ಅರಸುಗಳು ೧ ೫:೧-೧೮ |
೧. ದಾವೀದನಿಗೆ ಜೀವಮಾನದಲ್ಲೆಲ್ಲಾ ಆಪ್ತಮಿತ್ರನಾಗಿದ್ದ ಟೈರಿನ ಅರಸನಾದ ಹೀರಾಮನು, ಸೊಲೊಮೋನನು ತಂದೆಗೆ ಬದಲಾಗಿ ಪಟ್ಟಾಭಿಷೇಕ ಪಡೆದಿದ್ದಾನೆಂದು ಕೇಳಿ, ಅವನ ಬಳಿಗೆ ತನ್ನ ಸೇವಕರನ್ನು ಕಳುಹಿಸಿದನು. |
೨. ಸೊಲೊಮೋನನು ದೂತರ ಮುಖಾಂತರ ಹೀರಾಮನಿಗೆ, |
೩. “ಸರ್ವೇಶ್ವರಸ್ವಾಮಿಯ ಅನುಗ್ರಹದಿಂದ ನಮ್ಮ ತಂದೆ ದಾವೀದನಿಗೆ ಎಲ್ಲಾ ಶತ್ರುಗಳು ವಶವಾದರು. ಅಲ್ಲಿಯವರೆಗೆ ಅವರು ಸುತ್ತಲೂ ಯುದ್ಧಗಳನ್ನು ನಡೆಸಬೇಕಾಗಿತ್ತು. ಆದ್ದರಿಂದ ತಮ್ಮ ದೇವರಾದ ಸರ್ವೇಶ್ವರನ ಹೆಸರಿಗೆ ಆಲಯವನ್ನು ಕಟ್ಟಿಸಲಾರದೆ ಹೋದರು. ಇದು ನಿಮಗೆ ತಿಳಿದ ವಿಷಯ. |
೪. ನನಗಾದರೋ ನನ್ನ ದೇವರಾದ ಸರ್ವೇಶ್ವರ ಎಲ್ಲ ಕಡೆಗಳಲ್ಲೂ ಸಮಾಧಾನವನ್ನು ಅನುಗ್ರಹಿಸಿದ್ದಾರೆ; ನನ್ನನ್ನು ವಿರೋಧಿಸುವವನು ಒಬ್ಬನೂ ಇಲ್ಲ; ಆಪತ್ತು ವಿಪತ್ತು ದೂರವಾಗಿವೆ. |
೫. ಸರ್ವೇಶ್ವರ ನನ್ನ ತಂದೆ ದಾವೀದನಿಗೆ, ‘ನಾನು ನಿನ್ನ ಸ್ಥಾನದಲ್ಲಿ ಸಿಂಹಾಸನದ ಮೇಲೆ ಕುಳ್ಳಿರಿಸುವ ನಿನ್ನ ಮಗ, ನನ್ನ ಹೆಸರಿಗೆ ಒಂದು ಆಲಯವನ್ನು ಕಟ್ಟಲಿ,’ ಎಂದು ಹೇಳಿದ್ದರು. ಆದುದರಿಂದ ನಾನು ನನ್ನ ದೇವರಾದ ಸರ್ವೇಶ್ವರನಿಗೆ ಒಂದು ಆಲಯವನ್ನು ಕಟ್ಟಬೇಕೆಂದಿರುತ್ತೇನೆ. |
೬. ನೀನು ನನಗೋಸ್ಕರ ಲೆಬನೋನಿನ ದೇವದಾರು ವೃಕ್ಷಗಳನ್ನು ಕೊಯ್ಯಬೇಕೆಂದು ನಿನ್ನ ಆಳುಗಳಿಗೆ ಆಜ್ಞಾಪಿಸು; ಅವರ ಜೊತೆಯಲ್ಲಿ ನನ್ನ ಆಳುಗಳನ್ನೂ ಕಳುಹಿಸುವೆನು. ಮತ್ತು ನಿನ್ನ ಆಳುಗಳಿಗೆ ನೀನು ಹೇಳುವಷ್ಟು ಸಂಬಳವನ್ನು ಕೊಡುತ್ತೇನೆ. ಸಿದೋನ್ಯರಂತೆ ಮರಕೊಯ್ಯುವುದರಲ್ಲಿ ಜಾಣರು ನಮ್ಮಲ್ಲಿರುವುದಿಲ್ಲವೆಂದು ನಿನಗೆ ಗೊತ್ತಿದೆಯಲ್ಲವೆ?” ಎಂದು ಹೇಳಿಸಿದನು. |
೭. ಹೀರಾಮನು ಸೊಲೊಮೋನನ ಮಾತುಗಳನ್ನು ಕೇಳಿದಾಗ ಬಹಳವಾಗಿ ಸಂತೋಷಪಟ್ಟನು. “ಈ ಮಹಾಜನಾಂಗವನ್ನು ಆಳುವುದಕ್ಕಾಗಿ ದಾವೀದನಿಗೆ ಒಬ್ಬ ಬುದ್ಧಿವಂತ ಮಗನನ್ನು ಅನುಗ್ರಹಿಸಿದ ಸರ್ವೇಶ್ವರನಿಗೆ ಸ್ತೋತ್ರವಾಗಲಿ!” ಎಂದು ನುಡಿದನು. |
