಇದೆಲ್ಲವನ್ನು ಇತ್ತ ಏಸಾವನು ತಿಳಿದುಕೊಂಡನು. |
೮ |
ಕಾನಾನ್ಯರ ಹೆಣ್ಣುಗಳು ತನ್ನ ತಂದೆ ಇಸಾಕನಿಗೆ ಹಿಡಿಸಲಿಲ್ಲ ಎಂಬುದನ್ನು ಅರಿತುಕೊಂಡ ಅವನು |
೯ |
ತನಗೆ ಈಗಾಗಲೇ ಇದ್ದ ಹೆಂಡತಿಯರ ಜೊತೆಗೆ ಅಬ್ರಹಾಮನ ಮಗನಾದ ಇಷ್ಮಾಯೇಲನ ಬಳಿಗೆ ಹೋಗಿ, ಅವನ ಮಗಳೂ ನೆಬಾಯೋತನ ತಂಗಿಯೂ ಆಗಿದ್ದ ಮಹಲತ್ ಎಂಬಾಕೆಯನ್ನು ಮದುವೆಮಾಡಿಕೊಂಡನು. |
೧೦ |
ಯಕೋಬನು ಖಾರಾನಿಗೆ ಹೋಗಬೇಕೆಂದು ಬೇರ್ಷೆಬದಿಂದ ಹೊರಟನು. |
೧೧ |
ಪ್ರಯಾಣಮಾಡುತ್ತಾ ಅವನು ಒಂದು ಸ್ಥಳಕ್ಕೆ ಬಂದು ಸೇರಿದನು. ಹೊತ್ತು ಮುಳುಗಿದ್ದ ಕಾರಣ ಆ ರಾತ್ರಿ ಅಲ್ಲಿಯೇ ಇಳಿದುಕೊಂಡನು. ಅಲ್ಲಿದ್ದ ಕಲ್ಲುಗಳಲ್ಲಿ ಒಂದು ಕಲ್ಲನ್ನು ತಲೆದಿಂಬಾಗಿ ಇಟ್ಟುಕೊಂಡು ಆ ಸ್ಥಳದಲ್ಲೇ ಮಲಗಿಕೊಂಡನು. |
೧೨ |
ಆ ರಾತ್ರಿ ಅವನಿಗೆ ಒಂದು ಕನಸು ಬಿತ್ತು, ಆ ಕನಸಿನಲ್ಲಿ ಒಂದು ನಿಚ್ಚಣಿಗೆ ನೆಲದ ಮೆಲೆ ನಿಂತಿತ್ತು; ಅದರ ತುದಿ ಆಕಾಶವನ್ನು ಮುಟ್ಟಿತ್ತು. ಅದರ ಮೇಲೆ ದೇವದೂತರು ಹತ್ತುತ್ತಾ ಇಳಿಯುತ್ತಾ ಇದ್ದರು. |
೧೩ |
ಇದಲ್ಲದೆ, ಸರ್ವೇಶ್ವರಸ್ವಾಮಿ ಅವನ ಬಳಿಯಲ್ಲೇ ನಿಂತು, “ನಿನ್ನ ತಂದೆಯೂ ಅಬ್ರಹಾಮನ ದೇವರೂ ಇಸಾಕನ ದೇವರೂ ಆಗಿರುವ ಸರ್ವೇಶ್ವರ ನಾನೇ. ನೀನು ಮಲಗಿಕೊಂಡಿರುವ ಈ ನಾಡನ್ನು ನಿನಗೂ ನಿನ್ನ ಸಂತತಿಗೂ ಕೊಡುತ್ತೇನೆ. |
೧೪ |
ನಿನ್ನ ಸಂತತಿ ಭೂಮಿಯ ಧೂಳಿನಂತೆ ಅಸಂಖ್ಯ ಆಗುವುದು; ನೀನು ಪೂರ್ವಪಶ್ಚಿಮ - ದಕ್ಷಿಣೋತ್ತರ ದಿಕ್ಕುಗಳಿಗೆ ಹರಡಿಕೊಳ್ಳುವೆ. ನಿನ್ನ ಮುಖಾಂತರ ಹಾಗೂ ನಿನ್ನ ಸಂತತಿಯ ಮುಖಾಂತರ ಜಗದ ಎಲ್ಲ ರಾಷ್ಟ್ರಗಳೂ ಆಶೀರ್ವಾದ ಪಡೆಯುವುವು. |
೧೫ |
