೧ |
ಅಬ್ರಹಾಮನು ಅಲ್ಲಿಂದ ಕಾನಾನ್ ನಾಡಿನ ದಕ್ಷಿಣ ಪ್ರಾಂತಕ್ಕೆ ಪ್ರಯಾಣ ಮಾಡುತ್ತಾ ಕಾದೇಶಿಗೂ ಶೂರಿಗೂ ನಡುವೆ ವಾಸಮಾಡಿದನು. ಕೆಲವು ಕಾಲ ಗೆರಾರಿನಲ್ಲೂ ಇದ್ದನು. |
೨ |
ಅಲ್ಲಿದ್ದಾಗ ಅಬ್ರಹಾಮನು ತನ್ನ ಹೆಂಡತಿ ಸಾರಳು ತನಗೆ ತಂಗಿಯಾಗಬೇಕೆಂದು ಹೇಳಿಕೊಂಡನು. ಈ ಕಾರಣ ಗೆರಾರಿನ ಅರಸನಾದ ಅಬೀಮೆಲೆಕನು ಆಕೆಯನ್ನು ಕರೆಸಿ ತನ್ನ ಮನೆಯಲ್ಲಿ ಸೇರಿಸಿಕೊಂಡನು. |
೩ |
ಆದರೆ ದೇವರು ಅಬೀಮೆಲೆಕನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ನೀನು ಆ ಮಹಿಳೆಯನ್ನು ಸೇರಿಸಿಕೊಂಡ ಕಾರಣ ಸಾಯತಕ್ಕವನು, ಆಕೆಗೆ ಗಂಡನಿದ್ದಾನೆ,” ಎಂದರು. |
೪ |
ಅಬೀಮೆಲೆಕನು ಆಕೆಯನ್ನು ಅಲ್ಲಿಯವರೆಗೂ ಕೂಡಿರಲಿಲ್ಲ. ಎಂದೇ ಅವನು, “ಸ್ವಾಮೀ ನಿರಪರಾಧಿಯಾದ ಪ್ರಜೆಯನ್ನು ನೀವು ನಾಶಮಾಡುವಿರೋ? |
೫ |
ಆ ಮನುಷ್ಯನೇ ಈಕೆ ನನಗೆ ತಂಗಿಯಾಗಬೇಕೆಂದು ಹೇಳಿದ; ಈಕೆಯೂ ಆತನು ನನಗೆ ಅಣ್ಣನಾಗಬೇಕೆಂದು ಹೇಳಿದಳು. ಶುದ್ಧಮನಸ್ಸಿನಿಂದ ಹಾಗೂ ಶುದ್ಧಹಸ್ತದಿಂದ ಈ ಕಾರ್ಯಮಾಡಿದೆ,” ಎಂದನು. |
೬ |
ಅದಕ್ಕೆ ದೇವರು ಪ್ರತ್ಯುತ್ತರವಾಗಿ, “ನೀನು ಶುದ್ಧಮನಸ್ಸಿನಿಂದ ಈ ಕಾರ್ಯಮಾಡಿದೆಯೆಂದು ನಾನು ಬಲ್ಲೆ; ಆದಕಾರಣವೇ ನನಗೆ ವಿರುದ್ಧವಾಗಿ ನೀನು ಪಾಪಮಾಡದಂತೆ ತಡೆದು ಆಕೆಯನ್ನು ಮುಟ್ಟಗೊಡಿಸಲಿಲ್ಲ. |
೭ |
ಈಗ ಆ ಮನುಷ್ಯನ ಹೆಂಡತಿಯನ್ನು ಮರಳಿ ಅವನಿಗೆ ಒಪ್ಪಿಸಿಬಿಡು. ಅವನೊಬ್ಬ ಪ್ರವಾದಿ. ನಿನ್ನ ಪರವಾಗಿ ನನ್ನನ್ನು ಪ್ರಾರ್ಥಿಸುವನು, ನೀನು ಬದುಕುವೆ. ಆಕೆಯನ್ನು ಒಪ್ಪಿಸಲು ನಿರಾಕರಿಸಿದೆಯಾದರೆ ನೀನೂ ನಿನ್ನವರೆಲ್ಲರೂ ಸತ್ತೇ ಸಾಯುವಿರೆಂದು ತಿಳಿದುಕೊ,” ಎಂದು ಕನಸಿನಲ್ಲಿ ಹೇಳಿದರು. |
೮ |
ಅಬೀಮೆಲೆಕನು ಬೆಳಿಗ್ಗೆ ಬೇಗನೆ ಎದ್ದು ತನ್ನ ಪರಿವಾರವನ್ನೆಲ್ಲಾ ಕೂಡಿಸಿದನು. ನಡೆದ ಸಂಗತಿಗಳನ್ನೆಲ್ಲ ತಿಳಿಸಿದಾಗ ಅವರಿಗೆ ಬಹಳ ಭಯವುಂಟಾಯಿತು. |
೯ |