೮. ಇದೂ ಅಲ್ಲದೆ, ಅವನು ಸೊಲೊಮೋನನಿಗೆ, “ನೀನು ಹೇಳಿ ಕಳುಹಿಸಿದ್ದನ್ನು, ಕೇಳಿದೆನು; ದೇವದಾರು ವೃಕ್ಷಗಳನ್ನೂ ತುರಾಯಿಮರಗಳನ್ನೂ ಕುರಿತು ನಿನ್ನ ಅಪೇಕ್ಷೆಯನ್ನು ನೆರವೇರಿಸುವೆನು. |
೯. ನನ್ನ ಸೇವಕರು ಅವುಗಳನ್ನು ಲೆಬನೋನಿನಿಂದ ಸಮುದ್ರಕ್ಕೆ ತೆಗೆದುಕೊಂಡು ಹೋಗುವರು. ನಾನು ಅವುಗಳನ್ನು ತೆಪ್ಪವನ್ನಾಗಿ ಕಟ್ಟಿಸಿ ಸಮುದ್ರಮಾರ್ಗವಾಗಿ ನೀನು ನೇಮಿಸುವ ಸ್ಥಳಕ್ಕೆ ಕಳುಹಿಸಿ ಅಲ್ಲೆ ಬಿಚ್ಚಿಸುವೆನು; ನೀನು ಅವುಗಳನ್ನು ತೆಗೆದುಕೊಂಡು, ಅವುಗಳಿಗೆ ಬದಲಾಗಿ ನನ್ನ ಮನೆಯವರಿಗೆ ಆಹಾರಪದಾರ್ಥಗಳನ್ನು ಕೊಡಬೇಕೆಂಬುದೇ ನನ್ನ ಅಪೇಕ್ಷೆ,” ಎಂದು ಹೇಳಿಕಳುಹಿಸಿದನು. |
೧೦. ಹೀಗೆ ಹೀರಾಮನು ಸೊಲೊಮೋನನಿಗೆ ಬೇಕಾದಷ್ಟು ದೇವದಾರಿನ ಮರಗಳನ್ನೂ ತುರಾಯಿಮರಗಳನ್ನೂ ಕೊಡುತ್ತಿದ್ದನು. |
೧೧. ಸೊಲೊಮೋನನಾದರೋ ಪ್ರತಿವರ್ಷ ಅವನ ಮನೆಯವರ ಆಹಾರಕ್ಕಾಗಿ ಎರಡು ಸಾವಿರ ಮೆಟ್ರಿಕ್ ಟನ್ ಗೋದಿಯನ್ನೂ ನಾಲ್ಕು ಸಾವಿರ ಲೀಟರ್ ಅಪ್ಪಟ ಎಣ್ಣೆಯನ್ನೂ ಕೊಡುತ್ತಿದ್ದನು. |
೧೨. ಸರ್ವೇಶ್ವರ ವಾಗ್ದಾನಮಾಡಿದಂತೆ ಸೊಲೊಮೋನನಿಗೆ ಜ್ಞಾನವನ್ನು ಅನುಗ್ರಹಿಸಿದ್ದರು. ಸೊಲೊಮೋನನಿಗೂ ಹೀರಾಮನಿಗೂ ಸಮಾಧಾನವಿತ್ತು; ಅವರು ಒಂದು ಒಪ್ಪಂದ ಮಾಡಿಕೊಂಡಿದ್ದರು. |
೧೩. ಅರಸ ಸೊಲೊಮೋನನು, ಇಸ್ರಯೇಲರಲ್ಲಿ ಮೂವತ್ತು ಸಾವಿರ ಮಂದಿಯನ್ನು ಬಿಟ್ಟಿಕೆಲಸಕ್ಕೆಂದು ಹಿಡಿದು, |
೧೪. ಅವರಲ್ಲಿ ತಿಂಗಳೊಂದಕ್ಕೆ ಹತ್ತುಸಾವಿರ ಮಂದಿಯಂತೆ ಲೆಬನೋನಿಗೆ ಕಳುಹಿಸುತ್ತಿದ್ದನು. ಅವರು ಒಂದು ತಿಂಗಳು ಲೆಬನೋನಿನಲ್ಲಿದ್ದರೆ, ಎರಡು ತಿಂಗಳು ಮನೆಯಲ್ಲಿರುತ್ತಿದ್ದರು. ಅದೋನೀರಾಮನು ಇವರ ಮುಖ್ಯಸ್ಥನಾಗಿದ್ದನು. |
೧೫. ಇದಲ್ಲದೆ, ಸೊಲೊಮೋನನಿಗೆ ಎಪ್ಪತ್ತು ಸಾವಿರಮಂದಿ ಹೊರೆಹೊರುವವರೂ ಎಂಬತ್ತು ಸಾವಿರಮಂದಿ ಕಲ್ಲುಗಣಿಯಲ್ಲಿ ಕೆಲಸಮಾಡುವವರೂ ಇದ್ದರು. |
೧೬. ಈ ಕೆಲಸದವರ ಮೇಲ್ವಿಚಾರಣೆಗಾಗಿ ಅವನು ಮೂರು ಸಾವಿರದ ಮುನ್ನೂರುಮಂದಿ ಮೇಸ್ತ್ರಿಗಳನ್ನು ನೇಮಿಸಿದ್ದನು. |
೧೭. ಕೆತ್ತಿದ ಕಲ್ಲುಗಳಿಂದ ಹಾಕಬೇಕಾದ ದೇವಾಲಯದ ಅಸ್ತಿವಾರಕ್ಕಾಗಿ ಆಳುಗಳು, ಸೊಲೊಮೋನನ ಅಪ್ಪಣೆಯಂತೆ, ಶ್ರೇಷ್ಠವಾದ ದೊಡ್ಡ ಕಲ್ಲುಗಳನ್ನು ಕೊರೆಯುತ್ತಿದ್ದರು. |