ಗಮನಿಸು, ನಾನು ನಿನ್ನೊಂದಿಗೆ ಇರುತ್ತೇನೆ. ನೀನು ಎಲ್ಲಿಗೆ ಹೋದರೂ ನಿನ್ನನ್ನು ಕಾಪಾಡಿ ಈ ನಾಡಿಗೆ ಮರಳಿ ಬರಮಾಡುತ್ತೇನೆ. ನಾನು ನಿನಗೆ ಹೇಳಿದ್ದನ್ನೆಲ್ಲ ನೆರವೇರಿಸದೆ ಬಿಡುವುದಿಲ್ಲ,” ಎಂದರು. |
೧೬ |
ಯಕೋಬನು ನಿದ್ರೆಯಿಂದ ಎಚ್ಚೆತ್ತನು. \ನಿಶ್ಚಯವಾಗಿ ಸರ್ವೇಶ್ವರ ಈ ಸ್ಥಳದಲ್ಲಿದ್ದಾರೆ; ಇದು ನನಗೆ ತಿಳಿಯದೆಹೋಯಿತು!” ಎಂದುಕೊಂಡನು; |
೧೭ |
ಅಲ್ಲದೆ ಭಯಭಕ್ತಿಯಿಂದ, “ಇದು ಮಹಾಗಂಭೀರವಾದ ಸ್ಥಳ; ದೇವರ ಸ್ಥಾನವೇ ಹೊರತು ಬೇರೆಯಲ್ಲ, ಇದು ಪರಲೋಕದ ಬಾಗಿಲು!” ಎಂದನು. |
೧೮ |
ಯಕೋಬನು ಬೆಳಗಿನ ಜಾವದಲ್ಲಿ ಎದ್ದು ತಾನು ತಲೆದಿಂಬಾಗಿ ಇಟ್ಟುಕೊಂಡಿದ್ದ ಆ ಕಲ್ಲನ್ನು ಸ್ಮಾರಕಸ್ತಂಭವಾಗಿ ನೆಟ್ಟನು. ಅದರ ಮೇಲೆ ಎಣ್ಣೆ ಹೊಯ್ದು ಅಭ್ಯಂಗಿಸಿದನು. |
೧೯ |
‘ಲೂಜ್’ ಎಂದು ಹೆಸರು ಪಡೆದಿದ್ದ ಆ ಊರಿಗೆ ‘ಬೇತೇಲ್’ ಎಂದು ನಾಮಕರಣ ಮಾಡಿದನು. |
೨೦ |
ಅದೂ ಅಲ್ಲದೆ ಅವನು ಹೀಗೆಂದು ಹರಕೆ ಮಾಡಿಕೊಂಡನು; “ದೇವರು ನನ್ನ ಸಂಗಡವಿದ್ದು ನಾನು ಕೈಗೊಂಡ ಪ್ರಯಾಣದಲ್ಲಿ ನನ್ನನ್ನು ಕಾಪಾಡಿ, ಹೊಟ್ಟೆಗೆ ಊಟವನ್ನೂ ಮೈಗೆ ಬಟ್ಟೆಯನ್ನೂ ಕೊಟ್ಟು, |
೨೧ |
ನನ್ನ ತಂದೆಯ ಮನೆಗೆ ಸುರಕ್ಷಿತವಾಗಿ ಮರಳಿ ಬರಮಾಡಿದರೆ ಸರ್ವೇಶ್ವರಸ್ವಾಮಿಯೇ ನನಗೆ ದೇವರು ಆಗುವರು. |
೨೨ |
ನಾನು ಸ್ಮಾರಕಸ್ತಂಭವಾಗಿ ನೆಟ್ಟಿರುವ ಈ ಕಲ್ಲು ದೇವರ ಮನೆಯಾಗುವುದು; ಅದು ಮಾತ್ರವಲ್ಲ, ನೀವು ನನಗೆ ಕೊಡುವ ಎಲ್ಲ ಆಸ್ತಿಪಾಸ್ತಿಯಲ್ಲಿ ಹತ್ತರಲ್ಲಿ ಒಂದು ಪಾಲನ್ನು ನಿಮಗೆ ಸಮರ್ಪಿಸುತ್ತೇನೆಂದು ಮಾತುಕೊಡುತ್ತೇನೆ.”
|
Kannada Bible (KNCL) 2016 |
No Data |