ಅನಂತರ ಅವನು ಅಬ್ರಹಾಮನನ್ನು ಕರೆಸಿ, “ನೀನು ನನಗೆ ಮಾಡಿದ್ದೇನು? ಯಾವ ತಪ್ಪಿಗಾಗಿ ನೀನು ನನ್ನನ್ನೂ ನನ್ನ ರಾಜ್ಯವನ್ನೂ ಈ ಮಹಾ ಪಾತಕಕ್ಕೆ ಒಳಪಡಿಸಿದೆ? ಮಾಡಬಾರದ ಕಾರ್ಯವನ್ನು ನೀನು ಮಾಡಿದೆ,” ಎಂದು ಹೇಳಿದನು. |
೧೦ |
ಅಲ್ಲದೆ, “ನೀನು ಯಾವ ಉದ್ದೇಶದಿಂದ ಹೀಗೆ ಮಾಡಿದೆ?” ಎಂದು ವಿಚಾರಿಸಿದನು. |
೧೧ |
ಅದಕ್ಕೆ ಅಬ್ರಹಾಮನು, “ಇಲ್ಲಿಯ ಜನರಿಗೆ ದೇವರಲ್ಲಿ ಭಯಭಕ್ತಿಯಿಲ್ಲವೆಂದೂ ನನ್ನ ಹೆಂಡತಿಯ ನಿಮಿತ್ತ ನನ್ನನ್ನು ಕೊಂದಾರು ಎಂದೂ ಭಾವಿಸಿದೆ. |
೧೨ |
ಅದೂ ಅಲ್ಲದೆ ಈಕೆ ನಿಜವಾಗಿಯೂ ನನ್ನ ತಂಗಿ, ನನ್ನ ತಂದೆಯ ಮಗಳು, ಆದರೆ ನನ್ನ ತಾಯಿಯ ಮಗಳಲ್ಲ; ಎಂದೇ ನನಗೆ ಹೆಂಡತಿಯಾದಳು. |
೧೩ |
ನಾನು ದೇವರ ಸಂಕಲ್ಪಕ್ಕೆ ತಲೆಬಾಗಿ, ತಂದೆಯ ಮನೆಯನ್ನು ಬಿಟ್ಟು, ದೇಶಾಂತರ ಹೋಗಲು ಹೊರಟಾಗ ಈಕೆಗೆ, ‘ನಿನ್ನಿಂದ ನನಗೊಂದು ಉಪಕಾರವಾಗಬೇಕು; ಅದೇನೆಂದರೆ, ನಾವು ಹೋದಕಡೆಯೆಲ್ಲಾ ನಾನು ನಿನಗೆ ಅಣ್ಣನಾಗಬೇಕೆಂದು ಹೇಳು,’ ಎಂದು ತಿಳಿಸಿದೆ,” ಎಂದನು. |
೧೪ |
ಆಗ ಅಬೀಮೆಲೆಕನು ಅಬ್ರಹಾಮನಿಗೆ ದನಕುರಿಗಳನ್ನೂ ದಾಸದಾಸಿಯರನ್ನೂ ಕೊಟ್ಟು ಅವನ ಹೆಂಡತಿ ಸಾರಳನ್ನು ಅವನಿಗೆ ಒಪ್ಪಿಸಿದನು. |
೧೫ |
ಅದೂ ಅಲ್ಲದೆ, “ಇಗೋ, ನನ್ನ ನಾಡು ನಿನಗೆ ತೆರೆದಿದೆ; ಇಷ್ಟಬಂದ ಕಡೆ ಹೋಗಿ ವಾಸಮಾಡು,” ಎಂದನು. |
೧೬ |
ಸಾರಳಿಗೆ ಅವನು ಹೇಳಿದ್ದೇನೆಂದರೆ, “ನಿನ್ನ ಅಣ್ಣನಿಗೆ ಸಾವಿರ ಬೆಳ್ಳಿನಾಣ್ಯಗಳನ್ನು ಕೊಟ್ಟಿದ್ದೇನೆ. ಇದರಿಂದ ನೀನು ನಿರ್ದೋಷಿಯೆಂದು ರುಜುವಾತಾಗಲಿ; ನೀನು ತಪ್ಪು ಮಾಡಿಲ್ಲವೆಂದು ಎಲ್ಲರಿಗೂ ಸ್ಪಷ್ಟವಾಗಲಿ.” |
೧೭ |
ತರುವಾಯ ಅಬ್ರಹಾಮನು ಅಬೀಮೆಲೆಕನಿಗೋಸ್ಕರ ದೇವರಲ್ಲಿ ಪ್ರಾರ್ಥನೆ ಮಾಡಿದನು. ದೇವರು ಅಬೀಮೆಲೆಕನನ್ನು, ಅವನ ಪತ್ನಿಯನ್ನು ಹಾಗೂ ದಾಸಿಯರನ್ನು ಗುಣಪಡಿಸಿದನು; ಅವರಿಗೆ ಮಕ್ಕಳಾದರು. |
೧೮ |
ಇದಕ್ಕೆ ಮುಂಚೆ ಅಬ್ರಹಾಮನ ಹೆಂಡತಿ ಸಾರಳ ನಿಮಿತ್ತ ಅಬೀಮೆಲೆಕನ ಮನೆಯಲ್ಲಿದ್ದ ಮಹಿಳೆಯರೆಲ್ಲರನ್ನು ಸರ್ವೇಶ್ವರ ಸ್ವಾಮಿ ಬಂಜೆಯರನ್ನಾಗಿಸಿದ್ದರು.
|
Kannada Bible (KNCL) 2016 |
No Data |