೧೮. ಸೊಲೊಮೋನನ ಮತ್ತು ಹೀರಾಮನ ಶಿಲ್ಪಿಗಳೂ ಗೆಬಾಲ್ಯರೂ ಅವುಗಳನ್ನು ಕೆತ್ತುತ್ತಿದ್ದರು. ದೇವಾಲಯ ಕಟ್ಟುವುದಕ್ಕೆ ಬೇಕಾದ ಕಲ್ಲು, ಮರಗಳನ್ನು ಸಿದ್ಧಪಡಿಸಿದವರು ಇವರೇ. |
ಅರಸುಗಳು ೧ ೬:೧-೩೮ |
೧. ಇಸ್ರಯೇಲರು ಈಜಿಪ್ಟ್ ದೇಶವನ್ನು ಬಿಟ್ಟ ನಾನೂರ ಎಂಬತ್ತನೆಯ ವರ್ಷದಲ್ಲಿ ಅಂದರೆ, ಇಸ್ರಯೇಲರ ಅರಸನಾದ ಸೊಲೊಮೋನನ ಆಳ್ವಿಕೆಯ ನಾಲ್ಕನೆಯ ವರ್ಷದ ಎರಡನೆಯ ತಿಂಗಳಾದ ವೈಶಾಖ ಮಾಸದಲ್ಲಿ ಅರಸ ಸೊಲೊಮೋನನು ಸರ್ವೇಶ್ವರಸ್ವಾಮಿಯ ಆಲಯವನ್ನು ಕಟ್ಟುವುದಕ್ಕೆ ಪ್ರಾರಂಭಿಸಿದನು. |
೨. ಅವನು ಸರ್ವೇಶ್ವರನಿಗೆ ಕಟ್ಟಿಸಿದ ದೇವಾಲಯದ ಉದ್ದ ೨೭ ಮೀಟರ್, ಅಗಲ ೯ ಮೀಟರ್, ಎತ್ತರ ೧೩:೫ ಮೀಟರ್. |
೩. ದೇವಾಲಯದ ಪರಿಶುದ್ಧ ಸ್ಥಳದ ಮುಂದುಗಡೆಯಲ್ಲಿ ಒಂದು ಮಂಟಪವಿತ್ತು; ಅದರ ಉದ್ದಳತೆ ದೇವಾಲಯದ ಅಗಲಕ್ಕೆ ಸರಿಯಾಗಿ ೪:೫ ಮೀಟರ್, ಅಗಲಳತೆ ೯ ಮೀಟರ್. |
೪. ಇದಲ್ಲದೆ, ಅವನು ಆಲಯಕ್ಕೆ ತೆರೆಯಲಾಗದ ಜಾಲಂಧರ ಕಿಟಕಿಗಳನ್ನಿಡಿಸಿದನು. |
೫. ದೇವಾಲಯದ ಗೋಡೆಯ ಸುತ್ತಲೂ ಅಂದರೆ, ಪರಿಶುದ್ಧಸ್ಥಳ ಹಾಗು ಮಹಾಪರಿಶುದ್ಧಸ್ಥಳ ಇವುಗಳ ಗೋಡೆಯ ಸುತ್ತಲೂ ಇನ್ನೊಂದು ಗೋಡೆಯನ್ನು ಕಟ್ಟಿಸಿ, ಇವುಗಳ ನಡುವೆ ಅಂತಸ್ತುಗಳುಳ್ಳ ಕೊಠಡಿಗಳನ್ನು ಮಾಡಿಸಿದನು. |
೬. ಕೆಳಗಿನ ಕೊಠಡಿಗಳ ಅಗಲ ೨:೨ ಮೀಟರ್; ಮೊದಲನೆಯ ಅಂತಸ್ತಿನ ಕೊಠಡಿಗಳ ಅಗಲ ೨:೭ ಮೀಟರ್; ಎರಡನೆಯ ಅಂತಸ್ತಿನ ಕೊಠಡಿಗಳ ಅಗಲ ೩:೧ ಮೀಟರ್. ಅಂತಸ್ತಿನ ತೊಲೆಗಳನ್ನಿಡುವಾಗ ದೇವಾಲಯದ ಗೋಡೆಯಲ್ಲಿ ತೂತಾಗಬಾರದು ಎಂದು ಗೋಡೆಯ ಹೊರ ಮೈಯನ್ನು ಸೋಪಾನಾಕಾರವಾಗಿ ಮಾಡಿಸಿದನು. |
೭. ದೇವಾಲಯವನ್ನು ಕಟ್ಟುವಾಗ, ಕಲ್ಲುಗಳನ್ನು ಕಲ್ಲುಗಣಿಯಲ್ಲಿಯೇ ಸಿದ್ಧಮಾಡಿಕೊಂಡು ಬಂದು ಕಟ್ಟಿದ್ದರಿಂದ, ಕಟ್ಟುವ ದಿವಸಗಳಲ್ಲೆಲ್ಲಾ ಸುತ್ತಿಗೆ, ಉಳಿ, ಮುಂತಾದ ಕಬ್ಬಿಣದ ಸಾಮಾನುಗಳ ಶಬ್ದವೂ ಕೇಳಿಸಲಿಲ್ಲ. |
೮. ಕೆಳಗಿನ ಕೊಠಡಿಗಳಿಗೆ ಹೋಗುವ ಬಾಗಿಲು ಆಲಯದ ಬಲಪಾರ್ಶ್ವದಲ್ಲಿತ್ತು. ಅಲ್ಲಿಂದ ಮೊದಲನೆಯ ಅಂತಸ್ತಿಗೂ ಎರಡನೆಯ ಅಂತಸ್ತಿಗೂ ಹೋಗಬೇಕಾದರೆ ವಕ್ರಸೋಪಾನಗಳಿದ್ದವು. |
೯. ಈ ಪ್ರಕಾರ ಅವನು ಮನೆಯನ್ನು ಕಟ್ಟಿಸಿ, ದೇವದಾರಿನ ತೊಲೆ ಹಲಿಗೆಗಳಿಂದ ಮಾಳಿಗೆಯನ್ನು ಮಾಡಿಸಿ, ಕೆಲಸ ಮುಗಿಸಿದನು. |
೧೦. ಅವನು ದೇವಾಲಯದ ಸುತ್ತಲೂ ಒಂದರ ಮೇಲೊಂದು ೨:೨ ಮೀಟರುಗಳಂತೆ ಎತ್ತರವಾದ ಕೊಠಡಿಗಳನ್ನು ಕಟ್ಟಿಸಿದನು. ಇವು ದೇವದಾರಿನ ತೊಲೆಗಳಿಂದ ದೇವಾಲಯಕ್ಕೆ ಹೊಂದಿಕೊಂಡಿದ್ದವು. |
೧೧. ಸರ್ವೇಶ್ವರಸ್ವಾಮಿ ಸೊಲೊಮೋನನಿಗೆ, “ನೀನು ಈಗ ಒಂದು ಆಲಯವನ್ನು ಕಟ್ಟಿಸುತ್ತಿರುವೆ. ನನ್ನ ನಿಯಮವಿಧಿಗಳನ್ನು ಅನುಸರಿಸಿ ನನ್ನ ಆಜ್ಞೆಗಳನ್ನು ಕೈಗೊಂಡು, ನೀನು ನಡೆಯುವುದಾದರೆ, ನಿನ್ನನ್ನು ಕುರಿತು ನಿನ್ನ ತಂದೆ ದಾವೀದನಿಗೆ ನಾನು ಮಾಡಿದ ವಾಗ್ದಾನವನ್ನು ನೆರವೇರಿಸುವೆನು. |
೧೨. *** |
೧೩. ನನ್ನ ಪ್ರಜೆಗಳಾದ ಇಸ್ರಯೇಲರನ್ನು ಕೈಬಿಡದೆ ಅವರ ಮಧ್ಯದಲ್ಲೇ ವಾಸಿಸುವೆನು,” ಎಂದು ಹೇಳಿದರು. |
೧೪. ಹೀಗೆ ಸೊಲೊಮೋನನು ದೇವಾಲಯವನ್ನು ಕಟ್ಟಿಮುಗಿಸಿದನು. |
೧೫. ದೇವಾಲಯದ ಗೋಡೆಗಳ ಒಳಮೈಯನ್ನು ನೆಲದಿಂದ ಮಾಳಿಗೆಯವರೆಗೆ ದೇವದಾರಿನ ಹಲಗೆಗಳಿಂದ ಹೊದಿಸಿದನು. ನೆಲಕ್ಕೆ ತುರಾಯಿಮರದ ಹಲಗೆಗಳನ್ನು ಹಾಕಿಸಿದನು. |
೧೬. ಇದಲ್ಲದೆ, ದೇವಾಲಯದೊಳಗೆ ಹಿಂದಿನ ೯ ಮೀಟರ್ ಸ್ಥಳವನ್ನು ಬಿಟ್ಟು ನೆಲದಿಂದ ತೊಲೆಗಳವರೆಗೆ ದೇವದಾರಿನ ಹಲಗೆಗಳಿಂದ ಒಂದು ಗೋಡೆಯನ್ನು ಮಾಡಿಸಿ ಅದರ ಹಿಂದಿನ ಭಾಗವನ್ನು ಗರ್ಭಗುಡಿ, ಅಥವಾ ಮಹಾಪರಿಶುದ್ಧ ಸ್ಥಳವೆಂದು ಪ್ರತ್ಯೇಕಿಸಿದನು. |
೧೭. ದೇವಾಲಯದ ಪರಿಶುದ್ಧ ಸ್ಥಳವೆನಿಸಿಕೊಳ್ಳುವ ಮುಂದಿನ ಭಾಗ ೧೮ ಮೀಟರ್ ಉದ್ದವಿತ್ತು. |
೧೮. ದೇವಾಲಯದೊಳಗೆ ಕಲ್ಲು ಕಾಣಿಸದಂತೆ, ಗೋಡೆಯನ್ನೆಲ್ಲಾ ಬಳ್ಳಿಗಳೂ ಹೂವುಗಳೂ ಕೆತ್ತಿರುವ ದೇವದಾರಿನ ಹಲಗೆಗಳಿಂದ ಹೊದಿಸಿದನು. |
೧೯. ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ಇಡುವುದಕ್ಕಾಗಿ ದೇವಾಲಯದೊಳಗೆ ಒಂದು ಭಾಗವನ್ನು ‘ಗರ್ಭಗುಡಿ’ ಎಂದು ಪ್ರತ್ಯೇಕಿಸಿದನು. |
೨೦. ಆ ಗರ್ಭಗುಡಿ ೯ ಮೀಟರ್ ಉದ್ದ, ೯ ಮೀಟರ್ ಅಗಲ, ೯ ಮೀಟರ್ ಎತ್ತರ ಇತ್ತು. ಅದನ್ನು ಚೊಕ್ಕ ಬಂಗಾರದ ತಗಡಿನಿಂದಲೂ ವೇದಿಯನ್ನು ದೇವದಾರುಮರದಿಂದಲೂ ಹೊದಿಸಿದನು. |
೨೧. ಸೊಲೊಮೋನನು ದೇವಾಲಯದ ಒಳಮೈಯನ್ನು ಚೊಕ್ಕಬಂಗಾರದ ತಗಡಿನಿಂದ ಹೊದಿಸಿದನು. ಬಂಗಾರದ ತಗಡಿನಿಂದ ಹೊದಿಸಲಾಗಿದ್ದ ಮಹಾಪರಿಶುದ್ಧ ಸ್ಥಳದ ಎದುರಿನಲ್ಲಿ ಒಂದು ಗೋಡೆಯಿಂದ ಇನ್ನೊಂದು ಗೋಡೆಗೆ ಬಂಗಾರದ ಸರಪಣಿಗಳನ್ನು ಕಟ್ಟಿಸಿದನು. |
೨೨. ದೇವಾಲಯದ ಎಲ್ಲಾ ಗೋಡೆಗಳನ್ನೂ ಮಹಾಪರಿಶುದ್ಧ ಸ್ಥಳಕ್ಕೆ ಸೇರಿದ ಪೀಠವನ್ನೂ ಪೂರ್ಣವಾಗಿ ಬಂಗಾರದ ತಗಡಿನಿಂದ ಹೊದಿಸಿದನು. |
೨೩. ಇದಲ್ಲದೆ ಅವನು ಎಣ್ಣೇಮರದಿಂದ ೪:೪ ಮೀಟರ್ ಎತ್ತರವಾದ ಎರಡು ‘ಕೆರೂಬಿ’ಗಳನ್ನು ಮಾಡಿಸಿ ಅವುಗಳನ್ನು ಗರ್ಭಗುಡಿಯಲ್ಲಿರಿಸಿದನು. |
೨೪. ಪ್ರತಿಯೊಂದು ಕೆರೂಬಿಯ ರೆಕ್ಕೆಗಳು ೨:೨ ಮೀಟರ್ ಉದ್ದವಿದ್ದವು. ಎರಡು ರೆಕ್ಕೆಗಳ ಅಂತರವು ತುದಿಯಿಂದ ತುದಿಗೆ ೪:೪ ಮೀಟರ್ |
೨೫. ಇನ್ನೊಂದು ಕೆರೂಬಿಯ ರೆಕ್ಕೆಗಳ ಅಂತರವೂ ೪:೪: ಮೀಟರ್. ಎರಡೂ ಕೆರೂಬಿಗಳ ಅಳತೆಯೂ ಆಕಾರವೂ ಒಂದೇ ಆಗಿತ್ತು. |
೨೬. ಅವೆರಡೂ ಒಂದೊಂದು ೪:೪ ಮೀಟರ್ ಎತ್ತರವಾಗಿದ್ದವು. |
೨೭. ಅವನು ಅವುಗಳನ್ನು ದೇವಾಲಯದ ಗರ್ಭಗುಡಿಯಲ್ಲಿರಿಸಿದನು. ಅವುಗಳ ರೆಕ್ಕೆಗಳು ಚಾಚಿದವುಗಳಾಗಿದ್ದುದರಿಂದ ಮೊದಲನೆಯ ಕೆರೂಬಿಯ ಒಂದು ರೆಕ್ಕೆ ಈಚೆಯ ಗೋಡೆಗೂ ಎರಡನೆಯ ಕೆರೂಬಿಯ ಒಂದು ರೆಕ್ಕೆ ಆಚೆಯ ಗೋಡೆಗೂ ತಗುಲಿದ್ದವು; ಅವುಗಳ ಬೇರೆ ಎರಡು ರೆಕ್ಕೆಗಳು ಮನೆಯ ಮಧ್ಯದಲ್ಲಿ ಒಂದನ್ನೊಂದು ತಗುಲಿ ಇದ್ದವು. |
೨೮. ಈ ಕೆರೂಬಿಗಳು ಬಂಗಾರದ ತಗಡುಗಳಿಂದ ಹೊದಿಸಲ್ಪಟ್ಟಿದ್ದವು. |
೨೯. ದೇವಾಲಯದ ಎಲ್ಲಾ ಗೋಡೆಗಳಲ್ಲಿ ಹೊರಗೂ ಒಳಗೂ ಕೆರೂಬಿ, ಖರ್ಜೂರವೃಕ್ಷ, ಹೂವು, ಇವುಗಳ ಚಿತ್ರಗಳನ್ನು ಕೆತ್ತಿಸಿದನು. |
೩೦. ದೇವಾಲಯದ ಒಳಗೆ ಮತ್ತು ಹೊರಗಿನ ನೆಲವನ್ನು ಬಂಗಾರದ ತಗಡುಗಳಿಂದ ಹೊದಿಸಿದನು. |
೩೧. ಗರ್ಭಗುಡಿಯ ಬಾಗಿಲಿಗೆ ಎಣ್ಣೇಮರದ ಕದಗಳನ್ನು ಹಚ್ಚಿಸಿದನು. ಚೌಕಟ್ಟು ಪಂಚಕೋನಗಳುಳ್ಳದ್ದಾಗಿತ್ತು. |
೩೨. ಎಣ್ಣೇಮರದ ಆ ಎರಡು ಕದಗಳಲ್ಲಿಯೂ ಕೆರೂಬಿ, ಖರ್ಜೂರವೃಕ್ಷ, ಹೂವು, ಇವುಗಳ ಚಿತ್ರಗಳನ್ನು ಕೆತ್ತಿಸಿ, ಕದಗಳಿಗೆ ಬಂಗಾರದ ತಗಡನ್ನು ಹೊದಿಸಿ, ಚಿತ್ರಗಳಿದ್ದಲ್ಲಿ ಆ ತಗಡನ್ನು ಬಡಿಸಿದನು. |
೩೩. ಇದಲ್ಲದೆ, ಪರಿಶುದ್ಧಸ್ಥಳದ ಬಾಗಲಿಗೆ ಎಣ್ಣೇಮರದಿಂದ ಚತುಷ್ಕೋನದ ಚೌಕಟ್ಟನ್ನು ಮಾಡಿಸಿ, |
೩೪. ಅದಕ್ಕೆ ತುರಾಯಿಮರದ ಎರಡು ಕದಗಳನ್ನು ಹಚ್ಚಿಸಿದನು. ಪ್ರತಿಯೊಂದು ಕದವು ಎರಡು ಭಾಗವುಳ್ಳದ್ದಾಗಿ ಮಡಚುವುದಕ್ಕೆ ಬರುತ್ತಿತ್ತು. |
೩೫. ಈ ಕದಗಳಲ್ಲಿ ಕೆರೂಬಿ, ಖರ್ಜೂರವೃಕ್ಷ, ಹೂವು, ಇವುಗಳ ಚಿತ್ರಗಳನ್ನು ಕೆತ್ತಿಸಿ ಅವುಗಳಿಗೆ ಬಂಗಾರದ ತಗಡನ್ನು ಹೊದಿಸಿ ಕೆತ್ತನೆ ಇದ್ದಲ್ಲಿ ಆ ತಗಡನ್ನು ಬಡಿಸಿದನು. |
೩೬. ದೇವಾಲಯದ ಪ್ರಾಕಾರದಲ್ಲಿ ಮೂರು ಸಾಲು ಕಲ್ಲಿನ ಕಂಬಗಳನ್ನೂ ಒಂದು ಸಾಲು ದೇವದಾರುವಿನ ಕಂಬಗಳನ್ನೂ ಇರಿಸಿದನು. |
೩೭. ಸೊಲೊಮೋನನ ಆಳ್ವಿಕೆಯ ನಾಲ್ಕನೆಯ ವರ್ಷದ ವೈಶಾಖ ಮಾಸದಲ್ಲಿ ಸರ್ವೇಶ್ವರನ ಆಲಯಕ್ಕೆ ಅಸ್ತಿವಾರ ಹಾಕಲಾಯಿತು. |
೩೮. ಹನ್ನೊಂದನೆಯ ವರ್ಷದ ಎಂಟನೆಯ ತಿಂಗಳಾದ ಕಾರ್ತಿಕ ಮಾಸದಲ್ಲಿ ದೇವಾಲಯವೂ ಅದರ ಎಲ್ಲಾ ಕಟ್ಟಡಗಳೂ ಯೋಜನೆಯ ಪ್ರಕಾರ ಸಿದ್ಧವಾದವು. ದೇವಾಲಯವನ್ನು ಕಟ್ಟುವುದಕ್ಕೆ ಏಳು ವರ್ಷ ಹಿಡಿಯಿತು. |
ಕೀರ್ತನೆಗಳು ೬೮:೨೧-೨೭ |
೨೧. ಸಂಹರಿಸುವನಾತನು ಶತ್ರುಗಳಾ ಶಿರಸ್ಸನು I ನಸುಕುವನು ದುರ್ಮಾರ್ಗಿಗಳ ಕೇಶ ಕಿರೀಟವನು II |
೨೨. ಪ್ರಭುವಿನ ನುಡಿ: “ನಿನ್ನ ಶತ್ರುಗಳ ನೆತ್ತರಲಿ ನೀ ಕಾಲ್ತೊಳೆವಂತೆ I ನಿನ್ನ ನಾಯಿಗಳಿಗದನೆಕ್ಕಲು ಸಾಕಷ್ಟು ಸಿಗುವಂತೆ I ಬಾಷಾನಿನಿಂದವರನು ನಾ ಮರಳಿ ಬರಮಾಡುವೆ I ಸಮುದ್ರ ತಳದಿಂದವರನು ನಾ ಮತ್ತೆ ಮೇಲೆತ್ತುವೆ” II |
೨೩. *** |
೨೪. ಕಂಗೊಳಿಸುತಿದೆ ದೇವ, ನಿನ್ನ ಭವ್ಯ ಮೆರವಣಿಗೆ I ನನ್ನರಸ ದೇವನು ನಡೆವ ತನ್ನಾ ಗರ್ಭಗುಡಿಗೆ II |
೨೫. ಮುಂಗಡೆಯಲಿದೋ ಹಾಡುಗಾರರು I ಹಿಂಗಡೆಯಲಿದೋ ವಾದ್ಯಗಾರರು I ನಡುವೆ ದಮ್ಮಡಿ ಬಡಿವ ಮಹಿಳೆಯರು II |
೨೬. “ಇಸ್ರಯೇಲಿನ ವಂಶಜರೇ, ಸ್ತುತಿಸಿರಿ ಪ್ರಭುವನು” ಎನ್ನುತಿಹರು I “ಸಭೆ ಸಮ್ಮುಖದಲಿ ಕೊಂಡಾಡಿರಿ ದೇವರನು” ಎಂದು ಹಾಡುತಿಹರು I |
೨೭. ಮುನ್ನಡೆಯುತ್ತಿಹರಿದೋ ಕಿರಿಯ ಕುಲದ ಬೆನ್ಯಮೀನರು I ಗುಂಪಾಗಿ ಬರುತಿಹರು ಯೆಹೂದ್ಯ ಕುಲದ ಗುರುಹಿರಿಯರು I ಹಿಂಬಾಲಿಸುತಿಹರು ಜೆಬುಲೋನ್, ನಫ್ತಾಲಿ ಗೋತ್ರದವರು II |
ಜ್ಞಾನೋಕ್ತಿಗಳು ೧೭:೧೩-೧೫ |
೧೩. ಯಾರು ಉಪಕಾರಕ್ಕೆ ಅಪಕಾರ ಮಾಡುತ್ತಾರೊ ಅಂಥವರ ಮನೆಯಿಂದ ಕೇಡು ತೊಲಗದು. |
೧೪. ವಾಗ್ವಾದವು ಏರಿಗೆ ಬಿರುಕು ಬಿದ್ದಂತೆ; ಸಿಟ್ಟೇರುವುದಕ್ಕೆ ಮುಂಚೆ ಜಗಳವನ್ನು ತೊರೆದುಬಿಡು. |
೧೫. ದುರ್ಜನರನ್ನು ಸಜ್ಜನರೆಂದೂ, ಸಜ್ಜನರನ್ನು ದುರ್ಜನರೆಂದೂ ನಿರ್ಣಯಿಸುವ ಇಬ್ಬರೂ ಸರ್ವೇಶ್ವರನಿಗೆ ಅಸಹ್ಯರು. |
ಯೊವಾನ್ನನು ೧೦:೨೪-೪೨ |
೨೪. ಯೆಹೂದ್ಯರು ಅವರನ್ನು ಸುತ್ತುವರಿದು, “ಇನ್ನೆಷ್ಟುಕಾಲ ನಮ್ಮನ್ನು ಸಂಶಯದಲ್ಲಿರಿಸುವೆ?ನೀನೇ ಅಭಿಷಿಕ್ತನಾದ ಲೋಕೋದ್ಧಾರಕ ಆಗಿದ್ದರೆ ನಮಗೆ ಸ್ಪಷ್ಟವಾಗಿ ಹೇಳು,” ಎಂದರು. |
೨೫. ಯೇಸು ಪ್ರತ್ಯುತ್ತರವಾಗಿ, “ನಾನು ನಿಮಗೆ ಹೇಳಿಯಾಯಿತು. ಆದರೂ ನೀವು ನಂಬುತ್ತಿಲ್ಲ. ನನ್ನ ಪಿತನ ಹೆಸರಿನಲ್ಲಿ ನಾನು ಮಾಡುವ ಕಾರ್ಯಗಳೇ ನನ್ನ ಪರವಾಗಿ ಸಾಕ್ಷಿಕೊಡುತ್ತವೆ. |
೨೬. ಆದರೂ ನಿಮಗೆ ನಂಬಿಕೆಯೆಂಬುದಿಲ್ಲ. ಕಾರಣ, ನೀವು ನನ್ನ ಕುರಿಗಳಲ್ಲ. |
೨೭. ನನ್ನ ಕುರಿಗಳಾದರೋ ನನ್ನ ಸ್ವರವನ್ನು ಗುರುತಿಸುತ್ತವೆ. ನಾನು ಅವನ್ನು ಬಲ್ಲೆನು. ಅವು ನನ್ನನ್ನು ಹಿಂಬಾಲಿಸುತ್ತವೆ. |
೨೮. ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದಿಗೂ ನಾಶ ಆಗುವುದಿಲ್ಲ. ನನ್ನ ಕೈಯಿಂದ ಅವನ್ನು ಯಾರೂ ಕಸಿದುಕೊಳ್ಳಲಾರರು, |
೨೯. ಅವನ್ನು ನನಗೆ ಕೊಟ್ಟ ಪಿತ ಸರ್ವಶ್ರೇಷ್ಠರು. ಪಿತನ ಕೈಯಿಂದ ಅವನ್ನು ಯಾರೂ ಕಸಿದುಕೊಳ್ಳಲಾರರು. |
೩೦. ನಾನೂ ಪಿತನೂ ಒಂದೇ ಆಗಿದ್ದೇವೆ,” ಎಂದರು. |
೩೧. ಆಗ ಯೆಹೂದ್ಯರು, ಅವರತ್ತ ಬೀರಲು ಕಲ್ಲುಗಳನ್ನು ಆಯ್ದುಕೊಂಡರು. |
೩೨. ಅದಕ್ಕೆ ಯೇಸು, “ಪಿತನ ಹೆಸರಿನಲ್ಲಿ ನಾನು ಎಷ್ಟೋ ಸತ್ಕಾರ್ಯಗಳನ್ನು ನಿಮ್ಮ ಮುಂದೆ ಮಾಡಿದ್ದೇನೆ. ಇವುಗಳಲ್ಲಿ ಯಾವುದಕ್ಕಾಗಿ ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ?” ಎಂದರು. |
೩೩. ಅದಕ್ಕೆ ಯೆಹೂದ್ಯರು, “ನಿನ್ನ ಮೇಲೆ ಕಲ್ಲೆಸೆಯುವುದು ಸತ್ಕಾರ್ಯಕ್ಕಾಗಿ ಅಲ್ಲ, ದೇವದೂಷಣೆಗಾಗಿ. ನೀನು ಮನುಷ್ಯ ಮಾತ್ರನು; ಆದರೂ ನಿನ್ನನ್ನೇ ದೇವರನ್ನಾಗಿ ಮಾಡಿಕೊಳ್ಳುತ್ತಿದ್ದೀಯೇ,” ಎಂದು ಉತ್ತರಕೊಟ್ಟರು. |
೩೪. ಆಗ ಯೇಸು, “ ‘ನೀವು ದೇವರುಗಳು’ ಎಂದು ದೇವರೇ ಹೇಳಿರುವ ಮಾತು ನಿಮ್ಮ ಧರ್ಮಶಾಸ್ತ್ರದಲ್ಲಿ ಬರೆದಿದೆಯಲ್ಲವೆ? |
೩೫. ದೇವರ ವಾಕ್ಯವನ್ನು ಪಡೆದವರು ದೇವರುಗಳೇ ಎಂದು ಕರೆಯಲಾಗಿದೆ. ಹೀಗೆ ಪವಿತ್ರಗ್ರಂಥದಲ್ಲೇ ಲಿಖಿತವಾಗಿರುವುದು ನಿರರ್ಥಕವೇನೂ ಅಲ್ಲ. |
೩೬. ಇಂತಿರುವಲ್ಲಿ, ಪಿತನೇ ಪ್ರತಿಷ್ಠಿಸಿ ಕಳುಹಿಸಿಕೊಟ್ಟವನಾದ ನಾನು, ‘ದೇವರ ಪುತ್ರನಾಗಿದ್ದೇನೆ’ ಎಂದು ಹೇಳಿಕೊಂಡಿದ್ದಕ್ಕೆ, ‘ಇವನು ದೇವದೂಷಣೆ ಮಾಡಿದ್ದಾನೆ’ ಎನ್ನುತ್ತೀರಲ್ಲಾ? |
೩೭. ನಾನು ನನ್ನ ಪಿತನ ಕಾರ್ಯಗಳನ್ನು ಮಾಡದಿದ್ದರೆ ನೀವು ನನ್ನನ್ನು ನಂಬಬೇಕಾಗಿಲ್ಲ. |
೩೮. ನಾನು ಹಾಗೆ ಮಾಡಿದ್ದೇ ಆದರೆ, ನನ್ನನ್ನು ನಂಬದೆಹೋದರೂ ನನ್ನ ಕಾರ್ಯಗಳನ್ನಾದರೂ ನಂಬಿರಿ. ಆಗ ಪಿತನು ನನ್ನಲ್ಲಿಯೂ ನಾನು ಪಿತನಲ್ಲಿಯೂ ಇರುವುದು ನಿಮಗೆ ಅರಿವಾಗುವುದು ಹಾಗೂ ಮನದಟ್ಟಾಗುವುದು,” ಎಂದರು. |
೩೯. ಮತ್ತೊಮ್ಮೆ ಯೇಸುವನ್ನು ಬಂಧಿಸಲು ಆ ಯೆಹೂದ್ಯರು ಪ್ರಯತ್ನಿಸಿದರು. ಆದರೆ ಯೇಸು ಅವರ ಕೈಯಿಂದ ತಪ್ಪಿಸಿಕೊಂಡರು. |
೪೦. ಬಳಿಕ ಯೇಸು ಸ್ವಾಮಿ ಜೋರ್ಡನ್ ನದಿಯನ್ನು ದಾಟಿ ಯೊವಾನ್ನನು ಮೊತ್ತಮೊದಲು ಸ್ನಾನದೀಕ್ಷೆಯನ್ನು ಕೊಡುತ್ತಿದ್ದ ಸ್ಥಳಕ್ಕೆ ಬಂದು ಅಲ್ಲಿ ತಂಗಿದರು. |
೪೧. ಹಲವರು ಅವರ ಬಳಿಗೆ ಬರತೊಡಗಿದರು. ‘ಯೊವಾನ್ನನು ಒಂದು ಸೂಚಕಕಾರ್ಯವನ್ನೂ ಮಾಡಲಿಲ್ಲ; ಆದರೆ ಇವರ ವಿಷಯವಾಗಿ ಆತ ಹೇಳಿದ್ದೆಲ್ಲವೂ ನಿಜವಾಗಿದೆ’ ಎಂದು ಆ ಜನರು ಮಾತನಾಡಿಕೊಳ್ಳುತ್ತಿದ್ದರು. |
೪೨. ಅಲ್ಲಿ ಹಲವರಿಗೆ ಯೇಸುವಿನಲ್ಲಿ ವಿಶ್ವಾಸ ಹುಟ್ಟಿತು. |